ದೇಶವೇ ನಾಚಿಕೆ ಪಡುವಂತಾಗಿದೆ; ಕರ್ನಲ್ ಸೋಫಿಯಾ ಕುರಿತ ಹೇಳಿಕೆಗೆ ವಿಜಯ್ ಶಾ ವಿರುದ್ಧ ಎಸ್​ಐಟಿ ತನಿಖೆಗೆ ಸುಪ್ರೀಂ ಆದೇಶ

ಆಪರೇಷನ್ ಸಿಂಧೂರದ ಬಳಿಕ ಮಧ್ಯಪ್ರದೇಶದ ಸಚಿವ ವಿಜಯ್ ಶಾ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಭರದಲ್ಲಿ ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸೋಫಿಯಾ ಖುರೇಷಿಯನ್ನು ಪಾಕಿಸ್ತಾನದ ಭಯೋತ್ಪಾದಕರ ಸಹೋದರಿ ಎಂದು ಕರೆದಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಈ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಿದ್ದ ಜಬಲ್ಪುರ ಹೈಕೋರ್ಟ್ ವಿಜಯ್ ಶಾ ವಿರುದ್ಧ ಕೇಸ್ ದಾಖಲಿಸಲು ಸೂಚಿಸಿತ್ತು. ಈ ಆದೇಶದ ವಿರುದ್ಧ ವಿಜಯ್ ಶಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇಂದು ಸುಪ್ರೀಂ ಕೋರ್ಟ್ ಕೂಡ ವಿಜಯ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

ದೇಶವೇ ನಾಚಿಕೆ ಪಡುವಂತಾಗಿದೆ; ಕರ್ನಲ್ ಸೋಫಿಯಾ ಕುರಿತ ಹೇಳಿಕೆಗೆ ವಿಜಯ್ ಶಾ ವಿರುದ್ಧ ಎಸ್​ಐಟಿ ತನಿಖೆಗೆ ಸುಪ್ರೀಂ ಆದೇಶ
Vijay Shah

Updated on: May 19, 2025 | 3:41 PM

ನವದೆಹಲಿ, ಮೇ 19: ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ (Sofiya Qureshi) ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಸಚಿವ ವಿಜಯ್​ ಶಾ ವಿರುದ್ಧ ತನಿಖೆ ನಡೆಸಲು ಸುಪ್ರೀಂ ಕೋರ್ಟ್ (Supreme Court) ಸೂಚನೆ ನೀಡಿದೆ. ಇದಕ್ಕಾಗಿ ಎಸ್​ಐಟಿ ರಚಿಸಲು ಆದೇಶ ನೀಡಲಾಗಿದ್ದು, ಈ ವಿಶೇಷ ತನಿಖಾ ತಂಡದಲ್ಲಿ ಮಹಿಳಾ ಆಧಿಕಾರಿ ಸೇರಿ ಮೂವರು ಅಧಿಕಾರಿಗಳಿರಬೇಕು, ಡಿಜಿಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಬೇಕು, ನಾಳೆ ಬೆಳಗ್ಗೆಯೊಳಗೆ ವಿಶೇಷ ತಂಡ ರಚಿಸಿ ತನಿಖೆ ನಡೆಸಬೇಕು ಎಂದು ಆದೇಶಿಸಿದೆ. ಹಾಗೇ, ಈ ತಂಡದಲ್ಲಿರುವವರು ಎಸ್​ಪಿ ಅಥವಾ ಅದಕ್ಕಿಂತ ಉನ್ನತ ಶ್ರೇಣಿಯವರಾಗಿರಬೇಕು, ಅಧಿಕಾರಿಗಳು ಮಧ್ಯಪ್ರದೇಶ ಮೂಲದವರಾಗಿರಬಾರದು, ಆರೋಪಿ ವಿಜಯ್ ಶಾ (Vijay Shah) ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಬೇಕು. ತನಿಖೆ ಪೂರ್ಣವಾಗುವವರೆಗೂ ಆರೋಪಿಯನ್ನು ಬಂಧಿಸಬಾರದು. ಎಸ್​ಐಟಿ ತನಿಖೆಯ ವರದಿಯನ್ನು ಸುಪ್ರೀಂಕೋರ್ಟ್​ಗೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಕಳೆದ ವಾರ ಆಪರೇಷನ್ ಸಿಂಧೂರ ಕುರಿತು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಸಚಿವ ವಿಜಯ್​ ಶಾ ಪಾಕಿಸ್ತಾನದ ಉಗ್ರರು ನಮ್ಮ ಸಹೋದರಿಯರ ಕುಂಕುಮ ಅಳಿಸಿದರು. ಅದಕ್ಕೆ ತಿರುಗೇಟು ನೀಡಲು ಪ್ರಧಾನಿ ಮೋದಿ ಅವರದೇ ಸಮುದಾಯದ ಸಹೋದರಿಯನ್ನು ಮುಂದಿಟ್ಟುಕೊಂಡು ಉಗ್ರರನ್ನು ಮಟ್ಟಹಾಕಿದರು ಎಂಬ ಹೇಳಿಕೆ ನೀಡಿದ್ದರು. ಸೋಫಿಯಾ ಖುರೇಷಿಯನ್ನು ಉಗ್ರರ ಸಹೋದರಿ ಎಂದು ಕರೆದಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ವಿಜಯ್ ಶಾ ಕ್ಷಮೆಯನ್ನು ಕೂಡ ಯಾಚಿಸಿದ್ದರು. ನಾನು ಕನಸಿನಲ್ಲೂ ಸೋಫಿಯಾ ಬಗ್ಗೆ ಕೆಟ್ಟದಾಗಿ ಯೋಚಿಸಲು ಸಾಧ್ಯವಿಲ್ಲ. ಅವರು ಧರ್ಮ, ಜಾತಿಯನ್ನೆಲ್ಲ ಮೀರಿ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದಿದ್ದರು.

