ಅವರು ನಮ್ಮ ಎದೆ ಮೇಲೆ ರೈಫಲ್ ಇಟ್ಟು ಲೂಟಿ ಮಾಡಿದರು; ಸುಡಾನ್​​ ಸಂಘರ್ಷದ ಹೊತ್ತಲ್ಲಿ ಬದುಕಿನ ಕತೆ ಹೇಳಿದ ಭಾರತೀಯರು

Sudan Crisis: ರಾಜಧಾನಿ ಖಾರ್ಟೊಮ್​​ನಲ್ಲಿ ಸುಡಾನ್ ಸೇನೆ ಮತ್ತು ಅರೆಸೇನಾ ಗುಂಪುಗಳ ನಡುವಿನ ಕಾಳಗ ತೀವ್ರಗೊಂಡಿದ್ದು, ಕದನ ಪೀಡಿತ ಸುಡಾನ್‌ನಿಂದ  ಭಾರತ 'ಆಪರೇಷನ್ ಕಾವೇರಿ' ಅಡಿಯಲ್ಲಿ ತನ್ನ ನಾಗರಿಕರನ್ನು ಸ್ಥಳಾಂತರಿಸುವ ಕಾರ್ಯ ಮಾಡುತ್ತಿದೆ

ಅವರು ನಮ್ಮ ಎದೆ ಮೇಲೆ ರೈಫಲ್ ಇಟ್ಟು ಲೂಟಿ ಮಾಡಿದರು; ಸುಡಾನ್​​ ಸಂಘರ್ಷದ ಹೊತ್ತಲ್ಲಿ ಬದುಕಿನ ಕತೆ ಹೇಳಿದ ಭಾರತೀಯರು
ಆಪರೇಷನ್ ಕಾವೇರಿ
ರಶ್ಮಿ ಕಲ್ಲಕಟ್ಟ

Updated on: Apr 26, 2023 | 8:15 PM

ದೆಹಲಿ: ಸುಡಾನ್‌ನಲ್ಲಿ 72 ಗಂಟೆಗಳ ಕದನ ವಿರಾಮದ (ceasefire) ನಡುವೆ, ದೇಶಗಳು ತಮ್ಮ ನಾಗರಿಕರನ್ನು ಸ್ಥಳಾಂತರಿಸುತ್ತಿದ್ದು ಭಾರತ, ಆಪರೇಷನ್ ಕಾವೇರಿ (Operation Kaveri) ಅಡಿಯಲ್ಲಿ ತನ್ನ ಪ್ರಜೆಗಳನ್ನು ಸ್ಥಳಾಂತರಿಸುತ್ತಿದೆ. ರಕ್ಷಣಾ ಪ್ರಯತ್ನದ ಭಾಗವಾಗಿ ಸಂಘರ್ಷ ಪೀಡಿತ ಸುಡಾನ್‌ನಿಂದ (Sudan) ಸಿಕ್ಕಿಬಿದ್ದ ಸುಮಾರು 250 ಭಾರತೀಯರ ಮತ್ತೊಂದು ಬ್ಯಾಚ್ ಅನ್ನು ವಾಯುಪಡೆ ಕರೆತಂದಿದೆ. ಎರಡು IAF C-130 J ವಿಮಾನಗಳ ಮೂಲಕ 250 ಕ್ಕೂ ಹೆಚ್ಚು ಜನರನ್ನು ಪೋರ್ಟ್ ಸುಡಾನ್‌ನಿಂದ ಸ್ಥಳಾಂತರಿಸಲಾಯಿತು. ಇದಕ್ಕೂ ಮುನ್ನ ಬುಧವಾರ ಸುಡಾನ್‌ನಿಂದ 135 ಮಂದಿ ಭಾರತೀಯರನ್ನು ರಕ್ಷಿಸಲಾಗಿತ್ತು. ಹಿಂಸಾಚಾರ ಪೀಡಿತ ಸುಡಾನ್‌ನಿಂದ ಸ್ಥಳಾಂತರಿಸಲ್ಪಟ್ಟ ಭಾರತೀಯರು ತಮ್ಮ ಬದುಕಿನ ಹೋರಾಟದ ಬಗ್ಗೆ ಮಾತನಾಡಿದ್ದಾರೆ. ಅದು ಎಷ್ಟು ತೀವ್ರವಾಗಿದೆಯೆಂದರೆ ಅವರು ಆಹಾರಕ್ಕಾಗಿ ಪರದಾಡಬೇಕಾದ ಪರಿಸ್ಥಿತಿ ಬಂದಿತ್ತು. ಸುಡಾನ್‌ನಿಂದ ಸ್ಥಳಾಂತರಿಸಲ್ಪಟ್ಟ ಭಾರತೀಯರಲ್ಲಿ ಒಬ್ಬರು ನಮ್ಮ ಹೋರಾಟವು ತೀವ್ರವಾಗಿತ್ತು. ನಾವು ಆಹಾರಕ್ಕಾಗಿ ಹೆಣಗಾಡಿದ್ದೇವೆ. ಇದೇ ರೀತಿ 2-3 ದಿನಗಳವರೆಗೆ ಮುಂದುವರೆಯಿತು ಎಂದು ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಕಾಳಗದಿಂದಾಗಿ ಸುಡಾನ್ ಹಿಂಸಾಚಾರ ಎದುರಿಸುತ್ತಿದೆ. 72 ಗಂಟೆಗಳ ಕದನ ವಿರಾಮದ ನಡುವೆಯೂ ಹಿಂಸಾಚಾರ ನಡೆದಿರುವುದಾಗಿ ವರದಿಯಾಗಿದೆ

