K Kavitha Arrest: ದೆಹಲಿಯಲ್ಲಿ ಇಡಿ ಅಧಿಕಾರಿಗಳಿಂದ ಕೆಸಿಆರ್ ಪುತ್ರಿ ಕವಿತಾ ಬಂಧನ

ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಬಿಆರ್‌ಎಸ್ ಎಂಎಲ್‌ಸಿ ಹಾಗೂ ಕೆಸಿಆರ್ ಪುತ್ರಿ ಕೆ. ಕವಿತಾ ಅವರನ್ನು ಜಾರಿ ನಿರ್ದೇಶನಾಲಯ ಶುಕ್ರವಾರ ಬಂಧಿಸಿದೆ. ಇದಕ್ಕಿಂತ ಮುನ್ನ ಇಡಿ ಅಧಿಕಾರಿಗಳು ಹೈದರಾಬಾದ್​​ನಲ್ಲಿ ಕವಿತಾ ಅವರ ಮನೆ ಮೇಲೆ ದಾಳಿ ನಡೆಸಿದ್ದರು. ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿ ಇಡಿ ಸಮನ್ಸ್ ಗಳಿಗೆ ಕವಿತಾ ಗೈರಾದ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಈ ಕ್ರಮ ಕೈಗೊಂಡಿದೆ.

K Kavitha Arrest: ದೆಹಲಿಯಲ್ಲಿ ಇಡಿ ಅಧಿಕಾರಿಗಳಿಂದ ಕೆಸಿಆರ್ ಪುತ್ರಿ ಕವಿತಾ ಬಂಧನ
ರಶ್ಮಿ ಕಲ್ಲಕಟ್ಟ

Updated on: Mar 15, 2024 | 7:17 PM

ದೆಹಲಿ ಮಾರ್ಚ್ 15: ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ (Delhi liquor policy case) ಬಿಆರ್‌ಎಸ್ ಎಂಎಲ್‌ಸಿ ಹಾಗೂ ಕೆಸಿಆರ್ ಪುತ್ರಿ ಕೆ. ಕವಿತಾ (K kavitha) ಅವರನ್ನು ಜಾರಿ ನಿರ್ದೇಶನಾಲಯ (ED) ಶುಕ್ರವಾರ ಬಂಧಿಸಿದೆ. ಮೂಲಗಳ ಪ್ರಕಾರ ಕವಿತಾ ಅವರನ್ನು ಇಡಿ ದೆಹಲಿಗೆ ಕರೆತರುತ್ತಿದೆ. ಬಂಧನಕ್ಕೆ ಮುನ್ನ ಪ್ರಸ್ತುತ ಹಗರಣಕ್ಕೆ  ಸಂಬಂಧಿಸಿದಂತೆ ಹೈದರಾಬಾದ್‌ನಲ್ಲಿರುವ ಕವಿತಾ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಏಜೆನ್ಸಿ ನೀಡಿದ ಹಲವಾರು ಸಮನ್ಸ್‌ಗಳಿಗೆ ಗೈರು ಹಾಜರಾದ ನಂತರ ಇಡಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಕವಿತಾ ಅವರು ತೆಲಂಗಾಣದಲ್ಲಿ ವಿಧಾನ ಪರಿಷತ್ತಿನ (MLC) ಸದಸ್ಯರಾಗಿದ್ದಾರೆ. ಈಕೆ  ಭಾರತ್ ರಾಷ್ಟ್ರ ಸಮಿತಿ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿಯಾಗಿದ್ದಾರೆ. ಈ ಪ್ರಕರಣದಲ್ಲಿ ಕವಿತಾ ಅವರನ್ನು ಈ ಹಿಂದೆ ವಿಚಾರಣೆಗೊಳಪಡಿಸಿದ್ದರೂ, ಈ ವರ್ಷ ಅವರು  ಎರಡು ಸಮನ್ಸ್‌ಗಳಿಗೆ ಹಾಜರಾಗಿರಲಿಲ್ಲ.

ಬಂಜಾರ ಹಿಲ್ಸ್‌ನ ಆಕೆಯ ನಿವಾಸದಲ್ಲಿ ಇಡಿ ತಂಡ ಶೋಧ ನಡೆಸಿದ್ದರಿಂದ ಯಾರನ್ನೂ ಒಳಗೆ ಬಿಡಲಾಗುತ್ತಿಲ್ಲ. ಶೋಧ ಕಾರ್ಯ  ಯಾವಾಗ ಪ್ರಾರಂಭವಾಯಿತು ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ.  ಆದರೆ ಮಧ್ಯಾಹ್ನ ಆಕೆಯ ನಿವಾಸದಲ್ಲಿ ಇಡಿ ಅಧಿಕಾರಿಗಳ ಉಪಸ್ಥಿತಿಯ ಬಗ್ಗೆ  ಮಾಧ್ಯಮಗಳಿಗೆ ಗೊತ್ತಾಗಿದೆ.

