ಬಿಜೆಪಿ ಇಂತಹ ದಾಳಿಗಳಿಗೆ ಜಗ್ಗುವುದಿಲ್ಲ: ಜೆ.ಪಿ.ನಡ್ಡಾ ವಾಹನದ ಮೇಲೆ ನಡೆದ ದಾಳಿ ಖಂಡಿಸಿದ ಅಮಿತ್ ಶಾ

ಇಂತಹ ದಾಳಿಗಳಿಗೆ ಬಿಜೆಪಿ ಜಗ್ಗುವುದಿಲ್ಲ. ನಾವು ನಮ್ಮ ಪಕ್ಷ ಸಂಘಟನೆಗಾಗಿ ಇನ್ನಷ್ಟು ಶ್ರಮಿಸುತ್ತೇವೆ ಎಂದು ಅಮಿತ್ ಶಾ ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಇಂತಹ ದಾಳಿಗಳಿಗೆ ಜಗ್ಗುವುದಿಲ್ಲ: ಜೆ.ಪಿ.ನಡ್ಡಾ ವಾಹನದ ಮೇಲೆ ನಡೆದ ದಾಳಿ ಖಂಡಿಸಿದ ಅಮಿತ್ ಶಾ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮಿತ್ ಶಾ
Edited By:

Updated on: Apr 06, 2022 | 11:25 PM

ಕೋಲ್ಕತ್ತಾ: ಪಶ್ಚಿಮ ಬಂಗಾಳ ಭೇಟಿಯ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ವಾಹನದ ಮೇಲೆ ನಡೆದ ದಾಳಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಖಂಡಿಸಿದ್ದಾರೆ. ಇಂತಹ ದಾಳಿಗಳಿಗೆ ಬಿಜೆಪಿ ಜಗ್ಗುವುದಿಲ್ಲ. ನಾವು ನಮ್ಮ ಪಕ್ಷ ಸಂಘಟನೆಗಾಗಿ ಇನ್ನಷ್ಟು ಶ್ರಮಿಸುತ್ತೇವೆ ಎಂದು ಅಮಿತ್ ಶಾ ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಎರಡು ದಿನಗಳ ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಅಮಿತ್ ಶಾ, ಇಂದು (ಭಾನುವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರವು ಅತಿಯಾಗಿದೆ. ಇದುವರೆಗೆ ಒಟ್ಟು 300ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಪಶ್ಚಿಮ ಬಂಗಾಳದಲ್ಲಿ ಕೊಲ್ಲಲಾಗಿದೆ. ಆ ಬಗ್ಗೆ ಯಾವುದೇ ತನಿಖೆ ಪೂರ್ಣಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಭಾರತದ ಒಕ್ಕೂಟಕ್ಕೆ ಧಕ್ಕೆ ಉಂಟಾಗುವಂಥ ಯಾವುದೇ ಕೆಲಸವನ್ನು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮಾಡಿಲ್ಲ ಎಂದು ಹೇಳಿದರು.

ಇದಕ್ಕೂ ಮೊದಲು ಬೋಲ್​ಪುರ್​ನಲ್ಲಿ ರೋಡ್ ಶೋ ನಡೆಸಿದ ಅಮಿತ್ ಶಾ, ಈ ರೋಡ್ ಶೋ, ಪಶ್ಚಿಮ ಬಂಗಾಳದ ಜನರಿಗೆ ಮಮತಾ ದೀದಿ ಮೇಲಿರುವ ಸಿಟ್ಟನ್ನು ತೋರಿಸುತ್ತಿದೆ. ಇಷ್ಟು ಸಂಖ್ಯೆಯ ಜನರು ಸೇರಿದ ರೋಡ್ ಶೋ, ನಾನು ಇದುವರೆಗೂ ನೋಡಿಲ್ಲ. ಬಂಗಾಳದ ಜನರು ನರೇಂದ್ರ ಮೋದಿ ಮೇಲಿಟ್ಟಿರುವ ಪ್ರೀತಿ ಮತ್ತು ನಂಬಿಕೆ ಈ ರೋಡ್ ಶೋ ಮೂಲಕ ಪ್ರತಿಫಲಿಸಿದೆ. ಬಂಗಾಳದ ಜನರಿಗೆ ಬದಲಾವಣೆ ಬೇಕಾಗಿದೆ ಎಂದು ಹೇಳಿದ್ದಾರೆ. ನರೇಂದ್ರ ಮೋದಿಗೆ ಒಂದು ಅವಕಾಶ ನೀಡಿ, ನಾವು ಬಂಗಾಳವನ್ನು ಬಂಗಾರದ ಬಂಗಾಳವನ್ನಾಗಿಸುತ್ತೇವೆ ಎಂದು ಜನರನ್ನು ಕೇಳಿಕೊಂಡಿದ್ದಾರೆ.

ಇಂದು ಎರಡನೇ ದಿನದ ಪ್ರವಾಸ ಕೈಗೊಂಡಿದ್ದ ಅಮಿತ್ ಶಾ, ಬೆಳಗ್ಗೆ ಶಾಂತಿನಿಕೇತನ, ರವೀಂದ್ರ ಭವನ, ವಿಶ್ವ ಭಾರತಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದರು. ಮಧ್ಯಾಹ್ನ ಜಾನಪದ ಹಾಡುಗಾರರೊಬ್ಬರ ಮನೆಯಲ್ಲಿ ಭೊಜನ ಸ್ವೀಕರಿಸಿದ್ದರು. ಬಿಜೆಪಿ ನಾಯಕರಾದ ಮುಕುಲ್ ರಾಯ್, ದಿಲೀಪ್ ಘೋಶ್ ಹಾಗೂ ಇತರರು ಅಮಿತ್ ಶಾ ಜೊತೆಗಿದ್ದರು.

ಟಿಎಂಸಿ ಮುಳುಗುತ್ತಿರುವ ಹಡಗು, ಮಮತಾ ಬ್ಯಾನರ್ಜಿ ಯುಗ ಶೀಘ್ರವೇ ಅಂತ್ಯ: ಅಮಿತ್ ಶಾ

Published On - 8:11 pm, Sun, 20 December 20