ಪ್ರಶ್ನೆಗಾಗಿ ನಗದು ಪ್ರಕರಣ: ನೈತಿಕ ಸಮಿತಿ ಮುಂದೆ ಹಾಜರಾದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

|

Updated on: Nov 02, 2023 | 4:25 PM

Mahua Moitra: ಮಹುವಾ ಮೊಯಿತ್ರಾ ತನ್ನ ಆರಂಭಿಕ ಹೇಳಿಕೆಯಲ್ಲಿ, ಯಾವುದೇ ಸಂಸದೀಯ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಹೇಳಿದ್ದಾರೆ. ವಕೀಲ ಜೈ ಅನಂತ್ ದೇಹದ್ರಾಯ್ ಅವರೊಂದಿಗಿನ ಗೆಳೆತನದ ವಿವರಗಳನ್ನು ಒದಗಿಸಿದ್ದಾರೆ. ಅವರು ದೂರು ನೀಡಲು "ವೈಯಕ್ತಿಕ ಕಾರಣಗಳನ್ನು" ಹೊಂದಿದ್ದಾರೆಂದು ಹೇಳಿಕೊಂಡಿರುವುದಾಗಿ ಎಂದು ಮೂಲಗಳು ತಿಳಿಸಿವೆ.

ಪ್ರಶ್ನೆಗಾಗಿ ನಗದು ಪ್ರಕರಣ: ನೈತಿಕ ಸಮಿತಿ ಮುಂದೆ ಹಾಜರಾದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ
ಮಹುವಾ ಮೊಯಿತ್ರಾ
Follow us on

ದೆಹಲಿ ನವೆಂಬರ್ 02:  ಪ್ರಶ್ನೆಗಾಗಿ ನಗದು (cash-for-query )ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ (TMC) ಸಂಸದೆ ಮಹುವಾ ಮೊಯಿತ್ರಾ (Mahua Moitra) ಅವರು ಗುರುವಾರ ಲೋಕಸಭೆಯ ನೈತಿಕ ಸಮಿತಿಯ(Ethics Committee) ಮುಂದೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ಸುಪ್ರೀಂಕೋರ್ಟ್ ವಕೀಲ ಜೈ ಅನಂತ್ ದೆಹದ್ರಾಯಿಆರೋಪದ ಕುರಿತು ಮೌಖಿಕ ಸಾಕ್ಷ್ಯವನ್ನು ದಾಖಲಿಸಲು ಹಾಜರಾಗಿದ್ದರು. ವಿಚಾರಣೆಯಲ್ಲಿ, ಜೆಡಿಯು ಸದಸ್ಯರೊಬ್ಬರು ತೃಣಮೂಲ ನಾಯಕರಿಗೆ ಅವರು ಸಂಸತ್ ಸದಸ್ಯರಾಗಿ ಅಲ್ಲ ಸಾಕ್ಷಿಯಾಗಿ ಸಮಿತಿಯ ಮುಂದೆ ಹಾಜರಾಗುತ್ತಿದ್ದಾರೆ ಎಂದು ನೆನಪಿಸಿದರು ಎಂದು ಮೂಲಗಳು ತಿಳಿಸಿವೆ. ಉದ್ಯಮಿ ದರ್ಶನ್ ಹಿರಾನಂದಾನಿ ಅವರೊಂದಿಗೆ ಸಂಸತ್ತಿನ ಲಾಗಿನ್ ರುಜುವಾತುಗಳನ್ನು ಹಂಚಿಕೊಳ್ಳುವಾಗ ತಾನು ಯಾವುದೇ ಸಂಸದೀಯ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಮೊಯಿತ್ರಾ ಸಮಿತಿಗೆ ತಿಳಿಸಿದ್ದಾರೆ.

ಮೊಯಿತ್ರಾ ಬೆಳಗ್ಗೆ 11 ಗಂಟೆಗೆ ಸಂಸತ್ ಗೆ ಬಂದರು. ಸಮಿತಿ ಸಭೆಯ ನಂತರ, ಅದು ಸ್ವೀಕರಿಸಿದ ದಾಖಲೆಗಳು ಮತ್ತು ಐಟಿ ಸಚಿವಾಲಯದ ವರದಿಯನ್ನು ಎರಡು ಗಂಟೆಗಳ ಕಾಲ ಚರ್ಚಿಸಿತು ಎಂದು ಮೂಲಗಳು ತಿಳಿಸಿವೆ.

