ಬಿಜೆಪಿಯೊಂದಿಗೆ ಸೇರಿದ್ದವರು ಯಾರು?-ಮಮತಾ ಬ್ಯಾನರ್ಜಿಗೆ ಹಳೇ ಮೈತ್ರಿ ನೆನಪಿಸಿಕೊಟ್ಟ ಕಾಂಗ್ರೆಸ್​​

ಮಮತಾ ಬ್ಯಾನರ್ಜಿ ಗೋವಾ ಪ್ರವಾಸದಲ್ಲಿ ಇದ್ದಾಗಲೇ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಕೂಡ ಗೋವಾದಿಂದ ಚುನಾವಣಾ ಪ್ರಚಾರ ಶುರು ಮಾಡಿದ್ದಾರೆ. ಅಲ್ಲಿಗೆ ತೆರಳಿ ಮೀನುಗಾರರ ಸಮುದಾಯದೊಂದಿಗೆ ಮಾತುಕತೆ ನಡೆಸಿದ್ದಾರೆ.

ಬಿಜೆಪಿಯೊಂದಿಗೆ ಸೇರಿದ್ದವರು ಯಾರು?-ಮಮತಾ ಬ್ಯಾನರ್ಜಿಗೆ ಹಳೇ ಮೈತ್ರಿ ನೆನಪಿಸಿಕೊಟ್ಟ ಕಾಂಗ್ರೆಸ್​​
ಮಮತಾ ಬ್ಯಾನರ್ಜಿ
Updated By: Lakshmi Hegde

Updated on: Nov 01, 2021 | 12:51 PM

ಕೋಲ್ಕತ್ತ: ಗೋವಾದಲ್ಲಿ ಕಾಂಗ್ರೆಸ್​ ವಿರುದ್ಧ ಮಾತನಾಡಿದ ತೃಣಮೂಲ ಕಾಂಗ್ರೆಸ್​ ನಾಯಕಿ ಮಮತಾ ಬ್ಯಾನರ್ಜಿ ವಿರುದ್ಧ ಕಾಂಗ್ರೆಸ್​ ಹಿರಿಯ ನಾಯಕ ಅಧೀರ್​ ರಂಜನ್​ ಚೌಧರಿ ಕಿಡಿಕಾರಿದ್ದಾರೆ. ನಾವು ಯಾವಾಗಲೂ ಅವರಿಗೆ ಬೆಂಬಲ ನೀಡುತ್ತಿದ್ದರೂ ಮಮತಾ ಬ್ಯಾನರ್ಜಿ ನಮ್ಮ ವಿರುದ್ಧವೇ ಮಾತನಾಡುತ್ತಾರೆ..ಅವರೇನು ಬಿಜೆಪಿ ಏಜೆಂಟ್​​ನಂತೆ ಕೆಲಸ ಮಾಡುತ್ತಿದ್ದಾರಾ? ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.  

ಅಧೀರ್​ ರಂಜನ್​ ಚೌಧರಿ ಪಶ್ಚಿಮ ಬಂಗಾಳದ ಕಾಂಗ್ರೆಸ್​ ಘಟಕದ ಅಧ್ಯಕ್ಷರೂ ಹೌದು. ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಸಚಿವರು ಆದವರು ಯಾರು ಎಂಬುದನ್ನು ಮಮತಾ ಬ್ಯಾನರ್ಜಿ ತಿಳಿಸಲಿ ಎಂದು ಆಗ್ರಹಿಸಿದರು. ಈ ಮೂಲಕ ಮಮತಾ ಬ್ಯಾನರ್ಜಿ 1999ರಲ್ಲಿ ಎನ್​ಡಿಎ ಒಕ್ಕೂಟ ಸೇರಿ, 2000ರಲ್ಲಿ ರೈಲ್ವೆ ಸಚಿವರಾದ ವಿಚಾರವನ್ನು ಎತ್ತಾಡಿದರು. ಹಾಗೇ, ಇದೀಗ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ಪ್ರತಿಪಕ್ಷಗಳನ್ನು ತರಾತುರಿಯಲ್ಲಿ ಒಟ್ಟಾಗಿಸಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಹಿಂದೆ ಬಿಜೆಪಿ ಒಕ್ಕೂಟ ಸೇರಿಕೊಂಡವರು ಅವರೇ ಹೊರತು ನಾವ್ಯಾರೂ ಅಲ್ಲ ಎಂದು ಟೀಕಿಸಿದರು.

