ಮೊದಲ ದಿನವೇ ಕೆಟ್ಟ ಪ್ರದರ್ಶನ; ಲೋಕಸಭೆಯಲ್ಲಿ ರಾಹುಲ್ ಗಾಂಧಿ ಭಾಷಣಕ್ಕೆ ಜೆಪಿ ನಡ್ಡಾ ಆಕ್ಷೇಪ

|

Updated on: Jul 01, 2024 | 7:01 PM

ತಮ್ಮನ್ನು ಹಿಂದೂಗಳು ಎಂದು ಹೇಳಿಕೊಳ್ಳುವವರು ಅಹಿಂಸೆಯ ಬದಲು ದಿನದ 24 ಗಂಟೆಯೂ ಹಿಂಸಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ಇಂದು ಲೋಕಸಭಾ ಅಧಿವೇಶನದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ರಾಷ್ಟ್ರಪತಿಗಳ ಭಾಷಣದ ಮೇಲೆ ಮಂಡಿಸಿದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದೂ ಎಂದಿಗೂ ಹಿಂಸಾಚಾರ ಮಾಡಲು ಸಾಧ್ಯವಿಲ್ಲ, ದ್ವೇಷ ಮತ್ತು ಭಯವನ್ನು ಹರಡಲು ಸಾಧ್ಯವಿಲ್ಲ. ಬಿಜೆಪಿ ನಾಯಕರು ನಿಜವಾದ ಹಿಂದೂಗಳೇ ಅಲ್ಲ ಎಂದಿದ್ದರು.

ಮೊದಲ ದಿನವೇ ಕೆಟ್ಟ ಪ್ರದರ್ಶನ; ಲೋಕಸಭೆಯಲ್ಲಿ ರಾಹುಲ್ ಗಾಂಧಿ ಭಾಷಣಕ್ಕೆ ಜೆಪಿ ನಡ್ಡಾ ಆಕ್ಷೇಪ
ಜೆ.ಪಿ. ನಡ್ಡಾ
Follow us on

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು (ಸೋಮವಾರ) ಸದನದಲ್ಲಿ ಮಾತನಾಡುವಾಗ ಬಿಜೆಪಿಯು ಭಾರತದಲ್ಲಿ ಹಿಂಸಾಚಾರ, ದ್ವೇಷ ಮತ್ತು ಭಯವನ್ನು ಹರಡುತ್ತಿದೆ ಎಂದು ಆರೋಪಿಸಿದ್ದಾರೆ. ಹಿಂದೂ ಧರ್ಮ ಅಹಿಂಸೆಯನ್ನು ಪಸರಿಸಿದೆ. ಆದರೆ, ಇಲ್ಲಿ ತಮ್ಮನ್ನು ಹಿಂದೂಗಳೆಂದು ಹೇಳಿಕೊಳ್ಳುತ್ತಿರುವವರು ಹಿಂಸಾಚಾರಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇವರು ನಿಜವಾಗಿ ಹಿಂದೂಗಳೇ ಅಲ್ಲ ಎಂದು ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡಿ ಆರೋಪ ಮಾಡಿದ್ದರು. ಇದಕ್ಕೆ ಬಿಜೆಪಿ ನಾಯಕ ಜೆ.ಪಿ. ನಡ್ಡಾ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಯುವಕರು, ವಿದ್ಯಾರ್ಥಿಗಳು, ರೈತರು, ಕಾರ್ಮಿಕರು, ದಲಿತರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರಲ್ಲಿ ಬಿಜೆಪಿ ಭಯ ಹುಟ್ಟಿಸಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಬಿಜೆಪಿಯವರು ಅಲ್ಪಸಂಖ್ಯಾತರು, ಮುಸ್ಲಿಮರು, ಸಿಖ್ಖರು ಮತ್ತು ಕ್ರಿಶ್ಚಿಯನ್ನರ ವಿರುದ್ಧ ಬೆದರಿಕೆ, ದಾಳಿ ಮತ್ತು ದ್ವೇಷವನ್ನು ಹರಡುತ್ತಾರೆ. ಆದರೆ ಅಲ್ಪಸಂಖ್ಯಾತರು ಈ ದೇಶದೊಂದಿಗೆ ಬಂಡೆಯಂತೆ ಗಟ್ಟಿಯಾಗಿ ನಿಂತಿದ್ದಾರೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ: ರಾಹುಲ್ ಬಿಜೆಪಿ ವಿರುದ್ಧ ಹೇಳಿಕೆ ನೀಡಿದ್ದೇ ವಿನಃ ಹಿಂದೂಗಳ ಕುರಿತಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ

ರಾಹುಲ್ ಗಾಂಧಿಯವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಹುಲ್ ಗಾಂಧಿ ಈ ಕುರಿತು ಕ್ಷಮಾಪಣೆ ಕೇಳಬೇಕೆಂದು ಒತ್ತಾಯಿಸಿದ್ದರು. ಇದೀಗ ರಾಹುಲ್ ಗಾಂಧಿ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಚಿವ ಹಾಗೂ ಬಿಜೆಪಿ ಮಾಜಿ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ (ಜೆ.ಪಿ. ನಡ್ಡಾ) ಪ್ರತಿಕ್ರಿಯೆ ನೀಡಿದ್ದಾರೆ.