ಯಾವುದೇ ಸಂಸತ್ತಿನ ಸದಸ್ಯರು ತಮ್ಮದೇ ಆದ ಪ್ರಶ್ನೆಗಳನ್ನು ಪೋಸ್ಟ್ ಮಾಡುವುದಿಲ್ಲ ಎಂದು ಸಮಿತಿಯಲ್ಲಿರುವ ವಿರೋಧ ಪಕ್ಷದ ಸಂಸದರು ಹೇಳಿದರು. ಉದ್ಯಮಿಗೆ ಪ್ರಶ್ನೆಗಳನ್ನು ಕೇಳಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಪ್ರತಿಯಾಗಿ ಅವರು ನಗದು ಸ್ವೀಕರಿಸಿದ್ದಾರೆ ಎಂಬ ಆರೋಪವನ್ನು ಉಲ್ಲೇಖಿಸಿ, ಕೆಲವು ವಿರೋಧ ಪಕ್ಷದ ಸಂಸದರು “ನಗದು ಎಲ್ಲಿದೆ?” ಎಂದು ಕೇಳಿದರು. ಸಂಸದರ ಪೋರ್ಟಲ್‌ಗೆ ಪ್ರವೇಶವನ್ನು ಒದಗಿಸುವ ನಿಯಮಗಳೇನು ಎಂದು ವಿರೋಧ ಪಕ್ಷದ ಸಂಸದರು ಕೇಳಿದರು ಎಂದು ಮೂಲಗಳು ತಿಳಿಸಿವೆ.

ಬೇರೆಯವರು ಲಾಗ್ ಇನ್ ಮಾಡಲು ಪ್ರಯತ್ನಿಸಿದರೂ ಒಟಿಪಿ ಅಪ್ರೂವಲ್ ಪ್ರಾಂಪ್ಟ್ ಸಂಬಂಧಪಟ್ಟ ಸಂಸದರ ಫೋನ್‌ಗೆ ಬರುತ್ತದೆ ಎಂದರೆ ಅವರ ಅನುಮೋದನೆ ಇಲ್ಲದೆ ಸಂಸತ್ತಿನಲ್ಲಿ ಯಾವುದೇ ಪ್ರಶ್ನೆಗಳನ್ನು ಕೇಳುವಂತಿಲ್ಲ ಎಂದು ಸಂಸದರು ಸೂಚಿಸಿದರು.

ಮೊಯಿತ್ರಾ ತನ್ನ ಆರಂಭಿಕ ಹೇಳಿಕೆಯಲ್ಲಿ, ಯಾವುದೇ ಸಂಸದೀಯ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಹೇಳಿದ್ದಾರೆ. ವಕೀಲ ಜೈ ಅನಂತ್ ದೇಹದ್ರಾಯ್ ಅವರೊಂದಿಗಿನ ಗೆಳೆತನದ ವಿವರಗಳನ್ನು ಒದಗಿಸಿದ್ದಾರೆ. ಅವರು ದೂರು ನೀಡಲು “ವೈಯಕ್ತಿಕ ಕಾರಣಗಳನ್ನು” ಹೊಂದಿದ್ದಾರೆಂದು ಹೇಳಿಕೊಂಡಿರುವುದಾಗಿ ಎಂದು ಮೂಲಗಳು ತಿಳಿಸಿವೆ.

ಆಕೆ ವಿಚಾರಣೆ ವೇಳೆ ತುಂಬಾನೇ ಸಿಟ್ಟುಗೊಂಡಿದ್ದರು. ಜೆಡಿಯು ಸಂಸದರೊಬ್ಬರು, ನೀವು ಸಮಿತಿಯ ಮುಂದೆ ಸಾಕ್ಷಿಯಾಗಿ ಹಾಜರಾಗಿದ್ದು, ಸಂಸದೆ ಆಗಿ ಅಲ್ಲ ಎಂದು ನೆನಪಿಸಿದ್ದಾರೆ. ಏತನ್ಮಧ್ಯೆ, ರಾಷ್ಟ್ರೀಯ ಭದ್ರತೆಯ ಉಲ್ಲಂಘನೆಯ ಪ್ರಶ್ನೆಯೇ ಇಲ್ಲ ಎಂದು ಪ್ರತಿಪಕ್ಷಗಳು ಹೇಳಿವೆ.

ಬಿಜೆಪಿ ಸಂಸದ ವಿನೋದ್ ಸೋಂಕರ್ ನೇತೃತ್ವದ ಸಮಿತಿಯಲ್ಲಿ ಸಂಸದರಾದ ವಿ ವೈತಿಲಿಂಗಂ, ಡ್ಯಾನಿಶ್ ಅಲಿ, ಸುನೀತಾ ದುಗ್ಗಲ್, ಅಪರಾಜಿತಾ ಸಾರಂಗಿ, ಪರ್ನೀತ್ ಕೌರ್, ಸ್ವಾಮಿ ಸುಮೇಧಾನಂದ್ ಮತ್ತು ರಾಜದೀಪ್ ರಾಯ್ ಕೂಡ ಇದ್ದಾರೆ. ಪ್ರಶ್ನೆ ಕೇಳುತ್ತಿರುವುದು ಸರಿಯಾದ ರೀತಿಯಲ್ಲಿ ಇಲ್ಲ ಎಂದು ಆರೋಪಿಸಿ ಪ್ರತಿಪಕ್ಷಗಳ ಸಂಸದರು ಸಭಾತ್ಯಾಗ ನಡೆಸಿದರು.

