ಪ್ರಧಾನಿ ಮೋದಿ ಕುರಿತ ಹೇಳಿಕೆಗೆ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕು; ಧರ್ಮೇಂದ್ರ ಪ್ರಧಾನ್ ಒತ್ತಾಯ

ಬಿಹಾರದ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆ ಸನಾತನ ಸಂಸ್ಕೃತಿಯ ಬಗೆಗಿನ ಅವರ ದ್ವೇಷವನ್ನು ಪ್ರತಿಬಿಂಬಿಸುತ್ತದೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್‌ನ ಅಸಮಾಧಾನ ಮತ್ತು ಹತಾಶೆಯನ್ನು ಬಹಿರಂಗಪಡಿಸುತ್ತದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಪ್ರಧಾನಿ ಮೋದಿ ಕುರಿತ ಹೇಳಿಕೆಗೆ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕು; ಧರ್ಮೇಂದ್ರ ಪ್ರಧಾನ್ ಒತ್ತಾಯ
Dharmendra Pradhan

Updated on: Oct 29, 2025 | 8:41 PM

ನವದೆಹಲಿ, ಅಕ್ಟೋಬರ್ 29: ಪ್ರಧಾನಿ ಮೋದಿ ಕುರಿತ ರಾಹುಲ್ ಗಾಂಧಿಯ (Rahul Gandhi) ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಹಾರ ಚುನಾವಣೆಯ ಬಿಜೆಪಿ ಉಸ್ತುವಾರಿ ಹಾಗೂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಈ ಹೇಳಿಕೆಗೆ ರಾಹುಲ್ ಗಾಂಧಿ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ರಾಹುಲ್ ಅವರ ಹೇಳಿಕೆಗಳು ಸಾರ್ವಜನಿಕ ಭಾಷಣದಲ್ಲಿ ನಾಗರಿಕತೆಯ ಮೂಲಭೂತ ಮಾನದಂಡಗಳಿಗೆ ವಿರುದ್ಧವಾಗಿವೆ ಎಂದು ಅವರು ಹೇಳಿದ್ದಾರೆ. ಪ್ರಧಾನಿ ಮೋದಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

“ಛತ್ ಮಹಾ ಉತ್ಸವದ ಕುರಿತಾದ ಅವಮಾನಕರ ಹೇಳಿಕೆ ಮತ್ತು ಮೋದಿಯ ಕುರಿತ ಅವಮಾನಕರ ಹೇಳಿಕೆಗಾಗಿ ರಾಹುಲ್ ಗಾಂಧಿ ಬಿಹಾರದ ಜನರು ಮತ್ತು ದೇಶದ ಕ್ಷಮೆಯಾಚಿಸಬೇಕು. ಅವರು ಸಭ್ಯತೆಯ ಎಲ್ಲಾ ಮಿತಿಗಳನ್ನು ಮೀರಿದ್ದಾರೆ” ಎಂದು ಧರ್ಮೇಂದ್ರ ಪ್ರಧಾನ್ ಟೀಕಿಸಿದ್ದಾರೆ.


ರಾಹುಲ್ ಗಾಂಧಿಯವರ ಹೇಳಿಕೆ ಸನಾತನ ಸಂಸ್ಕೃತಿಯ ಬಗೆಗಿನ ಅವರ ದ್ವೇಷವನ್ನು ಪ್ರತಿಬಿಂಬಿಸುತ್ತದೆ, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್‌ನ ಆಳವಾದ ಅಸಮಾಧಾನ ಮತ್ತು ಹತಾಶೆಯನ್ನು ಬಹಿರಂಗಪಡಿಸುತ್ತದೆ. ರಾಹುಲ್ ಗಾಂಧಿ ತಮ್ಮ ಊಳಿಗಮಾನ್ಯ ಮನಸ್ಥಿತಿ, ರಾಜಕೀಯ ಹತಾಶೆ ಮತ್ತು ಸೋಲಿನ ಭಯದಿಂದ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಲೋಕಲ್ ಗೂಂಡಾ ರೀತಿ ಮಾತಾಡ್ತಾರೆ; ಮೋದಿಯ ಅವಹೇಳನಕ್ಕೆ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ

