
ಗುರುಗ್ರಾಮ, ಏಪ್ರಿಲ್ 27: ಪಶ್ಚಿಮ ಬಂಗಾಳ(West Bengal)ದ 2026ರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನವು ಏಪ್ರಿಲ್ 23ರಂದು ನಡೆದಿದೆ. ಈ ಅಬ್ಬರದ ಮತದಾನದ ಹಿಂದೆ ಒಂದು ಕುತೂಹಲಕಾರಿ ಸಂಗತಿಯಿದೆ, ಗುರುಗ್ರಾಮದಂತಹ ನಗರಗಳಲ್ಲಿ ಕೆಲಸ ಮಾಡುತ್ತಿದ್ದ ಲಕ್ಷಾಂತರ ಕಾರ್ಮಿಕರು ಪಡಿತರ ಚೀಟಿ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ಕಳೆದುಕೊಳ್ಳುವ ಭೀತಿಯಿಂದ ಮತ ಚಲಾಯಿಸಲು ತಮ್ಮ ಗ್ರಾಮಗಳಿಗೆ ಮರಳಿದ್ದಾರೆ.
ಸುಮಾರು 2.5 ರಿಂದ 3 ಲಕ್ಷ ಬಂಗಾಳಿ ಕಾರ್ಮಿಕರಿಗೆ ನೆಲೆಯಾಗಿರುವ ಗುರುಗ್ರಾಮ್ನಲ್ಲಿ ಈಗ ಕೆಲಸಗಾರರ ತೀವ್ರ ಅಭಾವ ಕಂಡುಬಂದಿದೆ. ಮನೆಗೆಲಸದವರು, ಅಡುಗೆಯವರು ಮತ್ತು ವಾಹನ ಚಾಲಕರ ಕೊರತೆಯಿಂದಾಗಿ ನಿವಾಸಿಗಳು ಪರದಾಡುತ್ತಿದ್ದಾರೆ. ಯಾವುದೇ ಪರ್ಯಾಯ ವ್ಯವಸ್ಥೆ ಅಥವಾ ಹೊಸ ಕೆಲಸಗಾರರನ್ನು ಪಡೆಯಲು ಈಗ ಕನಿಷ್ಠ 48 ರಿಂದ 72 ಗಂಟೆಗಳ ಕಾಲ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.
ಕೆಲಸಗಾರರು ಸಿಗದ ಹಿನ್ನೆಲೆಯಲ್ಲಿ ಗುರುಗ್ರಾಮ್ ನಿವಾಸಿಗಳು ಈಗ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಮಾರುಕಟ್ಟೆಯಲ್ಲಿ ರೋಬೋಟ್ ವ್ಯಾಕ್ಯೂಮ್ ಕ್ಲೀನರ್ಗಳ ಮಾರಾಟದಲ್ಲಿ ದಿಢೀರ್ ಏರಿಕೆ ಕಂಡುಬಂದಿದೆ. ಮನುಷ್ಯರ ಸಹಾಯ ಸಿಗದಿದ್ದಾಗ ಯಂತ್ರಗಳೇ ಗತಿಯಾಗಿವೆ ಎಂಬ ಮಾತುಗಳು ಅಲ್ಲಿನ ಅಪಾರ್ಟ್ಮೆಂಟ್ಗಳಲ್ಲಿ ಕೇಳಿಬರುತ್ತಿವೆ.
ಮತ್ತಷ್ಟು ಓದಿ: ಪಶ್ಚಿಮ ಬಂಗಾಳ, ತಮಿಳುನಾಡು ವಿಧಾನಸಭಾ ಚುನಾವಣೆ, ಮತದಾನ ಶುರು, ಯಾರ್ಯಾರ ನಡುವೆ ಪೈಪೋಟಿ
ಈ ಬೆಳವಣಿಗೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. ಖ್ಯಾತ ಅರ್ಥಶಾಸ್ತ್ರಜ್ಞ ಸಂಜೀವ್ ಸನ್ಯಾಲ್ ಅವರು ಬಂಗಾಳದ ಈ ಸ್ಥಿತಿಯನ್ನು ‘ಅಸಹ್ಯಕರ’ ಎಂದು ಬಣ್ಣಿಸಿದ್ದಾರೆ. 1960ರಲ್ಲಿ ಉನ್ನತ ಆರ್ಥಿಕತೆಯಾಗಿದ್ದ ಬಂಗಾಳವು ಇಂದು 21ನೇ ಸ್ಥಾನಕ್ಕೆ ಕುಸಿದಿರುವುದು ದುರಂತ. ರಾಜಕೀಯ ಅನಿವಾರ್ಯತೆಗಾಗಿ ಜನರು ಇಷ್ಟು ದೂರದಿಂದ ವಲಸೆ ಬರಬೇಕಾಗಿರುವುದು ಮತ್ತು ಸೌಲಭ್ಯಗಳಿಗಾಗಿ ಹೆದರುವುದು ಬೇಸರದ ಸಂಗತಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಗುರುಗ್ರಾಮ ಒಂದರಲ್ಲೇ 3 ಲಕ್ಷಕ್ಕೂ ಅಧಿಕ ಬಂಗಾಳಿ ಕಾರ್ಮಿಕರಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:06 am, Mon, 27 April 26