ಏರ್ ಇಂಡಿಯಾ ಹೂಡಿಕೆ ಹಿಂಪಡೆಯುವಿಕೆ ವಿರುದ್ಧ ಸುಬ್ರಮಣ್ಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್​

| Updated By: ಸುಷ್ಮಾ ಚಕ್ರೆ

Updated on: Jan 06, 2022 | 1:08 PM

ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರನ್ನೊಳಗೊಂಡ ಹೈಕೋರ್ಟ್ ವಿಭಾಗೀಯ ಪೀಠವು ಜನವರಿ 4 ರಂದು ಏರ್ ಇಂಡಿಯಾವನ್ನು ಮಾರಾಟ ಮಾಡುವ ಮನವಿಯ ಮೇಲಿನ ವಾದವನ್ನು ಆಲಿಸಿ ತನ್ನ ಆದೇಶವನ್ನು ಕಾಯ್ದಿರಿಸಿತ್ತು

ಏರ್ ಇಂಡಿಯಾ ಹೂಡಿಕೆ ಹಿಂಪಡೆಯುವಿಕೆ ವಿರುದ್ಧ ಸುಬ್ರಮಣ್ಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್​
ಸುಬ್ರಹ್ಮಣಿಯನ್ ಸ್ವಾಮಿ
Follow us on

ನವದೆಹಲಿ: ಏರ್ ಇಂಡಿಯಾ ಮಾರಾಟದ ಹಿಂಪಡೆಯುವಿಕೆ ಪ್ರಕ್ರಿಯೆಯನ್ನು ಪ್ರಶ್ನಿಸಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜ್ಯಸಭಾ ಸದಸ್ಯ ಸುಬ್ರಮಣ್ಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರನ್ನೊಳಗೊಂಡ ಹೈಕೋರ್ಟ್ ವಿಭಾಗೀಯ ಪೀಠವು ಜನವರಿ 4 ರಂದು ಏರ್ ಇಂಡಿಯಾವನ್ನು ಮಾರಾಟ ಮಾಡುವ ಮನವಿಯ ಮೇಲಿನ ವಾದವನ್ನು ಆಲಿಸಿ ತನ್ನ ಆದೇಶವನ್ನು ಕಾಯ್ದಿರಿಸಿತ್ತು. ಇಂದು ಆ ತೀರ್ಪು ಪ್ರಕಟಗೊಂಡಿದ್ದು, ವಿವರವಾದ ತೀರ್ಪನ್ನು ಶೀಘ್ರದಲ್ಲೇ ಸಾರ್ವಜನಿಕರಿಗೆ ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.

ಇನ್ನು, ದೆಹಲಿ ಹೈಕೋರ್ಟ್​ನ ತೀರ್ಪು ಪ್ರಕಟವಾಗುತ್ತಿದ್ದಂತೆ ಟ್ವೀಟ್ ಮಾಡಿರುವ ರಾಜ್ಯಸಭಾ ಸದಸ್ಯ ಸುಬ್ರಮಣ್ಯನ್ ಸ್ವಾಮಿ, ಹೈಕೋರ್ಟ್‌ನ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸುವ ಸುಳಿವು ನೀಡಿದ್ದಾರೆ. ದೆಹಲಿ ಹೈಕೋರ್ಟ್ ಏರ್ ಇಂಡಿಯಾ ಪ್ರಕರಣದಲ್ಲಿ ನನ್ನ ರಿಟ್ ಅರ್ಜಿಯನ್ನು ವಜಾಗೊಳಿಸಿದೆ. ಈ ಕುರಿತು ವಿವರವಾದ ಆದೇಶವನ್ನು ವೆಬ್​ಸೈಟ್​ನಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ. ಅದನ್ನು ಓದಿದ ನಂತರ ನಾವು ಸುಪ್ರೀಂ ಕೋರ್ಟ್​ ಮೆಟ್ಟಿಲೇರುವ ಬಗ್ಗೆ ನಿರ್ಧರಿಸುತ್ತೇವೆ ಎಂದು ಸುಬ್ರಮಣ್ಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.

ಸುಬ್ರಮಣಿಯನ್ ಸ್ವಾಮಿ ಅವರು ಈ ಹಿಂದೆ ಟಾಟಾ ಗ್ರೂಪ್‌ನಿಂದ ವಿಮಾನಯಾನವನ್ನು ಖರೀದಿಸಿದ ಸಂಪೂರ್ಣ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದ್ದರು. ಭವಿಷ್ಯದಲ್ಲಿ ಈ ಮಾರಾಟಕ್ಕಾಗಿ ಸುರಕ್ಷಿತವಾಗಿರಬೇಕಾದ ಎಲ್ಲಾ ಅನುಮೋದನೆಗಳನ್ನು ರದ್ದುಗೊಳಿಸುವಂತೆ ವಿನಂತಿಸಿದ್ದರು.

