ಹರ್ಯಾಣ ಪೊಲೀಸ್ ಕರ್ಮಕಾಂಡ: ಮತ್ತೊಂದು ಟ್ವಿಸ್ಟ್; ಐಎಎಸ್ ಅಧಿಕಾರಿ, ಎಎಪಿ ಶಾಸಕ ಸೇರಿ ನಾಲ್ವರ ವಿರುದ್ಧ ಎಫ್​ಐಆರ್

Dramatic twist in suicide of Haryana police officers Puran Kumar and Sandeep Kumar: ಎಎಸ್​ಐ ಸಂದೀಪ್ ಕುಮಾರ್ ಲಾದರ್ ಅವರ ಆತ್ಮಹತ್ಯೆ ಘಟನೆ ಬೆನ್ನಲ್ಲೇ ರೋಹ್ಟಕ್ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಸಂದೀಪ್ ರೆಕಾರ್ಡ್ ಮಾಡಿದ ವಿಡಿಯೋದಲ್ಲಿ ಮಾಡಲಾಗಿರುವ ಆರೋಪ ಆಧಾರದ ಮೇಲೆ ನಾಲ್ವರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ಪೂರಣ್ ಕುಮಾರ್ ವಿರುದ್ಧ ಸಂದೀಪ್ ಆರೋಪ ಮಾಡಿದ್ದರು.

ಹರ್ಯಾಣ ಪೊಲೀಸ್ ಕರ್ಮಕಾಂಡ: ಮತ್ತೊಂದು ಟ್ವಿಸ್ಟ್; ಐಎಎಸ್ ಅಧಿಕಾರಿ, ಎಎಪಿ ಶಾಸಕ ಸೇರಿ ನಾಲ್ವರ ವಿರುದ್ಧ ಎಫ್​ಐಆರ್
ಪೂರಣ್ ಕುಮಾರ್ಇ ಮತ್ತು ಸಂದೀಪ್ ಕುಮಾರ್

Updated on: Oct 16, 2025 | 11:29 AM

ಚಂಡೀಗಡ್, ಅಕ್ಟೋಬರ್ 16: ಐಪಿಎಸ್ ಅಧಿಕಾರಿ ವೈ ಪೂರಣ್ ಕುಮಾರ್ (Puran Kumar) ಮತ್ತು ಎಎಸ್​ಐ ಸಂದೀಪ್ ಕುಮಾರ್ ಲಾದರ್ (Sandeep Kumar Lather) ಅವರಿಬ್ಬರ ಆತ್ಮಹತ್ಯೆ ಪ್ರಕರಣಗಳು ಹರ್ಯಾಣ ಪೊಲೀಸ್ ಇಲಾಖೆಯನ್ನು ಗರಬಡಿದಂತೆ ಮಾಡಿವೆ. ಭ್ರಷ್ಟಾಚಾರ, ಜಾತಿ ನಿಂದನೆ ಇತ್ಯಾದಿ ಆರೋಪ ಪ್ರತ್ಯಾರೋಪಗಳು ಈ ಪ್ರಕರಣದಲ್ಲಿ ತಳುಕು ಹಾಕಿಕೊಂಡಿವೆ. ಇದೇ ವೇಳೆ, ಎಎಸ್​ಐ ಸಂದೀಪ್ ಕುಮಾರ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಮಾಡಲಾಗಿರುವ ಆರೋಪಗಳ ಆಧಾರದ ಮೇಲೆ ನಾಲ್ವರ ವಿರುದ್ಧ ರೋಹ್ಟಕ್ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಇದರಲ್ಲಿ ಐಪಿಎಸ್ ಅಧಿಕಾರಿ ಪೂರಣ್ ಕುಮಾರ್ ಅವರ ಪತ್ನಿಯ ಹೆಸರೂ ಇದೆ.