ರಾಹುಲ್ ಗಾಂಧಿ ಹಿಂದೂ ಸಮಾಜದ ಕ್ಷಮೆ ಕೇಳಬೇಕು ಎಂದು ಜೆ.ಪಿ. ನಡ್ಡಾ ಹೇಳಿದ್ದಾರೆ. ಈ ಕುರಿತು ಸರಣಿ ಟ್ವೀಟ್​ಗಳನ್ನು ಮಾಡಿದ್ದ ಜೆ.ಪಿ. ನಡ್ಡಾ, ‘ಮೊದಲ ದಿನವೇ ಕೆಟ್ಟ ಪ್ರದರ್ಶನ’ ಎಂದಿದ್ದಾರೆ. ಲೋಕಸಭೆಯಲ್ಲಿ ‘ಹಿಂದೂ’ ವಿರೋಧಿ ಹೇಳಿಕೆಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಅಪಹಾಸ್ಯ ಮಾಡಿದ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ, ಇಂದು ಕೆಳಮನೆಯಲ್ಲಿ ಕಾಂಗ್ರೆಸ್ ಕುಡಿ ರಾಹುಲ್ ಗಾಂಧಿಯ ಭಾಷಣದಲ್ಲಿ ಸುಳ್ಳು ಮತ್ತು ಹಿಂದೂ ದ್ವೇಷ ಎದ್ದು ಕಾಣುತ್ತಿದೆ ಎಂದು ಹೇಳಿದ್ದಾರೆ.

“ಮೂರನೇ ಬಾರಿ ವಿಫಲವಾದ ರಾಹುಲ್ ಗಾಂಧಿಯವರ ಇಂದಿನ ಭಾಷಣವು 2024ರ ಜನಾದೇಶವನ್ನು (ಕಾಂಗ್ರೆಸ್​ನ ಮೂರನೇ ಸತತ ಸೋಲು) ಅರ್ಥ ಮಾಡಿಕೊಂಡಿಲ್ಲ. ಆ ಬಗ್ಗೆ ಕಾಳಜಿಯನ್ನೇ ಹೊಂದಿಲ್ಲ ಎಂದು ತೋರಿಸಿದೆ” ಎಂದು ಜೆ.ಪಿ. ನಡ್ಡಾ ಟ್ವೀಟ್‌ನಲ್ಲಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Lok Sabha Session: ಮೋದಿ, ಬಿಜೆಪಿ, ಆರ್‌ಎಸ್‌ಎಸ್ ಎಂದರೆ ಹಿಂದೂ ಸಮಾಜವಲ್ಲ; ಲೋಕಸಭೆಯಲ್ಲಿ ರಾಹುಲ್ ಗಾಂಧಿ ವಾಗ್ದಾಳಿ

“ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಈಗ 5 ಬಾಇಷ್ಟು ಬಾರಿ ಸಂಸದರಾಗಿದ್ದರೂ ಅವರು ಸಂಸತ್ತಿನ ನಿಯಮಗಳನ್ನು ಕಲಿತಿಲ್ಲ ಮತ್ತು ಅವರಿಗೆ ಸಭ್ಯತೆ ಇಲ್ಲ. ಅವರು ಪದೇ ಪದೇ ಭಾಷಣದ ಮಟ್ಟವನ್ನು ಕಡಿಮೆ ಮಾಡುತ್ತಾರೆ. ಅವರು ಇಂದು ಆಡಿದ ಮಾತುಗಳು ತುಂಬಾ ಕಳಪೆ ಮಟ್ಟದ್ದಾಗಿದೆ ಎಂದು ಬಿಜೆಪಿ ನಾಯಕ ಜೆ.ಪಿ. ನಡ್ಡಾ ಪೋಸ್ಟ್ ಮಾಡಿದ್ದಾರೆ.

“ರಾಹುಲ್ ಗಾಂಧಿ ಹಿಂದೂಗಳನ್ನು ಹಿಂಸಾಚಾರಿಗಳು ಎಂದು ಕರೆದಿದ್ದಕ್ಕಾಗಿ ತಕ್ಷಣವೇ ಎಲ್ಲಾ ಹಿಂದೂಗಳ ಕ್ಷಮೆ ಯಾಚಿಸಬೇಕು. ಇದೇ ವ್ಯಕ್ತಿ ವಿದೇಶಿ ರಾಜತಾಂತ್ರಿಕರಿಗೆ ಹಿಂದೂಗಳನ್ನು ಭಯೋತ್ಪಾದಕರು ಎಂದು ಹೇಳುತ್ತಿದ್ದರು. ಹಿಂದೂಗಳ ಮೇಲಿನ ಈ ಆಂತರಿಕ ದ್ವೇಷ ನಿಲ್ಲಬೇಕು” ಎಂದು ಜೆಪಿ ನಡ್ಡಾ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

“ಕಳೆದ 60 ವರ್ಷಗಳಲ್ಲಿ ಯಾವತ್ತೂ ಪ್ರತಿಪಕ್ಷವನ್ನು ಸತತವಾಗಿ 3 ಬಾರಿ ಜನರು ತಿರಸ್ಕರಿಸಿರಲಿಲ್ಲ. ಅವರು ಹೋಗುವ ದಾರಿಯಲ್ಲಿ ಅವರು ಸೋಲಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಈ ನಿಟ್ಟಿನಲ್ಲಿ ಕಾಂಗ್ರೆಸ್ ತನ್ನದೇ ಆದ ದಾಖಲೆ ನಿರ್ಮಿಸಲಿದೆ” ಎಂದು ಬಿಜೆಪಿ ನಾಯಕ ಜೆ.ಪಿ. ನಡ್ಡಾ ಲೇವಡಿ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