ಕಾಂಗ್ರೆಸ್​​ ಜೊತೆಗಿನ ಮದುವೆ ಹಿಂಸಾತ್ಮಕವಾಗಿದ್ದರಿಂದ ವಿಚ್ಚೇದನ: ಖರ್ಗೆ ಹೇಳಿಕೆಗೆ ದೇವೇಗೌಡರ ಕೌಂಟರ್​

ಮಲ್ಲಿಕಾರ್ಜುನ ಖರ್ಗೆಯವರ ಹಾಸ್ಯಭರಿತ ಹೇಳಿಕೆಗೆ ದೇವೇಗೌಡರು ಪ್ರತ್ಯುತ್ತರ ನೀಡಿದ್ದಾರೆ. ಪ್ರಧಾನಿ ಮೋದಿ ಜೊತೆ ಮದುವೆಯಾಗಿದ್ದಾರೆಂಬ ಖರ್ಗೆ ಮಾತುಗಳಿಗೆ ಉತ್ತರಿಸಿರುವ ಅವರು, ಹೆಚ್ಚು ಸ್ಥಿರವಾದ ಮೈತ್ರಿ ಹುಡುಕುವುದನ್ನು ಹೊರತುಪಡಿಸಿ ಬೇರೆ ಆಯ್ಕೆ ಇರಲಿಲ್ಲ. ಕಾಂಗ್ರೆಸ್ ಜೊತೆಗಿನ ಸಂಬಂಧವು ಬಲವಂತದ, ಹಿಂಸಾತ್ಮಕ ಮದುವೆಯಾಗಿದ್ದರಿಂದ ವಿಚ್ಛೇದನ ಪಡೆಯಬೇಕಾಯಿತು ಎಂದು ಸ್ಪಷ್ಟಪಡಿಸಿದ್ದಾರೆ. 

ಕಾಂಗ್ರೆಸ್​​ ಜೊತೆಗಿನ ಮದುವೆ ಹಿಂಸಾತ್ಮಕವಾಗಿದ್ದರಿಂದ ವಿಚ್ಚೇದನ: ಖರ್ಗೆ ಹೇಳಿಕೆಗೆ ದೇವೇಗೌಡರ ಕೌಂಟರ್​
ಖರ್ಗೆ ಹೇಳಿಕೆಗೆ ಪ್ರತ್ಯುತ್ತರ ನೀಡಿದ ದೇವೇಗೌಡರು.
Image Credit source: Google

Updated on: Mar 18, 2026 | 7:35 PM

ನವದೆಹಲಿ, ಮಾರ್ಚ್​ 18: ನಿವೃತ್ತಿ ಹೊಂದುತ್ತಿರುವ ಸದಸ್ಯರಿಗೆ ರಾಜ್ಯಸಭೆಯಲ್ಲಿ ಆಯೋಜಿಸಿದ ಬೀಳ್ಕೊಡುಗೆ ಸಮಾರಂಭದ ವೇಳೆ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡರನ್ನು ಉದ್ದೇಶಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಡಿದ್ದ ಹಾಸ್ಯಮಯ ಮಾತಿಗೆ ಅದೇ ಶೈಲಿಯಲ್ಲಿ ದೊಡ್ಡಗೌಡರೀಗ ಉತ್ತರ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಜೊತೆಗಿನ ದೇವೇಗೌಡರ ಸಂಬಂಧದ ಬಗ್ಗೆ ತಿಳಿಸಿ ಹಾಸ್ಯ ಮತ್ತು ವ್ಯಂಗ್ಯಭರಿತವಾಗಿ ಮಾತನಾಡಿದ್ದ ಖರ್ಗೆ, ನಾನು ಅವರನ್ನು 54 ವರ್ಷಗಳಿಂದ ಬಲ್ಲೆ ಮತ್ತು ಅವರೊಂದಿಗೆ ಕೆಲಸ ಮಾಡಿದ್ದೇನೆ. ಆದರೆ ಆ ನಂತರ ಏನಾಯಿತು ಎಂಬುದು ನನಗೆ ತಿಳಿದಿಲ್ಲ. ಅವರು ನಮ್ಮನ್ನು ಪ್ರೀತಿಸಿದರು, ಆದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ವಿವಾಹವಾದರು ಎಂದಿದ್ದರು. ಇದಕ್ಕೆ ಈಗ ದೇವೇಗೌಡರು ಉತ್ತರಿಸಿದ್ದು, ನಾನು ಕಾಂಗ್ರೆಸ್ ಜೊತೆ ಬಲವಂತದ ಮದುವೆಯಲ್ಲಿದ್ದೆ. ಹೀಗಾಗಿ ವಿಚ್ಛೇದನ ಮಾಡಬೇಕಾಯಿತು ಎಂದಿದ್ದಾರೆ.

ದೇವೇಗೌಡರು ಹೇಳಿದ್ದೇನು?

