ಮಣಿಪುರದಲ್ಲಿ 9 ಮೈತೇಯಿ ಉಗ್ರ ಸಂಘಟನೆಗಳನ್ನು 5 ವರ್ಷ ಕಾಲ ನಿಷೇಧಿಸಿದ ಕೇಂದ್ರ ಸರ್ಕಾರ
Centre Bans 9 Meitei Extremist Organizations: ಮಣಿಪುರದಲ್ಲಿ ಪ್ರತ್ಯೇಕತಾವಾದಿ ವಾತಾವರಣ ಸೃಷ್ಟಿಸುತ್ತಿವೆ ಎನ್ನಲಾದ ಮೈತೇಯಿ ಸಮುದಾಯದ 9 ಉಗ್ರ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಪೀಪಲ್ಸ್ ಲಿಬರೇಶನ್ ಆರ್ಮಿ, ರೆವಲ್ಯೂಶನರಿ ಪೀಪಲ್ಸ್ ಫ್ರಂಟ್, ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್, ಮಣಿಪುರ್ ಪೀಪಲ್ಸ್ ಆರ್ಮಿ, ಪೀಪಲ್ಸ್ ರೆವಲ್ಯೂಶನರಿ ಪಾರ್ಟಿ ಆಫ್ ಕಂಗ್ಲೇಪಕ್ ಮೊದಲಾದವರು ಈ ನಿಷೇಧಿತ ಸಂಘಟನೆಗಳಲ್ಲಿ ಇವೆ.

ನವದೆಹಲಿ, ನವೆಂಬರ್ 14: ಮಣಿಪುರದಲ್ಲಿ ಪ್ರತ್ಯೇಕತಾವಾದಿ (secessionist) ವಾತಾವರಣ ಸೃಷ್ಟಿಸುತ್ತಿವೆ ಎನ್ನಲಾದ ಮೈತೇಯಿ ಸಮುದಾಯದ 9 ಉಗ್ರ ಸಂಘಟನೆಗಳನ್ನು (Meitei extremists) ಕೇಂದ್ರ ಸರ್ಕಾರ ನಿಷೇಧಿಸಿದೆ. ಈ 9 ಸಂಘಟನೆಗಳು ಐದು ವರ್ಷಗಳ ಕಾಲ ಮಣಿಪುರದಲ್ಲಿ ಚಟುವಟಿಕೆ ನಡೆಸದಂತೆ ನಿರ್ಬಂಧಿಸಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (Ministry of Home Affairs) ನಿನ್ನೆ ಸೋಮವಾರ ಆದೇಶ ಹೊರಡಿಸಿದೆ. ಭಾರತದ ಸಮಗ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುವ ಚಟುವಟಿಕೆಗಳಲ್ಲಿ ಈ ಸಂಘಟನೆಗಳು ನಿರತವಾಗಿವೆ ಎಂದು ಈ ಕ್ರಮ ಕೈಗೊಳ್ಳಲಾಗಿದೆ.
ನಿಷೇಧಿತವಾದ ಮೈತೇಯಿ ಸಂಘಟನೆಗಳು ಯಾವುವು?
- ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ)
- ರೆವಲ್ಯೂಶನರಿ ಪೀಪಲ್ಸ್ ಫ್ರಂಟ್ (ಆರ್ಪಿಎಫ್)
- ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (ಯುಎನ್ಎಲ್ಎಫ್)
- ಮಣಿಪುರ್ ಪೀಪಲ್ಸ್ ಆರ್ಮಿ (ಎಂಪಿಎ)
- ಪೀಪಲ್ಸ್ ರೆವಲ್ಯೂಶನರಿ ಪಾರ್ಟಿ ಆಫ್ ಕಂಗ್ಲೇಪಕ್ (ಪ್ರೀಪಾಕ್) ಹಾಗು ಅದರ ಸಶಸ್ತ್ರ ವಿಭಾಗವಾದ ರೆಡ್ ಆರ್ಮಿ
- ಕಾಂಗ್ಲೇ ಕಮ್ಯೂನಿಸ್ಟ್ ಪಾರ್ಟಿ (ಕೆಸಿಪಿ)
- ಕಂಗ್ಲೇ ಯಾವೋಲ್ ಕಾನ್ಬಾ ಲುಪ್ (ಕೆವೈಕೆಎಲ್)
- ಕೋಆರ್ಡಿನೇಶನ್ ಕಮಿಟಿ
- ಆಲಾಯನ್ಸ್ ಫಾರ್ ಸೋಷಿಯಲಿಸ್ಟ್ ಯೂನಿಟಿ ಕಾಂಗ್ಲೇಪಾಕ್ (ಅಸುಕ್)
ಈ ಎಲ್ಲಾ 9 ಸಂಘಟನೆಗಳು ಹಾಗು ಅವುಗಳ ವಿವಿಧ ವಿಭಾಗ, ಉಪಸಂಘಟನೆ ಇತ್ಯಾದಿಗಳೆಲ್ಲವನ್ನೂ ಯುಎಪಿಎ ಕಾಯ್ದೆ ಅಡಿ ನಿಷೇಧಿಸಲಾಗಿದೆ.
