TV9 Kannada National Bihar politics Nitish Kumar may be joining hands with the BJP RJD firms up its game plan
ಬಿಹಾರ ರಾಜಕೀಯ ಬಿಕ್ಕಟ್ಟು; ಲಾಲು ಪ್ರಸಾದ್ ಯಾದವ್ ಲೆಕ್ಕಾಚಾರ ಏನಿದೆ?
ಬಿಹಾರ ಸರ್ಕಾರದಲ್ಲಿ ಜೆಡಿಯು-ಬಿಜೆಪಿ ಮೈತ್ರಿಕೂಟದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪಾಟ್ನಾದ ರಾಜಭವನದಲ್ಲಿ ಸಿದ್ಧತೆಗಳು ಆರಂಭವಾಗಿದೆ. ಮೂಲಗಳ ಪ್ರಕಾರ, ಭಾನುವಾರ ಕೆಲಸ ಮಾಡುವಂತೆ ಮತ್ತು ಕಚೇರಿಗಳನ್ನು ತೆರೆಯುವಂತೆ ಸಿಎಂ ಸಚಿವಾಲಯದಿಂದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ
ಲಾಲು ಪ್ರಸಾದ್ ಯಾದವ್
ರಶ್ಮಿ ಕಲ್ಲಕಟ್ಟ
Updated on:
Jan 27, 2024 | 7:09 PM
ದೆಹಲಿ ಜನವರಿ 27: ನಿತೀಶ್ ಕುಮಾರ್ (Nitish Kumar) ಬಿಜೆಪಿಯೊಂದಿಗೆ (BJP) ಕೈಜೋಡಿಸಬಹುದು ಎಂಬ ಊಹಾಪೋಹಗಳ ಮೇಲೆ ಬಿಹಾರದಲ್ಲಿ (Bihar) ರಾಜಕೀಯ ಬಿಕ್ಕಟ್ಟು ಉಂಟಾಗಿದ್ದು, ವಿವಿಧ ಪಕ್ಷಗಳು ಸಭೆ ಕರೆದು ತಮ್ಮ ಗೇಮ್ ಪ್ಲಾನ್ ಮಾಡುತ್ತಿವೆ. ಏತನ್ಮಧ್ಯೆ, ಆರ್ಜೆಡಿ ಸಭೆಯಲ್ಲಿ ಲಾಲು ಯಾದವ್ಗೆ ರಾಜ್ಯ ರಾಜಕೀಯದಲ್ಲಿ ಏನೇ ನಡೆದರೂ ಕರೆ ಮಾಡಲು ಪಕ್ಷ ಅಧಿಕಾರ ನೀಡಿದೆ.
ಎಎನ್ಐ ವರದಿ ಪ್ರಕಾರ, ನಿತೀಶ್ ಕುಮಾರ್ ಅವರನ್ನು ಆರ್ಜೆಡಿ ಯಾವಾಗಲೂ ಗೌರವಿಸುತ್ತದೆ ಎಂದು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ. ಅನೇಕ ವಿಷಯಗಳು ಅವರ (ನಿತೀಶ್ ಕುಮಾರ್) ನಿಯಂತ್ರಣದಲ್ಲಿಲ್ಲ. ಬಿಹಾರದಲ್ಲಿ ಆಟ ಇನ್ನೂ ಮುಗಿದಿಲ್ಲ ಎಂದು ಸಭೆಯಲ್ಲಿ ಒಮ್ಮತ ಮೂಡಿದೆ ಎಂದು ವರದಿಗಳು ತಿಳಿಸಿವೆ. ಆರ್ಜೆಡಿ ಶಾಸಕರು ಪಾಟ್ನಾದಲ್ಲಿಯೇ ಇರುವಂತೆ ಮತ್ತು ಅವರ ಫೋನ್ ಸ್ವಿಚ್ ಆಫ್ ಮಾಡದಂತೆ ಕೇಳಿಕೊಳ್ಳಲಾಗಿದೆ.
ನಿತೀಶ್ ಕುಮಾರ್ ಭಾನುವಾರ ಸಿಎಂ ಆಗಿ ಪ್ರಮಾಣ ವಚನ?
