5 ಗಂಟೆಗಳ ಕಾಲ ನಡೆದ ಮೂರನೇ ಸುತ್ತಿನ ಮಾತುಕತೆ; ಕೇಂದ್ರ ಮತ್ತು ರೈತರ ನಡುವೆ ಮೂಡಿಲ್ಲ ಒಮ್ಮತ

ಸಭೆಯಲ್ಲಿ ನಾವು ಸಂವಾದಕ್ಕೆ ನಮ್ಮ ಬದ್ಧತೆಯನ್ನು ನೀಡಿದ್ದೇವೆ ಆದರೆ ನಮ್ಮ ಪ್ರತಿಭಟನಾ ನಿರತ ರೈತರ ಮೇಲೆ ಪೊಲೀಸ್ ಬಲಪ್ರಯೋಗದ ವಿರುದ್ಧ ತೀವ್ರವಾಗಿ ಆಕ್ಷೇಪಿಸಿದ್ದೇವೆ. ನಾವು ಪಾಕಿಸ್ತಾನದವರಲ್ಲ ನಮಗೆ ಪರಿಹಾರ ಬೇಕು, ಮುಖಾಮುಖಿ ಅಲ್ಲ ಎಂದು ಕೇಂದ್ರ ಸಚಿವರಿಗೆ ಹೇಳಿರುವುದಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಿಸಾನ್ ಮಜ್ದೂರ್ ಮೋರ್ಚಾದ ನಾಯಕ ಸರ್ವಾನ್ ಸಿಂಗ್ ಪಂಧೇರ್ ಹೇಳಿದ್ದಾರೆ.

5 ಗಂಟೆಗಳ ಕಾಲ ನಡೆದ ಮೂರನೇ ಸುತ್ತಿನ ಮಾತುಕತೆ; ಕೇಂದ್ರ ಮತ್ತು ರೈತರ ನಡುವೆ ಮೂಡಿಲ್ಲ ಒಮ್ಮತ
ಶಂಭುಗಡಿಯಲ್ಲಿ ಸೇರಿರುವ ರೈತರು
ರಶ್ಮಿ ಕಲ್ಲಕಟ್ಟ

Updated on: Feb 16, 2024 | 1:03 PM

ಚಂಡೀಗಢ ಫೆಬ್ರುವರಿ 16: ಚಂಡೀಗಢದಲ್ಲಿ (Chandigarh) ಕೇಂದ್ರ ಸಚಿವರು ಮತ್ತು ರೈತ ಮುಖಂಡರ(Farmers) ನಡುವೆ ಗುರುವಾರ ಸಂಜೆ ಸುಮಾರು 5 ಗಂಟೆಗಳ ಕಾಲ ಮಾತುಕತೆ ನಡೆದಿದ್ದು ಒಮ್ಮತ ಮೂಡಿಲ್ಲ. ಆದಾಗ್ಯೂ, ಹಲವು ಅಂಶಗಳ ಬಗ್ಗೆ ಮಾತುಕತೆಗಳನ್ನು ಮುಂದಕ್ಕೆ ಕೊಂಡೊಯ್ಯುವ ಸೂಚನೆಗಳು ಕಂಡುಬಂದಿದ್ದು ಮಾತುಕತೆಗಳು ಸಕಾರಾತ್ಮಕವಾಗಿವೆ ಎಂದು ಹೇಳಲಾಗಿದೆ.ಫೆಬ್ರುವರಿ 18 ಭಾನುವಾರ ಮತ್ತೊಂದು ಸಭೆ ನಡೆಯಲಿದೆ. ಭಾನುವಾರದ ಸಭೆಯವರೆಗೂ ರೈತರು ಶಂಭು ಗಡಿಯಲ್ಲಿ (Shambhu border) ಮುಂದೆ ಹೋಗುವುದಿಲ್ಲ. ಅದೇ ಸಮಯದಲ್ಲಿ, ಹರ್ಯಾಣ ಪೊಲೀಸರು ಮತ್ತು ಅರೆಸೇನಾ ಪಡೆ ಕೂಡ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದೆ.

