ಅಯೋಧ್ಯೆ ಮಂದಿರಕ್ಕೆ ಬೇಕಾಗಿದ್ದಾರೆ ‘ಕಟ್ಟಾ ಹಿಂದೂ’ ಸಿಇಒ: ಜನಿವಾರ ಧರಿಸುತ್ತೀರಾ, ಸಸ್ಯಾಹಾರಿಯೇ? ಗೂಗಲ್ ಫಾರ್ಮ್‌ನಲ್ಲಿ ಧಾರ್ಮಿಕ ಪ್ರಶ್ನೆ

ಅಯೋಧ್ಯೆ ರಾಮ ಜನ್ಮಭೂಮಿ ಟ್ರಸ್ಟ್‌ ಸಿಇಒ ಆಯ್ಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. 5200 ಅರ್ಜಿಗಳಿಂದ 18 ಅಭ್ಯರ್ಥಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿದೆ. ಧಾರ್ಮಿಕ ಆಚರಣೆ, ಜೀವನಶೈಲಿ, ಹಿಂದುತ್ವದ ಕುರಿತು ಕಠಿಣ ಪ್ರಶ್ನೆಗಳನ್ನು ಕೇಳಲಾಗಿದ್ದು (ಶಿಕಾ, ಜನಿವಾರ, ಸಸ್ಯಾಹಾರ, ಮದ್ಯಪಾನ, ರಾಮಭಕ್ತಿ, ಸಾಂಪ್ರದಾಯಿಕ ಉಡುಗೆ), ನಿವೃತ್ತ ಐಎಎಸ್ ಅಧಿಕಾರಿಗಳೂ ಸೇರಿದ್ದಾರೆ. ಸೆಪ್ಟೆಂಬರ್ 2ರೊಳಗೆ ಮೂರು ಹೆಸರುಗಳನ್ನು ಶಿಫಾರಸು ಮಾಡಲಾಗುವುದು. ಟ್ರಸ್ಟ್‌ನ ಪಾರದರ್ಶಕ ಆಡಳಿತಕ್ಕೆ ಈ ಹುದ್ದೆ ಸೃಷ್ಟಿಸಲಾಗಿದೆ.

ಅಯೋಧ್ಯೆ ಮಂದಿರಕ್ಕೆ ಬೇಕಾಗಿದ್ದಾರೆ ಕಟ್ಟಾ ಹಿಂದೂ ಸಿಇಒ: ಜನಿವಾರ ಧರಿಸುತ್ತೀರಾ, ಸಸ್ಯಾಹಾರಿಯೇ? ಗೂಗಲ್ ಫಾರ್ಮ್‌ನಲ್ಲಿ ಧಾರ್ಮಿಕ ಪ್ರಶ್ನೆ
ಸಾಂದರ್ಭಿಕ ಚಿತ್ರ

Updated on: Aug 12, 2026 | 10:40 AM

ಅಯೋಧ್ಯೆ, ಆ.12: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಥಮ ಪೂರ್ಣಕಾಲಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹುದ್ದೆಯ ಆಯ್ಕೆ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಮಂಗಳವಾರ ನಡೆದ ಸಂದರ್ಶನದಲ್ಲಿ ಅಭ್ಯರ್ಥಿಗಳಿಗೆ ಅವರ ಆಡಳಿತಾತ್ಮಕ ಅನುಭವದ ಜೊತೆಗೆ ಧಾರ್ಮಿಕ ಆಚರಣೆ, ಜೀವನಶೈಲಿ ಮತ್ತು ಹಿಂದುತ್ವದ ಆಧಾರದ ಮೇಲೆ ಕಠಿಣ ಪ್ರಶ್ನೆಗಳನ್ನು ಕೇಳಲಾಗಿದೆ.

ಸುಮಾರು 5,200 ಅರ್ಜಿಗಳ ಪೈಕಿ 18 ಅಭ್ಯರ್ಥಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿತ್ತು. ಸಂದರ್ಶನಕ್ಕೆ ಹಾಜರಾಗುವ ಮುನ್ನ ಎಲ್ಲಾ ಅಭ್ಯರ್ಥಿಗಳಿಗೆ 34 ಅಂಶಗಳ ಗೂಗಲ್ ಫಾರ್ಮ್ ಭರ್ತಿ ಮಾಡಲು ಸೂಚಿಸಲಾಗಿತ್ತು. ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಅಭ್ಯರ್ಥಿಗಳಿಗೆ ವೈಯಕ್ತಿಕ ಹಾಗೂ ಧಾರ್ಮಿಕ ಜೀವನಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಪ್ರಮುಖ ಪ್ರಶ್ನೆಗಳನ್ನು ಕೇಳಲಾಗಿದೆ.

