AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Narendra Modi: ಭಾರತ ಬೇರೆ ಯಾರ ಸ್ಥಾನವನ್ನೂ ಕಸಿಯುವುದಿಲ್ಲ; ತನ್ನ ಅರ್ಹ ಸ್ಥಾನ ಪಡೆಯುತ್ತಿದೆ: ಅಮೆರಿಕ ಭೇಟಿಗೆ ಮುನ್ನ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ

Wall Street Journal Interview Of Narendra Modi: ಅಮೆರಿಕ ಭೇಟಿಗೆ ಮುನ್ನ ಅಲ್ಲಿನ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ, ಜಾಗತಿಕವಾಗಿ ಭಾರತ ದೊಡ್ಡ ಪಾತ್ರ ವಹಿಸಲು ಬಯಸುತ್ತಿರುವುದೂ ಸೇರಿದಂತೆ ಹಲವು ವಿಚಾರಗಳಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Narendra Modi: ಭಾರತ ಬೇರೆ ಯಾರ ಸ್ಥಾನವನ್ನೂ ಕಸಿಯುವುದಿಲ್ಲ; ತನ್ನ ಅರ್ಹ ಸ್ಥಾನ ಪಡೆಯುತ್ತಿದೆ: ಅಮೆರಿಕ ಭೇಟಿಗೆ ಮುನ್ನ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ
ನರೇಂದ್ರ ಮೋದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 20, 2023 | 12:58 PM

Share

ಅಮೆರಿಕಕ್ಕೆ ಭೇಟಿ ನೀಡಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಭೇಟಿಗೆ ಮುನ್ನ ಅಮೆರಿಕದ ಪ್ರಮುಖ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಾನಾ ವಿಚಾರಗಳನ್ನು ಚರ್ಚಿಸಿದ್ದಾರೆ. ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯೊಂದಿಗೆ ಮಾತನಾಡಿದ ನರೇಂದ್ರ ಮೋದಿ, ಜಾಗತಿಕವಾಗಿ ಭಾರತ ಹಿರಿಯ ಪಾತ್ರ ವಹಿಸಲು ಅರ್ಹತೆ ಹೊಂದಿದೆ ಎಂದು ಹೇಳಿದ್ದಾರೆ. ಅಮೆರಿಕದೊಂದಿಗೆ ಬೆಳೆಯುತ್ತಿರುವ ಗಾಢ ಸಂಬಂಧ, ಚೀನಾದೊಂದಿಗಿನ ಬಿಕ್ಕಟ್ಟು, ಜಾಗತಿಕ ಸಂಘಟನೆಗಳಿಗೆ ಆಗಬೇಕಿರುವ ಪರಿವರ್ತನೆ ಇತ್ಯಾದಿ ಹಲವು ವಿಚಾರಗಳಲ್ಲಿ ಪ್ರಧಾನಿ ಮೋದಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಜಾಗತಿಕ ಆರ್ಥಿಕತೆಗೆ ನೀಡುವ ಕೊಡುಗೆಯಿಂದ ಹಿಡಿದು ಜಾಗತಿಕ ರಾಜಕೀಯದಲ್ಲಿ ವಹಿಸುವ ಪಾತ್ರವರೆಗೂ ಭಾರತದ ಸಮಯ ಬಂದಿದೆ ಎಂಬುದು ಪ್ರಧಾನಿ ಮೋದಿ ಸಂದೇಶ. ಅಭಿವೃದ್ಧಿಶೀಲ ದೇಶಗಳ ಆಶೋತ್ತರಕ್ಕೆ ಭಾರತ ಧ್ವನಿಯಾಗುವ ರೀತಿಯಲ್ಲಿ ಭಾರತದ ನಾಯಕತ್ವಕ್ಕೆ ಮನ್ನಣೆ ಸಿಗಬೇಕು ಎಂಬುದು ಅವರ ಆಶಯ. ಹೀಗೆಂದು ವಾಲ್ ಸ್ಟ್ರೀಟ್ ಜರ್ನಲ್ ಈ ಸಂದರ್ಶನದ ತಿರುಳನ್ನು ತಿಳಿಸಿದೆ.

