ಬೇರೆ ಧರ್ಮದವನನ್ನು ಮದುವೆಯಾದ ಮಗಳ ಶ್ರಾದ್ಧ ಮಾಡಿದ ಅಪ್ಪ-ಅಮ್ಮ!
ಅನ್ಯಧರ್ಮೀಯನನ್ನು ಮದುವೆಯಾದ ಮಗಳಿಗೆ ಆಕೆಯ ಪೋಷಕರು ಆಕೆ ಬದುಕಿರುವಾಗಲೇ ಶ್ರಾದ್ಧ ಕಾರ್ಯ ಮಾಡಿದ್ದಾರೆ. ತಾವು ಬೇಡವೆಂದರೂ ಕೇಳದೆ ಬೇರೆ ಧರ್ಮೀಯನನ್ನು ಮದುವೆಯಾದಳು ಎಂಬ ಕಾರಣಕ್ಕೆ ಅವರು ಹಿಂದೂ ಧರ್ಮದ ಪ್ರಕಾರ ಈ ಕಾರ್ಯ ಮಾಡಿದ್ದಾರೆ. ಪ್ರೇಮವಿವಾಹಕ್ಕೆ ಇಂದಿನ ಕಾಲದಲ್ಲೂ ಸಾಕಷ್ಟು ವಿರೋಧಗಳು ತಪ್ಪಿಲ್ಲ. ಬೇರೆ ಜಾತಿ, ಧರ್ಮದವನನ್ನು ಮದುವೆಯಾಗಿದ್ದಕ್ಕೆ ಮರ್ಯಾದಾ ಹತ್ಯೆ ಇಂದಿಗೂ ಕಡಿಮೆಯಾಗಿಲ್ಲ. ಪಶ್ಚಿಮ ಬಂಗಾಳದಲ್ಲಿ ಇದೀಗ ಪೋಷಕರು ಮಗಳ ಪ್ರೇಮವಿವಾಹವನ್ನು ಖಂಡಿಸಿ ಆಕೆಯ ಶ್ರಾದ್ಧ ಮಾಡಿದ್ದಾರೆ.

ಕೊಲ್ಕತ್ತಾ, ಜೂನ್ 24: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಯುವತಿಯೊಬ್ಬಳು ಬೇರೆ ಧರ್ಮದ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ಇದರಿಂದ ಆ ಯುವತಿಯ ಕುಟುಂಬ ಸದಸ್ಯರು ಆಕ್ರೋಶಗೊಂಡಿದ್ದಾರೆ. ಹೀಗಾಗಿ, ಆ ಯುವತಿ ಜೀವಂತವಾಗಿರುವಾಗಲೇ ಅವರು ಸಾಂಪ್ರದಾಯಿಕ ಹಿಂದೂ ಆಚರಣೆಗಳಂತೆ ಶ್ರಾದ್ಧ ಕಾರ್ಯ ಮಾಡಿದ್ದಾರೆ. ತಮ್ಮ ಮಗಳು ಇನ್ನೂ ಶಿಕ್ಷಣವನ್ನು ಪೂರ್ಣಗೊಳಿಸಿಲ್ಲ, ಆಕೆಯನ್ನು ಮರುಳು ಮಾಡಿ ಮದುವೆ ಮಾಡಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಪದವಿಯನ್ನೂ ಪೂರ್ಣಗೊಳಿಸದ ತಮ್ಮ ಮಗಳು, ತಮ್ಮ ಒಪ್ಪಿಗೆಯಿಲ್ಲದೆ ಬೇರೆ ಧರ್ಮದ ವ್ಯಕ್ತಿಯನ್ನು ಮದುವೆಯಾಗುವ ಮೂಲಕ ಅವರ ಕುಟುಂಬಕ್ಕೆ ಅವಮಾನ ಮಾಡಿದ್ದಾಳೆ ಎಂದು ಅವರು ಹೇಳಿದ್ದಾರೆ. ಪೋಷಕರ ಬಗ್ಗೆ ಕಾಳಜಿ ವಹಿಸದ ತಮ್ಮ ಮಗಳು ಜೀವಂತವಾಗಿದ್ದರೂ ಸಹ ತಮ್ಮ ಪಾಲಿಗೆ ಆಕೆ ಸತ್ತಂತೆ ಎಂದು ಆಕೆಯ ಕುಟುಂಬ ಹೇಳಿದೆ.
