‘ಇದು ಕಾನೂನು ಬಾಹಿರ ಕ್ರಮ’: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಇಡಿ ಬಂಧಿಸಿದ ನಂತರ ಕೆ ಕವಿತಾ ಪ್ರತಿಕ್ರಿಯೆ

|

Updated on: Mar 16, 2024 | 1:09 PM

ಇಡಿ ಪ್ರಕಾರ, ಕವಿತಾ ಅವರು ಈಗ ರದ್ದಾದ ದೆಹಲಿ ಅಬಕಾರಿ ನೀತಿಯಲ್ಲಿ ದೊಡ್ಡ ಪಾತ್ರವನ್ನು ವಹಿಸಲು ಪ್ರಯತ್ನಿಸುತ್ತಿರುವ ಮದ್ಯದ ವ್ಯಾಪಾರಿಗಳ 'ಸೌತ್ ಗ್ರೂಪ್' ಲಾಬಿಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.ಇಂದು ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಮಾತನಾಡಿದ ಕೆ.ಕವಿತಾ "ಇದು ಬಂಧನ ಕಾನೂನು ಬಾಹಿರವಾದದ್ದು, ನಾನು ಅದರ ವಿರುದ್ಧ ಹೋರಾಡುತ್ತೇನೆ" ಎಂದು ಹೇಳಿದರು

ಇದು ಕಾನೂನು ಬಾಹಿರ ಕ್ರಮ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಇಡಿ ಬಂಧಿಸಿದ ನಂತರ ಕೆ ಕವಿತಾ ಪ್ರತಿಕ್ರಿಯೆ
ಕೆ.ಕವಿತಾ
Follow us on

ದೆಹಲಿ ಮಾರ್ಚ್ 16:ಭಾರತ್ ರಾಷ್ಟ್ರ ಸಮಿತಿಯ (Bharat Rashtra Samithi ನಾಯಕಿ ಕೆ ಕವಿತಾ (K kavitha) ಅವರನ್ನು ನಿನ್ನೆ(ಶುಕ್ರವಾರ ) ಜಾರಿ ನಿರ್ದೇಶನಾಲಯ (Enforcement Directorate) ಬಂಧಿಸಿದ್ದು, ಇದು ಕಾನೂನು ಬಾಹಿರ ಕ್ರಮ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಮಾತನಾಡಿದ ಕೆ.ಕವಿತಾ “ಈ ಬಂಧನ ಕಾನೂನು ಬಾಹಿರವಾದದ್ದು, ನಾನು ಅದರ ವಿರುದ್ಧ ಹೋರಾಡುತ್ತೇನೆ” ಎಂದು ಹೇಳಿದರು. ಶುಕ್ರವಾರ ಸಂಜೆ 5:20 ಕ್ಕೆ ಹೈದರಾಬಾದ್‌ನ ಬಂಜಾರಾ ಹಿಲ್ಸ್ ನಿವಾಸದಿಂದ ಬಿಆರ್‌ಎಸ್ ನಾಯಕಿಯನ್ನು ಕೇಂದ್ರ ಸಂಸ್ಥೆ ಬಂಧಿಸಿದೆ.

“ಶ್ರೀಮತಿ. H. No. 8-2316/S/H, ರಸ್ತೆ ಸಂಖ್ಯೆ 14, ಬಂಜಾರ ಹಿಲ್ಸ್, ಹೈದರಾಬಾದ್, ತೆಲಂಗಾಣ-500034 ರಲ್ಲಿ ವಾಸವಾಗಿರುವ ಕಲ್ವಕುಂಟ್ಲ ಕವಿತಾ w/o ಶ್ರೀ ಡಿ ಆರ್ ಅನಿಲ್ ಕುಮಾರ್ ರವರು ಮನಿ ಲಾಂಡರಿಂಗ್ ತಡೆ ಕಾಯಿದೆಯ ನಿಬಂಧನೆ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಕ್ಕೆ ತಪ್ಪಿತಸ್ಥರಾಗಿದ್ದಾರೆ ಎಂದು ಇಡಿ ತನಿಖಾ ಅಧಿಕಾರಿಯೊಬ್ಬರು ಅರೆಸ್ಟ್ ಮೆಮೊದಲ್ಲಿ ಹೇಳಿದ್ದಾರೆ.

ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಕವಿತಾ ಪ್ರಕರಣದಲ್ಲಿ ಬಂಧನಕ್ಕೊಳಗಾದ ಮೂರನೇ ಪ್ರಮುಖ ನಾಯಕರಾಗಿದ್ದಾರೆ. ಪ್ರಸ್ತುತ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಈಗಾಗಲೇ ಜೈಲಿನಲ್ಲಿದ್ದಾರೆ.

ಇಡಿ ಪ್ರಕಾರ, ಕವಿತಾ ಅವರು ಈಗ ರದ್ದಾದ ದೆಹಲಿ ಅಬಕಾರಿ ನೀತಿಯಲ್ಲಿ ದೊಡ್ಡ ಪಾತ್ರವನ್ನು ವಹಿಸಲು ಪ್ರಯತ್ನಿಸುತ್ತಿರುವ ಮದ್ಯದ ವ್ಯಾಪಾರಿಗಳ ‘ಸೌತ್ ಗ್ರೂಪ್’ ಲಾಬಿಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಗಳಲ್ಲಿ ಒಬ್ಬರಾದ ವಿಜಯ್ ನಾಯರ್ ಅವರು ‘ಸೌತ್ ಗ್ರೂಪ್’ನಿಂದ ಆಪ್ ನಾಯಕರ ಪರವಾಗಿ ಕನಿಷ್ಠ ₹100 ಕೋಟಿ ಮೌಲ್ಯದ ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಲಾಗಿದ್ದು, ಇದನ್ನು ಶರತ್ ರೆಡ್ಡಿ, ಕವಿತಾ ಮತ್ತು ಮಾಗುಂಟ ಶ್ರೀನಿವಾಸುಲು ರೆಡ್ಡಿ ನಿಯಂತ್ರಿಸುತ್ತಿದ್ದರು ಎನ್ನಲಾಗಿದೆ.

45 ವರ್ಷದ ಬಿಆರ್‌ಎಸ್ ನಾಯಕಿಗೆ ಇಡಿ ಸಮನ್ಸ್ ನೀಡಿದ ಸುಮಾರು ಎರಡು ತಿಂಗಳ ನಂತರ ಈ ಕ್ರಮ ಬಂದಿದೆ. ಕಳೆದ ವರ್ಷ ಈ ಪ್ರಕರಣದಲ್ಲಿ ಕವಿತಾರನ್ನು ಮೂರು ಬಾರಿ ವಿಚಾರಣೆಗೊಳಪಡಿಸಲಾಗಿದ್ದು, ಕೇಂದ್ರ ಸಂಸ್ಥೆಯು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ.

ಇದನ್ನೂ ಓದಿ: Delhi Excise Policy Case: ಸಿಎಂ ಅರವಿಂದ್ ಕೇಜ್ರಿವಾಲ್​​​​ಗೆ ಜಾಮೀನು ಮಂಜೂರು

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕವಿತಾ ಅವರನ್ನು ಕೇಂದ್ರ ತನಿಖಾ ದಳ (ಸಿಬಿಐ) ವಿಚಾರಣೆ ನಡೆಸಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:59 pm, Sat, 16 March 24