ಭಾರತ ತಟಸ್ಥ ದೇಶವಲ್ಲ, ಶಾಂತಿಯ ಪರ: ನರೇಂದ್ರ ಮೋದಿ

‘ಕೆಲವರು ಭಾರತ ತಟಸ್ಥ ನಿಲುವು ಹೊಂದಿದೆ ಎಂದು ಹೇಳುತ್ತಾರೆ. ಆದರೆ ನಮ್ಮದು ತಾಟಸ್ಥ್ಯ ಧೋರಣೆ ಅಲ್ಲ. ನಾವು ಶಾಂತಿಯ ಪರವಾಗಿರುವವರು. ಶಾಂತಿಯನ್ನು ಮೊದಲ ಆದ್ಯತೆಯಾಗಿ ಹೊಂದಿರುವ ಭಾರತದ ಬಗ್ಗೆ ಈ ಜಗತ್ತಿಗೆ ಭರವಸೆ ಇದೆ’ ಎಂದು ನರೇಂದ್ರ ಮೋದಿ ತಮ್ಮ 3 ದಿನಗಳ ಅಮೆರಿಕ ಭೇಟಿಗೆ ಮುನ್ನ ವಾಲ್ ಸ್ಟ್ರೀಟ್ ಜರ್ನಲ್ ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ.

ಭಾರತ ಯಾರ ಸ್ಥಾನವನ್ನೂ ಕಸಿಯುವುದಿಲ್ಲ, ನಮ್ಮ ಸ್ಥಾನ ಬೇಕು

ಭಾರತ ಜಾಗತಿಕವಾಗಿ ದೊಡ್ಡ ಪಾತ್ರ ಬಯಸುತ್ತದೆ. ಅದಕ್ಕೆ ಅರ್ಹತೆ ಹೊಂದಿದೆ. ಬೇರೆ ಯಾವ ದೇಶದ ಸ್ಥಾನವನ್ನೂ ಭಾರತ ಕಸಿಯುವುದಿಲ್ಲ. ಭಾರತ ಜಾಗತಿಕವಾಗಿ ತನ್ನ ಅರ್ಹ ಸ್ಥಾನ ಗಳಿಸುತ್ತಿದೆ ಎಂದು ಭಾರತದ ಪ್ರಧಾನಿಗಳು ಹೇಳಿದ್ದಾರೆ.

ಇದನ್ನೂ ಓದಿ: Delhi: 24 ಗಂಟೆಗಳಲ್ಲಿ 4 ಕೊಲೆ: ಲೆಫ್ಟಿನೆಂಟ್​ ಗವರ್ನರ್​ಗೆ ಪತ್ರ ಬರೆದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ಚೀನಾದ ಗಡಿಕ್ಯಾತೆ ಮತ್ತು ಸಂಬಂಧದ ಬಗ್ಗೆ

ಚೀನಾ ಜೊತೆ ಮತ್ತೆ ಸಂಬಂಧ ವೃದ್ಧಿಸುವ ಸಾಧ್ಯತೆ ಬಗೆಗಿನ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪ್ರಧಾನಿ ಮೋದಿ, ಗಡಿ ಪ್ರದೇಶಗಳಲ್ಲಿ ಶಾಂತಿ ಇಲ್ಲದೇ ಚೀನಾ ಜೊತೆ ಮತ್ತೆ ಸಹಜ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ಒಂದು ದೇಶದ ಸಾರ್ವಭೌಮತ್ವ ಮತ್ತು ಭೌಗೋಳಿಕ ಚೌಕಟ್ಟನ್ನು ಗೌರವಿಸಬೇಕೆಂಬುದು ಭಾರತದ ನಂಬಿಕೆ. ಏನಾದರೂ ಭಿನ್ನಾಭಿಪ್ರಾಯ ಮತ್ತು ಬಿಕ್ಕಟ್ಟು ಇದ್ದರೆ ಕಾನೂನು ಪ್ರಕಾರ ಶಾಂತಿಯುತವಾಗಿ ಪರಿಹಾರ ಕಂಡುಕೊಳ್ಳಲು ಭಾರತ ಬಯಸುತ್ತದೆ. ಇದರ ಜೊತೆಗೆ ತನ್ನ ಸಾರ್ವಭೌಮತೆ ಮತ್ತು ಘನತೆಯನ್ನು ರಕ್ಷಿಸಿಕೊಳ್ಳಲೂ ಭಾರತ ಸಂಪೂರ್ಣ ಬದ್ಧವಾಗಿದೆ.

‘ಎಲ್ಲಾ ದೇಶಗಳೂ ಅಂತಾರಾಷ್ಟ್ರೀಯ ಕಾನೂನನ್ನು ಗೌರವಿಸಬೇಕು. ಬೇರೆ ದೇಶಗಳ ಸಾರ್ವಭೌಮತ್ವವನ್ನು ಮಾನ್ಯ ಮಾಡಬೇಕು. ಯುದ್ಧ ಬದಲು ರಾಜತಾಂತ್ರಿಕ ಮತ್ತು ಸಂಧಾನಗಳ ಮೂಲಕ ವಿವಾದಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು’ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಸ್ವತಂತ್ರ ಭಾರತದಲ್ಲಿ ಹುಟ್ಟಿದ ಮೊದಲ ಪ್ರಧಾನಿ ನಾನು….

