ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ; ಸಮೀರ್ ವಾಂಖೆಡೆ ವಿರುದ್ಧ ಮತ್ತೊಂದು ಕೇಸ್

ಬಾಲಿವುಡ್ ಕಿಂಗ್ ಶಾರುಖ್ ಖಾನ್ ಕುಟುಂಬದಿಂದ ₹ 25 ಕೋಟಿ ಲಂಚದ ಬೇಡಿಕೆಯ ಆರೋಪದ ಮೇಲೆ ಸಿಬಿಐ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಮುಂಬೈ ಎನ್‌ಸಿಬಿ ಮಾಜಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ

ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ; ಸಮೀರ್ ವಾಂಖೆಡೆ ವಿರುದ್ಧ ಮತ್ತೊಂದು ಕೇಸ್
ಸಮೀರ್ ವಾಂಖೆಡೆ
ರಶ್ಮಿ ಕಲ್ಲಕಟ್ಟ

Updated on: Feb 10, 2024 | 1:36 PM

ಮುಂಬೈ ಫೆಬ್ರುವರಿ 10: ಡ್ರಗ್ಸ್ ಪ್ರಕರಣದಲ್ಲಿ ಮಗ ಆರ್ಯನ್ ಖಾನ್ (Aryan Khan) ಅವರನ್ನು ರಕ್ಷಿಸಲು ಸೂಪರ್‌ಸ್ಟಾರ್ ಶಾರುಖ್ ಖಾನ್ (Shah Rukh Khan) ಕುಟುಂಬದಿಂದ ₹ 25 ಕೋಟಿ ಲಂಚದ ಬೇಡಿಕೆಯ ಆರೋಪದ ಮೇಲೆ ಸಿಬಿಐ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (Enforcement Directorate) ಮುಂಬೈ ಎನ್‌ಸಿಬಿ ಮಾಜಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ (Sameer Wankhede)ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ ಎಂದು ಮೂಲಗಳು ತಿಳಿಸಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ವಾಂಖೆಡೆ ವಿರುದ್ಧ ಕೇಂದ್ರೀಯ ಸಂಸ್ಥೆ ಪ್ರಕರಣ ದಾಖಲಿಸಿದೆ. ಅದೇ ವೇಳೆ ಕೆಲವು ಮಾಜಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಅಧಿಕಾರಿಗಳಿಗೂ ಸಮನ್ಸ್ ನೀಡಲಾಗಿದೆ.

ಕಸ್ಟಮ್ಸ್ ಮತ್ತು ಪರೋಕ್ಷ ತೆರಿಗೆ ಕೇಡರ್‌ನ 2008-ಬ್ಯಾಚ್‌ನ ಭಾರತೀಯ ಕಂದಾಯ ಸೇವೆ (IRS) ಅಧಿಕಾರಿಯಾಗಿರುವ ವಾಂಖೆಡೆ, ಅಕ್ರಮ ಹಣ ವರ್ಗಾವಣೆ-ವಿರೋಧಿ ಏಜೆನ್ಸಿಯ ಯಾವುದೇ ಬಲವಂತದ ಕ್ರಮದಿಂದ ರಕ್ಷಣೆ ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಬಂಧಿಸದಿದ್ದಕ್ಕಾಗಿ ₹ 25 ಕೋಟಿ ಲಂಚ ಕೇಳಿದ ಆರೋಪದ ಮೇಲೆ ಕಳೆದ ವರ್ಷ ಮೇನಲ್ಲಿ ಸಿಬಿಐ ಅವರನ್ನು ಬಂಧಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಕ್ಟೋಬರ್ 2, 2021 ರಂದು ಕಾರ್ಡೆಲಿಯಾ ಕ್ರೂಸ್ ಹಡಗಿನಲ್ಲಿ ಡ್ರಗ್ ಪ್ರಕರಣದಲ್ಲಿ ಆರ್ಯನ್ ಖಾನ್ ಅವರನ್ನು ಬಂಧಿಸಲಾಗಿತ್ತು.

ಕೇಂದ್ರೀಯ ತನಿಖಾ ದಳ (ಸಿಬಿಐ) ವಾಂಖೆಡೆ ಮತ್ತು ಇತರರ ವಿರುದ್ಧ ಕ್ರಿಮಿನಲ್ ಪಿತೂರಿ (120-ಬಿ ಐಪಿಸಿ), ಮತ್ತು ಸುಲಿಗೆ ಬೆದರಿಕೆ (388 ಐಪಿಸಿ) ಜೊತೆಗೆ ಎನ್‌ಸಿಬಿಯಿಂದ ಬಂದ ದೂರಿನ ಮೇರೆಗೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಲಂಚಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ದಾಖಲಿಸಿದೆ.

ಒಂದು ವರ್ಷದ ನಂತರ, ಎನ್‌ಸಿಬಿ 14 ಆರೋಪಿಗಳ ವಿರುದ್ಧ ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದು, ಆರ್ಯನ್ ಖಾನ್‌ಗೆ ಕ್ಲೀನ್ ಚಿಟ್ ನೀಡಿತು.

ಇದನ್ನೂ ಓದಿ:ಕೇರಳ: ಕಾಡಾನೆ ದಾಳಿಗೆ 47 ವರ್ಷದ ವ್ಯಕ್ತಿ ಬಲಿ, ವಯನಾಡಿನಲ್ಲಿ ಸೆಕ್ಷನ್ 144 ಜಾರಿ 

2021 ರಲ್ಲಿ ‘ಸ್ವತಂತ್ರ ಸಾಕ್ಷಿ’ಯೊಬ್ಬರು ಎನ್‌ಸಿಬಿ ಅಧಿಕಾರಿ ಮತ್ತು ಆರ್ಯನ್ ಖಾನ್ ಅವರನ್ನು ಬಿಟ್ಟುಕೊಡಲು ಸಾಕ್ಷಿ ಗೋಸಾವಿ ಸೇರಿದಂತೆ ಇತರ ವ್ಯಕ್ತಿಗಳಿಂದ ₹ 25 ಕೋಟಿಗೆ ಬೇಡಿಕೆಯಿಟ್ಟರು ಎಂದು ಹೇಳಿದಾಗ ಈ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿತು. ಎನ್‌ಸಿಬಿ ನಂತರ ವಾಂಖೆಡೆ ಮತ್ತು ಇತರರ ವಿರುದ್ಧ ಆಂತರಿಕ ವಿಜಿಲೆನ್ಸ್ ತನಿಖೆಯನ್ನು ನಡೆಸಿದ್ದು, ಅವರ ವಿರುದ್ಧ ಪ್ರಕರಣವನ್ನು ದಾಖಲಿಸಲು ಕಾರಣವಾದ ವಿಷಯಗಳನ್ನು ಸಿಬಿಐನೊಂದಿಗೆ ಹಂಚಿಕೊಂಡಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ರಶ್ಮಿ ಕಲ್ಲಕಟ್ಟ

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us