ಬಿಎಂಡಬ್ಲ್ಯು ಹಿಟ್ ಆಂಡ್ ರನ್ ಪ್ರಕರಣ: ಶಿವಸೇನಾ ಉಪ ನಾಯಕ ಸ್ಥಾನದಿಂದ ರಾಜೇಶ್ ಶಾ ವಜಾ

|

Updated on: Jul 10, 2024 | 2:23 PM

ಗುದ್ದೋಡು ಪ್ರಕರಣ ನಡೆದು ಎರಡು ದಿನಗಳ ನಂತರ ಮುಂಬೈ ಪೊಲೀಸರು ಮಂಗಳವಾರ ವಿರಾರ್‌ನಿಂದ ಮಿಹಿರ್ ಶಾ ಅವರನ್ನು ಬಂಧಿಸಿದ್ದಾರೆ. ಜುಲೈ 7, ಭಾನುವಾರದಂದು ವರ್ಲಿಯ ಡಾ. ಅನ್ನಿ ಬೆಸೆಂಟ್ ರಸ್ತೆಯಲ್ಲಿ ಮಿಹಿರ್ ಚಲಾಯಿಸುತ್ತಿದ್ದ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದು ಮಹಿಳೆ ಸಾವಿಗೀಡಾದ ನಂತರ ಮಿಹಿರ್ ಶಾ ತಲೆಮರೆಸಿಕೊಂಡಿದ್ದರು.

ಬಿಎಂಡಬ್ಲ್ಯು ಹಿಟ್ ಆಂಡ್ ರನ್ ಪ್ರಕರಣ: ಶಿವಸೇನಾ ಉಪ ನಾಯಕ ಸ್ಥಾನದಿಂದ ರಾಜೇಶ್ ಶಾ ವಜಾ
ರಾಜೇಶ್ ಶಾ
Follow us on

ಮುಂಬೈ ಜುಲೈ 10: ಮುಂಬೈ ಬಿಎಂಡಬ್ಲ್ಯು ಹಿಟ್ ಅಂಡ್ ರನ್ (BMW Hit and Run Case) ಪ್ರಕರಣದ ಆರೋಪಿ ಮಿಹಿರ್ ಶಾ (Mihir Shah) ಅವರ ತಂದೆ ರಾಜೇಶ್ ಶಾ (Rajesh Shah) ಅವರನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಶಿವಸೇನೆಯ ಉಪ ನಾಯಕ ಸ್ಥಾನದಿಂದ ಬುಧವಾರ ವಜಾಗೊಳಿಸಿದ್ದಾರೆ. 45 ವರ್ಷದ ಮಹಿಳೆ ಕಾವೇರಿ ನಖ್ವಾ ಅವರ ಸಾವಿಗೆ ಕಾರಣವಾದ ಹಿಟ್ ಅಂಡ್ ರನ್ ಪ್ರಕರಣದ ಪ್ರಮುಖ ಆರೋಪಿ ಆಗಿದ್ದಾರೆ ಮಿಹಿರ್ ಶಾ.

ಗುದ್ದೋಡು ಪ್ರಕರಣ ನಡೆದು ಎರಡು ದಿನಗಳ ನಂತರ ಮುಂಬೈ ಪೊಲೀಸರು ಮಂಗಳವಾರ ವಿರಾರ್‌ನಿಂದ ಮಿಹಿರ್ ಶಾ ಅವರನ್ನು ಬಂಧಿಸಿದ್ದಾರೆ. ಜುಲೈ 7, ಭಾನುವಾರದಂದು ವರ್ಲಿಯ ಡಾ. ಅನ್ನಿ ಬೆಸೆಂಟ್ ರಸ್ತೆಯಲ್ಲಿ ಮಿಹಿರ್ ಚಲಾಯಿಸುತ್ತಿದ್ದ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದು ಮಹಿಳೆ ಸಾವಿಗೀಡಾದ ನಂತರ ಶಾ ತಲೆಮರೆಸಿಕೊಂಡಿದ್ದರು. ಅವರನ್ನು ಬಂಧಿಸಲು ಮುಂಬೈ ಪೊಲೀಸರು ಹದಿನಾಲ್ಕು ತಂಡಗಳನ್ನು ರಚಿಸಿದ್ದರು,

