ಬಿಹಾರ ಸಿಎಂ ನಿವಾಸಕ್ಕೆ ಧಾವಿಸಿದ ಜೆಡಿಯು ನಾಯಕರು; ಬಿಜೆಪಿ ಬೆಂಬಲದೊಂದಿಗೆ ನಾಳೆ ನಿತೀಶ್‌ ಕುಮಾರ್‌ ಪ್ರಮಾಣ ವಚನ?

|

Updated on: Jan 27, 2024 | 2:36 PM

Bihar Political Crisis: ಆಡಳಿತಾರೂಢ 'ಮಹಾಘಟಬಂಧನ್' ತೊರೆದು ಬಿಜೆಪಿ ನೇತೃತ್ವದ ಎನ್‌ಡಿಎಗೆ ಮರಳಲು ಯೋಜಿಸುತ್ತಿದ್ದಾರೆ ಎಂಬ ಬಲವಾದ ಸೂಚನೆಗಳ ನಡುವೆ ಜೆಡಿಯುನ ಉನ್ನತ ನಾಯಕರು ಪಕ್ಷದ ಅಧ್ಯಕ್ಷ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಿವಾಸಕ್ಕೆ ಶನಿವಾರ ದೌಡಾಯಿಸಿದ್ದಾರೆ.

ಬಿಹಾರ ಸಿಎಂ ನಿವಾಸಕ್ಕೆ ಧಾವಿಸಿದ ಜೆಡಿಯು ನಾಯಕರು; ಬಿಜೆಪಿ ಬೆಂಬಲದೊಂದಿಗೆ ನಾಳೆ ನಿತೀಶ್‌ ಕುಮಾರ್‌ ಪ್ರಮಾಣ ವಚನ?
ನಿತೀಶ್ ಕುಮಾರ್
Follow us on

ಪಾಟ್ನಾ ಜನವರಿ 27:  ಜೆಡಿಯು ನಾಯಕ ನಿತೀಶ್ ಕುಮಾರ್ (Nitish Kumar) ಅವರು ಬಿಜೆಪಿ (BJP) ಬೆಂಬಲದೊಂದಿಗೆ ನಾಳೆ (ಭಾನುವಾರ) ಮತ್ತೆ ಬಿಹಾರ (Bihar) ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ರಾಜಕೀಯ ಬಿಕ್ಕಟ್ಟಿನ ಮಧ್ಯೆ, ಕಾಂಗ್ರೆಸ್ ಮತ್ತು ಆರ್‌ಜೆಡಿ ಎರಡೂ ತಮ್ಮ ಶಾಸಕರ ಸಭೆ ಕರೆದಿವೆ. ಆದರೆ ಬೆಳವಣಿಗೆಯಾಗುತ್ತಿರುವ ರಾಜಕೀಯ ಸನ್ನಿವೇಶಕ್ಕೆ ಯಾವುದೇ ಸಂಬಂಧವಿಲ್ಲ. ರಾಹುಲ್ ಗಾಂಧಿಯವರ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಗೆ ಸಿದ್ಧತೆಗಳನ್ನು ಚರ್ಚಿಸಲು ಸಭೆ ನಡೆಸುವುದಾಗಿ ಕಾಂಗ್ರೆಸ್ ಹೇಳಿಕೊಂಡಿದೆ.

ನಿತೀಶ್ ಕುಮಾರ್ ನಿವಾಸಕ್ಕೆ ಧಾವಿಸಿದ ಜೆಡಿಯು ನಾಯಕರು

ಆಡಳಿತಾರೂಢ ‘ಮಹಾಘಟಬಂಧನ್’ ತೊರೆದು ಬಿಜೆಪಿ ನೇತೃತ್ವದ ಎನ್‌ಡಿಎಗೆ ಮರಳಲು ಯೋಜಿಸುತ್ತಿದ್ದಾರೆ ಎಂಬ ಬಲವಾದ ಸೂಚನೆಗಳ ನಡುವೆ ಜೆಡಿಯುನ ಉನ್ನತ ನಾಯಕರು ಪಕ್ಷದ ಅಧ್ಯಕ್ಷ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಿವಾಸಕ್ಕೆ ಶನಿವಾರ ದೌಡಾಯಿಸಿದ್ದಾರೆ. ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್, ‘ಲಾಲನ್’, ಸಚಿವ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂಜಯ್ ಕುಮಾರ್ ಝಾ ಮತ್ತು ರಾಜ್ಯ ವಿಧಾನ ಪರಿಷತ್ತಿನ ಅಧ್ಯಕ್ಷ ದೇವೇಶ್ ಚಂದ್ರ ಠಾಕೂರ್ ಸಿಎಂ ಅವರ ಅಧಿಕೃತ ನಿವಾಸಕ್ಕೆ ಬಂದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಜನತಾ ದಳ (ಯುನೈಟೆಡ್) ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್‌ಡಿಎ) ಮರಳುವ ಬಗ್ಗೆ ಊಹಾಪೋಹಗಳ ನಡುವೆ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಶನಿವಾರ ಬಿಜೆಪಿ ಕೇಂದ್ರ ನಾಯಕತ್ವವು “ಬಿಹಾರದ ರಾಜಕೀಯ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ” ಎಂದು ಹೇಳಿದ್ದಾರೆ. ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಅಧ್ಯಕ್ಷ ಚಿರಾಗ್ ಪಾಸ್ವಾನ್, ರಾಜ್ಯದ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಬಗ್ಗೆ ಉಭಯ ನಾಯಕರಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದಾಗಿ ಹೇಳಿದ್ದಾರೆ.

