ಭಾರತ ಎಂದಿಗೂ ಸರ್ವಾಧಿಕಾರವನ್ನು ಸ್ವೀಕರಿಸುವುದಿಲ್ಲ; ಅಮಿತ್ ಶಾ

ಕಾಂಗ್ರೆಸ್‌ ಸರ್ಕಾರ ಘೋಷಿಸಿದ್ದ ತುರ್ತು ಪರಿಸ್ಥಿತಿಯ 50ನೇ ವಾರ್ಷಿಕೋತ್ಸವದ ಮುನ್ನಾದಿನವಾದ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ದೇಶದ ಜನರು "ಎಂದಿಗೂ ಸರ್ವಾಧಿಕಾರವನ್ನು ಸ್ವೀಕರಿಸುವುದಿಲ್ಲ" ಎಂದು ಹೇಳಿದರು. ಕಾಂಗ್ರೆಸ್ ಜೊತೆ ಕೈಜೋಡಿಸಿರುವ ಡಿಎಂಕೆ, ಸಮಾಜವಾದಿ ನಾಯಕರು ಮತ್ತು ಇತರ ಪಕ್ಷಗಳನ್ನು ಕೂಡ ತರಾಟೆಗೆ ತೆಗೆದುಕೊಂಡ ಅಮಿತ್ ಶಾ, ತುರ್ತು ಪರಿಸ್ಥಿತಿ ಹೇರುವ ಮೂಲಕ "ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದ" ಪಕ್ಷದ ಜೊತೆ ಅವರು ಸೇರಿಕೊಂಡಿದ್ದಾರೆ ಎಂದು ಹೇಳಿದರು.

ಭಾರತ ಎಂದಿಗೂ ಸರ್ವಾಧಿಕಾರವನ್ನು ಸ್ವೀಕರಿಸುವುದಿಲ್ಲ; ಅಮಿತ್ ಶಾ
Amit Shah

Updated on: Jun 24, 2025 | 9:26 PM

ನವದೆಹಲಿ, ಜೂನ್ 24: 1975ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ಪ್ರಧಾನಿ ಇಂದಿರಾ ಗಾಂಧಿಯವರು ಭಾರತದಲ್ಲಿ ಹೇರಿದ ತುರ್ತು ಪರಿಸ್ಥಿತಿಯ 50ನೇ ವಾರ್ಷಿಕೋತ್ಸವದ ಮುನ್ನಾದಿನವಾದ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡರು. ಈ ದೇಶದ ಜನರು “ಎಂದಿಗೂ ಸರ್ವಾಧಿಕಾರವನ್ನು ಸ್ವೀಕರಿಸುವುದಿಲ್ಲ” ಎಂದು ಅವರು ಹೇಳಿದರು. ತುರ್ತು ಪರಿಸ್ಥಿತಿಯಂತಹ ದೊಡ್ಡ ಘಟನೆಯ ನೆನಪು ಜನರ ಮನಸಿನಿಂದ ಮರೆಯಾಗಲು ಪ್ರಾರಂಭಿಸಿದರೆ ಅದು ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಗಂಭೀರ ಆತಂಕವಾಗಿದೆ ಎಂದು ಅಮಿತ್ ಶಾ ಹೇಳಿದರು.

“ಇಂದು ನಾವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ತುರ್ತು ಪರಿಸ್ಥಿತಿಯಂತಹ ಕರಾಳ ಅಧ್ಯಾಯವನ್ನು ಜಯಿಸಲು ಕಾರಣ ನಮ್ಮ ರಾಷ್ಟ್ರವು ಎಂದಿಗೂ ಸರ್ವಾಧಿಕಾರಕ್ಕೆ ತಲೆಬಾಗುವುದಿಲ್ಲ ಎಂಬುದಾಗಿದೆ” ಎಂದು ರಾಷ್ಟ್ರ ರಾಜಧಾನಿ ದಹಲಿಯಲ್ಲಿ ತುರ್ತು ಪರಿಸ್ಥಿತಿಯ ಕುರಿತು ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ ಹೇಳಿದರು.

ಇದನ್ನೂ ಓದಿ: ಏರ್ ಇಂಡಿಯಾ ದುರಂತ; ಮೃತ ಮೆಡಿಕಲ್ ವಿದ್ಯಾರ್ಥಿಗಳ ಕುಟುಂಬಕ್ಕೆ 6 ಕೋಟಿ ನೆರವು ನೀಡಿದ ಯುಎಇ ವೈದ್ಯ

