ಇರಾನ್ ಸಂಘರ್ಷ ತೀವ್ರ ಕಳವಳಕಾರಿ; ಶಾಂತಿಯುತ ಮಾತುಕತೆಗೆ ಕರೆ ನೀಡಿದ ಭಾರತ

ಇರಾನ್​ ಮೇಲೆ ಇಸ್ರೇಲ್ ಮತ್ತು ಅಮೆರಿಕ ದಾಳಿ ನಡೆಸಿದೆ. ಇದರಿಂದ ಮಧ್ಯ ಪ್ರಾಚ್ಯ ಹೊತ್ತಿ ಉರಿಯುತ್ತಿದೆ. ಇರಾನ್ ಇಸ್ರೇಲ್ ಮೇಲೆ ಮಾತ್ರವಲ್ಲದೆ ಬೇರೆ ದೇಶಗಳಲ್ಲಿರುವ ಅಮೆರಿಕದ ವಾಯುನೆಲೆಗಳ ಮೇಲೂ ದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ. ಈ ಘಟನೆಯ ಬಗ್ಗೆ ಭಾರತ ಪ್ರತಿಕ್ರಿಯೆ ನೀಡಿದ್ದು, ಇಂದಿನ ಬೆಳವಣಿಗೆ ತೀವ್ರ ಕಳವಳಕಾರಿ ಎಂದು ಹೇಳಿದೆ. ಹಾಗೇ, ಗಲಭೆಪೀಡಿತ ದೇಶಗಳಲ್ಲಿರುವ ಭಾರತೀಯರು ಮುನ್ನೆಚ್ಚರಿಕೆ ವಹಿಸಬೇಕೆಂದು ಸಲಹೆ ನೀಡಿದೆ.

ಇರಾನ್ ಸಂಘರ್ಷ ತೀವ್ರ ಕಳವಳಕಾರಿ; ಶಾಂತಿಯುತ ಮಾತುಕತೆಗೆ ಕರೆ ನೀಡಿದ ಭಾರತ
Iran Conflict

Updated on: Feb 28, 2026 | 9:13 PM

ನವದೆಹಲಿ, ಫೆಬ್ರವರಿ 28: ಯುನೈಟೆಡ್ ಸ್ಟೇಟ್ಸ್ (ಯುಎಸ್) ಮತ್ತು ಇಸ್ರೇಲ್ ದೇಶಗಳು ಇರಾನ್ (Iran) ಮೇಲೆ ಜಂಟಿಯಾಗಿ ದಾಳಿ ನಡೆಸಿದ ನಂತರ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಪರಿಸ್ಥಿತಿಯ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಎರಡೂ ಕಡೆಯ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಬಗೆಹರಿಸಲು ‘ಮಾತುಕತೆ ಮತ್ತು ರಾಜತಾಂತ್ರಿಕತೆ’ಗೆ ಭಾರತ ಕರೆ ನೀಡಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ವಕ್ತಾರ ರಣಧೀರ್ ಜೈಸ್ವಾಲ್ ಈ ಬಗ್ಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ಪ್ರದೇಶದಲ್ಲಿನ ಭಾರತೀಯ ರಾಯಭಾರ ಕಚೇರಿಗಳು ಅಲ್ಲಿನ ಎಲ್ಲಾ ಭಾರತೀಯ ಪ್ರಜೆಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿವೆ. ಅವರು ಜಾಗರೂಕರಾಗಿರಲು ಸೂಚಿಸಲಾಗಿದೆ. ಭಾರತೀಯ ನಾಗರಿಕರು ಸ್ಥಳೀಯ ಭದ್ರತಾ ಮಾರ್ಗದರ್ಶನವನ್ನು ಅನುಸರಿಸಬೇಕು ಮತ್ತು ರಾಯಭಾರ ಕಚೇರಿಗಳೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಹತ್ತು ದಿನ ಟೈಂ ಕೊಡ್ತೀನಿ, ಹೇಳಿದ್ದು ಕೇಳದೆ ಇದ್ರೆ ಯುದ್ಧ ಗ್ಯಾರಂಟಿ, ಇರಾನ್​ಗೆ ಗಡುವು ಕೊಟ್ಟ ಟ್ರಂಪ್

“ಸಂಘರ್ಷಕ್ಕೊಳಗಾದ ಎಲ್ಲ ಕಡೆಯವರು ಸಂಯಮದಿಂದ ವರ್ತಿಸಬೇಕು, ಪರಿಸ್ಥಿತಿ ಉಲ್ಬಣಗೊಳ್ಳದಂತೆ ನೋಡಿಕೊಳ್ಳಬೇಕು ಮತ್ತು ನಾಗರಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು” ಎಂದು ಜೈಸ್ವಾಲ್ ಹೇಳಿದ್ದಾರೆ. ಇಸ್ರೇಲ್-ಇರಾನ್-ಅಮೆರಿಕದ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಅನುಸರಿಸಬೇಕು. ಎಲ್ಲಾ ರಾಜ್ಯಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಎಂದು ಜೈಸ್ವಾಲ್ ಹೇಳಿದ್ದಾರೆ.


ಇಂದಿನ ದಾಳಿಯಲ್ಲಿ ಇರಾನ್‌ನ ರಕ್ಷಣಾ ಸಚಿವ ಅಮೀರ್ ನಾಸಿರ್ಜಾದೆ ಮತ್ತು ಕ್ರಾಂತಿಕಾರಿ ಗಾರ್ಡ್‌ಗಳ ಕಮಾಂಡರ್ ಮೊಹಮ್ಮದ್ ಪಕ್‌ಪೂರ್ ಕೊಲ್ಲಲ್ಪಟ್ಟಿದ್ದಾರೆ ಎನ್ನಲಾಗಿದೆ. ತನ್ನ ದೇಶದ ಮೇಲಿನ ದಾಳಿಗೆ ಇರಾನ್ ಕೂಡ ಪ್ರತೀಕಾರದ ದಾಳಿಗಳ ಬಗ್ಗೆ ಎಚ್ಚರಿಕೆ ನೀಡಿದೆ. ಕತಾರ್ ಮತ್ತು ಕುವೈತ್‌ ಸೇರಿದಂತೆ 6 ದೇಶಗಳ ಯುಎಸ್ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇರಾನ್ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಬುಧಾಬಿ ಮತ್ತು ದುಬೈ ಮೇಲೆಯೂ ದಾಳಿ ಮಾಡಿ ಕನಿಷ್ಠ ಒಬ್ಬ ವ್ಯಕ್ತಿಯನ್ನು ಕೊಂದಿದೆ.

ಇದನ್ನೂ ಓದಿ: ಇರಾನ್ ಮೇಲಿನ ವೈಮಾನಿಕ ದಾಳಿಯ ಮೊದಲ ವಿಡಿಯೋ ರಿಲೀಸ್ ಮಾಡಿದ ಇಸ್ರೇಲ್

ಪರಿಸ್ಥಿತಿ ಉದ್ವಿಗ್ನವಾಗಿರುವುದರಿಂದ, ಜರ್ಮನಿ, ಫ್ರಾನ್ಸ್, ಸ್ವಿಟ್ಜರ್ಲೆಂಡ್ ಮತ್ತು ಇಟಲಿ ಸೇರಿದಂತೆ ಹಲವಾರು ಯುರೋಪಿಯನ್ ರಾಷ್ಟ್ರಗಳು ತುರ್ತು ಸಭೆಗಳನ್ನು ನಡೆಸುತ್ತಾ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us