ಬಿಹಾರ ಸರ್ಕಾರದಲ್ಲಿ ಜೆಡಿಯು-ಬಿಜೆಪಿ ಮೈತ್ರಿಕೂಟದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪಾಟ್ನಾದ ರಾಜಭವನದಲ್ಲಿ ಸಿದ್ಧತೆಗಳು ಆರಂಭವಾಗಿದೆ. ಮೂಲಗಳ ಪ್ರಕಾರ, ಭಾನುವಾರ ಕೆಲಸ ಮಾಡುವಂತೆ ಮತ್ತು ಕಚೇರಿಗಳನ್ನು ತೆರೆಯುವಂತೆ ಸಿಎಂ ಸಚಿವಾಲಯದಿಂದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜಭವನ ಸೆಕ್ರೆಟರಿಯೇಟ್ ಕೂಡ ಭಾನುವಾರ ತೆರೆದಿರುತ್ತದೆ. ಮೂಲಗಳ ಪ್ರಕಾರ, ನಿತೀಶ್ ಕುಮಾರ್ ಅವರು ಸಂಜೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬಹುದು ಮತ್ತು ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸಲು ಹಕ್ಕು ಸಾಧಿಸಬಹುದು. ಭಾನುವಾರ ನಿತೀಶ್ ಜೊತೆಗೆ ಬಿಜೆಪಿಯಿಂದ ಉಪ ಮುಖ್ಯಮಂತ್ರಿ ಮತ್ತು ಸಂಪುಟ ಸಚಿವರಾಗಿ ಉಭಯ ಪಕ್ಷಗಳ ಹಲವು ನಾಯಕರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
ಬಿಹಾರದಲ್ಲಿ ಇದುವರೆಗಿನ ಪ್ರಮುಖ 10 ಬೆಳವಣಿಗೆಗಳು ಇಲ್ಲಿವೆ
ಛತ್ತೀಸ್ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಪಾಟ್ನಾದಲ್ಲಿ ಏನಾಗುತ್ತಿದೆ ಎಂಬುದರ ಹಿರಿಯ ವೀಕ್ಷಕರಾಗಿ ಪಾಟ್ನಾಗೆ ಕಳುಹಿಸಲಾಗಿದೆ.
ನಿತೀಶ್ ಕುಮಾರ್ ಅವರನ್ನು ಸಂಪರ್ಕಿಸಲು ಪಕ್ಷವು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ. ಮಲ್ಲಿಕಾರ್ಜುನ ಖರ್ಗೆ ಅವರು ನಿತೀಶ್ ಕುಮಾರ್ ಅವರಿಗೆ ಹಲವಾರು ಬಾರಿ ಕರೆ ಮಾಡಿದ್ದಾರೆ. ಆದರೆ ನಿತೀಶ್ ಕುಮಾರ್ ಅವರು ಸಭೆಯಲ್ಲಿದ್ದರು. ಬಿಹಾರ ಸಿಎಂ ಮರಳಿ ಕರೆ ಮಾಡಿದಾಗ, ಕಾಂಗ್ರೆಸ್ ಅಧ್ಯಕ್ಷರು ಕಾರ್ಯನಿರತರಾಗಿದ್ದರು, ಆದ್ದರಿಂದ ಅವರು ಇನ್ನೂ ಮಾತನಾಡಲು ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಶನಿವಾರ ನಡೆದ ಪಕ್ಷದ ಸಭೆಯಲ್ಲಿ ತೇಜಸ್ವಿ ಹಲವು ಅನಿರೀಕ್ಷಿತ ಬೆಳವಣಿಗೆಗಳು ನಡೆಯಬಹುದು ಎಂದು ಸೂಚಿಸಿದರು. ಮುಖ್ಯಮಂತ್ರಿಯವರು ನನ್ನೊಂದಿಗೆ ವೇದಿಕೆಯಲ್ಲಿ ಕುಳಿತು 2005 ರ ಮೊದಲು ಬಿಹಾರದಲ್ಲಿ ಏನಿತ್ತು? ಎಂದು ಕೇಳುತ್ತಿದ್ದರು, ನಾನು