ಅರವಿಂದ್ ಕೇಜ್ರಿವಾಲ್ 2 ಕೆಜಿಯಷ್ಟೇ ತೂಕ ಕಳೆದುಕೊಂಡಿರುವುದು: ಎಎಪಿ ಆರೋಪ ತಿರಸ್ಕರಿಸಿದ ತಿಹಾರ್ ಜೈಲು ಅಧಿಕಾರಿಗಳು

|

Updated on: Jul 15, 2024 | 5:16 PM

ದೆಹಲಿ ಕ್ಯಾಬಿನೆಟ್ ಸಚಿವೆ ಅತಿಶಿ ಅವರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಬಂಧನದ ನಂತರ "8.5 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ. ಅವರ ಸಕ್ಕರೆ ಮಟ್ಟವು ಜೈಲಿನಲ್ಲಿ ಐದು ಬಾರಿ 50 mg/dL ಗಿಂತ ಕಡಿಮೆಯಾಗಿದೆ ಎಂದು ಭಾನುವಾರ ಹೇಳಿದ್ದಾರೆ. ಇದೇ ರೀತಿಯ ಹೇಳಿಕೆಗಳನ್ನು ಎಎಪಿ ಸಂಸದ ಸಂಜಯ್ ಸಿಂಗ್ ಸೋಮವಾರ ಪುನರುಚ್ಚರಿಸಿದ್ದು, ಅರವಿಂದ್ ಕೇಜ್ರಿವಾಲ್ ಅವರು ತೂಕ ಕಳೆದುಕೊಂಡಿದ್ದಾರೆ ಎಂಬುದಾಗಿ ತಿಹಾರ್ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಅರವಿಂದ್ ಕೇಜ್ರಿವಾಲ್ 2 ಕೆಜಿಯಷ್ಟೇ ತೂಕ ಕಳೆದುಕೊಂಡಿರುವುದು: ಎಎಪಿ ಆರೋಪ ತಿರಸ್ಕರಿಸಿದ ತಿಹಾರ್ ಜೈಲು ಅಧಿಕಾರಿಗಳು
ಅರವಿಂದ್ ಕೇಜ್ರಿವಾಲ್
Follow us on

ದೆಹಲಿ ಜುಲೈ 15: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal ಜೈಲಿನಲ್ಲಿ ಕೇವಲ 2 ಕೆಜಿ ಕಳೆದುಕೊಂಡಿದ್ದಾರೆ. ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS)ವೈದ್ಯಕೀಯ ಮಂಡಳಿಯು ಅವರನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ತಿಹಾರ್ ಜೈಲಿನ (Tihar Jail) ಮೂಲಗಳು ಸೋಮವಾರ ತಿಳಿಸಿವೆ. ಆಮ್ ಆದ್ಮಿ ಪಕ್ಷವು (AAP) ಅರವಿಂದ್ ಕೇಜ್ರಿವಾಲ್  ಬಂಧನದ ನಂತರ ಅವರು “8.5 ಕೆಜಿ” ಕಳೆದುಕೊಂಡಿದ್ದಾರೆ ಎಂದು ಭಾನುವಾರ ಆರೋಪಿಸಿದ ಒಂದು ದಿನದ ನಂತರ ಈ ಪ್ರತಿಕ್ರಿಯೆ ಬಂದಿದೆ. ಬಿಜೆಪಿ ಕೇಜ್ರಿವಾಲ್ ಅವರನ್ನು ಜೈಲಿನಲ್ಲಿ ಇರಿಸುವ ಮೂಲಕ ಮುಖ್ಯಮಂತ್ರಿಯ ಆರೋಗ್ಯಕ್ಕೆ ಹಾನಿ ಮಾಡಲು ಸಂಚು ಮಾಡುತ್ತಿದೆ. ಎಎಪಿ ರಾಷ್ಟ್ರೀಯ ಸಂಚಾಲಕರು ಮಧುಮೇಹಿಯಾಗಿದ್ದು ಅವರಿಗೆ ಅಗತ್ಯ ವೈದ್ಯಕೀಯ ನೆರವು ಸಿಗುತ್ತಿಲ್ಲ ಎಂದೂ ಆಮ್ ಆದ್ಮಿ ಪಕ್ಷ ಆರೋಪಿಸಿದೆ.