ನಾನು ಕಾಂಗ್ರೆಸ್ ಜೊತೆ ಪ್ರೇಮದಲ್ಲಿದ್ದೆ. ಆದರೆ ಕೊನೆಯಲ್ಲಿ ಮೋದಿ (ಬಿಜೆಪಿ) ಅವರನ್ನು ಮದುವೆಯಾದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಸಂಸತ್ತಿನಲ್ಲಿ ಹಾಸ್ಯಮಿಶ್ರಿತವಾಗಿ ಹೇಳಿದ್ದಾರೆ. ನಾನು ಏಕೆ ಹಾಗೆ ಮಾಡಿದೆ ಎಂಬುದು ಅವರಿಗೆ ಗೊತ್ತಿಲ್ಲ ಎಂದೂ ತಿಳಿಸಿದ್ದಾರೆ. ನಾಳೆಯ ಯುಗಾದಿ ಆಚರಣೆಗಾಗಿ ಬೆಂಗಳೂರಿಗೆ ಬರಬೇಕಾಗಿದ್ದರಿಂದ ಅವರು ಮಾತನಾಡಿದಾಗ ನಾನು ಸದನದಲ್ಲಿರಲಿಲ್ಲ. ನನ್ನ ಸ್ನೇಹಿತನ ಮಾತಿಗೆ ಅದೇ ಮದುವೆ ಭಾಷೆಯಲ್ಲಿ ಉತ್ತರಿಸಬೇಕೆಂದರೆ, ನಾನು ಕಾಂಗ್ರೆಸ್ ಜೊತೆ ಬಲವಂತದ ಮದುವೆಯಲ್ಲಿದ್ದೆ. ಆದರೆ ಅದು ಹಿಂಸಾತ್ಮಕ ಸಂಬಂಧವಾಗಿದ್ದರಿಂದ ನಾನು ಅವರನ್ನು ವಿಚ್ಛೇದನ ಮಾಡಬೇಕಾಯಿತು ಎಂದು ಹೇಳಲು ಇಷ್ಟಪಡುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ದೇವೇಗೌಡರು ನಮ್ಮನ್ನು ಪ್ರೇಮಿಸಿದರು, ಮೋದಿ ಜತೆ ಮದುವೆಯಾದರು! ಮಲ್ಲಿಕಾರ್ಜುನ ಖರ್ಗೆ ಹೀಗಂದಾಗ ಮೋದಿ ರಿಯಾಕ್ಷನ್ ಹೇಗಿತ್ತು ನೋಡಿ

2018ರಲ್ಲಿ ಕಾಂಗ್ರೆಸ್ ಗುಲಾಂ ನಬಿ ಆಜಾದ್ ಅವರನ್ನು ಕಳುಹಿಸಿ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಮುಂದಾಗಿದ್ದಿದ್ದು ಖರ್ಗೆ ಅವರಿಗೆ ನೆನಪಿರಬಹುದು. ನಾನು ಇದಕ್ಕೆ ಒಪ್ಪಿರಲಿಲ್ಲ. ಎಲ್ಲರ ಸಮ್ಮುಖದಲ್ಲೇ ಖರ್ಗೆ ಅವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕು ಎಂದು ನಾನು ಹೇಳಿದ್ದೆ. ಸಿದ್ದರಾಮಯ್ಯ ಕೂಡ ಅಲ್ಲಿ ಇದ್ದರು. ಆದರೂ ಆಜಾದ್ ಅವರು ಕುಮಾರಸ್ವಾಮಿ ಅವರ ನೇತೃತ್ವವನ್ನೇ ಒತ್ತಾಯಿಸಿದರು. ಆದರೆ ಈ ಎಲ್ಲಾ ಹಾಡು-ನೃತ್ಯ ಮತ್ತು ಮದುವೆ ಬಳಿಕ 2019ರಲ್ಲಿ ಏನಾಯಿತು? ಅವರು ನಮ್ಮನ್ನು ಬಿಟ್ಟುಬಿಟ್ಟರು. ಕಾಂಗ್ರೆಸ್‌ನ ಎಷ್ಟು ಶಾಸಕರು ಬಿಜೆಪಿ ಕಡೆಗೆ ಹೋದರು? ಅವರನ್ನು ಯಾರು ಕಳುಹಿಸಿದರು ಎಂಬುದು ಈಗ ಎಲ್ಲರಿಗೂ ತಿಳಿದ ವಿಷಯ. ಆ ದಿನ ಪಕ್ಷತ್ಯಾಗಕ್ಕೆ ಪ್ರೇರೇಪಿಸಿದವರ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಂಡಿದ್ದರೆ, ಇಂದು ನನ್ನ ಸ್ನೇಹಿತ ಖರ್ಗೆ ಅವರು ಇನ್ನಷ್ಟು ಉತ್ತಮ ಸ್ಥಾನದಲ್ಲಿರುತ್ತಿದ್ದರು. ಹೀಗಾಗಿ ದಾಖಲೆಯನ್ನು ಸರಿಪಡಿಸಲು ಹೇಳುವುದಾದರೆ, ನಾನು ಕಾಂಗ್ರೆಸ್ ಮೈತ್ರಿಯನ್ನು ಬಿಟ್ಟದ್ದಲ್ಲ. ಅವರೇ ದೂರ ನಡೆದರು. ನನಗೆ ವಿಚ್ಛೇದನ ಮಾಡಿ, ಹೆಚ್ಚು ಸ್ಥಿರವಾದ ಮೈತ್ರಿ ಹುಡುಕುವುದನ್ನು ಹೊರತುಪಡಿಸಿ ಬೇರೆ ಆಯ್ಕೆ ಇರಲಿಲ್ಲ ಎಂದು ದೇವೇಗೌಡರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 7:33 pm, Wed, 18 March 26

Follow Us