ಇಂಫಾಲ್: ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ (Manipur) ಜನಾಂಗೀಯ ಘರ್ಷಣೆಗಳು ಶುರುವಾಗಿ ಎರಡು ತಿಂಗಳು ಕಳೆಯುತ್ತ ಬಂದಿದೆ. ಮೇ 3ರಂದು ಎರಡು ಸಮುದಾಯಗಳ ನಡುವೆ ಶುರುವಾದ ಈ ಹಿಂಸಾಚಾರ, ಅನೇಕ ಕೃತ್ಯಗಳು ಕೆಟ್ಟ ಇತಿಹಾಸ ಬರೆದಿದೆ, ಮಹಿಳೆಯರ ಬೆತ್ತಲೆ ಮೆರವಣಿಗೆ, ಮನೆಗಳಿಗೆ ಬೆಂಕಿ, ಅನೇಕ ಸಾವು-ನೋವುಗಳು ಎಲ್ಲವೂ ನಡೆದು ಹೋಗಿದೆ. ಇದೀಗ ಈ ಹಿಂಸಾಚಾರದ ನಡುವೆ ಮತ್ತೊಂದು ಅಘಾತಕಾರಿ ವರದಿಯನ್ನು ಸರ್ಕಾರ ನೀಡಿದೆ. ಜುಲೈ 22 ಮತ್ತು 23ರ ನಡುವೆ ಅಂದರೆ ಎರಡು ದಿನಗಳಲ್ಲಿ 301 ಮಕ್ಕಳು ಸೇರಿದಂತೆ 718 ಮ್ಯಾನ್ಮಾರ್ ಪ್ರಜೆಗಳು ಅಕ್ರಮವಾಗಿ ಮಣಿಪುರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ.
ಈ ಮ್ಯಾನ್ಮಾರ್ ಪ್ರಜೆಗಳು ಯಾವುದೇ ದಾಖಲೆ ಇಲ್ಲದೆ ಈಶಾನ್ಯ ರಾಜ್ಯಗಳನ್ನು ಪ್ರವೇಶಿಸಿದ್ದಾರೆ. ಈ ಬಗ್ಗೆ ಸರಿಯಾದ ದಾಖಲೆಗಳು ಇಲ್ಲದೆ, ರಾಜ್ಯವನ್ನು ಹೇಗೆ ಪ್ರವೇಶ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರ ಅಸ್ಸಾಂ ರೈಫಲ್ಸ್ನಿಂದ ವಿವರವಾದ ವರದಿಯನ್ನು ಕೇಳಿದೆ. ಮಣಿಪುರ ಮುಖ್ಯ ಕಾರ್ಯದರ್ಶಿ ವಿನೀತ್ ಜೋಶಿ ಸೋಮವಾರ ತಡರಾತ್ರಿ ಅಸ್ಸಾಂ ರೈಫಲ್ಸ್ಗೆ ನೀಡಿದ ಪತ್ರದಲ್ಲಿ ಈ ಹಿಂದೆ ಇದೇ ರೀತಿಯ ಸಮಸ್ಯೆಗಳು ಎದುರಾಗಿತ್ತು. ಆ ಸಮಯದಲ್ಲಿ ಮ್ಯಾನ್ಮಾರ್ ಪ್ರಜೆ ಪ್ರಯಾಣ ದಾಖಲೆಗಳು (ವೀಸಾ) ಇಲ್ಲದೆ ರಾಜ್ಯವನ್ನು ಪ್ರವೇಶ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾಗಿ ಕ್ರಮಕೈಗೊಳ್ಳುವಂತೆ ಗಡಿ ಕಾವಲು ಪಡೆಯಾಗಿದ್ದ ಅಸ್ಸಾಂ ರೈಫಲ್ಸ್ಗೆ ಸ್ಪಷ್ಟವಾಗಿ ಹೇಳಿತ್ತು ಎಂದು ಇದರಲ್ಲಿ ತಿಳಿಸಿದ್ದಾರೆ.