ಬಿಹಾರದ ರಾಜಕೀಯ ಬೆಳವಣಿಗೆಗಳ ಅಪ್ಡೇಟ್ಸ್

ಪ್ರಜಾಪ್ರಭುತ್ವ ಉಳಿಸುವ ಆಸಕ್ತಿ ಇರುವವರು ಇಂಡಿಯಾ ಮೈತ್ರಿಕೂಟದಲ್ಲಿರುತ್ತಾರೆ: ಮಲ್ಲಿಕಾರ್ಜುನ ಖರ್ಗೆ

ಜೆಡಿಯು ಇಂಡಿಯಾ ಮೈತ್ರಿಯಿಂದ ಹೊರಬರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಅವರ ಮನಸ್ಸಿನಲ್ಲಿ ಏನಿದೆ ಎಂಬುದು ಸ್ಪಷ್ಟವಾಗಿಲ್ಲ. ನಾನು ನಾಳೆ ಡೆಹ್ರಾಡೂನ್‌ಗೆ, ನಂತರ ದೆಹಲಿಗೆ ಪ್ರಯಾಣಿಸುತ್ತಿದ್ದೇನೆ. ನಾನು ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೇನೆ ಮತ್ತು ನಂತರ ನಾನು ನಿಮಗೆ ಸಂಕ್ಷಿಪ್ತವಾಗಿ ಹೇಳುತ್ತೇನೆ. ಏನಾಗಲಿದೆ ಎಂದು ನೋಡೋಣ. ಎಲ್ಲರನ್ನೂ ಒಗ್ಗೂಡಿಸುವುದು ನಮ್ಮ ಪ್ರಯತ್ನ. ನಾನು ಮಮತಾ ಬ್ಯಾನರ್ಜಿ, ಲಾಲು ಪ್ರಸಾದ್ ಯಾದವ್ ಮತ್ತು ಸೀತಾರಾಂ ಯೆಚೂರಿ ಅವರೊಂದಿಗೆ ಮಾತನಾಡಿದ್ದೇನೆ. ನಾವು ಒಗ್ಗೂಡಿದರೆ, ನಾವು ಉತ್ತಮ ಹೋರಾಟವನ್ನು ನೀಡುತ್ತೇವೆ. ಇಂಡಿಯಾ ಮೈತ್ರಿ ಯಶಸ್ವಿಯಾಗುತ್ತದೆ. ಪ್ರಜಾಪ್ರಭುತ್ವವನ್ನು ಉಳಿಸಲು ಆಸಕ್ತಿ ಹೊಂದಿರುವವರು ತಮ್ಮ ಮನಸ್ಸನ್ನು ಬದಲಾಯಿಸುವುದಿಲ್ಲ ಮತ್ತು ನಮ್ಮೊಂದಿಗೆ ಇರುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಬಿಜೆಪಿ ನಾಯಕರೊಂದಿಗೆ ವೇದಿಕೆ ಹಂಚಿಕೊಂಡ ನಿತೀಶ್ ಕುಮಾರ್

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಶನಿವಾರ ಉತ್ತರ ಪ್ರದೇಶದ ಗಡಿಭಾಗದ ಬಕ್ಸರ್ ಜಿಲ್ಲೆಗೆ ಭೇಟಿ ನೀಡಿ, ಹಿರಿಯ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಅಶ್ವನಿ ಕುಮಾರ್ ಚೌಬೆ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ. ನಿತೀಶ್ ಕುಮಾರ್ ಅವರು ತಮ್ಮ ಸಹೋದ್ಯೋಗಿ ಮತ್ತು ರಾಜ್ಯ ಸಚಿವ ಅಶೋಕ್ ಚೌಧರಿ ಅವರೊಂದಿಗೆ ಬಕ್ಸಾರ್‌ನ ಬ್ರಹ್ಮಪುರದ ಪ್ರಸಿದ್ಧ ಬಾಬಾ ಬ್ರಹ್ಮೇಶ್ವರ ನಾಥ ದೇವಾಲಯದಲ್ಲಿ ಸೌಂದರ್ಯೀಕರಣ ಕಾಮಗಾರಿಯನ್ನು ಉದ್ಘಾಟಿಸಿದ್ದಾರೆ. ಈ ಯೋಜನೆಯನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆಯು ಕೈಗೆತ್ತಿಕೊಂಡಿದೆ. ಅಂದಹಾಗೆ ಉಪಮುಖ್ಯಮಂತ್ರಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಗೈರಾಗಿದ್ದರು. ಈ ಸಂದರ್ಭದಲ್ಲಿ ಬೇರೆ ಯಾವುದೇ ಆರ್‌ಜೆಡಿ ನಾಯಕರು ಅಲ್ಲಿ ಹಾಜರಿರಲಿಲ್ಲ.

