ಭಾರೀ ಮಳೆಗೆ ಉತ್ತರ ಭಾರತದಲ್ಲಿ ಭೂಕುಸಿತ, ಪ್ರವಾಹ ಪರಿಸ್ಥಿತಿ; ಹೆಚ್ಚಿನ ಮಳೆಯ ಮುನ್ಸೂಚನೆ ನೀಡಿದ ಐಎಂಡಿ

|

Updated on: Jul 11, 2023 | 7:56 PM

ಉತ್ತರಾಖಂಡದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಹಿಮಾಚಲ ಪ್ರದೇಶದಲ್ಲಿ  ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ

ಭಾರೀ ಮಳೆಗೆ ಉತ್ತರ ಭಾರತದಲ್ಲಿ ಭೂಕುಸಿತ, ಪ್ರವಾಹ ಪರಿಸ್ಥಿತಿ; ಹೆಚ್ಚಿನ ಮಳೆಯ ಮುನ್ಸೂಚನೆ ನೀಡಿದ ಐಎಂಡಿ
ಮಳೆ ಅವಾಂತರ
Follow us on

ದೆಹಲಿ: ಕಳೆದ ಮೂರು ದಿನಗಳಿಂದ ಉತ್ತರ ಭಾರತದಾದ್ಯಂತ (North India) ಭಾರೀ ಮಳೆಯಾಗುತ್ತಿದ್ದು (Rain), ಭೂಕುಸಿತ (LandSlide) ಮತ್ತು ಇತರ ಮಳೆ ಸಂಬಂಧಿತ ಘಟನೆಗಳಲ್ಲಿ ಹಲವಾರು ಸಾವುಗಳು ಸಂಭವಿಸಿವೆ. ಭಾರತದ ಹವಾಮಾನ ಇಲಾಖೆ (IMD) ದೇಶದ 23 ರಾಜ್ಯಗಳಲ್ಲಿ ಭಾರೀ, ಅತಿ ಭಾರೀ ಮತ್ತು ಅತ್ಯಂತ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಉತ್ತರಾಖಂಡದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಹಿಮಾಚಲ ಪ್ರದೇಶದಲ್ಲಿ  ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಆದರೆ, ಮೂರು ದಿನಗಳ ತೀವ್ರ ಮಳೆಯ ನಂತರ ಮಳೆಯ ತೀವ್ರತೆ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ. ಹವಾಮಾನ ಇಲಾಖೆ ಮಂಗಳವಾರ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಧಾರಣದಿಂದ ಸಾಮಾನ್ಯ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ.

ನಿನ್ನೆ ಸಂಜೆ ದೆಹಲಿಯ ಯಮುನಾ ನದಿಯು 205.33 ಮೀಟರ್‌ಗಳಷ್ಟು ಅಪಾಯದ ರೇಖೆಯನ್ನು ದಾಟಿದೆ. ರಾತ್ರಿಯಿಡೀ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದ್ದು, ಇಂದು ಬೆಳಗಿನ ವೇಳೆಗೆ 206.32 ಮೀಟರ್ ತಲುಪಿದೆ. ಹರ್ಯಾಣ ಹತ್ನಿಕುಂಡ್ ಬ್ಯಾರೇಜ್‌ನಿಂದ ನದಿಗೆ ಹೆಚ್ಚಿನ ನೀರು ಬಿಟ್ಟಿದ್ದರಿಂದ ನೀರಿನ ಮಟ್ಟ ಹೆಚ್ಚಳವಾಗಿದೆ.

ಹರ್ಯಾಣ ಮತ್ತು ಪಂಜಾಬ್‌ನಲ್ಲಿ, ಮೂರು ದಿನಗಳ ಭಾರೀ ಮಳೆಯ ನಂತರ, ಹಾನಿಯ ಅಂದಾಜು ಮಾಡಲು ಮತ್ತು ಸ್ಥಳಾಂತರಗೊಂಡವರಿಗೆ ಆಹಾರ, ನೀರು ಮತ್ತು ಆಶ್ರಯವನ್ನು ಒದಗಿಸಲು ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ.

