ಸಂಸತ್​​ ವಿಶೇಷ ಅಧಿವೇಶನದಲ್ಲಿ ದೇಶದ ಹೆಸರು ಇಂಡಿಯಾ ಎಂಬುದನ್ನು ಭಾರತ್ ಎಂದು ಮರುನಾಮಕರಣ?

|

Updated on: Sep 05, 2023 | 1:28 PM

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕಚೇರಿಯಿಂದ ಬಂದ G20 ಶೃಂಗಸಭೆ 2023 ರ ಆಹ್ವಾನದಲ್ಲಿ "ಭಾರತದ ರಾಷ್ಟ್ರಪತಿ" ಎಂದು ಬರೆಯಲಾಗಿದೆ. ಸಾಮಾನ್ಯವಾಗಿ ಇದು ಪ್ರೆಸಿಡೆಂಟ್ ಆಫ್ ಇಂಡಿಯಾ ಎಂದು ಇರುತ್ತಿತ್ತು. ಇಲ್ಲಿ ಇಂಡಿಯಾ ಬದಲು ಭಾರತ್ ಎಂದು ಬರೆಯಲಾಗಿದೆ. ಹೆಸರು ಬದಲಿಸುವ ಬಗ್ಗೆ ಸಂಸತ್ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಸೂದೆ ಮಂಡನೆ ಸಾಧ್ಯತೆ ಇದೆ.

ಸಂಸತ್​​ ವಿಶೇಷ ಅಧಿವೇಶನದಲ್ಲಿ ದೇಶದ ಹೆಸರು ಇಂಡಿಯಾ ಎಂಬುದನ್ನು ಭಾರತ್ ಎಂದು ಮರುನಾಮಕರಣ?
ಸಂಸತ್ ಭವನ
Follow us on

ದೆಹಲಿ ಸೆಪ್ಟೆಂಬರ್ 05: ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರವು ಸೆಪ್ಟೆಂಬರ್ 18-22 ರ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ದೇಶದ ಹೆಸರು ಇಂಡಿಯಾ (India) ಎಂಬುದನ್ನು ಭಾರತ್ (Bharat) ಎಂದು ಮರುನಾಮಕರಣ ಮಾಡುವ ಪ್ರಸ್ತಾಪವನ್ನು ಮಂಡಿಸುವ ಸಾಧ್ಯತೆಯಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕಚೇರಿಯಿಂದ ಬಂದ G20 ಶೃಂಗಸಭೆ 2023 ರ ಭೋಜನಕೂಟ ಆಹ್ವಾನ ಪತ್ರಿಕೆಯಲ್ಲಿ “ಭಾರತದ ರಾಷ್ಟ್ರಪತಿ” ಎಂದು ಬರೆಯಲಾಗಿದೆ. ಸಾಮಾನ್ಯವಾಗಿ  ದ್ರೌಪದಿ ಮುರ್ಮು, ಪ್ರೆಸಿಡೆಂಟ್ ಆಫ್ ಇಂಡಿಯಾ ಎಂದು ಬರೆಯಲಾಗುತ್ತಿತ್ತು. ಆದರೆ ಇಲ್ಲಿ ಇಂಡಿಯಾ ಬದಲು ಭಾರತ್ ಎಂದು ಬರೆದಿರುವುದು ಕೇಂದ್ರ ಸರ್ಕಾರದ ಮುಂದಿನ ನಡೆ ಬಗ್ಗೆ ಸುಳಿವು ನೀಡಿದೆ.

