Farmers Protest ಶನಿವಾರ ಅಂತ್ಯವಾಗಲಿದೆ 15 ತಿಂಗಳ ಸುದೀರ್ಘ ಪ್ರತಿಭಟನೆ; ದೆಹಲಿ ಗಡಿಯಿಂದ ತೆರಳುತ್ತಿರುವ ಪ್ರತಿಭಟನಾ ನಿರತ ರೈತರು

| Updated By: ರಶ್ಮಿ ಕಲ್ಲಕಟ್ಟ

Updated on: Dec 09, 2021 | 3:19 PM

ರೈತ ಸಂಘಗಳು ಇಂದು ಸಂಜೆ 5:30 ಕ್ಕೆ ಫತೇಹ್ ಅರ್ದಾಸ್ (ವಿಜಯ ಪ್ರಾರ್ಥನೆ) ಮತ್ತು ಡಿಸೆಂಬರ್ 11 ರಂದು ಬೆಳಿಗ್ಗೆ 9 ಗಂಟೆಗೆ ದೆಹಲಿಯ ಗಡಿಯಲ್ಲಿರುವ ಸಿಂಘು ಮತ್ತು ಟಿಕ್ರಿ ಪ್ರತಿಭಟನಾ ಸ್ಥಳಗಳಲ್ಲಿ ಫತೇಹ್ ಮಾರ್ಚ್ (ವಿಜಯ ಮೆರವಣಿಗೆ) ಯೋಜಿಸಿವೆ ಎಂದು ಮೂಲಗಳು ತಿಳಿಸಿವೆ.

Farmers Protest ಶನಿವಾರ ಅಂತ್ಯವಾಗಲಿದೆ 15 ತಿಂಗಳ ಸುದೀರ್ಘ ಪ್ರತಿಭಟನೆ; ದೆಹಲಿ ಗಡಿಯಿಂದ ತೆರಳುತ್ತಿರುವ ಪ್ರತಿಭಟನಾ ನಿರತ ರೈತರು
ರೈತರ ಪ್ರತಿಭಟನೆ (ಸಂಗ್ರಹ ಚಿತ್ರ)
Follow us on

ದೆಹಲಿ:  ಈಗ ರದ್ದಾಗಿರುವಕೃಷಿ ಕಾನೂನುಗಳು (Farm laws)  ಮತ್ತು ಕನಿಷ್ಠ ಬೆಂಬಲ ಬೆಲೆ (MSP) ಕಾನೂನು ಖಾತರಿ ಸೇರಿದಂತೆ ಇತರ ಸಮಸ್ಯೆಗಳ ವಿರುದ್ಧ 15 ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ರೈತರು (Farmers Protest)  ಡಿಸೆಂಬರ್ 11  ಶನಿವಾರದಂದು ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುವುದಾಗಿ ಘೋಷಿಸಿದ್ದು, ದೆಹಲಿ ಗಡಿಯಿಂದ ಮನೆ ಕಡೆ ತೆರಳುತ್ತಿದ್ದಾರೆ. ರೈತ ಸಂಘಗಳು ಇಂದು ಸಂಜೆ 5:30 ಕ್ಕೆ ಫತೇಹ್ ಅರ್ದಾಸ್ (ವಿಜಯ ಪ್ರಾರ್ಥನೆ) ಮತ್ತು ಡಿಸೆಂಬರ್ 11 ರಂದು ಬೆಳಿಗ್ಗೆ 9 ಗಂಟೆಗೆ ದೆಹಲಿಯ ಗಡಿಯಲ್ಲಿರುವ ಸಿಂಘು ಮತ್ತು ಟಿಕ್ರಿ ಪ್ರತಿಭಟನಾ ಸ್ಥಳಗಳಲ್ಲಿ ಫತೇಹ್ ಮಾರ್ಚ್ (ವಿಜಯ ಮೆರವಣಿಗೆ) ಯೋಜಿಸಿವೆ ಎಂದು ಮೂಲಗಳು ತಿಳಿಸಿವೆ. ಪಂಜಾಬ್ ಕೃಷಿ ನಾಯಕರು ಡಿಸೆಂಬರ್ 13 ರಂದು ಅಮೃತಸರದ ಗೋಲ್ಡನ್ ಟೆಂಪಲ್‌ಗೆ ಪೂಜೆ ಸಲ್ಲಿಸಲು ಯೋಜಿಸಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ ಡಿಸೆಂಬರ್ 15 ರಂದು ದೆಹಲಿಯಲ್ಲಿ ಮತ್ತೊಂದು ಸಭೆ ನಡೆಸಲಿದೆ ಎಂದು ಎನ್​​ಟಿಡಿವಿ ವರದಿ ಮಾಡಿದೆ.

ನಮ್ಮ ಪ್ರತಿಭಟನೆಯನ್ನು ಕೊನೆಗೊಳಿಸಲು   ನಿರ್ಧರಿಸಿದ್ದೇವೆ. ನಾವು ಜನವರಿ 15 ರಂದು ಪರಿಶೀಲನಾ ಸಭೆ ನಡೆಸುತ್ತೇವೆ. ಸರ್ಕಾರವು ತನ್ನ ಭರವಸೆಗಳನ್ನು ಈಡೇರಿಸದಿದ್ದರೆ, ನಾವು ನಮ್ಮ ಪ್ರತಿಭಟನೆಯನ್ನು ಪುನರಾರಂಭಿಸಬಹುದು ಎಂದು ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ಸಭೆಯ ನಂತರ ಮಾತನಾಡಿದ ರೈತ ಮುಖಂಡ ಗುರ್ನಾಮ್ ಸಿಂಗ್ ಚಾಡೂನಿ ಹೇಳಿದ್ದಾರೆ.