ರೈತರೊಂದಿಗೆ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಅರ್ಜುನ್ ಮುಂಡಾ ಮಾತನಾಡಿ, ಉತ್ತಮ ವಾತಾವರಣದಲ್ಲಿ ಸಕಾರಾತ್ಮಕ ಚರ್ಚೆ ನಡೆದಿದ್ದು, ರೈತ ಸಂಘಟನೆಗಳು ಗಮನ ಸೆಳೆದಿರುವ ವಿಚಾರಗಳನ್ನು ಪರಿಗಣಿಸಿ ಮುಂದಿನ ದಿನಾಂಕದಂದು ವಿಸ್ತೃತ ಚರ್ಚೆ ನಡೆಸಲಾಗುವುದು. ಅಂದರೆ ಭಾನುವಾರ ಸಂಜೆ 6 ಗಂಟೆಗೆ ಚರ್ಚೆಯನ್ನು ಮುಂದುವರಿಸುತ್ತೇವೆ ಎಂದಿದ್ದಾರೆ. ಈ ಸಭೆಯಲ್ಲಿ ಅರ್ಜುನ್ ಮುಂಡಾ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಉಪಸ್ಥಿತರಿದ್ದರು. ಇದಲ್ಲದೇ ಪಂಜಾಬ್ ಸಿಎಂ ಭಗವಂತ್ ಮಾನ್ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯಲ್ಲಿ ಹಲವು ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು ಎಂದು ಪಂಜಾಬ್ ಸಿಎಂ ಭಗವಂತ್ ಮಾನ್ ಹೇಳಿದ್ದಾರೆ. ಪಂಜಾಬ್‌ನ ರೈತರು  ತುಂಬಾ ತೊಂದರೆಗೀಡಾಗಿದ್ದಾರೆ. ಆದ್ದರಿಂದ, ರಾಜ್ಯದ ಮುಖ್ಯಸ್ಥನಾಗಿ, ಈ ಸಭೆಯಲ್ಲಿ ಅವರ ಪರವಾಗಿ ವಾದ ಮಂಡಿಸುವುದು ನನ್ನ ಕರ್ತವ್ಯವಾಗಿತ್ತು. ಸಭೆಯಲ್ಲಿ ಎಲ್ಲ ವಿಷಯಗಳ ಬಗ್ಗೆ ಸಕಾರಾತ್ಮಕ ಚರ್ಚೆಗಳು ನಡೆದವು. ನಾವು ಸಭೆಯಲ್ಲಿ ಪಂಜಾಬ್ ಸರ್ಕಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿದ್ದೇವೆ, ವಿಶೇಷವಾಗಿ ನಮ್ಮ ಮೂರು ಜಿಲ್ಲೆಗಳಲ್ಲಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ನಾವು ಪ್ರಶ್ನಿಸಿದ್ದೇವೆ. ಮಕ್ಕಳಿಗೆ ಪರೀಕ್ಷೆಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಅವರು ಆನ್‌ಲೈನ್‌ನಲ್ಲಿ ಅಧ್ಯಯನ ಮಾಡಲು ಕಷ್ಟಪಡುತ್ತಿದ್ದಾರೆ. ರೈತರು ಗಡಿಯಲ್ಲಿ ಕುಳಿತಿದ್ದಾರೆ, ಹಾಗಾದರೆ ನಮ್ಮ ಪ್ರದೇಶಗಳಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸುವ ಅವಶ್ಯಕತೆ ಏನಿತ್ತು? ಎಂದು ನಾವು ಸಭೆಯಲ್ಲಿ ಕೇಳಿದ್ದೇವೆ ಎಂದು ಮಾನ್ ಹೇಳಿದ್ದಾರೆ.

ಪಂಜಾಬ್ ಗಡಿಯಲ್ಲಿ ನಮ್ಮ ರೈತರ ಮೇಲೆ ಡ್ರೋನ್‌ಗಳಿಂದ ಅಶ್ರುವಾಯು ಶೆಲ್‌ಗಳನ್ನು ಹಾರಿಸುವುದಕ್ಕೆ ನಾವು ಆಕ್ಷೇಪಣೆ ಸಲ್ಲಿಸಿದ್ದೇವೆ ಎಂದು ಪಂಜಾಬ್ ಸಿಎಂ ಹೇಳಿದರು. ನಮ್ಮ ರೈತರನ್ನು ಅನ್ಯರು ಎಂಬಂತೆ ನಡೆಸಿಕೊಳ್ಳಬಾರದು. ಮುಂದಿನ ಸಭೆ ಭಾನುವಾರ ನಡೆಯಲಿದೆ. ರಾಜ್ಯದ ಮುಖ್ಯಸ್ಥನಾಗಿ ನಾನು ಪಂಜಾಬ್‌ನ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಸಭೆಯನ್ನು ಆಯೋಜಿಸಿದ್ದೇನೆ. ಇಬ್ಬರ ನಡುವಿನ ಮಾತುಕತೆಯನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದೇನೆ. ಇಂದು (ಗುರುವಾರ) ನಡೆದ ಮಾತುಕತೆ ಅತ್ಯಂತ ಸಕಾರಾತ್ಮಕವಾಗಿದ್ದು, ಭಾನುವಾರದ ಮಾತುಕತೆಯೂ ಸಕಾರಾತ್ಮಕವಾಗಿರಬಹುದು ಎಂದು ನಿರೀಕ್ಷಿಸಲಾಗಿದೆ.