“ಈ ದೇಶದ ಜನರು ಎಂದಿಗೂ ಸರ್ವಾಧಿಕಾರವನ್ನು ಸ್ವೀಕರಿಸುವುದಿಲ್ಲವಾದ್ದರಿಂದ ನಾವು ತುರ್ತು ಪರಿಸ್ಥಿತಿಯ ವಿರುದ್ಧದ ಯುದ್ಧವನ್ನು ಗೆದ್ದಿದ್ದೇವೆ . ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಚೈತನ್ಯವು ಭಾರತದಲ್ಲಿ ಅಂತರ್ಗತವಾಗಿದೆ. 50 ವರ್ಷಗಳ ಹಿಂದೆ ನಡೆದದ್ದನ್ನು ಏಕೆ ಚರ್ಚಿಸಬೇಕು ಎಂದು ಅನೇಕ ಜನರು ಕೇಳುತ್ತಾರೆ? 50 ವರ್ಷಗಳು ನೆನಪುಗಳು ಮಸುಕಾಗಲು ಬಹಳ ಸಮಯ ಬೇಕಾಗದು. ಆದ್ದರಿಂದ, ತುರ್ತು ಪರಿಸ್ಥಿತಿಯ ಬಗ್ಗೆ ಸಮಾಜದ ಸ್ಮರಣೆಯನ್ನು ಪುನರ್ನಿರ್ಮಿಸಬೇಕು” ಎಂದು ಅವರು ಹೇಳಿದರು.


ಕಾಂಗ್ರೆಸ್ ವಿರುದ್ಧ ಅಮಿತ್ ಶಾ ವಾಗ್ದಾಳಿ:

“ಸಂವಿಧಾನ ಅಪಾಯದಲ್ಲಿದೆ” ಎಂಬ ಕಾಂಗ್ರೆಸ್ ಹೇಳಿಕೆಯ ವಿರುದ್ಧ ವಾಗ್ದಾಳಿ ನಡೆಸಿದ ಗೃಹ ಸಚಿವ ಅಮಿತ್ ಶಾ, ಜೂನ್ 25, 1975ರಂದು ತುರ್ತು ಪರಿಸ್ಥಿತಿ ಘೋಷಿಸುವ ಮೊದಲು ಅಂದಿನ ಪ್ರಧಾನಿ ಇಂದಿರಾ ಗಾಂಧಿ ವಿರೋಧ ಪಕ್ಷದ ನಾಯಕರು ಮತ್ತು ನಾಗರಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೇ? ಎಂದು ಕೇಳಿದರು.


ಇದನ್ನೂ ಓದಿ: ಭಾರತದಲ್ಲಿ ಇಂಗ್ಲಿಷ್ ಮಾತನಾಡುವವರು ಶೀಘ್ರದಲ್ಲೇ ನಾಚಿಕೆ ಪಡಬೇಕಾಗುತ್ತದೆ; ಅಮಿತ್ ಶಾ

“ಇಂದು, ಕೆಲವರು ಸಂವಿಧಾನದ ಪಾವಿತ್ರ್ಯದ ಬಗ್ಗೆ ಬೋಧಿಸುತ್ತಾರೆ. ಆದರೆ ನಾನು ಕೇಳಲು ಬಯಸುತ್ತೇನೆ ನೀವು ಯಾವ ಪಕ್ಷಕ್ಕೆ ಸೇರಿದವರು? ಇಂದಿರಾ ಗಾಂಧಿ ಅವರು ಆಲ್ ಇಂಡಿಯಾ ರೇಡಿಯೋದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಬೆಳಿಗ್ಗೆ ನೆನಪಿದೆಯೇ? ಇದಕ್ಕೂ ಮೊದಲು ಸಂಸತ್ತನ್ನು ಅವರು ಸಂಪರ್ಕಿಸಿದ್ದರೇ? ವಿರೋಧ ಪಕ್ಷದ ನಾಯಕರು ಮತ್ತು ನಾಗರಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೇ?” ಎಂದು ಅಮಿತ್ ಶಾ ಪ್ರಶ್ನಿಸಿದ್ದಾರೆ.


ಸಂವಿಧಾನ ಹತ್ಯಾ ದಿವಸ್:

2024ರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೇಂದ್ರ ಸರ್ಕಾರವು ಜೂನ್ 25 ಅನ್ನು ಪ್ರತಿ ವರ್ಷ ‘ಸಂವಿಧಾನ ಹತ್ಯಾ ದಿವಸ್ (ಸಂವಿಧಾನದ ಹತ್ಯೆಯ ದಿನ)’ ಎಂದು ಆಚರಿಸಲು ನಿರ್ಧರಿಸಿದೆ ಎಂದು ಘೋಷಿಸಿದರು. ಇದು 1975ರಲ್ಲಿ ಅಂದಿನ ಕಾಂಗ್ರೆಸ್ ಆಡಳಿತವು ಹೇರಿದ ತುರ್ತು ಪರಿಸ್ಥಿತಿಯ ನೆನಪಿನಲ್ಲಿ ಆಚರಿಸುವ ದಿನವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us