ಅಪಘಾತದ ಸಮಯದಲ್ಲಿ ಬಿಎಂಡಬ್ಲ್ಯು ಕಾರಿನಲ್ಲಿದ್ದ ರಾಜೇಶ್ ಶಾ ಮತ್ತು ಅವರ ಚಾಲಕ ರಾಜಋಷಿ ಸಿಂಗ್ ಬಿಡಾವತ್ ಅವರನ್ನು ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು. ನಂತರ ಮುಂಬೈನ ನ್ಯಾಯಾಲಯ ರಾಜೇಶ್ ಶಾಗೆ ಜಾಮೀನು ನೀಡಿತ್ತು.
ಆರೋಪಿ ತಮ್ಮ ನಾಯಕನ ಮಗನಾಗಿರುವುದರಿಂದ ಶಿವಸೇನಾ ಏನೂ ಮಾಡುವುದಿಲ್ಲ ಎಂದು ಹಿಟ್ ಅಂಡ್ ರನ್ ಪ್ರಕರಣದ ಸಂತ್ರಸ್ತೆಯ ಪತಿ ಪ್ರದೀಪ್ ನಖ್ವಾ ಆರೋಪಿಸಿದ್ದಾರೆ.

ಇದನ್ನೂ ಓದಿ: ಬಿಎಂಡಬ್ಲ್ಯು ಹಿಟ್ ಅಂಡ್ ರನ್ ಪ್ರಕರಣದ ಆರೋಪಿ ಮದ್ಯ ಸೇವಿಸಿದ್ದ ಬಾರ್ ಕೆಡವಿದ ಬಿಎಂಸಿ

ಅದೇ ವೇಳೆ ಶಿವಸೇನಾ (ಯುಬಿಟಿ) ನಾಯಕ ಮತ್ತು ಸಂಸದ ಸಂಜಯ್ ರಾವುತ್ ಅವರು ವರ್ಲಿ ಹಿಟ್ ಅಂಡ್ ರನ್ ಪ್ರಕರಣದ ಆರೋಪಿಗಳನ್ನು ರಕ್ಷಿಸುವ ಪ್ರಯತ್ನಗಳು ಮೊದಲ ದಿನದಿಂದ ಪ್ರಾರಂಭವಾಗಿವೆ ಎಂದು ಆರೋಪಿಸಿದರು. ಶಿವಸೇನಾದ ಏಕನಾಥ್ ಶಿಂಧೆ ಬಣದ ಪಾಲ್ಘರ್ ಘಟಕದೊಂದಿಗೆ ಸಂಬಂಧ ಹೊಂದಿದ್ದ ಪ್ರಮುಖ ಆರೋಪಿ ಮಿಹಿರ್ ಶಾ ಅವರನ್ನು ಬಂಧಿಸಿದ ನಂತರ ಎಎನ್ಐ ಸುದ್ದಿ ಸಂಸ್ಥೆ ಜತೆ ಮಾತನಾಡಿದ ಸಂಜಯ್ ರಾವುತ್, “ಆರೋಪಿಗಳನ್ನು ರಕ್ಷಿಸಲು ಸರ್ಕಾರವು ಪ್ರಯತ್ನಗಳನ್ನು ಮಾಡುತ್ತಿದೆ. ಇದು ಸಾಮಾನ್ಯ ಹಿಟ್ ಅಂಡ್ ರನ್ ಅಲ್ಲ,  ಪುಣೆಯಲ್ಲಿ ನಡೆದ ಘಟನೆಯಂತೆಯೇ ಇದೆ” ಎಂದು ಹೇಳಿದ್ದಾರೆ.

ಆರೋಪಿ ರಾಜೇಶ್ ಶಾ ಕ್ರಿಮಿನಲ್ ದಾಖಲೆಯನ್ನು ಪೊಲೀಸರು ಪರಿಶೀಲಿಸಬೇಕು ಎಂದು ಸಂಜಯ್ ರಾವುತ್ ಆಗ್ರಹಿಸಿದ್ದಾರೆ. ರಾಜೇಶ್ ಶಾಗೂ ಭೂಗತ ಪಾತಕಿ ಗ್ಯಾಂಗ್‌ಗೂ ಸಂಬಂಧವಿದೆ ಎಂದು ಹೇಳಿರುವ ಅವರು ಶಾ ಮುಖ್ಯಮಂತ್ರಿಗೆ ಹೇಗೆ ವಿಶೇಷ ವ್ಯಕ್ತಿಯಾದರು ಎಂದು ಪ್ರಶ್ನಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