ಬಿಆರ್​​ಎಸ್ ಕಾರ್ಯಕರ್ತರ ಪ್ರತಿಭಟನೆ

ಈ ಹಿಂದೆ ಮಾಜಿ ಸಂಸದೆ ಕವಿತಾ ಅವರನ್ನು ಇಡಿ ವಿಚಾರಣೆ ನಡೆಸಿತ್ತು. ಆದರೆ, ಸಮನ್ಸ್ ನೀಡಿದರೂ ಕಳೆದ ವರ್ಷ ಅಕ್ಟೋಬರ್‌ನಿಂದ ಆಕೆ ಏಜೆನ್ಸಿಯ ಮುಂದೆ ಹಾಜರಾಗಿರಲಿಲ್ಲ. ಮಹಿಳೆಯೊಬ್ಬರನ್ನು ಇಡಿ ತನ್ನ ಕಚೇರಿಗೆ ಕರೆಸಿರುವುದನ್ನು ಪ್ರಶ್ನಿಸಿ ಕವಿತಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಆಪಾದಿತ ದೆಹಲಿ ಮದ್ಯ ನೀತಿ ಹಗರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ‘ಸೌತ್ ಗ್ರೂಪ್’ ನ ಭಾಗವಾಗಿ ಕೆ. ಕವಿತಾ ಇದ್ದರು ಎಂದು ಇಡಿ ಆರೋಪಿಸಿದೆ. ಏಜೆನ್ಸಿ ಪ್ರಕಾರ, ಹೈದರಾಬಾದ್ ಉದ್ಯಮಿ ಶರತ್ ರೆಡ್ಡಿ, ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸಂಸದ ಮಾಗುಂಟ ಶ್ರೀನಿವಾಸಲು ರೆಡ್ಡಿ ಮತ್ತು ಅವರ ಮಗ ರಾಘವ್ ಮಾಗುಂಟ ರೆಡ್ಡಿ ಗುಂಪಿನ ಇತರ ಸದಸ್ಯರಾಗಿದ್ದಾರೆ.

45 ವರ್ಷದ ಬಿಆರ್‌ಎಸ್ ನಾಯಕ ಜನವರಿ 16 ರಂದು ಜಾರಿ ನಿರ್ದೇಶನಾಲಯದ ಮುಂದೆ ಹೊಸ ಸುತ್ತಿನ ವಿಚಾರಣೆಗೆ ಹಾಜರಾಗಲಿಲ್ಲ, ಈ ಪ್ರಕರಣದಲ್ಲಿ ಕವಿತಾ ಅವರನ್ನು ತನಿಖಾ ಸಂಸ್ಥೆಯು ಸಮನ್ಸ್ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲೇಖಿಸಿದೆ.  ಆದಾಗ್ಯೂ,ಬಿಆರ್‌ಎಸ್ ನಾಯಕಿ ಕಳೆದ ವರ್ಷ ಸುಪ್ರೀಂ ಕೋರ್ಟ್‌ನಿಂದ ತಾತ್ಕಾಲಿಕ ಪರಿಹಾರವನ್ನು ಪಡೆದಿದ್ದಾರೆ.ಆದರೆ  ಅದು ಈಗ ಮಾನ್ಯವಾಗಿಲ್ಲ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ಪಿಟಿಐಗೆ ತಿಳಿಸಿವೆೆ

ಇದಕ್ಕೂ ಮೊದಲು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಕವಿತಾ ಅವರನ್ನು ಮೂರು ಬಾರಿ  ವಿಚಾರಣೆ ನಡೆಸಿದ್ದು, ತನಿಖಾ ಸಂಸ್ಥೆಯು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಅವರ ಹೇಳಿಕೆಯನ್ನು ದಾಖಲಿಸಿತ್ತು.

ಇದನ್ನೂ ಓದಿ:  ಸಿಎಎ ಭಾರತದ ಆಂತರಿಕ ವಿಷಯ, ಅಮೆರಿಕ ಈ ಬಗ್ಗೆ ಹೇಳಿಕೆ ನೀಡುತ್ತಿರುವುದು ಅನಗತ್ಯ: ಎಂಇಎ

ಏತನ್ಮಧ್ಯೆ, ಕವಿತಾ ತಾನು ಯಾವುದೇ ತಪ್ಪು ಮಾಡಿಲ್ಲ. ತೆಲಂಗಾಣಕ್ಕೆ ‘ಹಿಂಬಾಗಿಲು’ ಪ್ರವೇಶ ಪಡೆಯುವ ಸಲುವಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕೇಂದ್ರೀಯ ಸಂಸ್ಥೆಗಳನ್ನು ‘ದುರುಪಯೋಗ’ ಮಾಡಿದೆ ಎಂದು ಆರೋಪಿಸಿದ್ದಾರೆ.

ಇದೀಗ ರದ್ದುಗೊಂಡಿರುವ ದೆಹಲಿ ಮದ್ಯ ನೀತಿ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಅಮಿತ್ ಅರೋರಾ ಅವರು ವಿಚಾರಣೆಯ ಸಮಯದಲ್ಲಿ ಕೆ ಕವಿತಾ ಅವರನ್ನು ಹೆಸರಿಸಿದ್ದರು. “ಸೌತ್ ಗ್ರೂಪ್” ಎಂಬ ಮದ್ಯದ ಲಾಬಿ ಇದೆ. ಇದು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರಿಗೆ 100 ಕೋಟಿ ರೂ. ಕಿಕ್ ಬ್ಯಾಕ್ ನೀಡಿದೆ ಎಂದು ಆರೋಪಿ ವಿಜಯ್ ನಾಯರ್  ಆರೋಪಿಸಿದ್ದಾರೆ. “ಸೌತ್ ಗ್ರೂಪ್” ನ ಹ್ಯಾಂಡ್ಲರ್ ಕೆ ಕವಿತಾ ಅವರ ವ್ಯವಹಾರ ಸಹವರ್ತಿ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.

ಇದೇ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ತನಿಖಾ ಸಂಸ್ಥೆ ಹಲವು ಬಾರಿ ಸಮನ್ಸ್ ಜಾರಿ ಮಾಡಿದೆ. ಆದರೆ, ಕೇಜ್ರಿವಾಲ್ ಅವರು ತಮ್ಮ ವಿರುದ್ಧ ನೀಡಲಾದ ಎಲ್ಲಾ ಎಂಟು ಸಮನ್ಸ್‌ಗಳಿಗೆ ಗೈರಾಗಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:14 pm, Fri, 15 March 24

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us