ಶ್ರೀನಿವಾಸ್ ಬಿವಿ ವಿರುದ್ಧ ಕಿರುಕುಳದ ಆರೋಪ ಮಾಡಿದ ಮಹಿಳೆಯನ್ನು ಉಚ್ಚಾಟಿಸಿದ ಅಸ್ಸಾಂ ಕಾಂಗ್ರೆಸ್

|

Updated on: Apr 22, 2023 | 1:29 PM

ಶ್ರೀನಿವಾಸ್ ಮತ್ತು ಇನ್ನೊಬ್ಬ ಐವೈಸಿ ನಾಯಕ ವರ್ಧನ್ ಯಾದವ್ ಅವರು ತಮ್ಮ ಲಿಂಗದ ಆಧಾರದ ಮೇಲೆ ತನ್ನ ವಿರುದ್ಧ ತಾರತಮ್ಯ ಮಾಡಿದ್ದಾರೆ ಮತ್ತು ಬೆದರಿಕೆ ಹಾಕಲು ಅಸಭ್ಯ ಭಾಷೆ ಬಳಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ

ಶ್ರೀನಿವಾಸ್ ಬಿವಿ ವಿರುದ್ಧ ಕಿರುಕುಳದ ಆರೋಪ ಮಾಡಿದ ಮಹಿಳೆಯನ್ನು ಉಚ್ಚಾಟಿಸಿದ ಅಸ್ಸಾಂ ಕಾಂಗ್ರೆಸ್
ಶ್ರೀನಿವಾಸ್ ಬಿವಿ
Image Credit source: IYC
Follow us on

ದೆಹಲಿ: ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿವಿ (Srinivas BV) ವಿರುದ್ಧ ಕಿರುಕುಳ ಮತ್ತು ತಾರತಮ್ಯ ಆರೋಪ ಮಾಡಿದ್ದ ತಮ್ಮ ಪಕ್ಷದ ಮಾಜಿ ಯುವ ಘಟಕದ ಮುಖ್ಯಸ್ಥೆಯನ್ನು ಅಸ್ಸಾಂ ಕಾಂಗ್ರೆಸ್ (Assam Congress) ಅಮಾನತುಗೊಳಿಸಿದೆ. ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಅವರನ್ನು ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.  ಈ ಸುದ್ದಿಗೆ ಪ್ರತಿಕ್ರಿಯಿಸಿದ ಬಿಜೆಪಿ, ಮಹಿಳಾ ಸಬಲೀಕರಣದ ಮಾದರಿ ಇದು ಎಂದು ಕಾಂಗ್ರೆಸ್ (Congress) ಪಕ್ಷವನ್ನು ಲೇವಡಿ ಮಾಡಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಲಡ್ಕಿ ಹೂಂ ಲಡ್ ಸಕ್ತೀ ಹೂಂ (ನಾನು ಮಹಿಳೆ, ನಾನು ಹೋರಾಡಬಲ್ಲೆ)” ಎಂಬ ಘೋಷಣೆ ಪೊಳ್ಳು ಎಂದು ಬಿಜೆಪಿ ಹೇಳಿದೆ.

ಇದು ಕಾಂಗ್ರೆಸ್ ಮಹಿಳಾ ಸಬಲೀಕರಣದ ಮಾದರಿ! ಕಿರುಕುಳ ಆರೋಪ ಮಾಡಿದ ಮಹಿಳೆಯ ಅಹವಾಲು ಆಲಿಸಲು ವೇದಿಕೆ ಕಲ್ಪಿಸಿಕೊಡುವ ಬದಲು ಮಹಿಳೆಯನ್ನು ವಜಾಗೊಳಿಸಲಾಗುತ್ತದೆ, ಅವರನ್ನು ಕಾಂಗ್ರೆಸ್‌ನಿಂದ ತೆಗೆದುಹಾಕಿರುವ ರೀತಿ ಮಹಿಳೆಯರಿಗೆ ಸ್ಪೂರ್ತಿದಾಯಕವಾಗಿದೆ. ಲಡ್ಕಿ ಹೂಂ ಲಡ್ ಸಕ್ತೀ ಹೂಂ ಎಂಬುದು ಪೊಳ್ಳು ಘೋಷಣೆ ಎಂದಿದೆ ಬಿಜೆಪಿ.

ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿ (APCC) ಮಹಿಳೆಯ ಆರೋಪಗಳನ್ನು “ಆಧಾರರಹಿತ ಮತ್ತು ರಾಜಕೀಯ ಪ್ರೇರಿತ” ಎಂದು ಕಂಡುಹಿಡಿದಿದೆ. ಪಕ್ಷ ಮತ್ತು ಅದರ ನಾಯಕರ ಪ್ರತಿಷ್ಠೆಗೆ ಕಳಂಕ ತಂದಿದ್ದಕ್ಕಾಗಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದೆ ಎಂದು ಮೂಲಗಳು ವರದಿ ಮಾಡಿವೆ.

ಮಹಿಳೆ ಬುಧವಾರ ಶ್ರೀನಿವಾಸ್ ವಿರುದ್ಧ ದಿಸ್ಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಗುರುವಾರ ಅಸ್ಸಾಂ ಪೊಲೀಸರ ಅಪರಾಧ ತನಿಖಾ ಇಲಾಖೆ (ಸಿಐಡಿ) ಅವರನ್ನು ಕರೆಸಿತ್ತು. ಕಾಂಗ್ರೆಸ್ ನಾಯಕನನ್ನು “ಸೆಕ್ಸಿಸ್ಟ್ ಮತ್ತು ಕೋಮುವಾದಿ” ಎಂದು ಅವರು ಆರೋಪಿಸಿದ್ದು, ರಾಷ್ಟ್ರೀಯ ಮಹಿಳಾ ಆಯೋಗವೂ (ಎನ್‌ಸಿಡಬ್ಲ್ಯು) ಅಸ್ಸಾಂ ಪೊಲೀಸರಿಗೆ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಕೇಳಿತ್ತು.

ದೂರಿನ ಆಧಾರದ ಮೇಲೆ ಸಿಐಡಿ ಶ್ರೀನಿವಾಸ್ ವಿರುದ್ಧ ಎಫ್‌ಐಆರ್ ದಾಖಲಿಸುವ ಸಾಧ್ಯತೆಯಿದೆ ಮತ್ತು ಈ ವಿಷಯದ ಬಗ್ಗೆ ಸಮಗ್ರ ತನಿಖೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

ಶ್ರೀನಿವಾಸ್ ಮತ್ತು ಇನ್ನೊಬ್ಬ ಐವೈಸಿ ನಾಯಕ ವರ್ಧನ್ ಯಾದವ್ ಅವರು ತಮ್ಮ ಲಿಂಗದ ಆಧಾರದ ಮೇಲೆ ತನ್ನ ವಿರುದ್ಧ ತಾರತಮ್ಯ ಮಾಡಿದ್ದಾರೆ ಮತ್ತು ಬೆದರಿಕೆ ಹಾಕಲು ಅಸಭ್ಯ ಭಾಷೆ ಬಳಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.ಈ ವಿಷಯದ ಬಗ್ಗೆ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಪಕ್ಷದ ನಾಯಕತ್ವಕ್ಕೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:  ಪ್ರಧಾನಿ ಮೋದಿ ಭೇಟಿ ವೇಳೆ ಆತ್ಮಾಹುತಿ ಬಾಂಬ್ ದಾಳಿ ಬೆದರಿಕೆ; ಕೇರಳದಲ್ಲಿ ಕಟ್ಟೆಚ್ಚರ

ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಕರ್ನಾಟಕದಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸುತ್ತಿರುವ ಶ್ರೀನಿವಾಸ್ ಈ ಆರೋಪಗಳನ್ನು ನಿರಾಕರಿಸಿದ್ದರು. ಅದೇ ವೇಳೆ ತಮ್ಮ ವಿರುದ್ಧ “ಅಸಂಸದೀಯ ಮತ್ತು ಮಾನಹಾನಿಕರ” ಪದಗಳನ್ನು ಬಳಸಿದ್ದಕ್ಕಾಗಿ ಅಂಗಿಕಿತಾ  ದತ್ತಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಅಸ್ಸಾಂ ಕಾಂಗ್ರೆಸ್ ಗುರುವಾರ ದತ್ತಾ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, 24 ಗಂಟೆಗಳ ಒಳಗೆ ಅವರ ವಿರುದ್ಧ ಏಕೆ ಶಿಸ್ತು ಕ್ರಮ ತೆಗೆದುಕೊಳ್ಳಬಾರದು ಎಂದು ವಿವರಿಸುವಂತೆ ಕೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:27 pm, Sat, 22 April 23