Kedarnath Yatra: ಕೇದಾರನಾಥ ಯಾತ್ರೆ ಇನ್ಮುಂದೆ ಸುಗಮ -ಪ್ರತಿದಿನ 13000 ಯಾತ್ರಿಕರಷ್ಟೇ ಭೇಟಿ ನೀಡಬೇಕು, ಒಂದಷ್ಟು ಪರಿಸರ ಸ್ನೇಹಿ ವ್ಯವಸ್ಥೆಗಳು ಜಾರಿ

|

Updated on: Apr 19, 2023 | 10:32 AM

ಸರ್ಕಾರವು ಈ ಬಾರಿ ಭಕ್ತರ ಸಂಖ್ಯೆಯಲ್ಲಿ ದೈನಂದಿನ ಮಿತಿಯನ್ನು ನಿಗದಿಪಡಿಸಿದ್ದು, ಟೋಕನ್ ವ್ಯವಸ್ಥೆಯನ್ನು ಸಹ ಪರಿಚಯಿಸಲಾಗಿದೆ. ಸುಲಭ್ ಇಂಟರ್‌ನ್ಯಾಶನಲ್‌ನಿಂದ ಶಾಶ್ವತ ಶೌಚಾಲಯಗಳ ನಿರ್ಮಾಣ.

Kedarnath Yatra: ಕೇದಾರನಾಥ ಯಾತ್ರೆ ಇನ್ಮುಂದೆ ಸುಗಮ -ಪ್ರತಿದಿನ 13000 ಯಾತ್ರಿಕರಷ್ಟೇ ಭೇಟಿ ನೀಡಬೇಕು, ಒಂದಷ್ಟು ಪರಿಸರ ಸ್ನೇಹಿ ವ್ಯವಸ್ಥೆಗಳು ಜಾರಿ
ಕೇದಾರನಾಥ ಯಾತ್ರೆ ಇನ್ಮುಂದೆ ಸುಗಮ
Follow us on

ರುದ್ರಪ್ರಯಾಗ (ಉತ್ತರಾಖಂಡ): ಉತ್ತರಾಖಂಡದ ಹಿಮಾಲಯ ಪರ್ವತದಲ್ಲಿರುವ ಪುರಾಣ ಪ್ರಸಿದ್ಧ ಕೇದಾರನಾಥ ದೇವಾಲಯಕ್ಕೆ ವಾರ್ಷಿಕ ಯಾತ್ರೆಗೆಂದು ಬರುವ ಭಕ್ತಾದಿಗಳ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಕೇದಾರನಾಥಕ್ಕೆ (Kedarnath Yatra) ಇನ್ಮುಂದೆ ಪ್ರತಿದಿನ 13,000 ಯಾತ್ರಿಕರು ಮಾತ್ರವೇ ಭೇಟಿ ನೀಡಬಹುದಾಗಿದೆ. ಏಪ್ರಿಲ್ 25 ರಿಂದ ಈ ಸಾಲಿನ ಯಾತ್ರೆ ಪ್ರಾರಂಭವಾಗಲಿದ್ದು, ದಿನಕ್ಕೆ ಗರಿಷ್ಠ 13,000 ಯಾತ್ರಿಕರು ಕೇದಾರನಾಥಕ್ಕೆ (Shiva Temple) ಭೇಟಿ ನೀಡಬಹುದಾಗಿದೆ. ಇದೇ ವೇಳೆ ಸರ್ಕಾರವು ಟೋಕನ್ ವ್ಯವಸ್ಥೆಯನ್ನು ಸಹ ಪರಿಚಯಿಸಿದೆ. ಯಾತ್ರೆಯನ್ನು ಸುಗಮವಾಗಿ ನಡೆಸಲು ಇವುಗಳನ್ನು ಉದ್ದೇಶಿಸಲಾಗಿದೆ. ಯಾತ್ರಾರ್ಥಿಗಳ (Pilgrims) ಅನುಕೂಲಕ್ಕಾಗಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ರುದ್ರಪ್ರಯಾಗ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಮಯೂರ್ ದೀಕ್ಷಿತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇದೇ ವೇಳೆ ಮುಂಬರುವ ಯಾತ್ರೆಯ ವ್ಯವಸ್ಥೆಗಳನ್ನು ಪರಿಶೀಲಿಸಿದ ದೀಕ್ಷಿತ್ ಮತ್ತು ರುದ್ರಪ್ರಯಾಗದ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ವಿಶಾಖ ಅಶೋಕ್ ಭಾದನೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಯಾತ್ರಾರ್ಥಿಗಳಿಗೆ ಈ ಬಾರಿ 22 ವೈದ್ಯರು ಮತ್ತು ಅಷ್ಟೇ ಸಂಖ್ಯೆಯ ಫಾರ್ಮಸಿಸ್ಟ್‌ಗಳನ್ನು ಯಾತ್ರೆ ಮಾರ್ಗದಲ್ಲಿ ನಿಯೋಜಿಸುವ ಮೂಲಕ ಉತ್ತಮ ವೈದ್ಯಕೀಯ ಸೇವೆ ಸಿಗಲಿದೆ. ಅವರಲ್ಲಿ ಮೂವರು ವೈದ್ಯರು ಮತ್ತು ಇಬ್ಬರು ಮೂಳೆ ಶಸ್ತ್ರಚಿಕಿತ್ಸಕರು ಇರುತ್ತಾರೆ. ಮಾರ್ಗದಲ್ಲಿ 12 ವೈದ್ಯಕೀಯ ಪರಿಹಾರ ಕೇಂದ್ರಗಳನ್ನು ಸಹ ಸ್ಥಾಪಿಸಲಾಗಿದೆ ಎಂದು ದೀಕ್ಷಿತ್ ಹೇಳಿದರು.

