
ಕೆಲ ದಿನಗಳ ಮೌನದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಟ್ವೀಟ್ಗಳ ಟೀಕಾಪ್ರಹಾರ ಪುನರಾರಂಭಿಸಿದ್ದಾರೆ.
ಬುಧವಾರದಂದು ರಾಹುಲ್ ಸರಣಿ ಟ್ವೀಟ್ಗಳ ಮೂಲಕ ಪ್ರಧಾನ ಮಂತ್ರಿ ಮೋದಿಯನ್ನು ಖಂಡಿಸಿದ್ದು, ಅವರ ಆಡಳಿತಾವಧಿಯಲ್ಲಿ ಭಾರತ ದುರಂತಗಳ ಸರಮಾಲೆಯಲ್ಲಿ ಸಿಕ್ಕು ಒದ್ದಾಡುತ್ತಿದೆಯೆಂದು ಹೇಳಿದ್ದಾರೆ. ಭಾರತದ ಜಿಡಿಪಿ (23.9%) ಐತಿಹಾಸಿಕ ಕುಸಿತಕ್ಕೆ ಮೋದಿಯವರ ದುರಾಡಳಿತವೇ ಕಾರಣವೆಂದು ಹೇಳಿದ್ದಾರೆ.
ನಿರುದ್ಯೋಗವನ್ನ್ನು ನಿರ್ಮೂಲ ಮಾಡುತ್ತೇನೆಂದು ಹೇಳಿದ್ದ ಪ್ರಧಾನಿಯವರು, ಕಳೆದ 45 ವರ್ಷಗಳಲ್ಲೇ ಭಾರತ ಎದುರಿಸಿರುವ ಅತ್ಯಧಿಕ ನಿರುದ್ಯೋಗದ ಸಮಸ್ಯೆಯನ್ನು ಸೃಷ್ಟಿ ಮಾಡಿದ್ದಾರೆ ಎಂದು ರಾಹುಲ್ ತಮ್ಮ ಟ್ವೀಟ್ನಲ್ಲಿ ಜರಿದಿದ್ದಾರೆ. ಕಳೆದೊಂದು ವರ್ಷದಲ್ಲಿ 12 ಕೋಟಿ ಜನ
ಕೆಲಸ ಕಳೆದುಕೊಂಡಿರುವುದಕ್ಕೆ ಮೋದಿ ಸರ್ಕಾರವೇ ಕಾರಣ ಅಂತಲೂ ಎಂದು ರಾಹುಲ್ ದೂಷಿಸಿದ್ದಾರೆ.
ರಾಜ್ಯಗಳಿಗೆ ಜಿಎಸ್ಟಿ ಬಾಕಿ ಉಳಿಸಿಕೊಂಡಿರುವುದು ಮಹಾಪರಾಧ ಎಂದು ಹೇಳಿರುವ ರಾಹುಲ್, ಕೊವಿಡ್-19 ಪಿಡುಗನ್ನು ನಿಯಂತ್ರಿಸುವಲ್ಲಿಯೂ ಮೋದಿ ಸಂರ್ಪೂಣವಾಗಿ ವಿಫಲರಾಗಿದ್ದಾರೆ ಎಂದು ಟೀಕಿಸಿದ್ದಾರೆ. ಪ್ರತಿದಿನ ಸಂಭವಿಸುತ್ತಿರುವ ಕೊವಿಡ್-19 ಸಾವುಗಳನ್ನು ಮತ್ತು ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಯನ್ನು ಗಮನಿಸಿದ್ದೇಯಾದರೆ. ವಿಶ್ವದ ಎಲ್ಲ ರಾಷ್ಟ್ರಗಳನ್ನು ಭಾರತ ಹಿಂದಿಕ್ಕಿದೆ ಅಂತ ರಾಹುಲ್ ಹೇಳಿದ್ದಾರೆ.

ಚೀನಾದೊಂದಿಗಿನ ಗಡಿ ಸಂಘರ್ಷವನ್ನು ಸಹ ಪ್ರಸ್ತಾಪಿಸಿರುವ ಅವರು ಗಡಿ ಭಾಗಗಳಲ್ಲಿ ಅತಿಕ್ರಮಣ ಹಾಗೂ ಆಕ್ರಮಣ ಮಂದುವರಿದಿದೆ ಎಂದಿದ್ದಾರೆ
‘‘ಮೋದಿ ಸರ್ಕಾರ ಭಾರತದ ಭವಿಷ್ಯವನ್ನು ಅಪಾಯಕ್ಕೆ ದೂಡುತ್ತಿದೆ. ಜೆಇಇ ಮತ್ತು ಎನ್ಇಇಟಿ ಆಕಾಂಕ್ಷಿಗಳ ಹಾಗೂ ಎಸ್ಎಸ್ಸಿ ಮತ್ತಿತರ ಪರೀಕ್ಷೆಗಳನ್ನು ಬರೆದಿರುವವರ ಜ್ವಲಂತ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿರುವುದು ಮೋದಿ ಸರ್ಕಾರದ ದುರಂಹಕಾರವೇ ಹೊರತು ಬೇರೇನೂ ಅಲ್ಲ. ಜನಕ್ಕೆ ಬೇಕಿರುವುದು ನೌಕರಿಗಳು, ಟೊಳ್ಳು ಭರವಸೆ, ಘೋಷಣೆಗಳಲ್ಲ,’’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.