ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಸಾವು ಪ್ರಕರಣದಲ್ಲಿ ಪೊಲೀಸರ ನಿರೂಪಣೆ ಒಪ್ಪಿಕೊಳ್ಳುವುದು ಕಷ್ಟ: ಬಾಂಬೆ ಹೈಕೋರ್ಟ್

ಅಕ್ಷಯ್ ಶಿಂಧೆ ಅವರ ತಂದೆ ಅಣ್ಣಾ ಶಿಂಧೆ ಅವರು ಮಂಗಳವಾರ ಬಾಂಬೆ ಹೈಕೋರ್ಟ್‌ಗೆ ವಕೀಲ ಅಮಿತ್ ಕತ್ರನ್ವಾರೆ ಮೂಲಕ ಅರ್ಜಿ ಸಲ್ಲಿಸಿದ್ದು, ತಮ್ಮ ಮಗನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿದೆ ಎಂದು ಆರೋಪಿಸಿ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಗೆ ಒತ್ತಾಯಿಸಿದ್ದಾರೆ.

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಸಾವು ಪ್ರಕರಣದಲ್ಲಿ ಪೊಲೀಸರ ನಿರೂಪಣೆ ಒಪ್ಪಿಕೊಳ್ಳುವುದು ಕಷ್ಟ: ಬಾಂಬೆ ಹೈಕೋರ್ಟ್
ಬಾಂಬೆ ಹೈಕೋರ್ಟ್
ರಶ್ಮಿ ಕಲ್ಲಕಟ್ಟ

Updated on: Sep 25, 2024 | 4:23 PM

ಮುಂಬೈ ಸೆಪ್ಟೆಂಬರ್ 25: ಬದ್ಲಾಪುರ ಲೈಂಗಿಕ ದೌರ್ಜನ್ಯ ಆರೋಪಿ ಅಕ್ಷಯ್ ಶಿಂಧೆಯ ಕಸ್ಟಡಿ ಸಾವಿನ ಕುರಿತು ಮಹಾರಾಷ್ಟ್ರ ಪೊಲೀಸರನ್ನು ಬಾಂಬೆ ಹೈಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿದ್ದು, ಈ ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಪೃಥ್ವಿರಾಜ್ ಚವಾಣ್ ಅವರ ವಿಭಾಗೀಯ ಪೀಠವು ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ಕಂಡುಬಂದರೆ, ಸೂಕ್ತ ಆದೇಶಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ.

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗಳ ಸಾವಿನ ತನಿಖೆಯನ್ನು ನ್ಯಾಯಯುತ ಮತ್ತು ನಿಷ್ಪಕ್ಷಪಾತವಾಗಿ ನಡೆಸಬೇಕು. ಅಕ್ಷಯ್ ಶಿಂಧೆ ಅವರನ್ನು ಮೊದಲು ಹಿಡಿಯಲು ಪೊಲೀಸರು ಏಕೆ ಪ್ರಯತ್ನಿಸಲಿಲ್ಲ? ಇದರಿಂದ ಶೂಟೌಟ್ ಅನ್ನು ತಪ್ಪಿಸಬಹುದಿತ್ತು. ಮೊದಲು ಕಾಲು ಅಥವಾ ತೋಳುಗಳಿಗೆ ಗುಂಡು ಹಾರಿಸುವ ಬದಲು ಆರೋಪಿಯ ತಲೆಗೆ ನೇರವಾಗಿ ಗುಂಡು ಹಾರಿಸಿದ್ದೇಕೆ?

“ಅವನು ಮೊದಲು ಟ್ರಿಗರ್ ಎಳೆದ ಕ್ಷಣದಲ್ಲಿ ಇತರರು ಅವನನ್ನು ಸುಲಭವಾಗಿ ಹಿಡಿದು ಬೀಳಿಸಬಹುದಿತ್ತು. ಆತನೇನೂ ಗಟ್ಟಿಮುಟ್ಟಾದ ಅಥವಾ ಶಕ್ತಿಶಾಲಿ ವ್ಯಕ್ತಿ ಅಲ್ಲ. ಇದನ್ನು ಒಪ್ಪಿಕೊಳ್ಳುವುದು ತುಂಬಾ ಕಷ್ಟ. ಇದನ್ನು ಎನ್‌ಕೌಂಟರ್ ಎಂದು ಕರೆಯಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಪೃಥ್ವಿರಾಜ್ ಚವಾಣ್ ಹೇಳಿದ್ದಾರೆ.