ಎಂಎಸ್‌ಪಿ, ನಕಲಿ ಬೀಜಗಳು ಮತ್ತು ಕೀಟನಾಶಕಗಳನ್ನು ಮಾರಾಟ ವಿಚಾರ

ಲಖೀಂಪುರ ಖೇರಿಯ ಗಾಯಾಳುಗಳಿಗೆ ಪರಿಹಾರ, ರೈತರ ವಿರುದ್ಧ ದಾಖಲಾದ ಪ್ರಕರಣಗಳು ಮತ್ತು ಎಂಎಸ್‌ಪಿ ಸೇರಿದಂತೆ ಇತರ ಎಲ್ಲ ವಿಷಯಗಳ ಬಗ್ಗೆ ಸಕಾರಾತ್ಮಕ ಚರ್ಚೆ ನಡೆದಿದೆ ಎಂದು ಮಾನ್ ಹೇಳಿದ್ದಾರೆ. ನಾನು ಪಂಜಾಬ್‌ನಲ್ಲಿ ನಕಲಿ ಬೀಜಗಳು ಮತ್ತು ಕೀಟನಾಶಕಗಳ ಮಾರಾಟದ ವಿಷಯವನ್ನು ಪ್ರಸ್ತಾಪಿಸಿದೆ. ಹಲವು ವರ್ಷಗಳ ಹಿಂದೆ ವಿದೇಶದಲ್ಲಿ ನಿಷೇಧಕ್ಕೊಳಗಾದ ಔಷಧಗಳು ಈಗಲೂ ಪಂಜಾಬ್‌ನಲ್ಲಿ ಮಾರಾಟವಾಗುತ್ತಿವೆ. ನಾವು ವಿತರಕರನ್ನು ಹಿಡಿಯುತ್ತೇವೆ ಆದರೆ ಔಷಧ ತಯಾರಕರು ಕಾನೂನಿನಿಂದ ದೂರವಿರುತ್ತಾರೆ ಎಂದು ಮಾನ್ ಕೇಂದ್ರ ಸಚಿವರ ಜತೆಗಿನ ಸಭೆಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿಇಂದು ಗ್ರಾಮೀಣ ಭಾರತ್ ಬಂದ್: ಕರ್ನಾಟಕದಲ್ಲಿ ಏನೇನಿರುತ್ತೆ, ಏನಿರಲ್ಲ? ಇಲ್ಲಿದೆ ಮಾಹಿತಿ

ನಮಗೆ ಪರಿಹಾರ ಬೇಕು, ಮುಖಾಮುಖಿ ಅಲ್ಲ

ಮಧ್ಯರಾತ್ರಿ 1.30 ರವರೆಗೆ ಆರು ಗಂಟೆಗಳ ಕಾಲ ನಡೆದ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕಿಸಾನ್ ಮಜ್ದೂರ್ ಮೋರ್ಚಾದ ನಾಯಕ ಸರ್ವಾನ್ ಸಿಂಗ್ ಪಂಧೇರ್, “ಸಭೆಯಲ್ಲಿ ನಾವು ಸಂವಾದಕ್ಕೆ ನಮ್ಮ ಬದ್ಧತೆಯನ್ನು ನೀಡಿದ್ದೇವೆ ಆದರೆ ನಮ್ಮ ಪ್ರತಿಭಟನಾ ನಿರತ ರೈತರ ಮೇಲೆ ಪೊಲೀಸ್ ಬಲಪ್ರಯೋಗದ ವಿರುದ್ಧ ತೀವ್ರವಾಗಿ ಆಕ್ಷೇಪಿಸಿದ್ದೇವೆ. ನಾವು ಪಾಕಿಸ್ತಾನದವರಲ್ಲ ನಮಗೆ ಪರಿಹಾರ ಬೇಕು, ಮುಖಾಮುಖಿ ಅಲ್ಲ ಎಂದು ಕೇಂದ್ರ ಸಚಿವರಿಗೆ ಹೇಳಿದ್ದೇವೆ.

ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾದ (ರಾಜಕೀಯೇತರ) ಸಂಚಾಲಕ ಜಗಜಿತ್ ಸಿಂಗ್ ದಲ್ಲೆವಾಲ್ ಸುದ್ದಿಗಾರರೊಂದಿಗೆ ಮಾತನಾಡಿ, ರೈತರು ದೆಹಲಿಗೆ ಮೆರವಣಿಗೆ ಮಾಡಲು ಸಂಪೂರ್ಣವಾಗಿ ನಿರ್ಧರಿಸಿದ್ದರೆ, ಭಾನುವಾರದ ಸಭೆಯ ಫಲಿತಾಂಶಕ್ಕಾಗಿ ಅವರು ಕಾಯುತ್ತಾರೆ.

“ಆ ದಿನ ಮಾತುಕತೆ ವಿಫಲವಾದರೆ, ನಾವು ಮುಂದುವರಿಯುತ್ತೇವೆ. ಆದರೆ ಅಲ್ಲಿಯವರೆಗೆ ನಾವು ಯಥಾಸ್ಥಿತಿಯನ್ನು ಕಾಯ್ದುಕೊಳ್ಳುತ್ತೇವೆ. ಭದ್ರತಾ ಪಡೆಗಳು ಸಂಯಮವನ್ನು ಅಳವಡಿಸಿಕೊಳ್ಳಬೇಕೆಂದು ನಿರೀಕ್ಷಿಸುತ್ತೇವೆ . ನಮ್ಮ ರೈತರು ಕ್ಯಾಂಪ್ ಮಾಡುತ್ತಿರುವ ಶಂಭು ತಡೆಗೋಡೆಯಲ್ಲಿ ಯಾವುದೇ ಶೆಲ್ ದಾಳಿ ನಡೆಯಬಾರದು ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us