ಮಾರ್ಗದಲ್ಲಿ ಆರು ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿದ್ದು, ಅದರಲ್ಲಿ ಮೂರನ್ನು ಮೀಸಲು ಇಡಲಾಗಿದೆ ಮತ್ತು ಯಾವುದೇ ತುರ್ತು ಪರಿಸ್ಥಿತಿಗಾಗಿ ಸರ್ಕಾರದಿಂದ ಏರ್ ಆಂಬ್ಯುಲೆನ್ಸ್ ಅನ್ನು ಸಹ ವ್ಯವಸ್ಥೆ ಮಾಡಲಾಗಿದೆ. ಸುಲಭ್ ಇಂಟರ್ ನ್ಯಾಷನಲ್ ಸಂಸ್ಥೆಗೆ ಯಾತ್ರೆಯ ಮಾರ್ಗವನ್ನು ಸ್ವಚ್ಛವಾಗಿಡುವ ಜವಾಬ್ದಾರಿ ನೀಡಲಾಗಿದೆ. ದೇವಸ್ಥಾನದ ಆವರಣವನ್ನು ಸ್ವಚ್ಛವಾಗಿಡುವ ಕೆಲಸವನ್ನು ಕೇದಾರನಾಥ ನಗರ ಪಂಚಾಯತ್‌ಗೆ ವಹಿಸಲಾಗಿದೆ.

ಸುಲಭ್ ಇಂಟರ್‌ನ್ಯಾಶನಲ್‌ನಿಂದ (Sulabh International toilets) ಶಾಶ್ವತ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದ್ದು, ತ್ಯಾಜ್ಯ ನಿರ್ವಹಣೆಗಾಗಿ ಪ್ಲಾಸ್ಟಿಕ್‌ ಮತ್ತು ನೀರಿನ ಬಾಟಲಿಗಳಿಗೆ ಕ್ಯೂಆರ್‌ ಕೋಡ್‌ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಯಾತ್ರೆಯ ಮಾರ್ಗದಲ್ಲಿ ಪಶುಸಂಗೋಪನಾ ಇಲಾಖೆಯಿಂದ ಕುದುರೆ, ಹೇಸರಗತ್ತೆಗಳ ಆರೋಗ್ಯ ತಪಾಸಣೆಯನ್ನೂ ನಡೆಸಲಾಗುತ್ತಿದೆ.