ಅಕ್ಷಯ್ ಶಿಂಧೆ ಅವರ ತಂದೆ ಅಣ್ಣಾ ಶಿಂಧೆ ಅವರು ಮಂಗಳವಾರ ಬಾಂಬೆ ಹೈಕೋರ್ಟ್‌ಗೆ ವಕೀಲ ಅಮಿತ್ ಕತ್ರನ್ವಾರೆ ಮೂಲಕ ಅರ್ಜಿ ಸಲ್ಲಿಸಿದ್ದು, ತಮ್ಮ ಮಗನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿದೆ ಎಂದು ಆರೋಪಿಸಿ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಗೆ ಒತ್ತಾಯಿಸಿದ್ದಾರೆ.

ವಿಚಾರಣೆಯ ಸಂದರ್ಭದಲ್ಲಿ, ದೈಹಿಕವಾಗಿ ದುರ್ಬಲ ವ್ಯಕ್ತಿಯಿಂದ ರಿವಾಲ್ವರ್ ಅನ್ನು ತ್ವರಿತವಾಗಿ ಅನ್ಲಾಕ್ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಗೆ ಹೇಳಿದೆ. ಅಧಿಕಾರಿಯ ಪಿಸ್ತೂಲ್ ಅನ್ನು ಅನ್‌ಲಾಕ್ ಮಾಡಲಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ತಿಳಿಸಿದರು. ಅದಕ್ಕೆ ನ್ಯಾಯಮೂರ್ತಿ ಚವಾಣ್, “ಇದನ್ನು ನಂಬುವುದು ಕಷ್ಟ. ಮೇಲ್ನೋಟಕ್ಕೆ ಸಮಸ್ಯೆಗಳಿವೆ ಎಂದು ತೋರುತ್ತದೆ. ಸಾಮಾನ್ಯ ವ್ಯಕ್ತಿ ಪಿಸ್ತೂಲ್‌ನಿಂದ ಗುಂಡು ಹಾರಿಸುವಂತಿಲ್ಲ ಏಕೆಂದರೆ ಅದಕ್ಕೆ ಶಕ್ತಿ ಬೇಕು. ದೈಹಿಕವಾಗಿ ದುರ್ಬಲ ವ್ಯಕ್ತಿಯಿಂದ ರಿವಾಲ್ವರ್ ಅನ್ನು ತ್ವರಿತವಾಗಿ ಅನ್ಲಾಕ್ ಮಾಡಲು ಸಾಧ್ಯವಿಲ್ಲ. ಇದು ತುಂಬಾ ಸುಲಭವಲ್ಲ  ಎಂದಿದ್ದಾರೆ.

ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ಕೋರಿ ಅಕ್ಷಯ್ ಶಿಂಧೆ ಅವರ ತಂದೆ ಸಲ್ಲಿಸಿದ ದೂರಿನ ಕುರಿತು ಪೊಲೀಸರು ನಿರ್ಧಾರ ತೆಗೆದುಕೊಳ್ಳಬೇಕಾದಾಗ ಪೀಠವು ಅಕ್ಟೋಬರ್ 3 ರಂದು ಹೆಚ್ಚಿನ ವಿಚಾರಣೆಗೆ ವಿಷಯವನ್ನು ಮುಂದೂಡಿದೆ.