  • ನೀವು ಶಿಕಾ (ಜಟಾ/ಕುಡುಮಿ) ಇಟ್ಟುಕೊಳ್ಳುತ್ತೀರಾ? ಜನಿವಾರ (ಪವಿತ್ರ ದಾರ) ಧರಿಸುತ್ತೀರಾ?
  • ನೀವು ಶುದ್ಧ ಸಸ್ಯಾಹಾರಿಯೇ ಅಥವಾ ಮಾಂಸಹಾರ ಸೇವಿಸುತ್ತೀರಾ?
  • ಮದ್ಯಪಾನ ಸೇವಿಸುತ್ತೀರಾ ಅಥವಾ ಪೂರ್ಣವಾಗಿ ಮಧ್ಯವರ್ಜಿತರೇ?
  • ನೀವು ಕಟ್ಟಾ ಹಿಂದೂವೇ? ಶ್ರೀರಾಮನ ಮೇಲೆ ನಿಮಗಿರುವ ಭಕ್ತಿ ಎಂಥದ್ದು?
  • ಹಿಂದೂ ಧಾರ್ಮಿಕ ಸಂಪ್ರದಾಯದ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಲು ನೀವು ಸಿದ್ಧರಿದ್ದೀರಾ?
  • ಈ ಹಿಂದೆ ಎಲ್ಲಿ ಕೆಲಸ ಮಾಡಿದ್ದೀರಿ? ಬೃಹತ್ ಪ್ರಮಾಣದ ಜನಸ್ತೋಮ/ಸಮುದಾಯವನ್ನು ನಿರ್ವಹಿಸಿದ ಅನುಭವವಿದೆಯೇ? ನಿಮ್ಮ ಕುಟುಂಬದ ಹಿನ್ನೆಲೆ ಏನು?

ಇದನ್ನೂ ಓದಿ: ಮುಂಬೈನ ಘಾಟ್‌ಕೋಪರ್‌ನಲ್ಲಿ ಭಾರಿ ಭೂಕುಸಿತ: ಇಬ್ಬರು ಬಲಿ, ನಾಲ್ಕೈದು ಜನರು ಮಣ್ಣಿನಡಿಯಲ್ಲಿ ಸಿಲುಕಿರುವ ಶಂಕೆ

ಆಯ್ಕೆಯಾದ 18 ಅಭ್ಯರ್ಥಿಗಳಲ್ಲಿ ನಾಲ್ವರು ವಿಶ್ರಾಂತ ಐಎಎಸ್ ಅಧಿಕಾರಿಗಳು, ಐಪಿಎಸ್ ಹಾಗೂ ಸೇನಾ ಮಾಜಿ ಅಧಿಕಾರಿಗಳು ಸೇರಿದ್ದಾರೆ. ಮಂಗಳವಾರ 8 ಅಭ್ಯರ್ಥಿಗಳು ಮುಖಾಮುಖಿ ನೇರ ಸಂದರ್ಶನಕ್ಕೆ ಹಾಜರಾಗಿದ್ದು, ಪ್ರತಿಯೊಬ್ಬರ ಸಂದರ್ಶನ 1 ರಿಂದ 2 ಗಂಟೆಗಳ ಕಾಲ ನಡೆಯಿತು.ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪ್ರಮೋದ್ ಕೊಹ್ಲಿ, ನಿವೃತ್ತ ಲೆಫ್ಟಿನೆಂಟ್ ಜನರಲ್ ವಿಷ್ಣುಕಾಂತ್ ಚತುರ್ವೇದಿ ಹಾಗೂ ಸುರೇಶ್ ಹಾವರೆ ಅವರನ್ನೊಳಗೊಂಡ ಉನ್ನತ ಸಮಿತಿಯು ಈ ಸಂದರ್ಶನ ನಡೆಸುತ್ತಿದೆ. ಆಯ್ಕೆ ಸಮಿತಿಯು ಸೆಪ್ಟೆಂಬರ್ 2 ರೊಳಗೆ 3 ಪ್ರಮುಖ ಹೆಸರುಗಳನ್ನು ಟ್ರಸ್ಟ್‌ಗೆ ಶಿಫಾರಸು ಮಾಡಲಿದ್ದು, ಅದರಲ್ಲಿ ಒಬ್ಬರನ್ನು ಅಂತಿಮ ಸಿಇಒ ಆಗಿ ಆಯ್ಕೆ ಮಾಡಲಾಗುತ್ತದೆ.

ಇತ್ತೀಚೆಗೆ ರಾಮಮಂದಿರದ ದೇಣಿಗೆ ಹಣದ ದುರುಪಯೋಗ ಮತ್ತು ಆರ್ಥಿಕ ಅಕ್ರಮಗಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಟ್ರಸ್ಟ್‌ನ ಆಡಳಿತ ಹಾಗೂ ಹಣಕಾಸು ನಿರ್ವಹಣೆಯನ್ನು ಪಾರದರ್ಶಕವಾಗಿ ನಡೆಸಲು ಈ ಪೂರ್ಣಕಾಲಿಕ ಸಿಇಒ ಹುದ್ದೆಯನ್ನು ಸೃಷ್ಟಿಸಲಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us