‘ಕಾಂಗ್ರೆಸ್‌ನ ಹಠಮಾರಿ ಧೋರಣೆಯಿಂದ ಇಂಡಿಯಾ ಮೈತ್ರಿ ಮುರಿದು ಬೀಳುವ ಹಂತದಲ್ಲಿದೆ’

ಕಾಂಗ್ರೆಸ್‌ನ ಬೇಜವಾಬ್ದಾರಿ ಮತ್ತು ಹಠಮಾರಿ ಧೋರಣೆಯಿಂದಾಗಿ ಇಂಡಿಯಾ ಮೈತ್ರಿ ಮುರಿದು ಬೀಳುವ ಹಂತದಲ್ಲಿದೆ ಎಂದು ಜೆಡಿಯು ನಾಯಕ ಕೆಸಿ ತ್ಯಾಗಿ ಹೇಳಿದ್ದಾರೆ.

ಇದನ್ನೂ ಓದಿ: ಬಿಹಾರದಲ್ಲಿ ನಡೆಯಲಿರುವ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ನಿತೀಶ್​ ಕುಮಾರ್​

ಆರ್‌ಜೆಡಿ ಸಭೆ

ಮುಖ್ಯಮಂತ್ರಿ ನಿತೀಶ್ ಕುಮಾರ್ ಪಕ್ಷವನ್ನು ಕೈಬಿಡಬಹುದು ಎಂಬ ಆತಂಕದ ನಡುವೆ ಬಿಹಾರದ ಆರ್‌ಜೆಡಿ ನಾಯಕರು ಶನಿವಾರ ಇಲ್ಲಿ ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಅವರ ಮನೆಯಲ್ಲಿ ಜಮಾಯಿಸಿದ್ದಾರೆ. ಲಾಲು ಮನೆಯಲ್ಲಿ ನಡೆದ ಸಭೆಯಲ್ಲಿ ಉಪ ಮುಖ್ಯಮಂತ್ರಿಯಾಗಿರುವ ಅವರ ಪುತ್ರ ತೇಜಸ್ವಿ ಯಾದವ್ ಮತ್ತು ಮಾಜಿ ಮುಖ್ಯಮಂತ್ರಿ ಪತ್ನಿ ರಾಬ್ರಿ ದೇವಿ ಅವರು ರಾಜ್ಯ ಶಾಸಕಾಂಗ ಸದಸ್ಯರು ಸೇರಿದಂತೆ ಹಿರಿಯ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಮತ್ತು ಮೂರು ಎಡಪಕ್ಷಗಳನ್ನು ಒಳಗೊಂಡಿರುವ ಮಹಾಘಟಬಂಧನ್‌ನಲ್ಲಿ ಆರ್‌ಜೆಡಿ ಅತಿದೊಡ್ಡ ಮೈತ್ರಿ ಪಾಲುದಾರರಾಗಿದ್ದು, ಕುಮಾರ್ ಅವರ ಜೆಡಿಯು ಹಿಂತೆಗೆದರೆ ವಿಧಾನಸಭೆಯಲ್ಲಿ ಎಂಟು ಸದಸ್ಯರ ಬಹುಮತದ ಕೊರತೆಯಿದೆ.

ಮೈತ್ರಿಗೆ ಸಂಬಂಧಿಸಿದಂತೆ ಪರಿಸ್ಥಿತಿ ತುಂಬಾ ಸಕಾರಾತ್ಮಕವಾಗಿದೆ: ಚಿರಾಗ್ ಪಾಸ್ವಾನ್

ಇಂದು ಬಿಹಾರದಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿತ್ತು. ಈ ವಿಷಯದ ಬಗ್ಗೆ ನಾನು ಇಂದು ಅಮಿತ್ ಶಾ ಮತ್ತು ಜೆಪಿ ನಡ್ಡಾ ಜಿ ಅವರೊಂದಿಗೆ ಸಭೆ ನಡೆಸಿದ್ದೇನೆ. ನಾನು ಬಿಹಾರದ ಬಗ್ಗೆ ನನ್ನ ಕಾಳಜಿಯನ್ನು ಅವರ ಮುಂದೆ ಇಟ್ಟಿದ್ದೇನೆ. ಅವರು ವಿವಿಧ ವಿಷಯಗಳ ಬಗ್ಗೆ ಭರವಸೆ ನೀಡಿದ್ದಾರೆ. ಪರಿಸ್ಥಿತಿ ಮೈತ್ರಿಗೆ ಸಂಬಂಧಿಸಿದಂತೆ ತುಂಬಾ ಸಕಾರಾತ್ಮಕವಾಗಿದೆ.ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ತಿಳಿಯಾಗಲಿದೆ ಮತ್ತು ಅದರ ನಂತರ ನಮ್ಮ ಪಕ್ಷವು ಒಂದು ನಿಲುವನ್ನು ತೆಗೆದುಕೊಳ್ಳುತ್ತದೆ. ನಾವು ಇಂದು NDA ಯ ಭಾಗವಾಗಿದ್ದೇವೆ ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