ಖಂಪತ್ನಲ್ಲಿ ನಡೆಯುತ್ತಿರುವ ಘರ್ಷಣೆಯಿಂದಾಗಿ ಜುಲೈ 23ರಂದು 718 ಹೊಸ ನಿರಾಶ್ರಿತರು ಇಂಡೋ-ಮ್ಯಾನ್ಮಾರ್ ಗಡಿಯನ್ನು ದಾಟಿ ಚಾಂಡೆಲ್ ಜಿಲ್ಲೆಯ ಮೂಲಕ ಮಣಿಪುರವನ್ನು ಪ್ರವೇಶಿಸಿದ್ದಾರೆ ಎಂದು ಅಸ್ಸಾಂ ರೈಫಲ್ಸ್ ಚಾಂಡೆಲ್ ಜಿಲ್ಲೆಯ ಉಪ ಆಯುಕ್ತರಿಗೆ ಈ ಹಿಂದೆ ಮಾಹಿತಿ ನೀಡಿತ್ತು.
ಇದನ್ನೂ ಓದಿ : ಲೋಕಸಭಾ ಅಧಿವೇಶನವನ್ನು ಆಪೋಶನ ತೆಗೆದುಕೊಳ್ಳುತ್ತಿರುವ ಮಣಿಪುರ ಹಿಂಸಾಚಾರ
ಇನ್ನೂ ರಾಜ್ಯ ಸರ್ಕಾರವು ಅಸ್ಸಾಂ ರೈಫಲ್ಸ್ ಪ್ರಾಧಿಕಾರದಿಂದ ವಿವರವಾದ ವರದಿಯನ್ನು ಕೇಳಿದೆ. ಅವರ ಪ್ರವೇಶಕ್ಕೆ ಸರಿಯಾದ ಕಾರಣಗಳನ್ನು ನೀಡಿ. ಇನ್ನೂ ಈ 718 ಮ್ಯಾನ್ಮಾರ್ ಪ್ರಜೆಗಳು ಸರಿಯಾದ ಪ್ರಯಾಣ ದಾಖಲೆಗಳಿಲ್ಲದೆ ಚಾಂಡೆಲ್ ಜಿಲ್ಲೆಯ ಮೂಲಕ ಭಾರತಕ್ಕೆ ಪ್ರವೇಶಿಸಲು ಏಕೆ ಮತ್ತು ಹೇಗೆ ಅನುಮತಿ ನೀಡಲಾಗಿದೆ. ತಕ್ಷಣವೇ ಅಕ್ರಮವಾಗಿ ಬಂದಿರುವ 718 ಮ್ಯಾನ್ಮಾರ್ ಪ್ರಜೆಗಳನ್ನು ರಾಜ್ಯದಿಂದ ಹೊರಗೆ ಹಾಕಿ ಎಂದು ಸರ್ಕಾರದ ಮುಖ್ಯ ಕಾರ್ಯಸರ್ಶಿ ವಿನೀತ್ ಜೋಶಿ ಸಲಹೆ ನೀಡಿದ್ದಾರೆ.
ಅಕ್ರಮವಾಗಿ ಮಣಿಪುರಕ್ಕೆ ಬಂದಿರುವ 718 ಮ್ಯಾನ್ಮಾರ್ ಪ್ರಜೆಗಳ ಬಯೋಮೆಟ್ರಿಕ್ಸ್ ಮತ್ತು ಛಾಯಾಚಿತ್ರಗಳನ್ನು ಇರಿಸಿಕೊಳ್ಳಲು, ಡೆಪ್ಯುಟಿ ಕಮಿಷನರ್ ಮತ್ತು ಸೂಪರಿಂಟೆಂಡೆಂಟ್ ಪೊಲೀಸ್ ಅಧಿಕಾರಿಗಳಿಗೆ ಆದೇಶವನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಇನ್ನೂ ಮಣಿಪುರ ಹಿಂಸಾಚಾರದ ಬಗ್ಗೆ ನಕಲಿ ಸುದ್ದಿ ಮಾಡುವುದು, ಅಪ್ರಚಾರ ಮತ್ತು ದ್ವೇಷದ ಸುದ್ದಿಗಳನ್ನು ಹಾಕುವುದನ್ನು ತಡೆಯಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಪೊಲೀಸರು ಟ್ವಿಟರ್ನಲ್ಲಿ ತಿಳಿಸಿದ್ದಾರೆ. ಈ ಹಿಂದೆ ಮೇ 4ರಂದು ಇಬ್ಬರು ಮಹಿಳೆಯರ ಬೆತ್ತಲೆ ವಿಡಿಯೋ ವೈರಲ್ಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ 7 ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಮಣಿಪುರ ಹಿಂಸಾಚಾರದ ಬಗ್ಗೆ ಸಂಸತ್ನಲ್ಲಿ ಚರ್ಚೆ ನಡೆಸಲಾಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