AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರಾಖಂಡ: ಕಮರಿಗೆ ಬಿದ್ದ ಮದುವೆ ದಿಬ್ಬಣದ ಬಸ್, 25 ಸಾವು

ಅಪಘಾತದ ಸ್ಥಳದಲ್ಲಿ ಬೆಳಕಿನ ವ್ಯವಸ್ಥೆಯಿಲ್ಲ. ಹೀಗಾಗಿ ಅಕ್ಕಪಕ್ಕದ ಗ್ರಾಮಸ್ಥರು ಮೊಬೈಲ್ ಫೋನ್​ಗಳ ಬ್ಯಾಟರಿ ಬೆಳಕಿನಲ್ಲಿ ಬಸ್​ನಲ್ಲಿ ಸಿಲುಕಿದವರನ್ನು ಕಾಪಾಡಲು ಯತ್ನಿಸುತ್ತಿದ್ದಾರೆ

ಉತ್ತರಾಖಂಡ: ಕಮರಿಗೆ ಬಿದ್ದ ಮದುವೆ ದಿಬ್ಬಣದ ಬಸ್, 25 ಸಾವು
Uttarakhand bus Accident
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Oct 05, 2022 | 8:16 AM

Share

ಡೆಹ್ರಾಡೂನ್: ಉತ್ತರಾಖಂಡದ (Uttarakhand) ಪೌರಿ ಘರ್​ವಾಲ್ ಜಿಲ್ಲೆಯ ಸಿಮ್​ಡಿ ಗ್ರಾಮದ ಬಳಿ ರಿಖ್ನಿಖಾಲ್-ಬಿರೋಖಾಲ್ ರಸ್ತೆಯಲ್ಲಿ ಸುಮಾರು 50 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ಸು ಕಮರಿಗೆ ಬಿದ್ದಿದ್ದು  25 ಜನರು ಮೃತಪಟ್ಟಿದ್ದಾರೆ. ಪೊಲೀಸರು ರಕ್ಷಣಾ ಕಾರ್ಯಚರಣೆ ನಡೆಸುತ್ತಿದ್ದಾರೆ. ಕಂದಕವು ಸುಮಾರು 500 ಮೀಟರ್​ ಆಳವಿದೆ.

45 ರಿಂದ 50 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು 500 ಮೀಟರ್ ಕಂದಕಕ್ಕೆ ಬಿದ್ದಿದ್ದು, ಈವರೆಗೆ 6 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಡಿಜಿಪಿ ಅಶೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.

ಈವರೆಗೆ 9 ಮಂದಿಯನ್ನು ಮಾತ್ರ ರಕ್ಷಣೆ ಮಾಡಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಪೈಕಿ ಆರು ಮಂದಿಯ ಆರೋಗ್ಯ ಸ್ಥಿತಿ ಗಂಭೀರ ಸ್ವರೂಪದಲ್ಲಿದೆ. 6 ಶವಗಳನ್ನು ಮಾತ್ರವೇ ಮೇಲಕ್ಕೆ ತರಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಒಟ್ಟು 25 ಮಂದಿ ಮೃತಪಟ್ಟಿದ್ದಾರೆ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮದುವೆ ದಿಬ್ಬಣವನ್ನು ಈ ಬಸ್​ ಕೊಂಡೊಯ್ಯುತ್ತಿತ್ತು. ರಾತ್ರಿ ಸುಮಾರು 7.30ರ ವೇಳೆಯಲ್ಲಿ ಅಪಘಾತ ಸಂಭವಿಸಿದೆ. ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡರು.

‘ಅಪಘಾತದ ಸ್ಥಳಕ್ಕೆ ಅಗತ್ಯವಿರುವ ಪರಿಕರಗಳನ್ನು ರವಾನಿಸಲು, ಕೊಂಡೊಯ್ಯಲು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ. ಅಕ್ಕಪಕ್ಕದ ಹಳ್ಳಿಗಳ ಜನರೂ ಅಧಿಕಾರಿಗಳಿಗೆ ಸಹಕರಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದರು. ಪರಿಹಾರ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಪಡೆಯಲು ವಿಪತ್ತು ನಿರ್ವಹಣಾ ಪ್ರಾಧಿಕಾರ ಕಚೇರಿಗೂ ಮುಖ್ಯಮಂತ್ರಿ ಭೇಟಿ ನೀಡಿದ್ದರು.

ಅಪಘಾತದ ಸ್ಥಳದಲ್ಲಿ ಬೆಳಕಿನ ವ್ಯವಸ್ಥೆಯಿಲ್ಲ. ಹೀಗಾಗಿ ಅಕ್ಕಪಕ್ಕದ ಗ್ರಾಮಸ್ಥರು ಮೊಬೈಲ್ ಫೋನ್​ಗಳ ಬ್ಯಾಟರಿ ಬೆಳಕಿನಲ್ಲಿ ಬಸ್​ನಲ್ಲಿ ಸಿಲುಕಿದವರನ್ನು ಕಾಪಾಡಲು ಯತ್ನಿಸುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರ ಹೇಳಿಕೆಯನ್ನು ಎಎನ್​ಐ ಸುದ್ದಿಸಂಸ್ಥೆಯು ವರದಿ ಮಾಡಿತ್ತು.

Published On - 8:58 pm, Tue, 4 October 22