ಮಳೆಯ ನಂತರ ಪಂಜಾಬ್‌ನ ಡೇರಾ ಬಸ್ಸಿಯ ಖಾಸಗಿ ವಸತಿ ಕಾಲೋನಿಯಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನ ಮಟ್ಟ ಎಷ್ಟು ಹೆಚ್ಚಾಯಿತು ಎಂದರೆ ಮನೆಗಳಲ್ಲಿ ಸಿಲುಕಿರುವ ಸ್ಥಳೀಯರನ್ನು ರಕ್ಷಿಸಲು ದೋಣಿಗಳು ಮತ್ತು ಟ್ರ್ಯಾಕ್ಟರ್‌ಗಳನ್ನು ಬಳಸಬೇಕಾಯಿತು.
ಉತ್ತರ ಭಾರತದಲ್ಲಿ ಅತಿ ಹೆಚ್ಚು ಹಾನಿಗೊಳಗಾದ ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ 30 ಜನರು ಸಾವಿಗೀಡಾಗಿದ್ದು, ₹ 3,000 ಕೋಟಿ ಮೌಲ್ಯದ ಹಾನಿ ಸಂಭವಿಸಿದೆ. ರಾಜ್ಯದ ರಾಜಧಾನಿ ಶಿಮ್ಲಾದಲ್ಲಿ ಅತಿ ಹೆಚ್ಚು ಸಾವು ನೋವುಗಳು ಸಂಭವಿಸಿದ್ದು, 11 ಮಂದಿ ಸಾವನ್ನಪ್ಪಿದ್ದಾರೆ. ಪೊಲೀಸರ ಪ್ರಕಾರ, ಸಾವಿಗೀಡಾದ 30 ಮಂದಿಯಲ್ಲಿ 29 ಮಂದಿಯನ್ನು ಗುರುತಿಸಲಾಗಿದೆ.

ಭೂಕುಸಿತದ ಪ್ರದೇಶಗಳಿಗೆ ಪ್ರವೇಶ ನಿರ್ಬಂಧಿಸಿದ ನಂತರ 500 ಕ್ಕೂ ಹೆಚ್ಚು ಪ್ರವಾಸಿಗರು ರಾಜ್ಯದ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿದ್ದಾರೆ.

ನಿನ್ನೆ ಸಂಜೆ ಉತ್ತರಾಖಂಡದಲ್ಲಿ ಭಾರೀ ಮಳೆ ಮತ್ತು ಬಂಡೆಗಳು ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಬಂಡೆಗಳು ಗುಡ್ಡಗಳ ಕೆಳಗೆ ಉರುಳಿ ಮೂರು ವಾಹನಗಳು ನಜ್ಜುಗುಜ್ಜಾಗಿವೆ. ರಾಜ್ಯದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಮುಖ್ಯಮಂತ್ರಿ ಪುಷ್ಕರ್ ಧಾಮಿ ಅವರ ಆಡಳಿತವು “ಪೂರ್ಣ ಅಲರ್ಟ್” ನಲ್ಲಿದೆ ಎಂದು ಹೇಳಿದ್ದಾರೆ.

ಜಮ್ಮುವಿನಲ್ಲಿ ರಾಮಬಾನ್ ವಿಭಾಗದಲ್ಲಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಗೆ ಹಾನಿಯಾದ ಕಾರಣ ಸತತ ನಾಲ್ಕನೇ ದಿನಕ್ಕೆ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿ ಹೆದ್ದಾರಿಯನ್ನು ಮುಚ್ಚಲಾಗಿದೆ. ಇದರಿಂದಾಗಿ 15,000 ಯಾತ್ರಾರ್ಥಿಗಳು ಜಮ್ಮು ಮತ್ತು ಇತರ ಸ್ಥಳಗಳಲ್ಲಿ ಸಿಲುಕಿಕೊಂಡಿದ್ದಾರೆ.

ಇದನ್ನೂ ಓದಿMonsoon Diseases: ಮಳೆಗಾಲದಲ್ಲಿ ಹರಡುವ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸಲು ಸಲಹೆಗಳು ಇಲ್ಲಿವೆ

ಹವಾಮಾನ ಇಲಾಖೆಯು ಉತ್ತರ ಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಹೆಚ್ಚಿನ ಮಳೆಯ ಮುನ್ಸೂಚನೆ ನೀಡಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಸಹಾಯ ಮಾಡಲು ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ನಿಯೋಜಿಸಲಾಗಿದೆ. NDRF ಪೀಡಿತ ರಾಜ್ಯಗಳಿಗೆ 39 ತಂಡಗಳನ್ನು ನಿಯೋಜಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