ಸುಡಾನ್‌ನ ಸೇನಾ ಮುಖ್ಯಸ್ಥ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ಮತ್ತು ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳ (ಆರ್‌ಎಸ್‌ಎಫ್) ಕಮಾಂಡ್ ಆಗಿರುವ ಆತನ ಉಪನಾಯಕ ಮೊಹಮದ್ ಹಮ್ದಾನ್ ಡಗಾಲೊ ಅವರಿಗೆ ನಿಷ್ಠರಾಗಿರುವ ಪಡೆಗಳ ನಡುವೆ ಹೋರಾಟ ನಡೆಯುತ್ತಿದೆ.

ನಮ್ಮ ಕಂಪನಿಯ ಬಳಿ ಕ್ಷಿಪ್ರ ಬೆಂಬಲ ಪಡೆಗಳ (ಆರ್‌ಎಸ್‌ಎಫ್) ಟೆಂಟ್ ಇತ್ತು. ಮುಂಜಾನೆ ಸುಮಾರು 9 ಗಂಟೆಗೆ, ಪಡೆಗಳು ನಮ್ಮ ಕಂಪನಿಗೆ ಪ್ರವೇಶಿಸಿದವು. ನಮ್ಮನ್ನು ಲೂಟಿ ಮಾಡಲಾಯಿತು. ಅವರು ನಮ್ಮನ್ನು ಎಂಟು ಗಂಟೆಗಳ ಕಾಲ ಒತ್ತೆಯಾಳಾಗಿ ಇರಿಸಿದರು. ಅವರು ನಮ್ಮ ಎದೆಯ ಮೇಲೆ ರೈಫಲ್‌ಗಳನ್ನು ಇಟ್ಟುಕೊಂಡು ನಮ್ಮನ್ನು ಲೂಟಿ ಮಾಡಿದರು. ನಮ್ಮ ಮೊಬೈಲ್‌ಗಳನ್ನು ಕದ್ದಿದ್ದಾರೆ ಎಂದು ಸ್ಥಳಾಂತರಗೊಂಡ ಮತ್ತೊಬ್ಬ ಭಾರತೀಯ ಹೇಳಿದ್ದಾರೆ.

ನಾವು ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರುತ್ತೇವೆ ನಮ್ಮಲ್ಲಿ ಡೀಸೆಲ್ ಇರುವುದರಿಂದ ಬಸ್‌ಗಳಿಗೆ ವ್ಯವಸ್ಥೆ ಮಾಡಲು ಹೇಳಿದ್ದೇವೆ. ಭಾರತೀಯ ನೌಕಾಪಡೆಯು ಬಂದು ನಮ್ಮನ್ನು ಚೆನ್ನಾಗಿ ನಡೆಸಿಕೊಂಡಿತು” ಎಂದು ಸುಡಾನ್‌ನಿಂದ ಸ್ಥಳಾಂತರಗೊಂಡ ಮತ್ತೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ:Operation Kaveri: 72 ಗಂಟೆಗಳ ಕದನ ವಿರಾಮದ ನಡುವೆ ಸುಡಾನ್‌ನಿಂದ 534 ನಾಗರಿಕರನ್ನು ಸ್ಥಳಾಂತರಿಸಿದ ಭಾರತ

ರಾಜಧಾನಿ ಖಾರ್ಟೊಮ್​​ನಲ್ಲಿ ಸುಡಾನ್ ಸೇನೆ ಮತ್ತು ಅರೆಸೇನಾ ಗುಂಪುಗಳ ನಡುವಿನ ಕಾಳಗ ತೀವ್ರಗೊಂಡಿದ್ದು, ಕದನ ಪೀಡಿತ ಸುಡಾನ್‌ನಿಂದ  ಭಾರತ ‘ಆಪರೇಷನ್ ಕಾವೇರಿ’ ಅಡಿಯಲ್ಲಿ ತನ್ನ ನಾಗರಿಕರನ್ನು ಸ್ಥಳಾಂತರಿಸುವ ಕಾರ್ಯ ಮಾಡುತ್ತಿದೆ. ಸುಮಾರು 500 ಭಾರತೀಯರು ಪೋರ್ಟ್ ಸುಡಾನ್ ತಲುಪಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಸೋಮವಾರ ತಿಳಿಸಿದ್ದಾರೆ.

ಸುಡಾನ್‌ನಲ್ಲಿ ಸಿಲುಕಿರುವ ನಮ್ಮ ನಾಗರಿಕರನ್ನು ಮರಳಿ ಕರೆತರಲು ಆಪರೇಷನ್ ಕಾವೇರಿ ನಡೆಯುತ್ತಿದೆ. ಸುಮಾರು 500 ಭಾರತೀಯರು ಸುಡಾನ್ ಬಂದರು ತಲುಪಿದ್ದಾರೆ. ನಮ್ಮ ಹಡಗುಗಳು ಮತ್ತು ವಿಮಾನಗಳು ಅವರನ್ನು ಮನೆಗೆ ಕರೆತರಲು ಸಜ್ಜಾಗಿವೆ. ಸಹಾಯ ಮಾಡಲು ಬದ್ಧವಾಗಿದೆ ಎಂದು ಜೈಶಂಕರ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:14 pm, Wed, 26 April 23

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us