ಗುಟ್ಕಾ ತಿನ್ನಿ, ಮದ್ಯ ಸೇವಿಸಿ; ಬರಿಗೈಯಲ್ಲಿ ಟಾಯ್ಲೆಟ್ ಕ್ಲೀನ್ ಮಾಡಿದ್ದ ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ

ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಈ ರೀತಿಯ ವಿಚಿತ್ರ ಹೇಳಿಕೆಗಳನ್ನು ನೀಡಿ ವಿವಾದಕ್ಕೀಡಾಗಿರುವುದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ಅವರು ತನ್ನ ಕೈಯಿಂದ ಸಾರ್ವಜನಿಕ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು.

ಗುಟ್ಕಾ ತಿನ್ನಿ, ಮದ್ಯ ಸೇವಿಸಿ; ಬರಿಗೈಯಲ್ಲಿ ಟಾಯ್ಲೆಟ್ ಕ್ಲೀನ್ ಮಾಡಿದ್ದ ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ
Edited By:

Updated on: Nov 08, 2022 | 9:01 AM

ರೇವಾ: ಮಧ್ಯಪ್ರದೇಶದ ರೇವಾ ಕ್ಷೇತ್ರದ ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ (Janardan Mishra) ಅವರು ರೇವಾದಲ್ಲಿನ ನೀರಿನ ಸಂರಕ್ಷಣೆ ಕುರಿತು ವಿಚಿತ್ರವಾದ ಹೇಳಿಕೆ ನೀಡಿ ಟ್ರೋಲ್ ಆಗುತ್ತಿದ್ದಾರೆ. “ಭೂಮಿ ನೀರಿಲ್ಲದೆ ಒಣಗುತ್ತಿವೆ, ನಾವು ಭೂಮಿಯನ್ನು ಮತ್ತು ನೀರನ್ನು ಉಳಿಸಬೇಕು. ನೀವು ಗುಟ್ಕಾ ಬೇಕಾದರೂ ತಿನ್ನಿರಿ, ಮದ್ಯ ಸೇವಿಸಿ, ಸುಲೇಸನ್ ಅಥವಾ ಅಯೋಡೆಕ್ಸ್ ತಿನ್ನಿರಿ. ಆದರೆ ನೀರಿನ ಮಹತ್ವವನ್ನು ಅರ್ಥಮಾಡಿಕೊಳ್ಳಿ” ಎಂದು ಸಂಸದ ಜನಾರ್ದನ್ ಮಿಶ್ರಾ ಜಲ ಸಂರಕ್ಷಣಾ ಕಾರ್ಯಾಗಾರದಲ್ಲಿ ಹೇಳಿದ್ದಾರೆ .

ಭಾನುವಾರ ರೇವಾದ ಕೃಷ್ಣರಾಜ್ ಕಪೂರ್ ಸಭಾಂಗಣದಲ್ಲಿ ಜಲ ಸಂರಕ್ಷಣಾ ಕಾರ್ಯಾಗಾರ ಆಯೋಜಿಸಲಾಗಿತ್ತು. ಆಗ ಸಂಸದ ಜನಾರ್ದನ್ ಮಿಶ್ರಾ ನೀಡಿರುವ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ದೇವಸ್ಥಾನಗಳಲ್ಲಿ ನೀಡುವ ತೀರ್ಥವನ್ನು ಕುಡಿಯಬಾರದು, ಅವೆಲ್ಲ ಅವೈಜ್ಞಾನಿಕ: ಮಾಜಿ ಸಚಿವೆ ಬಿ ಟಿ ಲಲಿತಾ ನಾಯಕ್ ವಿವಾದಾತ್ಮಕ ಹೇಳಿಕೆ

“ಯಾವುದೇ ಸರ್ಕಾರವು ನೀರಿನ ತೆರಿಗೆಯನ್ನು ಮನ್ನಾ ಮಾಡುತ್ತೇವೆ ಎಂದು ಘೋಷಿಸಿದರೆ ಅದಕ್ಕೆ ನೀವು ಒಪ್ಪಬೇಡಿ. ನಾವು ನೀರಿನ ತೆರಿಗೆಯನ್ನು ಪಾವತಿಸುತ್ತೇವೆ. ನೀವು ನೀರಿನ ತೆರಿಗೆ ಬದಲು ವಿದ್ಯುತ್ ಬಿಲ್ ಸೇರಿದಂತೆ ಉಳಿದ ತೆರಿಗೆಗಳನ್ನು ಮನ್ನಾ ಮಾಡಿ ಎಂದು ಅವರಿಗೆ ಒತ್ತಾಯಿಸಿ” ಎಂದು ಜನಾರ್ದನ್ ಮಿಶ್ರಾ ಕರೆ ನೀಡಿದ್ದಾರೆ.

ಅಂದಹಾಗೆ, ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಈ ರೀತಿಯ ವಿಚಿತ್ರ ಹೇಳಿಕೆಗಳನ್ನು ನೀಡಿ ವಿವಾದಕ್ಕೀಡಾಗಿರುವುದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ಅವರು ತನ್ನ ಕೈಯಿಂದ ಸಾರ್ವಜನಿಕ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಅದಾದ ಬಳಿಕ ಇದೀಗ ಮತ್ತೆ ಅವರು ಸುದ್ದಿಯಲ್ಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us