ಯುವತಿಯ ಮದುವೆಯ ಬಗ್ಗೆ ಮಾತನಾಡುತ್ತಾ ಆ ಯುವತಿಯ ಚಿಕ್ಕಪ್ಪ ಸೋಮನಾಥ್ ಬಿಸ್ವಾಸ್ ಅವರು ತಮ್ಮ ಮನೆಯ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕೆಂದು ಬಯಸಿದ್ದೆವು. ಅದಕ್ಕಾಗಿಯೇ ಒಳ್ಳೆಯ ಸಂಬಂಧವನ್ನು ನೋಡಿ ಮದುವೆ ಮಾಡಲು ನಿರ್ಧರಿಸಿದೆವು. ಆದರೆ ಆಕೆ ನಮ್ಮ ಮಾತನ್ನು ಕೇಳಲು ಸಹ ಬಯಸಲಿಲ್ಲ. ಅವಳು ನಮ್ಮನ್ನು ಬಿಟ್ಟು ಬೇರೆಯವರೊಂದಿಗೆ ಹೇಳದೆ ಕೇಳದೆ ಓಡಿಹೋದಳು. ಆತನನ್ನೇ ಮದುವೆಯಾದಳು. ಹೀಗಾಗಿ, ಆ ಯುವತಿಯ ಮದುವೆಯ 12 ದಿನಗಳ ನಂತರ ತಮ್ಮ ಮನೆ ಮಗಳು ಸತ್ತಿದ್ದಾಳೆಂದು ಭಾವಿಸಿ ಈ ಪಿಂಡ ಪ್ರದಾನ ಆಚರಣೆಯನ್ನು ಮಾಡಿರುವುದಾಗಿ ಅವರು ಹೇಳಿದ್ದಾರೆ. ಹಾಗೇ, ತಲೆ ಬೋಳಿಸುವುದು ಸೇರಿದಂತೆ ಹಿಂದೂ ಸಂಪ್ರದಾಯದ ಪ್ರಕಾರ ಎಲ್ಲಾ ‘ಶ್ರಾದ್ಧ’ ಆಚರಣೆಗಳನ್ನು ಅನುಸರಿಸಿದ್ದೇವೆ ಎಂದು ಅವರು ಹೇಳಿದರು. ಅರ್ಚಕರು ಶ್ರಾದ್ಧದ ಸ್ಥಳದಲ್ಲಿ ಯುವತಿಯ ಫೋಟೋಗೆ ಹಾರ ಹಾಕಿದರು.
ಇದನ್ನೂ ಓದಿ: ಪ್ರೇಮಿಗಳ ನಡುವೆ ಕಿರಿಕ್: ಆ ವಿಡಿಯೋದಿಂದಲೇ ದುರಂತ ಸಾವುಕಂಡ ಪ್ರೇಯಸಿ
ಇದೇ ವಿಷಯದ ಬಗ್ಗೆ ಮಾತನಾಡಿದ ಯುವತಿಯ ತಾಯಿ, “ನಮ್ಮ ಮಾತಿಗೆ ಬೆಲೆ ಕೊಡದೆ ಮನೆಯಿಂದ ಓಡಿಹೋದ ನಮ್ಮ ಮಗಳು ಜೀವಂತವಾಗಿದ್ದರೂ ನಮಗೆ ಸತ್ತಂತೆಯೇ. ಅದಕ್ಕಾಗಿಯೇ ನಾವು ಅವಳ ಮಗಳ ಎಲ್ಲಾ ವೈಯಕ್ತಿಕ ವಸ್ತುಗಳನ್ನು ಸುಟ್ಟು ಹಾಕಿದ್ದೇವೆ” ಎಂದು ಹೇಳಿದರು.
ನಾಡಿಯಾ ಜಿಲ್ಲೆಯ ಎರಡನೇ ವರ್ಷದ ಪದವಿ ವಿದ್ಯಾರ್ಥಿಯೊಬ್ಬಳ ಕುಟುಂಬ ಸದಸ್ಯರು ಮದುವೆ ನಿಶ್ಚಯಿಸಿದರು. ಆದರೆ, ಆ ಯುವತಿ ಮದುವೆಯನ್ನು ನಿರಾಕರಿಸಿದಳು. ಅವಳು ಆ ಮದುವೆಯನ್ನು ವಿರೋಧಿಸಿ ಬೇರೆ ಧರ್ಮದ ಯುವಕನೊಂದಿಗೆ ಮನೆ ಬಿಟ್ಟು ಹೋದಳು. ಅವಳು ಬೇರೆಡೆ ಮದುವೆಯಾದಳು. ಮದುವೆಯಾದ 12 ದಿನಗಳ ನಂತರ ಆಕೆಯ ಕುಟುಂಬವು ಆಕೆ ಜೀವಂತವಾಗಿರುವಾಗಲೇ ಮರಣ ಹೊಂದಿದ ವ್ಯಕ್ತಿಗೆ ಮಾಡಿದಂತೆ ಆಚರಣೆಗಳನ್ನು ಮಾಡಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