‘ಸ್ವತಂತ್ರ ಭಾರತದಲ್ಲಿ ಹುಟ್ಟಿದ ಮೊದಲ ಪ್ರಧಾನಿ ನಾನು. ನನ್ನ ನಡವಳಿಕೆ, ಆಲೋಚನೆ, ನನ್ನ ಮಾತು, ಕೃತಿ ಇವೆಲ್ಲವೂ ನನ್ನ ದೇಶದ ಸಂಪ್ರದಾಯಗಳಿಂದ ಪ್ರಭಾವಿತಗೊಂಡಿವೆ. ನನ್ನ ಬಲ ಇರುವುದೇ ಅಲ್ಲ’ ಎಂದು ವಾಲ್ ಸ್ಟ್ರೀಟ್ ಜರ್ನಲ್​ಗೆ ನೀಡಿದ ಸಂದರ್ಶನದಲ್ಲಿ ನರೇಂದ್ರ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: Narendra Modi US Visit: ಅಮೆರಿಕ ಪ್ರವಾಸಕ್ಕೆ ಹೊರಟ ಪ್ರಧಾನಿ ಮೋದಿ, ಕಾರ್ಯಕ್ರಮಗಳ ವಿವರ ಇಲ್ಲಿದೆ

ವಿಶ್ವಸಂಸ್ಥೆ ಇತ್ಯಾದಿ ಅಂತಾರಾಷ್ಟ್ರೀಯ ಸಂಘಟನೆಗಳಲ್ಲಿ ಪರಿವರ್ತನೆಗೆ ಕರೆ

ವಿಶ್ವಸಂಸ್ಥೆ ಮತ್ತಿತರ ಅಂತಾರಾಷ್ಟ್ರೀಯ ಸಂಘಟನೆಗಳು ಈ ಜಗತ್ತಿನಲ್ಲಿ ಬಹುಸ್ತರದ ಧ್ರುವೀಕರಣಗಳ ಪರಿಸ್ಥಿತಿಗೆ ಹೊಂದಿಕೊಳ್ಳಬೇಕಿದೆ. ಹೆಚ್ಚು ಪ್ರಭಾವ ಹೊಂದಿಲ್ಲದ ದೇಶಗಳು ಹಾಗೂ ಅವುಗಳ ಆಶೋತ್ತರಗಳಿಗೆ ಈ ಸಂಘಟನೆಗಳು ಧ್ವನಿಯಾಗಬೇಕು. ಹವಾಮಾನ ಬದಲಾವಣೆಯಿಂದ ಹಿಡಿದು ಸಾಲ ಸಮಸ್ಯೆ ಇತ್ಯರ್ಥದವರೆಗೂ ದುರ್ಬಲ ದೇಶಗಳಿಗೆ ಅನುಕೂಲವಾಗುವಂತಹ ವ್ಯವಸ್ಥೆ ಇರಬೇಕು ಎಂಬುದು ನರೇಂದ್ರ ಮೋದಿ ಅವರ ಒತ್ತಾಯ.

ಪ್ರಧಾನಿ ನರೇಂದ್ರ ಮೋದಿ ಜೂನ್ 21ರಿಂದ 3 ದಿನಗಳ ಕಾಲ ಅಮೆರಿಕಕ್ಕೆ ಭೇಟಿ ನೀಡುತ್ತಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜೊತೆಗೆ ಔತಣಕೂಟಗಳು ಹಾಗೂ ಅಮೆರಿಕ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಇತ್ಯಾದಿ ಕಾರ್ಯಕ್ರಮಗಳು ಪ್ರಧಾನಿ ಮೋದಿ ಅವರಿಗಿದೆ. ವಿಶ್ವಸಂಸ್ಥೆ ಮುಖ್ಯಕಚೇರಿಯಲ್ಲಿ ಯೋಗ ದಿನಾಚರಣೆ, ಅಮೆರಿಕದ ಸಿಇಒಗಳೊಂದಿಗೆ ಸಭೆ ಮೊದಲಾದವೂ ಕೂಡ ಮೋದಿ ವೇಳಾಪಟ್ಟಿಯಲ್ಲಿ ಸೇರಿವೆ.

(ಮಾಹಿತಿ ಕೃಪೆ: ವಾಲ್ ಸ್ಟ್ರೀಟ್ ಜರ್ನಲ್)

ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