ಎಎಪಿ ಸಚಿವರು ಮತ್ತು ಮುಖಂಡರು ಮಾಡಿರುವ ಆರೋಪಗಳ ಬಗ್ಗೆ ಜೈಲು ಆಡಳಿತವು ದೆಹಲಿ ಸರ್ಕಾರದ ಗೃಹ ಇಲಾಖೆಗೆ ಪತ್ರ ಬರೆದಿದೆ ಎಂದು ಹೆಸರಿಸದ ಮೂಲಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದು, ಇಂತಹ ನಿರೂಪಣೆಯು ಸಾರ್ವಜನಿಕರನ್ನು ಗೊಂದಲಗೊಳಿಸುತ್ತದೆ ಮತ್ತು ದಾರಿ ತಪ್ಪಿಸುತ್ತದೆ ಎಂದು ಹೇಳಿದೆ.

ಭಾನುವಾರ, ದೆಹಲಿ ಕ್ಯಾಬಿನೆಟ್ ಸಚಿವೆ ಅತಿಶಿ ಅವರು ಅರವಿಂದ್ ಕೇಜ್ರಿವಾಲ್ ಅವರು ಬಂಧನದ ನಂತರ “8.5 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ. ಅವರ ಸಕ್ಕರೆ ಮಟ್ಟವು ಜೈಲಿನಲ್ಲಿ ಐದು ಬಾರಿ 50 mg/dL ಗಿಂತ ಕಡಿಮೆಯಾಗಿದೆ ಎಂದು ಹೇಳಿದರು.
ಇದೇ ರೀತಿಯ ಹೇಳಿಕೆಗಳನ್ನು ಎಎಪಿ ಸಂಸದ ಸಂಜಯ್ ಸಿಂಗ್ ಸೋಮವಾರ ಪುನರುಚ್ಚರಿಸಿದ್ದು, ಅರವಿಂದ್ ಕೇಜ್ರಿವಾಲ್ ಅವರು ತೂಕ ಕಳೆದುಕೊಂಡಿದ್ದಾರೆ ಎಂಬುದಾಗಿ ತಿಹಾರ್ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಎಎಪಿ ಮುಖ್ಯಸ್ಥರು ನಿದ್ದೆ ಮಾಡುತ್ತಿದ್ದಾಗ  ಅವರ ಸಕ್ಕರೆಯ ಮಟ್ಟವು ಕುಸಿದರೆ ಅವರು ಕೋಮಾಗೆ ಹೋಗಬಹುದು ಅಥವಾ ಬ್ರೈನ್ ಸ್ಟ್ರೋಕ್‌ಗೆ ಒಳಗಾಗಬಹುದು ಎಂದು ಅವರು ಹೇಳಿದ್ದಾರೆ.

ಯಾವುದೇ ರೋಗಿಯ ವೈದ್ಯಕೀಯ ವರದಿಯನ್ನು ಸಾರ್ವಜನಿಕಗೊಳಿಸುವುದು ಅಪರಾಧ. ಹಲವು ಬಾರಿ ಜೈಲು ಆಡಳಿತ ದೆಹಲಿ ಮುಖ್ಯಮಂತ್ರಿಯ ವೈದ್ಯಕೀಯ ವರದಿಯನ್ನು ಬಹಿರಂಗಗೊಳಿಸಿದೆ. ಅರವಿಂದ್ ಕೇಜ್ರಿವಾಲ್ ಅವರ ಬದುಕಿನೊಂದಿಗೆ ಆಟವಾಡಲು ಸಂಚು ರೂಪಿಸಲಾಗುತ್ತಿದೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಂಜಯ್ ಸಿಂಗ್ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ತಿಹಾರ್ ಮೂಲಗಳು ಹಂಚಿಕೊಂಡಿರುವ ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯ ವರದಿಯ ಪ್ರಕಾರ, ಅವರು ಏಪ್ರಿಲ್ 1 ರಂದು ಜೈಲಿಗೆ ಬಂದಾಗ ಅವರ ತೂಕ 65 ಕೆಜಿ ಮತ್ತು ಏಪ್ರಿಲ್ 8 ಮತ್ತು 29 ರ ನಡುವೆ 66 ಕೆಜಿ ಇತ್ತು ಎಂದು ಪಿಟಿಐ ವರದಿ ಮಾಡಿದೆ. ಅವರು 21 ದಿನಗಳ ಜಾಮೀನಿನ ನಂತರ ಜೂನ್ 2 ರಂದು ಜೈಲಿಗೆ ಮರಳಿದಾಗ, ಅವರ ತೂಕ 63.5 ಕೆ.ಜಿ. ಆಗಿತ್ತು. ಜುಲೈ 14 ರಂದು, ಅವರ ತೂಕ 61.5 ಕೆಜಿ ಆಗಿದ್ದು ಅರು 2 ಕೆಜಿ ಕಳೆದುಕೊಂಡರು” ಎಂದು ಅಧಿಕೃತ ಮೂಲವನ್ನು ಉಲ್ಲೇಖಿಸಿ ಪಿಟಿಐ ಹೇಳಿದೆ.