ಏನೂ ಪ್ರತಿಕ್ರಿಯಿಸಲಿಲ್ಲ. ಈಗ, ಹೆಚ್ಚು ಜನರು ನಮ್ಮೊಂದಿಗಿದ್ದಾರೆ. ಎರಡು ದಶಕಗಳಲ್ಲಿ ಏನು ಮಾಡದೆ ಉಳಿದಿದೆಯೋ ಅದನ್ನು ನಾವು ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಉದ್ಯೋಗಗಳು, ಜಾತಿ ಜನಗಣತಿ, ಹೆಚ್ಚುತ್ತಿರುವ ಮೀಸಲಾತಿ ಇತ್ಯಾದಿ ಕಡಿಮೆ ಸಮಯದಲ್ಲಿ ಮಾಡಲ್ಪಟ್ಟಿದೆ.. ‘ಬಿಹಾರ ಮೇ ಅಭಿ ಖೇಲ್ ಹೋನಾ ಬಾಕಿ ಹೈ’ (ಬಿಹಾರದಲ್ಲಿ ಆಟ ಇನ್ನೂ ಪ್ರಾರಂಭವಾಗಿಲ್ಲ) ಎಂದು ತೇಜಸ್ವಿ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.
ಊಹಾಪೋಹಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜೆಡಿಯು ಹೊರಗೆ ಹೋಗುತ್ತಿದೆಯೇ ? ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಸಿಕ್ಕಿಲ್ಲ, ನಾನು ಅವರಿಗೆ (ಜೆಡಿ (ಯು) ನಾಯಕತ್ವಕ್ಕೆ ಪತ್ರ ಬರೆದಿದ್ದೇನೆ. ಮತ್ತು ಅವರೊಂದಿಗೆ ಮಾತನಾಡಲು ಪ್ರಯತ್ನಿಸಿದೆ. ಅವರ ಮನಸ್ಸಿನಲ್ಲಿ ಏನಿದೆ ಎಂದು ನನಗೆ ಸ್ಪಷ್ಟವಾಗಿ ತಿಳಿದಿಲ್ಲ ಎಂದು ಹೇಳಿದ್ದಾರೆ.
ಬಿಹಾರ ಬಿಜೆಪಿ ಕೋರ್ ಕಮಿಟಿ ಸಭೆಯೂ ಶನಿವಾರ ನಡೆದಿದೆ. ನಿತೀಶ್ ಕುಮಾರ್ ಇನ್ನೂ ಸಿಎಂ, ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.
ಬಿಹಾರದ ರಾಜಕೀಯ ಚಟುವಟಿಕೆಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ. “ನಾವು ಬಿಟ್ಟಿದ್ದೇವೆ ಎಂದು ಲಾಲು ಯಾದವ್ ಆಗಲೀ, ಬಿಟ್ಟು ಹೋಗುವುದಾಗಿ ನಿತೀಶ್ ಕುಮಾರ್ ಆಗಲೀ ಹೇಳಿಲ್ಲ. ಇದರ ಬಗ್ಗೆ ಬಿಜೆಪಿ ಏನು ಹೇಳಬಹುದು?” ಗಿರಿರಾಜ್ ಸಿಂಗ್ ಹೇಳಿದರು.
ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದು, ಅಲ್ಲಿ ಲೋಕ ಜನಶಾಂಕ್ತಿ ಪಕ್ಷದ (ರಾಮ್ ವಿಲಾಸ್) ಅಧ್ಯಕ್ಷ ಚಿರಾಗ್ ಪವನ್ ಕೂಡ ಉಪಸ್ಥಿತರಿದ್ದರು. ಸಭೆಯ ಬಳಿಕ ಮಾತನಾಡಿದ ಚಿರಾಗ್, ನಿತೀಶ್ ಕುಮಾರ್ ಅವರು ಎನ್ ಡಿಎಗೆ ಬರುತ್ತಾರೋ ಇಲ್ಲವೋ ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು ಮತ್ತು ಅವರು ಬರುತ್ತಿದ್ದರೆ ಅದರ ಸಮಯವನ್ನು ಸ್ಪಷ್ಟಪಡಿಸಬೇಕು ಎಂದಿದ್ದಾರೆ.
