Delhi Chalo: ಪ್ರತಿಭಟನಾನಿರತ ರೈತರಿಗೆ 12 ಪೆಟ್ಟಿಗೆ ಸೊಳ್ಳೆ ಬತ್ತಿ ಕೊಟ್ಟರು

ರೈತರಿಗೆ ಎಲ್ಲರೂ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಸೊಳ್ಳೆ ಸಮಸ್ಯೆ ಇರುವುದನ್ನು ತಿಳಿದುಕೊಂಡ ನಾವು ಸೊಳ್ಳೆ ಕಾಯಿಲ್​ಗಳನ್ನು ತಂದಿದ್ದೇವೆ ಎಂದಿದ್ದಾರೆ ಸಹಾಬ್ ಸಿಂಗ್.

Delhi Chalo: ಪ್ರತಿಭಟನಾನಿರತ ರೈತರಿಗೆ 12 ಪೆಟ್ಟಿಗೆ ಸೊಳ್ಳೆ ಬತ್ತಿ ಕೊಟ್ಟರು
ಪ್ರತಿಭಟನೆಯಲ್ಲಿ ತೊಡಗಿರುವ ರೈತರು
Updated By: ganapathi bhat

Updated on: Apr 07, 2022 | 10:45 AM

ದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನು ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ವಿವಿಧ ಸಹಾಯಗಳು ಹರಿದುಬರುತ್ತಿದೆ. ಬಟ್ಟೆಗಳು, ಚಳಿಯಿಂದ ರಕ್ಷಿಸಿಕೊಳ್ಳಲು ಹಾಸಿಗೆಗಳು, ಆರೋಗ್ಯ ಸೇವೆಗಳು, ಅಂಗಡಿಗಳು ಜೊತೆಗೆ ಪಾದಗಳಿಗೆ ಮಸಾಜ್ ಮಾಡುವ ಸಾಧನಗಳು, ಪಿಜ್ಜಾ ಕೂಡ ಈ ಸಾಲಿನಲ್ಲಿ ಸೇರಿಕೊಂಡಿದೆ. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆಯಾಗಿರುವುದು ಸೊಳ್ಳೆ ಬತ್ತಿ (Mosquito Coils).

ಪಂಜಾಬ್​ನ ಅಮೃತಸರದಿಂದ ಸಹಾಬ್ ಸಿಂಗ್ ಎನ್ನುವವರು 60 ಸೊಳ್ಳೆ ಕಾಯಿಲ್​ಗಳನ್ನು ಹೊಂದಿರುವ 12 ಪೆಟ್ಟಿಗೆಗಳನ್ನು ತಂದಿದ್ದಾರೆ. ಪ್ರತಿಭಟನಾನಿರತರನ್ನು ಸೊಳ್ಳೆಯಿಂದ ರಕ್ಷಿಸಲು ಈ ಕಾರ್ಯ ಮಾಡಿದ್ದಾರೆ ಸಹಾಬ್ ಸಿಂಗ್. ರೈತರಿಗೆ ಎಲ್ಲರೂ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಸೊಳ್ಳೆ ಸಮಸ್ಯೆ ಇರುವುದನ್ನು ತಿಳಿದುಕೊಂಡ ನಾವು ಸೊಳ್ಳೆ ಕಾಯಿಲ್​ಗಳನ್ನು ತಂದಿದ್ದೇವೆ ಎಂದಿದ್ದಾರೆ.

ಇಂದು ಮಧ್ಯಾಹ್ನದ ವೇಳೆಗೆ ಸೊಳ್ಳೆ ಕಾಯಿಲ್​ಗಳನ್ನು ಹಂಚಿರುವ ಸಹಾಬ್ ಸಿಂಗ್ ಮತ್ತವರ ಗೆಳೆಯ ಸುರ್ಮೈಲ್ ಸಿಂಗ್, ಕಾಯಿಲ್ ಹಚ್ಚಿ ಸೊಳ್ಳೆಗಳನ್ನು ಓಡಿಸಿ ಎಂಬಂತೆ ಲೌಡ್​ಸ್ಪೀಕರ್​ನಲ್ಲಿ ಕೂಗಿದ್ದಾರೆ. ರೈತರನ್ನು ಕರೆದಿದ್ದಾರೆ. ಪ್ರತಿಭಟನೆಯಲ್ಲಿರುವ ರೈತರಿಗೆ ಇದು ನಮ್ಮ ಸೇವೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸುರ್ಮೈಲ್ ಸಿಂಗ್, ಪ್ರತಿಭಟನಾನಿರತರು ತೆರೆದ ಪ್ರದೇಶದಲ್ಲಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಇಲ್ಲಿ ಹಲವು ಚರಂಡಿಗಳೂ ಇರುವುದರಿಂದ ಸೊಳ್ಳೆಗಳ ಕಾಟವಿದೆ. ಆದ್ದರಿಂದ ಸೊಳ್ಳೆ ಬತ್ತಿ ಹಂಚುತ್ತಿದ್ದೇವೆ. ಈಗಾಗಲೇ ಒಂದು ಪೆಟ್ಟಿಗೆ ಕಾಯಿಲ್ ಖಾಲಿಯಾಗಿದೆ ಎಂದು ತಿಳಿಸಿದ್ದಾರೆ.

ರೈತರು ಕಳೆದ ಎರಡು ವಾರಗಳಿಗೂ ಹೆಚ್ಚು ಕಾಲದಿಂದ ದೆಹಲಿಯ ವಿವಿಧ ಗಡಿಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದ ಹೊಸ ಕೃಷಿ ಕಾಯ್ದೆಗಳಿಂದ ಕಾರ್ಪೊರೇಟ್ ವಲಯಕ್ಕೆ ಹೆಚ್ಚು ಲಾಭವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆ ಮೂಲಕ ರೈತರಿಗೆ ಸಿಗುವ ಕನಿಷ್ಠ ಬೆಂಬಲ ಬೆಲೆಗೂ ತೊಂದರೆಯಾಗಲಿದೆ ಎಂಬ ಆತಂಕವನ್ನು ರೈತರು ವ್ಯಕ್ತಪಡಿಸಿದ್ದಾರೆ.

Delhi Chalo: ಸಿಂಘು ಗಡಿಯಲ್ಲಿ ಪಿಜ್ಜಾ ತಿಂದ ಪ್ರತಿಭಟನಾ ರೈತರು

Published On - 9:26 pm, Sun, 13 December 20