ನೂತನ ಕೃಷಿ ಕಾಯ್ದೆ ವಿರೋಧಿಸಿ ಸುಪ್ರೀಂ ಕೋರ್ಟ್​ ಮೊರೆ ಹೋಗಲು ಮುಂದಾದ ಕೇರಳ

ಕೇರಳ ಈ ಕಾಯ್ದೆಯನ್ನು ಒಪ್ಪಿಕೊಳ್ಳುವುದಿಲ್ಲ. ಬದಲಾಗಿ ನಮ್ಮ ರೈತರಿಗಾಗಿ ನೂತನ ಸಹಕಾರಿ ಸಂಸ್ಥೆ ಹಾಗೂ ಸ್ವಸಹಾಯ ಸಂಘಗಳನ್ನು ಆರಂಭಿಸುತ್ತೇವೆ ಎಂದು ಕೃಷಿ ಸಚಿವ ವಿ.ಸುನಿಲ್ ಕುಮಾರ್ ಭರವಸೆ ನೀಡಿದ್ದಾರೆ.

ನೂತನ ಕೃಷಿ ಕಾಯ್ದೆ ವಿರೋಧಿಸಿ ಸುಪ್ರೀಂ ಕೋರ್ಟ್​ ಮೊರೆ ಹೋಗಲು ಮುಂದಾದ ಕೇರಳ
ಸುಪ್ರೀಂ ಕೋರ್ಟ್​
Updated By: ಸಾಧು ಶ್ರೀನಾಥ್​

Updated on: Dec 08, 2020 | 10:51 AM

ಕೊಚ್ಚಿ: ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ಶೀಘ್ರದಲ್ಲೇ ಸುಪ್ರೀಂ ಕೋರ್ಟ್​ ಮೆಟ್ಟಿಲೇರುವುದಾಗಿ ಕೇರಳ ರಾಜ್ಯದ ಕೃಷಿ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ. ಕೃಷಿ ಸಂಬಂಧಿತ ವಿಚಾರಗಳು ಕೇಂದ್ರ ಮತ್ತು ರಾಜ್ಯ ಎರಡಕ್ಕೂ ಸಂಬಂಧಪಟ್ಟಿದ್ದು, ರಾಜ್ಯಗಳ ಅಭಿಪ್ರಾಯ ಕೇಳದೇ ಕಾಯ್ದೆ ಜಾರಿಗೊಳಿಸುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದು ಹೇಳಿದ್ದಾರೆ.

ಏಕಾಏಕಿ ನೂತನ ಕಾಯ್ದೆ ಜಾರಿಗೊಳಿಸಲು ಮುಂದಾಗುವ ಮೂಲಕ ಕೇಂದ್ರ ಸರ್ಕಾರ ರಾಜ್ಯಗಳ ಹಕ್ಕನ್ನು ಕಿತ್ತುಕೊಳ್ಳುತ್ತಿದೆ. ನಾವು ಈ ಕುರಿತು ಕಾನೂನು ತಜ್ಞರ ಸಲಹೆ ಪಡೆದಿದ್ದೇವೆ. ಕೃಷಿ ಎಂಬುದು ರಾಜ್ಯಗಳಿಗೆ ಸಂಬಂಧಿಸಿದ ವಿಷಯವೂ ಹೌದು. ಸಂವಿಧಾನದ 7ನೇ ಪರಿಚ್ಛೇದದಲ್ಲಿ ಉಲ್ಲೇಖವಾಗಿರುವ ಈ ಅಂಶವನ್ನು ಆಧರಿಸಿ ನಾವು ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ಕಿವುಡು ಸರ್ಕಾರಕ್ಕೆ ರೈತರ ಕೂಗು ಕೇಳಿಸುತ್ತಿಲ್ಲ
ರೈತರ ಅಳಲು ಕಿವುಡು ಸರ್ಕಾರಕ್ಕೆ ಕೇಳುತ್ತಿಲ್ಲ. ರಾಜ್ಯ ಸರ್ಕಾರಗಳ ಜೊತೆ ರೈತರನ್ನೂ ಕತ್ತಲಲ್ಲಿ ಇಟ್ಟು ಕಾಯ್ದೆ ಜಾರಿಗೊಳಿಸಲು ಮುಂದಾಗಿರುವ ಕೇಂದ್ರದ ನಡೆ ಆಕ್ಷೇಪಾರ್ಹ ಎಂದು ಕೃಷಿ ಸಚಿವರು ಕಿಡಿಕಾರಿದ್ದಾರೆ. ಕೇರಳ ಈ ಕಾಯ್ದೆಯನ್ನು ಒಪ್ಪಿಕೊಳ್ಳುವುದಿಲ್ಲ. ಬದಲಾಗಿ ನಮ್ಮ ರೈತರಿಗಾಗಿ ನೂತನ ಸಹಕಾರಿ ಸಂಸ್ಥೆ ಹಾಗೂ ಸ್ವಸಹಾಯ ಸಂಘಗಳನ್ನು ಆರಂಭಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಅದರೆ, ಬಿಜೆಪಿ ನಾಯಕ ಹಾಗೂ ದೇಶ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಕೃಷಿ ಸಚಿವ ವಿ.ಸುನಿಲ್ ಕುಮಾರ್ ಅವರದ್ದು ರಾಜಕೀಯ ಪ್ರೇರಿತ ಮಾತುಗಳು. ಕೇರಳದಲ್ಲಿ ಕೃಷಿಯ ಮೇಲೆ ಅವಲಂಬಿತರಾಗಿರುವವರ ಪ್ರಮಾಣ ಕಡಿಮೆ ಇದೆ. ರಾಜಕೀಯ ಲಾಭಕ್ಕಾಗಿ ಇವರು ವಿರೋಧಿಸುತ್ತಿದ್ದಾರೆ. ಈ ಕಾಯ್ದೆಯಿಂದ ಕೇರಳಕ್ಕೆ ಏನೂ ಹಾನಿ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚುನಾವಣೆ ವೇಳೆ ಜಾಣ ನಡೆ.. ಕೇರಳದಲ್ಲಿ ಬಂದ್​ ಇಲ್ಲ
ಕೇರಳದಲ್ಲಿ ಇಂದು ಸ್ಥಳೀಯ ಚುನಾವಣೆಗಳು ಇರುವುದರಿಂದ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್​ಗೆ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಸಾಧಾರಣವಾಗಿ ಕೇಂದ್ರದ ವಿರುದ್ಧದ ಹೋರಾಟಗಳಿಗೆ ದನಿಗೂಡಿಸುತ್ತಿದ್ದ ಕೇರಳದ ರಾಜಕಾರಣಿಗಳು ಈ ಬಾರಿ ಚುನಾವಣೆಗೆ ತೊಂದರೆಯಾಗದಂತೆ ಜಾಣ ನಡೆ ಇರಿಸಿರುವುದು ಗಮನಾರ್ಹ.

ಕೃಷಿ ಕಾಯ್ದೆ ವಿರುದ್ಧ ಸಿಡಿದೆದ್ದ ರೈತರು.. ರಸ್ತೆ ಮೇಲೆ ಉಪಹಾರ ತಯಾರಿಸಿ ಹಲವು ಕಡೆ ವಿಭಿನ್ನ ಪ್ರತಿಭಟನೆ