Kannada News National Is Gramin Bharat Bandh on February 16 by SKM different from ongoing farmers' protest 10 points to know
Bharat bandh: ಈಗ ನಡೆಯುತ್ತಿರುವ ರೈತರ ಪ್ರತಿಭಟನೆ, ನಾಳೆಯ ಭಾರತ್ ಬಂದ್ ಭಿನ್ನ, ಹೇಗೆ?
ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ ಫೆಬ್ರವರಿ 16 ರಂದು ಬೆಳಿಗ್ಗೆ 6 ರಿಂದ ಸಂಜೆ 4 ರವರೆಗೆ ಗ್ರಾಮೀಣ ಭಾರತ್ ಬಂದ್ಗೆ ಕರೆ ನೀಡಿದ್ದು, ಕಾರ್ಮಿಕ ಸಂಘಟನೆ ಸೇರಿದಂತೆ ಎಡಪಕ್ಷಗಳು ಮತ್ತು ಕಾಂಗ್ರೆಸ್ ಕೂಡ ಬಂದ್ಗೆ ಬೆಂಬಲ ನೀಡಿದೆ. ಇತ್ತ ರೈತರು ಪ್ರತಿಭಟನೆ ಮುಂದುವರಿಸಿವೆ.ಹಾಗಾದರೆ ಇವೆರಡೂ ಹೇಗೆ ಭಿನ್ನ? ಇವರ ಬೇಡಿಕೆಗಳೇನು? ಇಲ್ಲಿದೆ ಮಾಹಿತಿ
ರೈತರ ಪ್ರತಿಭಟನೆ
ರಶ್ಮಿ ಕಲ್ಲಕಟ್ಟ
Updated on:
Feb 15, 2024 | 8:28 PM
ದೆಹಲಿ ಫೆಬ್ರುವರಿ 15: ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ(SKM-Samyukta Kisan Morcha) ಫೆಬ್ರವರಿ 16 ರಂದು ಬೆಳಿಗ್ಗೆ 6 ರಿಂದ ಸಂಜೆ 4 ರವರೆಗೆ ಗ್ರಾಮೀಣ ಭಾರತ್ ಬಂದ್ಗೆ (Gramin Bharat Bandh) ಕರೆ ನೀಡಿದೆ. ಇದು ಗ್ರಾಮೀಣ ಬಂದ್ ಆಗಿರುವುದರಿಂದ ಎಲ್ಲಾ ಕೃಷಿ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ. ಅನೇಕ ಕಾರ್ಮಿಕ ಸಂಘಟನೆಗಳು ಬಂದ್ಗೆ ಬೆಂಬಲ ನೀಡಿರುವುದರಿಂದ ಗ್ರಾಮದ ಅಂಗಡಿಗಳು, ಮಾರುಕಟ್ಟೆಗಳು ಮತ್ತು ವ್ಯಾಪಾರಗಳು ಮುಚ್ಚಲ್ಪಡುತ್ತವೆ. ಎಡಪಕ್ಷಗಳು ಮತ್ತು ಕಾಂಗ್ರೆಸ್ ಕೂಡ ಬಂದ್ಗೆ ಬೆಂಬಲ ನೀಡಿವೆ. ಈ ಬಂದ್ ಪಂಜಾಬ್-ಹರ್ಯಾಣ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗಿಂತ ಭಿನ್ನವಾಗಿದೆ .ಏಕೆಂದರೆ ಇವು ವಿಭಿನ್ನ ಸಂಘಟನೆಗಳು ಕರೆದಿರುವ ಎರಡು ವಿಭಿನ್ನ ಪ್ರತಿಭಟನೆಗಳು ಆಗಿದ್ದರೂ ಇವುಗಳ ಉದ್ದೇಶ ಒಂದೇ ಆಗಿದೆ.
ನಾಳೆ ಭಾರತ್ ಬಂದ್ ಮತ್ತು ರೈತರ ಪ್ರತಿಭಟನೆ ಬಗ್ಗೆ
ಪ್ರಮುಖವಾಗಿ ಪಂಜಾಬ್ನ ರೈತರು ಫೆಬ್ರುವರಿ 13 ರಂದು ‘ದಿಲ್ಲಿ ಚಲೋ’ ಪ್ರಾರಂಭಿಸಿದರು, ಅನೇಕ ಇತರ ವಿಷಯಗಳ ಜೊತೆಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಖಾತರಿಯನ್ನು ಒತ್ತಾಯಿಸಿದರು. ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಈ ಪ್ರತಿಭಟನೆಗೆ ಕರೆ ನೀಡಿವೆ. ದೆಹಲಿಗೆ ಬರುವುದು ಅವರ ಗುರಿಯಾಗಿತ್ತು. ಆದರೆ ಅವರನ್ನು ಹರ್ಯಾಣ ಪೊಲೀಸರು ಪಂಜಾಬ್-ಹರ್ಯಾ ಗಡಿಯಲ್ಲಿ ತಡೆದಿದ್ದಾರೆ. ಫೆಬ್ರವರಿ 13ರ ರಾತ್ರಿಯಿಂದ ಈ ರೈತರು ಗಡಿಯಲ್ಲಿ ಬೀಡು ಬಿಟ್ಟಿದ್ದಾರೆ.
ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಸರ್ಕಾರವನ್ನು ಒತ್ತಾಯಸಿ ಹೋರಾಟ ಮಾಡಿದ್ದ ರೈತ ಸಂಘಗಳು 2020-21ರಲ್ಲಿ ತಮ್ಮ ಪ್ರತಿಭಟನೆಯ ನಂತರ ವಿಭಜನೆಯಾಗಿವೆ. ಸಂಯುಕ್ತ ಕಿಸಾನ್ ಮೋರ್ಚಾ ಚಲೋ ದಿಲ್ಲಿ ಪ್ರತಿಭಟನೆಗೆ ಕೈಜೋಡಿಸಿಲ್ಲ. ನಾಳೆ ಗ್ರಾಮೀಣ ಭಾರತ್ ಬಂದ್ಗೆ ಕೇಂದ್ರ ಕಾರ್ಮಿಕ ಸಂಘಟನೆಗಳೊಂದಿಗೆ ಸಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ.
ಎರಡೂ ಪ್ರತಿಭಟನೆಗಳ ಬೇಡಿಕೆಗಳು ಒಂದೇ ಸ್ವಾಮಿನಾಥನ್ ಆಯೋಗದ ಶಿಫಾರಸಿನ ಆಧಾರದ ಮೇಲೆ ಎಲ್ಲಾ ಬೆಳೆಗಳಿಗೆ ಎಂಎಸ್ಪಿ, ಖರೀದಿಯ ಕಾನೂನು ಖಾತರಿ, ಸಾಲ ಮನ್ನಾ, ವಿದ್ಯುತ್ ದರದಲ್ಲಿ ಹೆಚ್ಚಳ ಮೇಡ ಮತ್ತು ಸ್ಮಾರ್ಟ್ ಮೀಟರ್ ಬೇಡ ಎಂಬುದಾಗಿದೆ. ಕೃಷಿಗೆ, ಗೃಹ ಬಳಕೆಗೆ ಮತ್ತು ಅಂಗಡಿಗಳಿಗೆ 300 ಯೂನಿಟ್ ವಿದ್ಯುತ್ ಉಚಿತ, ಸಮಗ್ರ ಬೆಳೆ ವಿಮೆ ಹಾಗೂ ಪಿಂಚಣಿಯನ್ನು ತಿಂಗಳಿಗೆ ₹ 10,000ಕ್ಕೆ ಹೆಚ್ಚಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಹರ್ಯಾಣದಲ್ಲಿ ಟೋಲ್ ಪಾವತಿಸದಂತೆ ಭಾರತೀಯ ಕಿಸಾನ್ ಯೂನಿಯನ್ ಕರೆ ನೀಡುವುದರೊಂದಿಗೆ ರೈತರ ಪ್ರತಿಭಟನೆ ಗುರುವಾರ ತೀವ್ರಗೊಂಡಿದೆ. ರೈತಸಂಘ ಆಂತರಿಕವಾಗಿ ತೆಗೆದುಕೊಂಡ ನಿರ್ಧಾರಗಳಲ್ಲಿ ಇದೂ ಒಂದು. “ಇಂದು ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ: ಮೊದಲನೆಯದು ನಾವು ನಾಳೆ ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ರವರೆಗೆ 3 ಗಂಟೆಗಳ ಕಾಲ ಹರ್ಯಾಣವನ್ನು ಟೋಲ್ ಮುಕ್ತಗೊಳಿಸುತ್ತೇವೆ. ನಾಡಿದ್ದು, ಪ್ರತಿ ತಹಸಿಲ್ನಲ್ಲಿ 12 ಗಂಟೆಯಿಂದ ಟ್ರಾಕ್ಟರ್ ಮೆರವಣಿಗೆ ಇರುತ್ತದೆ. ಫೆಬ್ರವರಿ 18 ರಂದು ಎಲ್ಲಾ ರೈತರು ಮತ್ತು ಕಾರ್ಮಿಕ ಸಂಘಟನೆಗಳ ಜಂಟಿ ಸಭೆ ನಡೆಯಲಿದೆ ಎಂದು ಗುರ್ನಾಮ್ ಸಿಂಗ್ ಚಾರುಣಿ ಹೇಳಿದರು.