ಪೂರಣ್ ಕುಮಾರ್ ಅವರ ಪತ್ನಿ, 2001ರ ಬ್ಯಾಚ್​ನ ಐಎಎಸ್ ಅಧಿಕಾರಿ ಅಮ್ನೀತ್ ಪಿ ಕುಮಾರ್, ಆಕೆಯ ಸಹೋದರ ಅಮಿತ್ ರತ್ತನ್, ಹೆಡ್ ಕಾನ್ಸ್​ಟಬಲ್ ಸುಶೀಲ್ ಕುಮಾರ್ ಅವರ ಹೆಸರು ಎಫ್​ಐಆರ್​ನಲ್ಲಿ ಇದೆ. ಹರ್ಯಾಣದ ರೋಹ್ಟಕ್​ನ ಸಾದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ಮಾಡಿದ ಮತ್ತು ಅಪರಾಧ ಪಿತೂರಿ ಮಾಡಿದ ಆರೋಪಗಳಿರುವ ಬಿಎನ್​ಎಸ್ ಸೆಕ್ಷನ್ 108 ಮತ್ತು 61ರ ಅಡಿಯಲ್ಲಿ ಎಫ್​ಐಆರ್ ರಿಜಿಸ್ಟರ್ ಆಗಿದೆ.

ಇದನ್ನೂ ಓದಿ: ಹರಿಯಾಣ ಐಪಿಎಸ್ ಅಧಿಕಾರಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಪೂರಣ್ ಕುಮಾರ್ ಭ್ರಷ್ಟಾಚಾರ ಬಿಚ್ಚಿಟ್ಟು ಸಾವನ್ನಪ್ಪಿದ ಪೊಲೀಸ್!

ಅಮ್ನೀತ್ ಕುಮಾರ್ ಅವರ ಸಹೋದರ ಅಮಿತ್ ರತ್ತನ್ ಅವರು ಪಂಜಾಬ್​ನ ಎಎಪಿ ಪಕ್ಷದ ಶಾಸಕರಾಗಿದ್ದಾರೆ. ಇನ್ನು ಸುಶೀಲ್ ಕುಮಾರ್ ಅವರು ಪೂರನ್ ಕುಮಾರ್ ಅವರ ಪಿಎಸ್​ಒ ಆಗಿ ಕೆಲಸ ಮಾಡುತ್ತಿದ್ದರು. ಸದ್ಯ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿನಲ್ಲಿ ರಿಮ್ಯಾಂಡ್​ನಲ್ಲಿದ್ದಾರೆ.

ಹರ್ಯಾಣವನ್ನು ಬೆಚ್ಚಿಬೀಳಿಸಿರುವ ಪೊಲೀಸ್ ಅಧಿಕಾರಿಗಳ ಸರಣಿ ಆತ್ಮಹತ್ಯೆ ಘಟನೆಗಳೇನು?

ರೋಹ್ಟಕ್​ನ ಐಜಿಯಾಗಿದ್ದ ಪೂರಣ್ ಕುಮಾರ್ ವಿರುದ್ಧ ಹಲವು ಭ್ರಷ್ಟಾಚಾರ ಆರೋಪಗಳಿದ್ದುವು. ಅವರ ವಿರುದ್ಧ ಪೊಲೀಸರ ತಂಡವೊಂದು ತನಿಖೆ ನಡೆಸುತ್ತಿತ್ತು. ಸಂದೀಪ್ ಕುಮಾರ್ ಲಾದರ್ ಅವರು ಆ ತನಿಖಾ ತಂಡದ ಒಬ್ಬ ಸದಸ್ಯರಾಗಿದ್ದರು. ತನಿಖೆಯ ಭಾಗವಾಗಿ ಪೂರಣ್ ಕುಮಾರ್ ಅವರ ಮಾಜಿ ಪಿಎಸ್​ಒ ಅವರನ್ನು ಅಕ್ಟೋಬರ್ 5ರಂದು ಬಂಧಿಸಲಾಯಿತು. ಅಕ್ಟೋಬರ್ 6ರಂದು ಎಫ್​ಐಆರ್ ದಾಖಲು ಮಾಡಲಾಯಿತು. ಪೂರಣ್ ಮೊದಲಾದವರ ಹೆಸರು ಎಫ್​ಐಆರ್​ನಲ್ಲಿ ಕಾಣಿಸಿತು.