ಕೇಂದ್ರದ ವಿರುದ್ಧ ಹೊಸ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್, ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿದ್ದ ಜಿ20 ಶೃಂಗಸಭೆಯ ಔತಣಕೂಟಕ್ಕೆ ನೀಡಿದ ಆಹ್ವಾನದಲ್ಲಿ President of India ಎಂಬುದಕ್ಕೆ ಬದಲಾಗಿ ‘ಭಾರತದ ರಾಷ್ಟ್ರಪತಿ ‘ ಎಂದು ಬರೆಯಲಾಗಿದೆ ಎಂದು ಹೇಳಿದ್ದಾರೆ. ಹಾಗಾದರೆ ಈ ಸುದ್ದಿ ನಿಜ. ರಾಷ್ಟ್ರಪತಿ ಭವನವು ಸೆಪ್ಟಂಬರ್ 9 ರಂದು G20 ಔತಣಕೂಟಕ್ಕೆ ನೀಡಿದ ಆಹ್ವಾನ ಪತ್ರಿಕೆಯಲ್ಲಿ ‘President of India’ ಬದಲಿಗೆ ”President of Bharat’ ‘ ಎಂಬ ಹೆಸರಿನಲ್ಲಿ ಆಹ್ವಾನವನ್ನು ಕಳುಹಿಸಿದೆ” ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು ಈಗ ಸಂವಿಧಾನದಲ್ಲಿನ ಆರ್ಟಿಕಲ್ 1ರಲ್ಲಿ ಹೀಗೆ ಇದೆ: ‘Bharat, that was India, shall be a Union of States.’ ಆದರೆ ಈಗ ಈ ‘ಯೂನಿಯನ್ ಆಫ್ ಸ್ಟೇಟ್’ ಆಕ್ರಮಣಕ್ಕೊಳಗಾಗಿದೆ ಎಂದಿದ್ದಾರೆ.


ಭಾರತೀಯ ಸಂವಿಧಾನದ 1 ನೇ ವಿಧಿಯಲ್ಲಿ “ಇಂಡಿಯಾ, ಅದು ಭಾರತ, ರಾಜ್ಯಗಳ ಒಕ್ಕೂಟವಾಗಿರುತ್ತದೆ ಎಂದಿದೆ.

ಸರ್ಕಾರ ನೀಡಿದ ಆಹ್ವಾನ ಪತ್ರಿಕೆಗಳಲ್ಲಿ ‘ಭಾರತದ ರಾಷ್ಟ್ರಪತಿ’ ಎಂದು ಬಳಸಿದ್ದಕ್ಕೆ ಜೈರಾಮ್ ರಮೇಶ್ ಗರಂ ಆಗಿದ್ದು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಭಾರತವನ್ನು ” Republic of Bharat ” ಎಂದು ಘೋಷಿಸಿದರು. “ರಿಪಬ್ಲಿಕ್ ಆಫ್ ಭಾರತ್- ನಮ್ಮ ನಾಗರೀಕತೆಯು ಅಮೃತ್ ಕಾಲದ ಕಡೆಗೆ ಧೈರ್ಯದಿಂದ ಮುನ್ನಡೆಯುತ್ತಿರುವುದಕ್ಕೆ ಸಂತೋಷ ಮತ್ತು ಹೆಮ್ಮೆಯಿದೆ” ಎಂದು ಹಿಮಂತ ಬಿಸ್ವಾ ಶರ್ಮಾ ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇಂಡಿಯಾವನ್ನು ‘ಭಾರತ್’ ಎಂದು ಮರುನಾಮಕರಣ ಮಾಡಲು ಒತ್ತಾಯ

ಭಾರತದ ಸಂವಿಧಾನವು ಪ್ರಸ್ತುತ ದೇಶವನ್ನು ” India, that is Bharat ” ಎಂದು ಉಲ್ಲೇಖಿಸುತ್ತದೆ. ಆದರೆ ಸೆಪ್ಟೆಂಬರ್ 18-13 ರಂದು ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಮುಂಚಿತವಾಗಿ, ಇದನ್ನು  “ಭಾರತ್” ಎಂದು ತಿದ್ದುಪಡಿ ಮಾಡಲು ಒತ್ತಾಯಿಸಲಾಗುತ್ತಿದೆ. ಇಂಡಿಯಾ ಎಂಬುದು ವಸಾಹತುಶಾಹಿ ಆಡಳಿತದ ಕುರುಹು ಹಾಗಾಗಿ ಅದನ್ನು ಬದಲಿಸಬೇಕು ಎಂದು ಬಿಜೆಪಿ ಸಂಸದರು ವಾದಿಸಿದ್ದಾರೆಸಂಸತ್ತಿನ ಮುಂಗಾರು ಅಧಿವೇಶನದಲ್ಲಿ, ಬಿಜೆಪಿ ರಾಜ್ಯಸಭಾ ಸಂಸದ ನರೇಶ್ ಬನ್ಸಾಲ್ ಅವರು ವಸಾಹತುಶಾಹಿ ಗುಲಾಮಗಿರಿಯನ್ನು ಸಂಕೇತಿಸುತ್ತದೆ ಎಂದು ವಾದಿಸಿ ಸಂವಿಧಾನದಿಂದ ‘ಇಂಡಿಯಾ’ವನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದರು. ಇದಕ್ಕೆ ಬಿಜೆಪಿಯ ಸಂಸದ ಹರನಾಥ್ ಸಿಂಗ್ ಯಾದವ್ ಕೂಡಾ ಬೆಂಬಲಿಸಿದ್ದು ಇಂಡಿಯಾವನ್ನು ಭಾರತ್ ಎಂದು ಬದಲಿಸಲು ಒತ್ತಾಯಿಸಿದ್ದರು.