ಗ್ರಾಮೀಣ ಭಾರತ್ ಬಂದ್ ಎಸ್ ಕೆಎಂ ಮತ್ತು ಸೆಂಟ್ರಲ್ ಟ್ರೇಡ್ ಯೂನಿಯನ್ಗಳ ಜಂಟಿ ಕರೆಯಾಗಿದ್ದು, ಬೆಳಿಗ್ಗೆ 6 ರಿಂದ ಸಂಜೆ 4 ರವರೆಗೆ ಎಲ್ಲಾ ಕೃಷಿ ಕೆಲಸಗಳನ್ನು ಸ್ಥಗಿತಗೊಳಿಸಲಾಗಿದೆ. ಅರ್ಥಶಾಸ್ತ್ರಜ್ಞ ಪ್ರಭಾತ್ ಪಟ್ನಾಯಕ್, ಇತಿಹಾಸಕಾರ ಇರ್ಫಾನ್ ಹಬೀಬ್, ಆರ್ಥಿಕ ಇತಿಹಾಸಕಾರ ನಾಸಿರ್ ತ್ಯಾಬ್ಜಿ, ಸಾಂಸ್ಕೃತಿಕ ಕಾರ್ಯಕರ್ತ ಅನಿಲ್ ಚಂದ್ರ ಮತ್ತು ಪತ್ರಕರ್ತ ಪಿ ಸಾಯಿನಾಥ್ ಮುಷ್ಕರವನ್ನು ಬೆಂಬಲಿಸಿದ ಪ್ರಮುಖ ವ್ಯಕ್ತಿಗಳು.
ಗ್ರಾಮೀಣ ಭಾರತ್ ಬಂದ್ ಮತ್ತು ರೈತರ ಪ್ರತಿಭಟನೆ ಫೆಬ್ರವರಿ 16 ರಂದು ವಿಲೀನಗೊಳ್ಳಲಿದ್ದು, ರೈತರು ರಾಷ್ಟ್ರವ್ಯಾಪಿ ಮುಖ್ಯ ರಸ್ತೆಗಳಲ್ಲಿ ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ ಚಕ್ಕಾ ಜಾಮ್ (ಹೆದ್ದಾರಿತಡೆ) ಮಾಡಲಿದ್ದಾರೆ. ದೇಶಾದ್ಯಂತ ಸಾರಿಗೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಪ್ರತಿಭಟನೆಗೆ ಸರ್ಕಾರ ಬೆಂಬಲ ನೀಡುತ್ತಿರುವುದರಿಂದ ಪಂಜಾಬ್ನಲ್ಲಿ ಹೆದ್ದಾರಿಗಳನ್ನು ಮುಚ್ಚಲಾಗಿದೆ.
ಭಾರತ್ ಬಂದ್ ಯಾವುದೇ ತುರ್ತು ಸೇವೆಗಳಿಗೆ ತೊಂದರೆಯಾಗದಂತೆ ಖಚಿತಪಡಿಸುತ್ತದೆ ಆದರೆ ಯಾವುದೇ ರೈತರು, ಕೃಷಿ ಕಾರ್ಮಿಕರು ಅಥವಾ ಗ್ರಾಮೀಣ ಕಾರ್ಮಿಕರು ಶುಕ್ರವಾರ ಕೆಲಸ ಮಾಡುವುದಿಲ್ಲ.
ಭಾರತ್ ಬಂದ್ನಲ್ಲಿ, ತರಕಾರಿಗಳು ಮತ್ತು ಇತರ ಬೆಳೆಗಳ ಪೂರೈಕೆ ಮತ್ತು ಖರೀದಿಯನ್ನು ಸ್ಥಗಿತಗೊಳಿಸಲಾಗುತ್ತದೆ.
ರೈತರ ಪ್ರತಿಭಟನೆಯ ನಡುವೆಯೇ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಂಎಸ್ಪಿಗೆ ಕಾನೂನು ಖಾತರಿ ನೀಡುವುದಾಗಿ ಹೇಳಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ 2010 ರಲ್ಲಿ ಸ್ವಾಮಿನಾಥನ್ ಆಯೋಗದ ವರದಿಯನ್ನು ಏಕೆ ಜಾರಿಗೊಳಿಸಲಿಲ್ಲ ಎಂದು ಬಿಜೆಪಿ ಕೇಳಿದ್ದರಿಂದ ಇಲ್ಲಿ ರಾಜಕೀಯ ವಾಕ್ಸಮರ ಶುರುವಾಗಿದೆ.
ಗ್ರಾಮೀಣ ಭಾರತ್ ಬಂದ್ನಿಂದಾಗಿ ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳು ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ ಎಂದು SKM ಹೇಳಿದ್ದರೂ, ಮುಷ್ಕರದ ಪರಿಣಾಮವು ಹೆಚ್ಚು ಇರುವ ಪಂಜಾಬ್ನಲ್ಲಿ ಪರೀಕ್ಷೆಗಳನ್ನು ಮುಂದೂಡಲು ಬೇಡಿಕೆಗಳಿವೆ.
ದೆಹಲಿ ಪೊಲೀಸರು ತಮ್ಮ ‘ದಿಲ್ಲಿ ಚಲೋ’ ಪ್ರತಿಭಟನೆಯ ಅಡಿಯಲ್ಲಿ ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸದಂತೆ ತಡೆಯಲು 30,000 ಕ್ಕೂ ಹೆಚ್ಚು ಅಶ್ರುವಾಯು ಶೆಲ್ಗಳಿಗೆ ಆದೇಶವನ್ನು ನೀಡುವ ಮೂಲಕ ಸಂಭಾವ್ಯ ಪ್ರತಿಭಟನೆಗಳಿಗೆ ಸಿದ್ಧತೆಗಳನ್ನು ನಡೆಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Rashmi Kallakatta
ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