ಇದನ್ನೂ ಓದಿ: ಐಪಿಎಸ್ ಅಧಿಕಾರಿ ಪೂರಣ್ ಕುಮಾರ್ ಆತ್ಮಹತ್ಯೆ ಪ್ರಕರಣ; ಹರಿಯಾಣದ ಹಿರಿಯ ಪೊಲೀಸ್ ಅಧಿಕಾರಿ ಅಮಾನತು

ಈ ಎಫ್​ಐಆರ್ ದಾಖಲಾದ ಬಳಿಕ ಪೂರಣ್ ಕುಮಾರ್ ಅವರೇ ಖುದ್ದಾಗಿ ಆತ್ಮಹತ್ಯೆ ಮಾಡಿಕೊಂಡರು. ಡಿಜಿಪಿ ಶತ್ರುಜೀತ್ ಕಪೂರ್ ಮತ್ತು ರೋಹ್ಟಕ್ ಎಸ್​ಪಿ ನರೇಂದ್ರ ಬಿಜಾರ್ನಿಯಾ ಮೊದಲಾದವರ ವಿರುದ್ಧ ತಮ್ಮ ಸೂಸೈಡ್ ನೋಟ್​ನಲ್ಲಿ ಪೂರಣ್ ಕುಮಾರ್ ಆರೋಪ ಮಾಡಿದ್ದರು. ಪೂರಣ್ ಕುಮಾರ್ ಅವರ ಕುಟುಂಬ ಸದಸ್ಯರ ಒತ್ತಾಯದ ಮೇರೆಗೆ ಶತ್ರುಜೀತ್ ಕಪೂರ್ ಅವರನ್ನು ರಜೆಯ ಮೇಲೆ ಕಳುಹಿಸಲಾಯಿತು. ನರೇಂದ್ರ ಬಿಜಾರ್ನಿಯಾ ಅವರನ್ನು ಟ್ರಾನ್ಸ್​ಫರ್ ಮಾಡಲಾಯಿತು.

ಇದಾದ ಬಳಿಕ ಪೂರಣ್ ಕುಮಾರ್ ವಿರುದ್ಧ ತನಿಖೆ ನಡೆಸುತ್ತಿದ್ದ ಸಂದೀಪ್ ಕುಮಾರ್ ಲಾಥರ್ ಅವರೂ ಕೂಡ ಗನ್​ನಿಂದ ಶೂಟ್ ಮಾಡಿಕೊಂಡು ಸತ್ತಿದ್ದಾರೆ. ಅದಕ್ಕೆ ಮುನ್ನ ವಿಡಿಯೋ ರೆಕಾರ್ಡ್ ಮಾಡಿರುವ ಅವರು ಪೂರಣ್ ಕುಮಾರ್ ಅವರನ್ನು ಭ್ರಷ್ಟ ಎಂದು ಕರೆದಿದ್ದಾರೆ.

ಡಿಜಿಪಿ ಶತ್ರುಜೀತ್ ಕಪೂರ್ ಅವರ ತಪ್ಪೇನಿಲ್ಲ. ಪೂರಣ್ ಕುಮಾರ್ ಪೂರ್ಣ ಭ್ರಷ್ಟರಾಗಿದ್ದರು. ತಮ್ಮ ಕುಕೃತ್ಯಗಳು ಬೆಳಕಿಗೆ ಬಂದು ಅವಮಾನ ಆಗುತ್ತದೆಂಬ ಸತ್ಯ ಜೀರ್ಣಿಸಿಕೊಳ್ಳಲಾಗದೆ ಪೂರಣ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸಂದೀಪ್ ತಮ್ಮ ಡೆತ್ ವಿಡಿಯೋ ಮೆಸೇಜ್​ನಲ್ಲಿ ಹೇಳಿಕೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