Maharashtra Floor Test Result 2022: ವಿಶ್ವಾಸಮತಯಾಚನೆಯಲ್ಲಿ ಗೆದ್ದು ಬೀಗಿದ ಏಕನಾಥ್ ಶಿಂಧೆ; ಸಿಎಂಗೆ 164 ಶಾಸಕರ ಬೆಂಬಲ

| Updated By: Digi Tech Desk

Updated on: Jul 04, 2022 | 12:02 PM

Eknath Shinde Floor Test: ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Maharashtra Floor Test Result 2022: ವಿಶ್ವಾಸಮತಯಾಚನೆಯಲ್ಲಿ ಗೆದ್ದು ಬೀಗಿದ ಏಕನಾಥ್ ಶಿಂಧೆ; ಸಿಎಂಗೆ 164 ಶಾಸಕರ ಬೆಂಬಲ
ಏಕನಾಥ್ ಶಿಂಧೆ
Follow us on

ಮುಂಬೈ: ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾ (Maharashtra Political Crisis) ಅಂತಿಮ ಘಟ್ಟ ತಲುಪಿದ್ದು, ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ (CM Eknath Shinde) ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಕಳೆದ 2 ವಾರಗಳ ರಾಜಕೀಯ ಬಿಕ್ಕಟ್ಟು ಅಂತ್ಯ ಕಂಡಿದೆ. ಏಕನಾಥ್ ಶಿಂಧೆ ಸರ್ಕಾರವು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ (Floor Test) ವೇಳೆ ಬಹುಮತವನ್ನು ಸಾಬೀತುಪಡಿಸಿದೆ. ಏಕನಾಥ್ ಶಿಂಧೆ 164 ಶಾಸಕರ ಬೆಂಬಲ ಪಡೆಯುವ ಮೂಲಕ ಸರ್ಕಾರ ರಚನೆಗೆ ಬೇಕಾದ ಬಹುಮತ ಪಡೆದಿದ್ದಾರೆ.

ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಹುಮತ ಹೊಂದಿದ್ದಾರೆಯೇ ಎಂಬುದನ್ನು ನಿರ್ಧರಿಸಲು ವಿಧಾನಸಭೆಯಲ್ಲಿ ಇಂದು ವಿಶ್ವಾಸಮತಯಾಚನೆ ನಡೆಸಲಾಯಿತು. ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ವೇಳೆ ಏಕನಾಥ್ ಶಿಂಧೆ ಅವರ ಪರವಾಗಿ 164 ಮತಗಳು ಬಂದವು. ಹೀಗಾಗಿ, ಅಗತ್ಯಕ್ಕಿಂತ ಹೆಚ್ಚು ಶಾಸಕರ ಬೆಂಬಲದೊಂದಿಗೆ ಏಕನಾಥ್ ಶಿಂಧೆ ಬಹುಮತ ಸಾಬೀತುಪಡಿಸಿದ್ದಾರೆ. 164 ಶಾಸಕರು ಮತ್ತು ಮತ ಎಣಿಕೆಯೊಂದಿಗೆ ಸಿಎಂ ಶಿಂಧೆ ವಿಶ್ವಾಸ ಮತದಲ್ಲಿ ವಿಜಯಶಾಲಿಯಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಎರಡು ವಾರಗಳ ರಾಜಕೀಯ ಬಿಕ್ಕಟ್ಟಿನ ನಂತರ ಬಿಜೆಪಿಯ ನೆರವಿನೊಂದಿಗೆ ಸರ್ಕಾರ ರಚನೆಯಾಗಿದೆ. ನಾಲ್ಕು ದಿನಗಳ ಹಿಂದೆ ರಚನೆಯಾದ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಇಂದು ವಿಧಾನಸಭೆಯಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸಿದೆ. ಈಗಾಗಲೇ ಬಿಜೆಪಿಯ ರಾಹುಲ್ ನಾರ್ವೇಕರ್ ಅವರು ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.

ಬಂಡಾಯ ಬಣದಿಂದ ಹೊಸದಾಗಿ ನೇಮಕಗೊಂಡಿರುವ ಶಿವಸೇನೆಯ ಮುಖ್ಯ ಸಚೇತಕ ಭರತ್ ಗೊಗಾವಾಲೆ ಇಂದು ಶಿವಸೇನೆ ಪಕ್ಷದ 16 ಶಾಸಕರನ್ನು (ಉದ್ಧವ್ ಠಾಕ್ರೆ ಬಣದ) ಅಮಾನತುಗೊಳಿಸುವಂತೆ ವಿಧಾನಸಭಾ ಸ್ಪೀಕರ್‌ಗೆ ಮನವಿ ಮಾಡಿದರು. ಏಕನಾಥ್ ಶಿಂಧೆ ಪಾಳಯದ 16 ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಉದ್ಧವ್ ಠಾಕ್ರೆ ಬಣದ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿದೆ. ಬಿಜೆಪಿಯು ಪ್ರಸ್ತುತ 106 ಶಾಸಕರನ್ನು ಹೊಂದಿದೆ. ಏಕನಾಥ್ ಶಿಂಧೆ 39 ಶಿವಸೇನಾ ಬಂಡಾಯ ಶಾಸಕರು ಸೇರಿದಂತೆ 50 ಮಂದಿಯ ಬೆಂಬಲವನ್ನು ಹೊಂದಿದ್ದಾರೆಂದು ಹೇಳಿಕೊಂಡಿದ್ದರು. ಇಂದು ವಿಶ್ವಾಸಮತ ಯಾಚನೆ ವೇಳೆ ಏಕನಾಥ್ ಶಿಂಧೆ ಅವರಿಗೆ 164 ಶಾಸಕರು ಬೆಂಬಲ ಸೂಚಿಸಿದ್ದಾರೆ.

ಏಕನಾಥ್ ಶಿಂಧೆಯವರ ಬಂಡಾಯ ಜೂನ್ 20ರ ರಾತ್ರಿ ಭುಗಿಲೆದ್ದಿತು. ಇದರಿಂದ ಉದ್ಧವ್ ಠಾಕ್ರೆ ಬಣದ ಸಂಖ್ಯೆ ಕಡಿಮೆಯಾಯಿತು. ರಾಜ್ಯಪಾಲರ ಆದೇಶದಂತೆ ಸದನದಲ್ಲಿ ಬಹುಮತವನ್ನು ಸಾಬೀತುಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದ ನಂತರ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದರು. ಅದಾದ ಬಳಿಕ ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರು ಏಕನಾಥ್ ಶಿಂಧೆ ಅವರನ್ನು ಮುಖ್ಯಮಂತ್ರಿ ಎಂದು ಘೋಷಿಸಿದರು. ಅದೇ ದಿನ ಸಂಜೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಏಕನಾಥ್ ಶಿಂಧೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು.

 

Published On - 11:37 am, Mon, 4 July 22