ಶಿಂಧೆ ಸಾವಿನ ತನಿಖೆಯನ್ನು ನಡೆಸುತ್ತಿರುವ ಮಹಾರಾಷ್ಟ್ರ ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ತಕ್ಷಣವೇ ಎಲ್ಲಾ ಪ್ರಕರಣದ ದಾಖಲೆಗಳನ್ನು ಹಸ್ತಾಂತರಿಸುವಂತೆ ಬಾಂಬೆ ಹೈಕೋರ್ಟ್ ಸೂಚಿಸಿದೆ.ಇನ್ನೂ ಕಡತಗಳನ್ನು ಸಿಐಡಿಗೆ ಏಕೆ ಹಸ್ತಾಂತರಿಸಿಲ್ಲ? ಪುರಾವೆಗಳ ಸಂರಕ್ಷಣೆ ಅತ್ಯಗತ್ಯ. ನಿಮ್ಮ ಕಡೆಯಿಂದ ಯಾವುದೇ ವಿಳಂಬವು ಅನುಮಾನಗಳನ್ನು ಮತ್ತು ಊಹಾಪೋಹಗಳನ್ನು ಹುಟ್ಟುಹಾಕುತ್ತದೆ,” ಎಂದು ನ್ಯಾಯಾಲಯ ಹೇಳಿದೆ.

ಈ ಹಂತದಲ್ಲಿ ಯಾವುದೇ ಅನುಮಾನವನ್ನು ಹುಟ್ಟುಹಾಕದಿದ್ದರೂ, ಅಕ್ಷಯ್ ಶಿಂಧೆ ಪೊಲೀಸ್ ಅಧಿಕಾರಿಯಿಂದ ಪಿಸ್ತೂಲ್ ವಶಪಡಿಸಿಕೊಂಡು ಗುಂಡು ಹಾರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಂಬುವುದು ತುಂಬಾ ಕಷ್ಟ ಎಂದು ನ್ಯಾಯಾಲಯ ಹೇಳಿದೆ.  ಸೆಪ್ಟೆಂಬರ್ 23 ರಂದು ಥಾಣೆ ಪೊಲೀಸರು ಅಕ್ಷಯ್ ಶಿಂಧೆ ಅವರನ್ನು ಎನ್‌ಕೌಂಟರ್ ಮಾಡಿದ್ದು, ಈ ವರ್ಷದ ಕೊನೆಯಲ್ಲಿ ವಿಧಾನಸಭೆ ಚುನಾವಣೆಗೆ ಮುಂದಾಗಿರುವ ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ವಿವಾದವನ್ನು ಹುಟ್ಟುಹಾಕಿದೆ.

ಶಾಲೆಯ ಶೌಚಾಲಯದಲ್ಲಿ ನಾಲ್ಕು ವರ್ಷದ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. 24 ವರ್ಷದ ಆರೋಪಿಯನ್ನು ಆಗಸ್ಟ್ 17 ರಂದು ಬಂಧಿಸಲಾಯಿತು.

ಇದನ್ನೂ ಓದಿ: ಬಿಜೆಪಿಯ ನಿವೃತ್ತಿ ನಿಯಮ ಮೋದಿಗೆ ಅನ್ವಯಿಸುವುದಿಲ್ಲವೇ?; ಆರ್​ಎಸ್​ಎಸ್​ಗೆ ಪತ್ರ ಬರೆದ ಕೇಜ್ರಿವಾಲ್

ಶಾಲಾ ಮಾಜಿ ಅಟೆಂಡರ್ ಆಗಿದ್ದ ಈತನನ್ನು ತಲೋಜಾ ಸೆಂಟ್ರಲ್ ಜೈಲಿನಿಂದ ಥಾಣೆ ಕ್ರೈಂ ಬ್ರಾಂಚ್ ಕಚೇರಿಗೆ ಟ್ರಾನ್ಸಿಟ್ ರಿಮಾಂಡ್ ಅಡಿಯಲ್ಲಿ ಕರೆತರುತ್ತಿದ್ದಾಗ ಮುಂಬ್ರಾ ಬೈಪಾಸ್ ಬಳಿ ತಮ್ಮ ರಿವಾಲ್ವರ್‌ನಿಂದ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಥಾಣೆ ಅಪರಾಧ ವಿಭಾಗದ ಕೇಂದ್ರ ಘಟಕವು ಆರೋಪಿಯ ವಿರುದ್ಧ ಆತನ ಮಾಜಿ ಪತ್ನಿ ಸಲ್ಲಿಸಿದ್ದ ಪ್ರಕರಣದಲ್ಲಿ ಕಸ್ಟಡಿಗೆ ತೆಗೆದುಕೊಂಡಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us