ಇದನ್ನೂ ಓದಿ
ಪಂಜಾಬ್​ನಲ್ಲಿ ಇಬ್ಬರು ಪಾಕಿಸ್ತಾನಿ ಗೂಢಚಾರಿಗಳ ಬಂಧನ
ಜಗತ್ತಿನ ಮುಂದೆ ಪಾಕ್ ಮುಖವಾಡ ಕಳಚಲು ನಮ್ಮ ಸಂಸದರನ್ನು ಕಳಿಸೋದಿಲ್ಲ
ಆಪರೇಷನ್​ ಸಿಂಧೂರ್​ನ ಮತ್ತೊಂದು ವಿಡಿಯೋ ಹಂಚಿಕೊಂಡ ಭಾರತೀಯ ಸೇನೆ
ಯೂಟ್ಯೂಬರ್ ಜ್ಯೋತಿ ತನಿಖೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗ

ಇದನ್ನೂ ಓದಿ: ಪಾಕ್ ಪರ ಬೇಹುಗಾರಿಕೆ: ಪಾಕಿಸ್ತಾನದ ಕಿವಿಯಲ್ಲಿ ಭಾರತದ ಗುಟ್ಟು ಪಿಸುಗುಟ್ಟುತ್ತಿದ್ದ 8 ಮಂದಿ ಬಂಧನ

ಪಾಕಿಸ್ತಾನದ ವಿರುದ್ಧದ ಆಪರೇಷನ್ ಸಿಂಧೂರ್ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರ ವಿರುದ್ಧದ ಹೇಳಿಕೆಗಳಿಗೆ ಮಧ್ಯಪ್ರದೇಶದ ಕ್ಯಾಬಿನೆಟ್ ಸಚಿವ ಕುನ್ವರ್ ವಿಜಯ್ ಶಾ ಅವರನ್ನು ಸುಪ್ರೀಂ ಕೋರ್ಟ್ ಇಂದು ತರಾಟೆಗೆ ತೆಗೆದುಕೊಂಡಿತು. ನಿಮ್ಮ ಹೇಳಿಕೆಯಿಂದ ಇಡೀ ದೇಶವೇ ನಾಚಿಕೆ ಪಡುವಂತಾಗಿದೆ ಎಂದಿರುವ ಸುಪ್ರೀಂ ಕೋರ್ಟ್ ಸಚಿವರ ಕ್ಷಮೆಯಾಚನೆಯನ್ನು ಸ್ವೀಕರಿಸಲು ಸಿದ್ಧವಿಲ್ಲ. ಕ್ಷಮೆಯ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸಬಹುದು. ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದೆ.


“ನೀವು ಸಾರ್ವಜನಿಕ ವ್ಯಕ್ತಿ. ಅನುಭವಿ ರಾಜಕಾರಣಿ. ನೀವು ಮಾತನಾಡುವಾಗ ನಿಮ್ಮ ಮಾತುಗಳನ್ನು ಎಚ್ಚರವಹಿಸಿ ಬಳಸಬೇಕು, ತೂಕದ ಮಾತನಾಡಬೇಕು. ನಾವು ನಿಮ್ಮ ವೀಡಿಯೊವನ್ನು ನೋಡಿದ್ದೇವೆ. ಇದು ಸಶಸ್ತ್ರ ಪಡೆಗಳಿಗೆ ಒಂದು ಪ್ರಮುಖ ವಿಷಯವಾಗಿದೆ. ಇಂತಹ ವಿಷಯದಲ್ಲಿ ನಾವು ತುಂಬಾ ಜವಾಬ್ದಾರಿಯುತವಾಗಿರಬೇಕು” ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಇದನ್ನೂ ಓದಿ: ಸಚಿವರು ಜವಾಬ್ದಾರಿಯಿಂದಿರಬೇಕು; ಸೋಫಿಯಾ ಖುರೇಷಿ ಕುರಿತ ವಿವಾದಾತ್ಮಕ ಹೇಳಿಕೆಗೆ ವಿಜಯ್ ಶಾಗೆ ಸುಪ್ರೀಂ ಕೋರ್ಟ್ ತರಾಟೆ

ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರು ನೀಡಿರುವ ಹೇಳಿಕೆಗಳ ತನಿಖೆಗಾಗಿ ಮಧ್ಯಪ್ರದೇಶದ ಹೊರಗಿನಿಂದ ಬಂದಿರುವ ಮಹಿಳಾ ಅಧಿಕಾರಿ ಸೇರಿದಂತೆ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿಯನ್ನು ರಚಿಸಿರುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಸಂಸದ ಸಚಿವ ವಿಜಯ್ ಶಾ ಅವರ ಬಂಧನಕ್ಕೆ ತಡೆ ನೀಡಬೇಕು ಮತ್ತು ಅವರು ಎಸ್‌ಐಟಿಯೊಂದಿಗೆ ಸೇರಿ ಸಂಪೂರ್ಣವಾಗಿ ಸಹಕರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ತನಿಖೆಯ ಫಲಿತಾಂಶದ ಕುರಿತು ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಎಸ್‌ಐಟಿಗೆ ಸೂಚಿಸಿದ್ದು, ಮೇ 28ರಂದು ವಿಚಾರಣೆಗೆ ದಿನ ನಿಗದಿಪಡಿಸಿದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us