“ಇಡೀ ದೇಶವು ನಾವು ‘ಇಂಡಿಯಾ ‘ ಬದಲಿಗೆ ‘ಭಾರತ್’ ಪದವನ್ನು ಬಳಸಬೇಕೆಂದು ಒತ್ತಾಯಿಸುತ್ತಿದೆ. ‘ಇಂಡಿಯಾ’ ಎಂಬ ಪದವು ಬ್ರಿಟಿಷರು ನಮಗೆ ನೀಡಿದ ನಿಂದನೆ. ಆದರೆ ‘ಭಾರತ’ ಪದವು ನಮ್ಮ ಸಂಸ್ಕೃತಿಯ ಸಂಕೇತವಾಗಿದೆ. ನಮ್ಮ ಸಂವಿಧಾನದಲ್ಲಿ ಬದಲಾವಣೆ ಆಗಬೇಕು ಮತ್ತು ಅದಕ್ಕೆ ‘ಭಾರತ್’ ಎಂಬ ಪದವನ್ನು ಸೇರಿಸಬೇಕು ಎಂದು ನಾನು ಬಯಸುತ್ತೇನೆ” ಎಂದು ಹರನಾಥ್ ಸಿಂಗ್ ಯಾದವ್ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ:  ಭಾರತ್ ಜೊಡೋ ಯಾತ್ರೆ ನೆನಪಿನಲ್ಲಿ ಸೆ 7ರಂದು ಪಾದಯಾತ್ರೆ ಮಾಡಲಿದ್ದೇವೆ: ಡಿಸಿಎಂ ಡಿಕೆ ಶಿವಕುಮಾರ್​

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಕೂಡಾ ಈ ಬದಲಾವಣೆಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. “ಇಂಡಿಯಾ” ಬದಲಿಗೆ “ಭಾರತ್” ಎಂಬ ಪದವನ್ನು ಬಳಸಬೇಕೆಂದು ಭಾಗವತ್ ನಾಗರಿಕರನ್ನು ಒತ್ತಾಯಿಸಿದ್ದು, ದೇಶವನ್ನು ಶತಮಾನಗಳಿಂದ ಭಾರತ ಎಂದು ಕರೆಯಲಾಗುತ್ತದೆ ಎಂದು ಒತ್ತಿ ಹೇಳಿದರು.


ಸೆಪ್ಟೆಂಬರ್ 18 ರಂದು ಸಂಸತ್ತಿನ ವಿಶೇಷ ಅಧಿವೇಶನ ಪ್ರಾರಂಭವಾಗಲಿದ್ದು, ಈ ಬದಲಾವಣೆಯನ್ನು ಜಾರಿಗೆ ತರಲು ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಪರಿಚಯಿಸಬಹುದು ಎಂಬ ಊಹಾಪೋಹವಿದೆ. ಅಧಿವೇಶನದ ಅಜೆಂಡಾ ಇನ್ನೂ ಬಿಡುಗಡೆಯಾಗದಿದ್ದರೂ, ಅಂತಹ ಮಸೂದೆಯ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:54 pm, Tue, 5 September 23