ಮಧ್ಯ ಪ್ರದೇಶ: ರಾಜ್ಯ ಸಚಿವಾಲಯದಲ್ಲಿ ಭಾರೀ ಅಗ್ನಿ ಅವಘಡ

Fire at Vallabh Bhavan in Bhopal: ಮಧ್ಯ ಪ್ರದೇಶದ ರಾಜಧಾನಿ ಭೊಪಾಲ್​ನಲ್ಲಿರುವ ರಾಜ್ಯ ಸಚಿವಾಲಯ ಕಟ್ಟಡದಲ್ಲಿ ಶನಿವಾರ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಇದಕ್ಕೆ ಕಾರಣವೇನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಸದ್ಯ ಬೆಂಕಿ ನಂದಿಸುವ ಕಾರ್ಯ ಪ್ರಗತಿಯಲ್ಲಿದೆ. ಮುಖ್ಯಮಂತ್ರಿ ಸೇರಿದಂತೆ ಹಲವು ಮಂದಿ ಸಚಿವರ ಕಚೇರಿಗಳೂ ಈ ಕಟ್ಟದಲ್ಲಿವೆ.

ಮಧ್ಯ ಪ್ರದೇಶ: ರಾಜ್ಯ ಸಚಿವಾಲಯದಲ್ಲಿ ಭಾರೀ ಅಗ್ನಿ ಅವಘಡ
ಸಚಿವಾಲಯ ಕಟ್ಟಡ ವಲ್ಲಭ ಭವನದಲ್ಲಿ ಬೆಂಕಿ Image Credit source: ANI
Follow us
|

Updated on:Mar 09, 2024 | 11:41 AM

ಭೋಪಾಲ್, ಮಾರ್ಚ್​ 9: ಮಧ್ಯ ಪ್ರದೇಶದ ರಾಜಧಾನಿ ಭೋಪಾಲ್​ನಲ್ಲಿರುವ (Bhopal) ರಾಜ್ಯ ಸಚಿವಾಲಯದಲ್ಲಿ (State Secretariat) ಶನಿವಾರ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಸಚಿವಾಲಯ ಕಟ್ಟಡ ವಲ್ಲಭ ಭವನದಲ್ಲಿ (Vallabh Bhavan) ಬೆಂಕಿ ಕಾಣಿಸಿಕೊಂಡಿದ್ದು, ಅದನ್ನು ನಂದಿಸಲು ಹಲವು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಬೆಂಕಿ ವೇಗವಾಗಿ ಹರಡಿದ್ದಲ್ಲದೆ, ದಟ್ಟವಾದ ಹೊಗೆ ಆವರಿಸಿದೆ. ಅದೃಷ್ಟವಶಾತ್ ಸಾವು-ನೋವು ಸಂಭವಿಸಿದ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ.

ಮುಖ್ಯಮಂತ್ರಿ ಸೇರಿದಂತೆ ಹಲವು ಮಂದಿ ಸಚಿವರ ಕಚೇರಿಗಳೂ ಇಲ್ಲಿವೆ. ಕಟ್ಟಡದ ಐದನೇ ಮಹಡಿಯಲ್ಲಿ ಮುಖ್ಯಮಂತ್ರಿ ಕಚೇರಿ ಇದೆ. ಸದ್ಯ ಬೆಂಕಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ.

ಬೆಂಕಿ ಅವಘಡದ ಕಾರಣ ಹಲವು ಮಹತ್ವದ ದಾಖಲೆಗಳು ಸುಟ್ಟು ಭಸ್ಮವಾಗಿವೆ ಎಂದು ಹೇಳಲಾಗುತ್ತಿದೆ. ಒಳಗೆ ಐದು ಮಂದಿ ಸಿಲುಕಿರುವ ಬಗ್ಗೆ ವರದಿಯಾಗಿದೆ. ಬೆಂಕಿ ಅವಘಡದ ಬಗ್ಗೆ ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಬೆಂಕಿ ನಂದಿಸುವ ಕಾರ್ಯ ಇನ್ನೂ ನಡೆಯುತ್ತಿದೆ. ಸದ್ಯ ಅಗ್ನಿ ಸುರಕ್ಷತಾ ತಜ್ಞ ಪಂಕಜ್ ಖರೆ ಕೂಡ ಸ್ಥಳದಲ್ಲಿದ್ದಾರೆ.

ಅಗ್ನಿ ಅವಘಡದ ಬಗ್ಗೆ ಎಎನ್​ಐ ಎಕ್ಸ್ ಸಂದೇಶ

ಭೋಪಾಲ್‌ನ ವಲ್ಲಭ ಭವನದ ರಾಜ್ಯ ಸಚಿವಾಲಯದಲ್ಲಿ ಬೆಂಕಿ ಅವಘಡ ಸಂಭವಿಸಿದ ಕುರಿತು ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಪ್ರತಿಕ್ರಿಯಸಿದ್ದು, ಭವನದ ಹಳೆಯ ಕಟ್ಟಡದ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬುದು ಸದ್ಯದ ಮಾಹಿತಿಯಿಂದ ದೃಢಪಟ್ಟಿದೆ. ಜಿಲ್ಲಾಧಿಕಾರಿಯಿಂದ ಮಾಹಿತಿ ಸ್ವೀಕರಿಸಲಾಗಿದ್ದು, ಅದನ್ನು ಮೇಲ್ವಿಚಾರಣೆ ಮಾಡಲು ಸಿಎಸ್‌ಗೆ ಸೂಚಿಸಿದ್ದೇನೆ ಎಂದಿದ್ದಾರೆ.

ಘಟನೆಯ ಬಗ್ಗೆ ವಿವರವಾದ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸಲಾಗುತ್ತಿದ್ದು, ಬೆಂಕಿಯನ್ನು ಹತೋಟಿಗೆ ತರಲಾಗಿದೆ ಎಂಬ ಮಾಹಿತಿ ದೊರೆತಿದೆ. ಅಂತಹ ಘಟನೆಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳಲು ನಾವು ನಿರ್ದೇಶನಗಳನ್ನು ನೀಡಿದ್ದೇವೆ. ಇನ್ನು ಮುಂದೆ ಇಂತಹ ಘಟನೆ ಮರುಕಳಿಸಬಾರದು, ಅದಕ್ಕಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಇದನ್ನೂ ಓದಿ: ವೇಗವಾಗಿ ಬಂದ ಆಟೋ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವು, ಮೂವರಿಗೆ ಗಾಯ

ಸದ್ಯ 5 ಮಂದಿ ಕಟ್ಟಡದ ಒಳಗೆ ಸಿಲುಕಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆದರೆ, ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಹೇಳಲಾಗಿದೆ. ಸದ್ಯ ಪೊಲೀಸರು ಕಟ್ಟಡದ ಸುತ್ತಮುತ್ತಲಿನ ಜನರನ್ನು ರಕ್ಷಿಸಿದ್ದು, ಒಳಗೆ ಸಿಲುಕಿದ್ದಾರೆ ಎನ್ನಲಾದವರ ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:30 am, Sat, 9 March 24