AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tiranga Rally 2022: ಶ್ರೀನಗರದಿಂದ ಲೇಹ್​ಗೆ ತಿರಂಗಾ ಯಾತ್ರೆ; ಇಂದು ಕಾರ್ಗಿಲ್​ನಲ್ಲಿ ತೇಜಸ್ವಿ ಸೂರ್ಯ  ಧ್ವಜಾರೋಹಣ

Kargil Victory Day 2022: ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷವಾಗಿರುವ ಅಮೃತ ಮಹೋತ್ಸವ (Azadi Ka Amrit Mahotsav) ಸಂಭ್ರಮದ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ 75 ಮೀಟರ್ ಉದ್ದದ ಧ್ವಜವನ್ನು ಅವರು ಕಾರ್ಗಿಲ್​ನಲ್ಲಿ ಹಾರಿಸಲಿದ್ದಾರೆ.

Tiranga Rally 2022: ಶ್ರೀನಗರದಿಂದ ಲೇಹ್​ಗೆ ತಿರಂಗಾ ಯಾತ್ರೆ; ಇಂದು ಕಾರ್ಗಿಲ್​ನಲ್ಲಿ ತೇಜಸ್ವಿ ಸೂರ್ಯ  ಧ್ವಜಾರೋಹಣ
ಶ್ರೀನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ
TV9 Web
| Edited By: |

Updated on: Jul 26, 2022 | 7:28 AM

Share

ಶ್ರೀನಗರ: ಕಾರ್ಗಿಲ್​ನಲ್ಲಿ ಭಾರತ ಸೇನೆಯು ಪಾಕಿಸ್ತಾನದ ವಿರುದ್ಧ ಜಯಗಳಿಸಿದ ಸಂಭ್ರಮವನ್ನು ದೇಶಾದ್ಯಂತ ಇಂದು ‘ಕಾರ್ಗಿಲ್​ ವಿಜಯ್ ದಿವಸ್’ (Kargil Vijay Diwas) ಆಗಿ ಆಚರಿಸಲಾಗುತ್ತಿದೆ. ಕಾರ್ಗಿಲ್ ವಿಜಯ್ ದಿವಸ್ ಪ್ರಯುಕ್ತ ಜಮ್ಮು-ಕಾಶ್ಮೀರದ ಕಾರ್ಗಿಲ್​ನಲ್ಲಿ ಬೆಂಗಳೂರು ಸಂಸದ ಮತ್ತು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಘಟಕದ ಅಧ್ಯಕ್ಷ ತೇಜಸ್ವಿ ಸೂರ್ಯ (Tejaswi Surya) ನೇತೃತ್ವದಲ್ಲಿ ತಿರಂಗಾ ಯಾತ್ರೆ (Tiranga Yatra) ನಡೆಯುತ್ತಿದೆ. ಕಾರ್ಗಿಲ್​​​​​ನಲ್ಲಿ 75 ಮೀಟರ್​ ಉದ್ದದ ಧ್ವಜಾರೋಹಣ ನೆರವೇರಿಸಲಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷವಾಗಿರುವ ಅಮೃತ ಮಹೋತ್ಸವ (Azadi Ka Amrit Mahotsav) ಸಂಭ್ರಮದ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ 75 ಮೀಟರ್ ಉದ್ದದ ಧ್ವಜವನ್ನು ಅವರು ಹಾರಿಸಲಿದ್ದಾರೆ.

‘ಕಾರ್ಗಿಲ್ ವಿಜಯ್ ದಿವಸ್’ ಪ್ರಯುಕ್ತ ಬಿಜೆಪಿ ಕಾಶ್ಮೀರ ಘಟಕವು ಸೋಮವಾರ ಶ್ರೀನಗರದ ಲಾಲ್​ಚೌಕ್​ನಿಂದ ಲೇಹ್​ವರೆಗೆ ತಿರಂಗಾ ಯಾತ್ರೆ ನಡೆಸಿತು. ಪಕ್ಷದ ಹಿರಿಯ ನಾಯಕ ತರುಣ್ ಛುಗ್ ತಿರಂಗ ಯಾತ್ರೆಗೆ ಚಾಲನೆ ನೀಡಿದರು. ಬಿಗಿ ಭದ್ರತೆಯ ನಡುವೆ ಐತಿಹಾಸಿಕ ಘಂಟಾ ಘರ್ ಪ್ರದೇಶದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಘೋಷಣೆಗಳನ್ನು ಮೊಳಗಿಸಿ ಲಾಲ್​ಚೌಕ್​ನಲ್ಲಿ ‘ಆಜಾದಿ ಕಾ ಅಮೃತ್ ಮಹೋತ್ಸವ್’ ಆಚರಿಸಿದರು.