“ಈ ಹಿಂದೆ ಪ್ರಧಾನಿ ಮೋದಿ ಮತ್ತು ಅವರ ಪೂಜ್ಯ ತಾಯಿಯ ವಿರುದ್ಧ ಕೂಡ ಕಾಂಗ್ರೆಸ್ ನಾಯಕರು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ರಾಹುಲ್ ಗಾಂಧಿ, ತೇಜಸ್ವಿ ಯಾದವ್ ಮತ್ತು ಅವರ ಮಹಾ ಮೈತ್ರಿಕೂಟವು ಯಾವಾಗಲೂ ಬಿಹಾರದ ಬಡವರು, ರೈತರು, ಮಹಿಳೆಯರು ಮತ್ತು ಯುವಕರ ಆಕಾಂಕ್ಷೆಗಳನ್ನು ಹತ್ತಿಕ್ಕಲು ಕೆಲಸ ಮಾಡುತ್ತಾ ಜಂಗಲ್ ರಾಜ್ ಅನ್ನು ಉತ್ತೇಜಿಸುತ್ತಿದೆ. ಸ್ಪಷ್ಟವಾದ ಸೋಲಿನಿಂದ ಹತಾಶೆಗೊಂಡ ಈ ನಾಯಕರು ಇಂತಹ ಅಸಭ್ಯ ಭಾಷೆಯನ್ನು ಬಳಸುತ್ತಿದ್ದಾರೆ ಎಂದು ಧರ್ಮೇಂದ್ರ ಪ್ರಧಾನ್ ಆಕ್ರೋಶ ಹೊರಹಾಕಿದ್ದಾರೆ.


ಬಿಹಾರದ ಪವಿತ್ರ ಭೂಮಿಯಿಂದ ಜನಪ್ರಿಯ ನಂಬಿಕೆಯ ಹಬ್ಬವಾದ ಛತ್‌ಗೆ ರಾಹುಲ್ ಗಾಂಧಿಯವರು ಮಾಡಿದ ಅವಮಾನವು ಲಕ್ಷಾಂತರ ಭಕ್ತರ ಭಾವನೆಗಳನ್ನು ತೀವ್ರವಾಗಿ ನೋಯಿಸುತ್ತದೆ. ರಾಹುಲ್ ಗಾಂಧಿಯವರ ಹೇಳಿಕೆಯು ಸನಾತನ ಸಂಸ್ಕೃತಿಯ ಮೇಲಿನ ಅವರ ದ್ವೇಷವನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಮತಕ್ಕಾಗಿ ಮೋದಿ ಡ್ಯಾನ್ಸ್ ಬೇಕಿದ್ರೂ ಮಾಡುತ್ತಾರೆ; ಬಿಹಾರದಲ್ಲಿ ರಾಹುಲ್ ಗಾಂಧಿ ಲೇವಡಿ

ರಾಹುಲ್ ಗಾಂಧಿ ಹೇಳಿದ್ದೇನು?:

ರಾಹುಲ್ ಗಾಂಧಿ ಇಂದು ಬಿಹಾರದಲ್ಲಿ ಚುನಾವಣಾ ಪ್ರಚಾರವನ್ನು ಮಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟಾರ್ಗೆಟ್ ಮಾಡಿಕೊಂಡು ಕೆಲವು ಹೇಳಿಕೆಗಳನ್ನು ನೀಡಿದ್ದರು. “ಪ್ರಧಾನಿ ಮೋದಿಯವರಿಗೆ ನಿಮ್ಮ ಮತ ಮಾತ್ರ ಬೇಕು. ನೀವೇನಾದರೂ ಮತಗಳಿಗಾಗಿ ಬದಲಾಗಿ ಡ್ಯಾನ್ಸ್ ಮಾಡಲು ಹೇಳಿದರೆ ಮೋದಿ ವೇದಿಕೆಯಲ್ಲಿ ನೃತ್ಯ ಕೂಡ ಮಾಡುತ್ತಾರೆ” ಎಂದು ರಾಹುಲ್ ಗಾಂಧಿ ಹೇಳಿದ್ದರು.

ಛತ್ ಪೂಜೆಯ ಬಗ್ಗೆಯೂ ಮಾತನಾಡಿದ್ದ ರಾಹುಲ್ ಗಾಂಧಿ ದೆಹಲಿಯ ಕಲುಷಿತ ಯಮುನಾ ನದಿಯಲ್ಲಿ ಭಕ್ತರು ಮುಳುಗಿ ಪ್ರಾರ್ಥಿಸುತ್ತಾರೆ. ಆದರೆ, ಪ್ರಧಾನಿ ಮೋದಿ ತಮಗಾಗಿ ವಿಶೇಷವಾಗಿ ನಿರ್ಮಿಸಲಾದ ಸ್ವಿಮ್ಮಿಂಗ್ ಪೂಲ್​ನಲ್ಲಿ ಸ್ನಾನ ಮಾಡಿ ಪೂಜೆ ಆಚರಿಸುತ್ತಾರೆ. ಅವರಿಗೆ ಜನರ ಮತಗಳಷ್ಟೇ ಬೇಕು ಎಂದಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