ಮಮತಾ ಬ್ಯಾನರ್ಜಿ ಗೋವಾ ಪ್ರವಾಸದಲ್ಲಿ ಇದ್ದಾಗಲೇ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಕೂಡ ಗೋವಾದಿಂದ ಚುನಾವಣಾ ಪ್ರಚಾರ ಶುರು ಮಾಡಿದ್ದಾರೆ. ಅಲ್ಲಿಗೆ ತೆರಳಿ ಮೀನುಗಾರರ ಸಮುದಾಯದೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕಾಂಗ್ರೆಸ್​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ನಮ್ಮ ದೇಶದಲ್ಲಿ ಈಗ ಹಳೇ ಪಕ್ಷವೊಂದು ರಾಜಕೀಯದಲ್ಲಿ ಆಸಕ್ತಿ ಕಳೆದುಕೊಂಡಿದೆ. ಅದೇ ಕಾರಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಚ್ಚೆಚ್ಚು ಬಲಶಾಲಿ ಆಗುತ್ತಿದ್ದಾರೆ. ಆ ಹಳೇ ರಾಷ್ಟ್ರೀಯ ಪಕ್ಷ ಯಾವುದೇ ನಿರ್ಧಾರಗಳನ್ನೂ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದರು.

ಅದರ ಬನ್ನೆಲ್ಲೇ ಅಧೀರ್​ ರಂಜನ್​ ಚೌಧರಿ ದೀದಿಗೆ ತಿರುಗೇಟು ನೀಡಿದ್ದಾರೆ. ಇನ್ನೂ ಬಿಜೆಪಿ ಏಜೆಂಟ್​ ಆಗಿ ಕೆಲಸ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ನಾವು ಎಲ್ಲ ರೀತಿಯ ಬೆಂಬಲವನ್ನೂ ನಿಮಗೆ ನೀಡಿದ್ದೇವೆ. ನಿಮಗಾಗಿ ನಮ್ಮ ಸಂಪನ್ಮೂಲಗಳನ್ನೂ ವ್ಯಯಿಸಿದ್ದೇವೆ. ಅಷ್ಟಾದರೂ ನಿಮ್ಮನ್ನು ತೃಪ್ತಿಪಡಿಸಲು ಸಾಧ್ಯವಾಗಿಲ್ಲ. ಹೀಗಿರುವಾಗ ಪಶ್ಚಿಮ ಬಂಗಾಳ ರಾಜ್ಯದ ಜನರು ನಿಮ್ಮನ್ನು ತೃಪ್ತಿಪಡಿಸುತ್ತಾರಾ?. ನಿಮ್ಮನ್ನು ಮೂರು ಬಾರಿ ಗೆಲ್ಲಿಸಿದ್ದಾರೆ ಇಲ್ಲಿನ ಜನರು..ಅವರೊಂದಿಗೂ ಇದೇ ರೀತಿಯ ವರ್ತನೆಯನ್ನೇ ತೋರಿಸುತ್ತೀರಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: Viral Video: ನಾಯಿಯ ಕಿವಿ ಹಿಂಡುತ್ತಿದ್ದ ವ್ಯಕ್ತಿಯನ್ನು ನೋಡಿ ಕೋಪಗೊಂಡ ಹಸುವಿನ ರಿಯಾಕ್ಷನ್ ಹೇಗಿತ್ತು ನೋಡಿ

ಶಕ್ತಿದೇವಿ ನೋಡಲು ಮುಗಿಬಿದ್ದ ಭಕ್ತರು; ಹಾಸನಾಂಬೆ ದರ್ಶನಕ್ಕೆ ಇನ್ನು ಐದು ದಿನಗಳು ಮಾತ್ರ ಬಾಕಿ