ಜೈ ಅನಂತ್ ದೇಹದ್ರಾಯ್ ಅವರು ತಮ್ಮ ಲಿಖಿತ ದೂರಿನಲ್ಲಿ ತಮ್ಮ ಆರೋಪಗಳನ್ನು ಬೆಂಬಲಿಸಲು ಯಾವುದೇ ಸಾಕ್ಷ್ಯವನ್ನು ಒದಗಿಸಿಲ್ಲ ಮತ್ತು ಅವರ ಮೌಖಿಕ ವಿಚಾರಣೆಯಲ್ಲಿ ಯಾವುದೇ ಪುರಾವೆಗಳನ್ನು ನೀಡಲು ಸಾಧ್ಯವಾಗಲಿಲ್ಲ ಎಂದು ಮೊಯಿತ್ರಾ ಅವರು ಸಮಿತಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದು,. ವಕೀಲರನ್ನು ಕ್ರಾಸ್ ಎಕ್ಸಾಮಿನ್ ಮಾಡುವಂತೆ ಒತ್ತಾಯಿಸಿದರು. ಈ ಹಿಂದೆ, ಅವರು ಹಿರಾನಂದಾನಿಯವರನ್ನೂ ಕ್ರಾಸ್ ಎಕ್ಸಾಮಿನ್ ಮಾಡುವಂತೆ ಒತ್ತಾಯಿಸಿದ್ದರು.

ಇದನ್ನೂ ಓದಿ: ಪ್ರಶ್ನೆಗಾಗಿ ನಗದು ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ಸಂಸದೀಯ ಸಮಿತಿ ಒತ್ತಾಯಿಸುತ್ತಿದೆ: ಮಹುವಾ ಮೊಯಿತ್ರಾ

ಸಂದರ್ಶನವೊಂದರಲ್ಲಿ, ಮೊಯಿತ್ರಾ ಅವರು ಹಿರಾನಂದಾನಿ ಸ್ನೇಹಿತರಾಗಿದ್ದರು. ಲೋಕಸಭೆಗೆ ತನ್ನ ಪ್ರಶ್ನೆಗಳನ್ನು ಅವರ ಕಚೇರಿಯಲ್ಲಿ ಟೈಪ್ ಮಾಡುವುದಕ್ಕಾಗಿ ತನ್ನ ಲಾಗಿನ್ ರುಜುವಾತುಗಳನ್ನು ನೀಡಿದ್ದೆ ಎಂದು ಹೇಳಿದರು.

ದರ್ಶನ್ ಹಿರಾನಂದಾನಿ ಅವರ ಕಚೇರಿಯಲ್ಲಿ ಯಾರೋ ಒಬ್ಬರು ಸಂಸತ್ತಿನ ವೆಬ್‌ಸೈಟ್‌ನಲ್ಲಿ ನಾನು ನೀಡಿದ ಪ್ರಶ್ನೆಯನ್ನು ಟೈಪ್ ಮಾಡಿದ್ದಾರೆ, ಪ್ರಶ್ನೆಯನ್ನು ಹಾಕಿದ ನಂತರ ಅವರು ನನಗೆ ತಿಳಿಸಲು ನನಗೆ ಕರೆ ಮಾಡುತ್ತಾರೆ. ನಾನು ಯಾವಾಗಲೂ ನನ್ನ ಕ್ಷೇತ್ರದಲ್ಲಿ ಬ್ಯುಸಿಯಾಗಿರುವ ಕಾರಣ ಎಲ್ಲಾ ಪ್ರಶ್ನೆಗಳನ್ನು ಒಂದೇ ಬಾರಿಗೆ ಓದುತ್ತೇನೆ. ನನ್ನ ಮೊಬೈಲ್ ಫೋನ್‌ನಲ್ಲಿ OTP (ಒನ್-ಟೈಮ್ ಪಾಸ್‌ವರ್ಡ್) ಬರುತ್ತದೆ, ನಾನು ಆ OTP ಅನ್ನು ನೀಡುತ್ತೇನೆ ಮತ್ತು ನಂತರ ಮಾತ್ರ ಪ್ರಶ್ನೆಯನ್ನು ಸಲ್ಲಿಸಲಾಗುತ್ತದೆ, ಆದ್ದರಿಂದ, ದರ್ಶನ್ ನನ್ನ ಐಡಿಗೆ ಲಾಗ್ ಇನ್ ಆಗುತ್ತಾರೆ ಮತ್ತು ಅವರದೇ ಪ್ರಶ್ನೆಗಳನ್ನು ಹಾಕುತ್ತಾರೆ ಎಂಬ ಕಲ್ಪನೆ ಹಾಸ್ಯಾಸ್ಪದ,” ಎಂದು ಅವರು ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