ಬೆಂಗಳೂದು ದಕ್ಷಿಣ ಕ್ಷೇತ್ರದ ಸಂಸದ ಮತ್ತು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಘಟಕದ ಅಧ್ಯಕ್ಷ ತೇಜಸ್ವಿ ಸೂರ್ಯ ಬೈಕ್ ರ‍್ಯಾಲಿಯ ನೇತೃತ್ವ ವಹಿಸಿದ್ದರು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದತಿಯ ನಂತರ ಇದೇ ಮೊದಲ ಬಾರಿಗೆ ಲಾಲ್​ಚೌಕ್​ನಲ್ಲಿ ರಾಜಕೀಯ ಕಾರ್ಯಕ್ರಮವೊಂದು ನಡೆಯಿತು.

ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಸ್ತುತ ಅಭಿವೃದ್ಧಿಯ ಹೊಸ ಶಕೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ತೆಗೆದುಕೊಂಡಿರುವ ಹಲವು ನಿರ್ಣಯಗಳಿಂದ ಪ್ರಗತಿ, ಭದ್ರತೆ ಮತ್ತು ಅವಕಾಶಗಳು ಹೆಚ್ಚಾಗಿವೆ. ಜಮ್ಮು ಮತ್ತು ಕಾಶ್ಮೀರದ ಜನರು ಅಭಿವೃದ್ಧಿಯತ್ತ ಮುನ್ನಡೆಯುತ್ತಿದ್ದಾರೆ ಎಂದು ಛುಗ್ ಹೇಳಿದರು.

ಜಮ್ಮು ಕಾಶ್ಮೀರದ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳನ್ನು ಟೀಕಿಸಿದ ಅವರು, ವಿಶೇಷ ಸ್ಥಾನಮಾನ ರದ್ದತಿಗೆ ಮೊದಲು ರಾಜ್ಯದಲ್ಲಿ ಮೂರು ಕುಟುಂಬಗಳು ಅಧಿಕಾರ ಹಿಡಿದಿದ್ದವು. ಅಬ್ದುಲ್ಲಾ, ಮುಫ್ತಿ ಮತ್ತು ನೆಹರು ಕುಟುಂಬಗಳ ರಾಜಕೀಯ ನಿಲುವುಗಳು ಮತ್ತು ವಂಶಪಾರಂಪರ್ಯ ರಾಜಕಾರಣವನ್ನು ಖಂಡಿಸಿದರು. ಅವರು ಇಂದಿಗೂ ಗುಪ್ಕರ್ ಮೈತ್ರಿಕೂಟದ ಮೂಲಕ ಜಮ್ಮು ಕಾಶ್ಮೀರದಲ್ಲಿ ಆಟ ಆಡಲು ಬಯಸಿದ್ದಾರೆ. ಆದರೆ ಜಮ್ಮು ಕಾಶ್ಮೀರದ ಜನರು ಅವರನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದರು.

ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮೂರು ವರ್ಷಗಳ ಹಿಂದೆ ಕಾಶ್ಮೀರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಏಕತಾ ಯಾತ್ರೆ ಕರೆತಂದಿದ್ದರು. ಇದೇ ಸ್ಥಳದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದರು. ‘ಕಾಶ್ಮೀರಕ್ಕೆ ಇರುವ ವಿಶೇಷ ಸ್ಥಾನಮಾನ ರದ್ದುಪಡಿಸಿದರೆ ಭಾರತದ ಧ್ವಜವನ್ನು ಯಾರೂ ಹಾರಿಸುವುದಿಲ್ಲ’ ಎಂದು ಹೇಳಿದ್ದ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿಕೆಯನ್ನು ಪ್ರಸ್ತಾಪಿಸಿದ ಅವರು, ಅವರು ಈಗ ಶ್ರೀಲಂಕಾಕ್ಕೆ ಬಂದು ಇಲ್ಲಿನ ಸಂಭ್ರಮ ಮತ್ತು ಭಾರತದ ಧ್ವಜಗಳನ್ನು ನೋಡಬೇಕು ಎಂದು ಸವಾಲು ಹಾಕಿದರು.