ಇದನ್ನೂ ಓದಿ: ಇಂಫಾಲ್ನಲ್ಲಿ ಮೈತಿ ಮುಖ್ಯಸ್ಥರಿದ್ದ ವಾಹನದ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ
ಈ ಸಂಘಟನೆಗಳಿಂದ ಪ್ರತ್ಯೇಕತಾವಾದಿ ಚಟುವಟಿಕೆಗಳು
ಭಾರತದಿಂದ ಮಣಿಪುರವನ್ನು ಬೇರ್ಪಡಿಸುವುದು ಈ ಸಂಘಟನೆಗಳ ಗುರಿಯಾಗಿದೆ. ಅದಕ್ಕಾಗಿ ಸಶಸ್ತ್ರ ಹೋರಾಟಗಳನ್ನು ಕೈಗೊಳ್ಳುತ್ತಿವೆ. ಮಣಿಪುರದ ಮೂಲನಿವಾಸಿಗಳನ್ನು ಭಾರತ ವಿರೋಧಿ ಚಟುವಟಿಕೆಗಳಿಗೆ ಸೆಳೆಯುತ್ತಿವೆ. ಈ ಮೈತೇಯಿ ಉಗ್ರ ಸಂಘಟನೆಗಳನ್ನು ಕೂಡಲೇ ನಿಯಂತ್ರಿಸದೇ ಹೋದರೆ ಹಿಂಸಾಚಾರ, ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಹೆಚ್ಚು ಬಲ ಸಿಕ್ಕಂತಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಮಣಿಪುರದಲ್ಲಿ ಕಳೆದ ಕೆಲ ತಿಂಗಳಲ್ಲಿ ಭೀಕರ ಹಿಂಸಾಚಾರ ಘಟನೆಗಳು ಸಂಭವಿಸಿದ್ದವು. ಬಹುಸಂಖ್ಯಾತ ಮೈತೇಯಿ ಸಮುದಾಯ ಮತ್ತು ಬುಡಕಟ್ಟು ಗುಂಪುಗಳಾದ ಕುಕಿ ಝೋ ಜನರ ಮಧ್ಯೆ ದೀರ್ಘ ಕಾಲ ಸಂಘರ್ಷಗಳು ನಡೆದಿವೆ. ಇದರಲ್ಲಿ 180ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಮೈತೇಯಿ ಸಮುದಾಯ ತಮಗೆ ಪರಿಶಿಷ್ಟ ಪಂಗಡ ಸ್ಥಾನ ನೀಡಬೇಕೆಂದು ಒತ್ತಾಯಿಸುತ್ತಿದ್ದುದು ಬುಡಕಟ್ಟು ಗುಂಪುಗಳನ್ನು ರೊಚ್ಚಿಗೆಬ್ಬಿಸಿತ್ತು. ಇದು ಇತ್ತೀಚಿನ ಮಣಿಪುರ ಘರ್ಷಣೆಗೆ ಕಾರಣವಾಗಿರುವುದು. ಆದರೆ, ಬಹಳ ವರ್ಷಗಳಿಂದಲೂ ಈ ಎರಡು ಸಮುದಾಯಗಳ ಮಧ್ಯೆ ಘರ್ಷಣೆ ಇದ್ದೇ ಇದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