ಇಷ್ಟೆಲ್ಲ ರಾಜಕೀಯ ಮೇಲಾಟದ ನಡುವೆ ನಿತೀಶ್ ಕುಮಾರ್ ಬಕ್ಸರ್ನ ಬ್ರಹ್ಮಪುರದಲ್ಲಿ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ನಿತೀಶ್ ಕುಮಾರ್ ಅವರನ್ನು ಕಾಂಗ್ರೆಸ್ ಪದೇ ಪದೇ ಅವಮಾನಿಸಿದೆ ಎಂದು ಜೆಡಿಯು ನಾಯಕ ಕೆಸಿ ತ್ಯಾಗಿ ಹೇಳಿದ್ದಾರೆ. ನಿತೀಶ್ ಕುಮಾರ್ ಅವರು ಮೈತ್ರಿಕೂಟದಲ್ಲಿ ಯಾವುದೇ ಸ್ಥಾನಕ್ಕಾಗಿ ಹಾತೊರೆಯಲಿಲ್ಲ ಆದರೆ ಕಾಂಗ್ರೆಸ್ ನಾಯಕತ್ವದ ಒಂದು ವಿಭಾಗವು ಅವರನ್ನು ಅವಮಾನಿಸಿದೆ ಎಂದು ಜೆಡಿಯು ನಾಯಕ ಹೇಳಿದರು. ನಿತೀಶ್ ಕುಮಾರ್ ಅವರನ್ನು ಇಂಡಿಯಾ ಬ್ಲಾಕ್ನ ಸಂಚಾಲಕರನ್ನಾಗಿ ಹೆಸರಿಸಲಾಯಿತು ಆದರೆ ಅವರು ಅದನ್ನು ತಿರಸ್ಕರಿಸಿದರು.
79 ಶಾಸಕರನ್ನು ಹೊಂದಿರುವ ಆರ್ಜೆಡಿ ಬಿಹಾರ ವಿಧಾನಸಭೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿದೆ. ಜೆಡಿ(ಯು) ಹೊರತುಪಡಿಸಿ ಕಾಂಗ್ರೆಸ್ ಮತ್ತು ಮೂರು ಎಡಪಕ್ಷಗಳ ‘ಮಹಾಘಟಬಂಧನ್’ ಚುಕ್ಕಾಣಿ ಹಿಡಿದಿದೆ. ಜೆಡಿಯು ಮಹಾಘಟಬಂಧನ್ನಿಂದ ಹಿಂದೆ ಸರಿದರೆ, ಅದು ಬಹುಮತಕ್ಕೆ ಎಂಟು ಸದಸ್ಯರ ಕೊರತೆಯಾಗುತ್ತದೆ
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂದು ರಾತ್ರಿ 7 ಗಂಟೆಗೆ ಪಾಟ್ನಾದಲ್ಲಿರುವ ತಮ್ಮ ಎಲ್ಲಾ ಶಾಸಕರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದು, ರಾಜ್ಯದಲ್ಲಿ ಸರ್ಕಾರ ರಚಿಸಲು ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಕ್ಕೆ ಪುಷ್ಠಿ ನೀಡಿದೆ. ನಿತೀಶ್ ತನ್ನ ಪ್ರಸ್ತುತ ಮಿತ್ರ ಪಕ್ಷವಾದ ಆರ್ಜೆಡಿಯನ್ನು ತೊರೆದು ಮತ್ತೆ ಬಿಜೆಪಿಯೊಂದಿಗೆ ಕೈಜೋಡಿಸುವ ಬಗ್ಗೆ ಊಹಾಪೋಹಗಳ ನಡುವ ಕಳೆದ ಎರಡು ದಿನಗಳಲ್ಲಿ ದೆಹಲಿ ಮತ್ತು ಬಿಹಾರದಲ್ಲಿ ಅವರ ಜೆಡಿಯು ಮತ್ತು ಬಿಜೆಪಿಯ ಸರಣಿ ಸಭೆಗಳು ನಡೆದಿವೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Rashmi Kallakatta
ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