ಬಂಡವಾಳ ಹಿಂತೆಗೆದುಕೊಳ್ಳುವ ಪ್ರಕ್ರಿಯೆಯ ಬಗ್ಗೆ ವಿವರವಾದ ತನಿಖೆಯನ್ನು ಅವರು ಕೋರಿದ್ದರು. ಈ ಪ್ರಕ್ರಿಯೆಯನ್ನು ಟಾಟಾಗಳ ಪರವಾಗಿ ಸಜ್ಜುಗೊಳಿಸಲಾಗಿದೆ ಎಂದು ಅವರು ಹೇಳಿದ್ದರು. ಬಂಡವಾಳ ಹಿಂತೆಗೆತವನ್ನು “ಭಾರೀ ದೊಡ್ಡ ಭ್ರಷ್ಟಾಚಾರ” ಎಂದು ಟೀಕಿಸಿದ್ದ ಸುಬ್ರಮಣ್ಯನ್ ಸ್ವಾಮಿ, ಸರ್ಕಾರದ ಪಾತ್ರದ ಬಗ್ಗೆ ಪೂರ್ಣ ಪ್ರಮಾಣದ ತನಿಖೆ ನಡೆಸಬೇಕೆಂದು ಕೋರಿದ್ದರು.

ಸ್ಪೈಸ್‌ಜೆಟ್‌ನ ಸಿಇಒ ಅಜಯ್ ಸಿಂಗ್ ಮಾಧ್ಯಮಕ್ಕೆ ನೀಡಿರುವ ಹೇಳಿಕೆಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, ಸ್ಪೈಸ್‌ಜೆಟ್ ಒಂದೇ ಬಿಡ್‌ದಾರರ ಪರಿಸ್ಥಿತಿಯನ್ನು ತಡೆಯಲು ಬಿಡ್ಡಿಂಗ್‌ನಲ್ಲಿ ಭಾಗವಹಿಸಿದೆ ಎಂದು ಒಪ್ಪಿಕೊಂಡಿದ್ದಾರೆ. ಟಾಟಾ ಸನ್ಸ್ ಬೆಂಬಲಿತ ಟ್ಯಾಲೇಸ್ ಪ್ರೈವೇಟ್ ಲಿಮಿಟೆಡ್ ಅನ್ನು ಗೆಲ್ಲಲು ಅಜಯ್ ಸಿಂಗ್ ಸಹಕರಿಸಿದ್ದಾರೆ ಎಂದು ಆರೋಪಿಸಿದರು.

ಮದ್ರಾಸ್ ಹೈಕೋರ್ಟ್ ನೀಡಿದ ಆದೇಶದ ಪ್ರಕಾರ ಸ್ಪೈಸ್ ಜೆಟ್ ದಿವಾಳಿತನದಲ್ಲಿದೆ. ಹೀಗಾಗಿ, ಬಿಡ್ಡರ್ ಆಗಿ ಅದರ ಸ್ಥಾನಮಾನವನ್ನು ಅಮಾನ್ಯಗೊಳಿಸಬೇಕು ಎಂದು ಸುಬ್ರಮಣ್ಯನ್ ಸ್ವಾಮಿ ವಾದಿಸಿದ್ದರು. ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಏರ್ ಏಷ್ಯಾದಲ್ಲಿ ಟಾಟಾ ಸನ್ಸ್ ಪಾಲು ಹೊಂದಿದೆ ಎಂದು ಅವರು ವಾದಿಸಿದ್ದರು.

ಆದರೆ, ಕೇಂದ್ರ ಸರ್ಕಾರ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದು, ಅರ್ಜಿಯು ಅಸಮರ್ಪಕವಾಗಿದೆ ಎಂದು ಹೇಳಿತ್ತು. ಯಶಸ್ವಿ ಬಿಡ್​ದಾರರಾದ ಟ್ಯಾಲೇಸ್ ಪ್ರೈವೇಟ್ ಲಿಮಿಟೆಡ್ ಸಂಪೂರ್ಣವಾಗಿ ಟಾಟಾ ಸನ್ಸ್ ಒಡೆತನದಲ್ಲಿದೆ ಮತ್ತು ಏರ್ ಏಷ್ಯಾಗೆ ಸಂಬಂಧಿಸಿಲ್ಲ ಎಂದು ಕೇಂದ್ರ ಸರ್ಕಾರ ವಾದಿಸಿತ್ತು.

ಇದನ್ನೂ ಓದಿ: ಏರ್ ಇಂಡಿಯಾದ ಎಲ್ಲ ಬಾಕಿ ಚುಕ್ತ ಮಾಡುವಂತೆ ಕೇಂದ್ರ ಸರ್ಕಾರದ ಇಲಾಖೆಗಳಿಗೆ ಸೂಚಿಸಿದ ಹಣಕಾಸು ಸಚಿವಾಲಯ

Air India ಏರ್ ಇಂಡಿಯಾ ಬಿಡ್ ಗೆದ್ದ ಟಾಟಾ ಸನ್ಸ್: ಮಾಧ್ಯಮ ವರದಿ ತಪ್ಪು ಎಂದ ಸರ್ಕಾರ

Published On - 1:02 pm, Thu, 6 January 22