ಅರವಿಂದ್ ಕೇಜ್ರಿವಾಲ್ ಅವರಿಗೆ ಮನೆಯಲ್ಲಿ ಬೇಯಿಸಿದ ಆಹಾರವನ್ನು ನೀಡಲಾಗುತ್ತಿದೆ. ಆದರೆ ಅವರು ಜೂನ್ 3 ರಿಂದ ನಿಯಮಿತವಾಗಿ ಅದರಿಂದ ಸ್ವಲ್ಪ ತಿಂದು ಬಾಕಿ ಉಳಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏಮ್ಸ್‌ನ ವೈದ್ಯಕೀಯ ಮಂಡಳಿಯು ಮುಖ್ಯಮಂತ್ರಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಮಂಡಳಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ಪಿಟಿಐ ವರದಿ ಮಾಡಿದೆ.

ತಿಹಾರ್ ಜೈಲು ಅಧಿಕಾರಿಗಳು ಬರೆದ ಪತ್ರದಲ್ಲೇನಿದೆ?

ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯದ ಬಗ್ಗೆ ಎಎಪಿ ಆರೋಪಗಳನ್ನು ತಿರಸ್ಕರಿಸಿ ತಿಹಾರ್ ಜೈಲು ಆಡಳಿತವು ದೆಹಲಿ ಸರ್ಕಾರದ ಗೃಹ ಇಲಾಖೆಗೆ ಪತ್ರ ಬರೆದಿದೆ. ಜೈಲು ಆಡಳಿತವು ತನ್ನ ಪತ್ರದಲ್ಲಿ, “ಇಂತಹ ನಿರೂಪಣೆಯು ಸಾರ್ವಜನಿಕರನ್ನು ತಪ್ಪು ಮಾಹಿತಿಯೊಂದಿಗೆ ಗೊಂದಲಗೊಳಿಸುತ್ತದೆ ಎಂದು ಹೇಳಿದೆ.

“ಆರೋಪಿಯ ರಕ್ತದೊತ್ತಡ ಮತ್ತು ಸಕ್ಕರೆಯ ಪ್ರಮಾಣ ಮತ್ತು ತೂಕವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಅವರ ಎಲ್ಲಾ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ದಿನಕ್ಕೆ ಮೂರು ಬಾರಿ ಮನೆಯಲ್ಲಿ ಬೇಯಿಸಿದ ಆಹಾರವನ್ನು ನಿಯಮಿತವಾಗಿ ಸೇವಿಸುತ್ತಿದ್ದಾರೆ. ಈ ಸಂಗತಿಗಳನ್ನು ಮಾಧ್ಯಮಗಳಿಗೆ ಹೇಳಲಾಗಿದೆ. ಆದರೆ ಪಟ್ಟಭದ್ರ ಹಿತಾಸಕ್ತಿ ಗುಂಪುಗಳು ನಿಂದನೆ ಮಾಡುತ್ತಿವೆ ಎಂದು ಹೇಳಲಾಗಿದೆ.

ಇದನ್ನೂ ಓದಿ:  Viral News: ಆಸ್ಪತ್ರೆಯ ಲಿಫ್ಟ್‌ನಲ್ಲೇ 2 ದಿನ ಸಿಲುಕಿದ್ದ ವ್ಯಕ್ತಿ; ಕೇರಳದಲ್ಲೊಂದು ಸಿನಿಮೀಯ ಘಟನೆ

ಅರವಿಂದ್ ಕೇಜ್ರಿವಾಲ್ ಬಂಧನ

ದೆಹಲಿ ಸರ್ಕಾರವು ಈಗ ರದ್ದುಪಡಿಸಿರುವ ಅಬಕಾರಿ ನೀತಿ 2021-22 ರಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು. ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಅವರನ್ನು ಜೂನ್ 26 ರಂದು ತಿಹಾರ್ ಜೈಲಿನಿಂದ ಬಂಧಿಸಿತ್ತು.

ಮನಿ ಲಾಂಡರಿಂಗ್ ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದರೂ  ಸಿಬಿಐ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಜೈಲಿನಲ್ಲಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 5:15 pm, Mon, 15 July 24