ಪ್ರತಿಭಟನಾ ನಿರತ ರೈತರು ಡಿಸೆಂಬರ್ 11 ರಂದು ಪ್ರತಿಭಟನಾ ಸ್ಥಳಗಳನ್ನು ಖಾಲಿ ಮಾಡುತ್ತಾರೆ ಎಂದು ರೈತ ಮುಖಂಡ ದರ್ಶನ್ ಪಾಲ್ ಸಿಂಗ್ ಹೇಳಿದ್ದಾರೆ.


ನವೆಂಬರ್ 21 ರಂದು ಎಸ್‌ಕೆಎಂ ಆರು ಬೇಡಿಕೆಗಳನ್ನು ಪಟ್ಟಿ ಮಾಡಿ ಪ್ರಧಾನಿ ಮೋದಿಗೆ ಪತ್ರ ಬರೆದ ನಂತರ ಕೇಂದ್ರವು ಬುಧವಾರ ಎಸ್‌ಕೆಎಂನ ಐದು ಸದಸ್ಯರ ಸಮಿತಿಗೆ ಲಿಖಿತ ಕರಡು ಪ್ರಸ್ತಾವನೆಯನ್ನು ಕಳುಹಿಸಿದೆ. ವಿವಾದಾತ್ಮಕ ಕಾನೂನುಗಳನ್ನು ರದ್ದುಗೊಳಿಸುವುದು ಅವರು ಎತ್ತಿದ ಹಲವಾರು ಕಾಳಜಿಗಳಲ್ಲಿ ಒಂದಾಗಿದೆ ಎಂದು ರೈತರು ಗಮನಸೆಳೆದಿದ್ದರು. ಪ್ರಧಾನಿಮೋದಿ ಅವರು ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ ನಂತರ ಮತ್ತು ಹಿಂದೆ ಸರಿಯುವಂತೆ ಮನವಿ ಮಾಡಿದ್ದರೂ ರೈತರು ಪ್ರತಿಭಟನೆ ನಿಲ್ಲಿಸಿರಲಿಲ್ಲ. ಕಳೆದ ವಾರ, ಬಾಕಿ ಇರುವ ಸಮಸ್ಯೆಗಳನ್ನು ಚರ್ಚಿಸಲು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ (ಫೋನ್ ಕರೆ ಮೂಲಕ) ಮಾತನಾಡಿರುವುದಾಗಿ ಎಂದು ರೈತರು ಹೇಳಿದ್ದಾರೆ.


ಪ್ರತಿಭಟನಾ ನಿರತ ರೈತರು ಸರ್ಕಾರದ ಉದ್ದೇಶದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು,  ಪ್ರತಿಭಟನೆಯ ಸಮಯದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳು ಮತ್ತು ಬೆಳೆ ತ್ಯಾಜ್ಯ ಸುಡುವಿಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ರದ್ದುಗೊಳಿಸಿದ ನಂತರ ನಾವು ಹೋಗುತ್ತೇವೆ ಎಂದು ಪಟ್ಟು ಹಿಡಿದಿದ್ದರು. 2016 ರಲ್ಲಿ ಮೀಸಲಾತಿಗಾಗಿ ಜಾಟ್ ಆಂದೋಲನವನ್ನು ಉಲ್ಲೇಖಿಸಿದ ರೈತರು, ಭರವಸೆ ನೀಡಿದ ನಂತರವೂ ಕಾನೂನು ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ವಿಫಲವಾಗಿದೆ ಎಂದಿದ್ದರು.

ಮಂಗಳವಾರ ಸಂಜೆ ದೆಹಲಿ-ಹರ್ಯಾಣ ಗಡಿಯಲ್ಲಿರುವ ಸಿಂಘುನಲ್ಲಿ  ಸಂಯುಕ್ತ ಕಿಸಾನ್ ಮೋರ್ಚಾದ ರೈತ ಮುಖಂಡರ ಸುದೀರ್ಘ ಸಭೆ ನಡೆಯಿತು. ಈ ಸಭೆಯು   ಕೇಂದ್ರದ ಪ್ರಸ್ತಾಪವನ್ನು ಪರಿಗಣಿಸಲು- ಹೇಗೆ ಮುಂದುವರೆಯಬೇಕು ಎಂಬುದರ ಕುರಿತು ಒಪ್ಪಂದವಿಲ್ಲದೆ ಮುಕ್ತಾಯಗೊಂಡಿತ್ತು.

ಇದನ್ನೂ ಓದಿ:  ರೈತರ ವಿರುದ್ಧದ ಪ್ರಕರಣ ಹಿಂಪಡೆಯಲು ಕೇಂದ್ರ ಒಪ್ಪಿಗೆ; ಪ್ರತಿಭಟನೆ ಅಂತ್ಯಗೊಳಿಸುವ ಬಗ್ಗೆ ಸಂಜೆ ನಿರ್ಧಾರ  ಸಾಧ್ಯತೆ

 

Published On - 2:59 pm, Thu, 9 December 21