ಅಲ್ ಸಂಸ್ಥಾನವು ಯಾತ್ರಾರ್ಥಿಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ಸೋನ್‌ಪ್ರಯಾಗದಿಂದ ಕೇದಾರನಾಥ ಧಾಮಕ್ಕೆ ಒಂಬತ್ತು ನೀರು ಶುದ್ಧಿಕಾರಿ ಘಟಕಗಳನ್ನು ಸ್ಥಾಪಿಸಿದೆ. ಗುಪ್ತಕಾಶಿಯಿಂದ ಬಡಿ ಲಿಂಚೋಲಿವರೆಗಿನ ಗರ್ವಾಲ್ ಮಂಡಲ್ ವಿಕಾಸ್ ನಿಗಮ್ (ಜಿಎಂವಿಎನ್) ಅತಿಥಿಗೃಹಗಳಲ್ಲಿ 2,500 ಜನರಿಗೆ ವಸತಿ ಕಲ್ಪಿಸಲಾಗುವುದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದರು.

ಇದಲ್ಲದೆ, ಕೇದಾರನಾಥ ಧಾಮದ ನ್ಯೂ ಘೋಡಾ ಪದಾವ್ ಮತ್ತು ಹಿಮ್ಲೋಕ್ ಕಾಲೋನಿಯಲ್ಲಿ ತಲಾ 80 ಹಾಸಿಗೆಗಳ ಎರಡು ಟೆಂಟ್ ಕಾಲೋನಿಗಳನ್ನು ಸ್ಥಾಪಿಸಲಾಗುತ್ತಿದೆ. ಇದು 1,600 ಜನರಿಗೆ ಅವಕಾಶ ಕಲ್ಪಿಸುತ್ತದೆ. ಯಾತ್ರೆಯನ್ನು ವ್ಯವಸ್ಥಿತವಾಗಿ ನಡೆಸಲು 450 ಪೊಲೀಸ್ ಅಧಿಕಾರಿಗಳು ಮತ್ತು ನೌಕರರನ್ನು ನಿಯೋಜಿಸಲಾಗಿದ್ದು, ಹೊರ ರಾಜ್ಯಗಳ 150-200 ಪೊಲೀಸ್ ಸಿಬ್ಬಂದಿಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಎಸ್ಪಿ ಹೇಳಿದರು.

ಯಾತ್ರೆಯ ಸಮಯದಲ್ಲಿ ಕಳೆದುಹೋದ ಮತ್ತು ಪತ್ತೆಯಾದವರಿಗಾಗಿ ಕೇಂದ್ರವೊಂದನ್ನು ಸಹ ನಿರ್ವಹಿಸಲಾಗುತ್ತದೆ. ಇದರೊಂದಿಗೆ ವಿವಿಧ ರಾಜ್ಯಗಳಿಂದ ಬರುವ ಯಾತ್ರಾರ್ಥಿಗಳಿಗಾಗಿ ವಿವಿಧ ಭಾಷೆಗಳಲ್ಲಿ ಸೂಚನಾ ಫಲಕಗಳನ್ನು ಸಿದ್ಧಪಡಿಸಲಾಗಿದೆ. ತೀರ್ಥೋದ್ಭವದ ಸಮಯದಲ್ಲಿ ಆಗಾಗ ಉಂಟಾಗುವ ಟ್ರಾಫಿಕ್ ಅವ್ಯವಸ್ಥೆಯನ್ನು ಎದುರಿಸಲು ಹೆಚ್ಚುವರಿ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