ಗುಜರಾತ್‌: ಒತ್ತುವರಿ ವಿಚಾರವಾಗಿ ಮಸೀದಿಗೆ ನೋಟಿಸ್; ಪ್ರತಿಭಟನಾನಿರತರಿಂದ ಕಲ್ಲು ತೂರಾಟ ವೇಳೆ ಒಬ್ಬ ಸಾವು

ಮರಣೋತ್ತರ ಪರೀಕ್ಷೆಯ ನಂತರ ನಾಗರಿಕನ ಸಾವಿನ ಹಿಂದಿನ ನಿಖರವಾದ ಕಾರಣ ತಿಳಿದುಬರುತ್ತದೆ, ಆದರೆ ಗುಂಪು ಎಸೆದ ಕಲ್ಲೇಟಿಗೆ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಗುಜರಾತ್‌: ಒತ್ತುವರಿ ವಿಚಾರವಾಗಿ ಮಸೀದಿಗೆ ನೋಟಿಸ್; ಪ್ರತಿಭಟನಾನಿರತರಿಂದ ಕಲ್ಲು ತೂರಾಟ ವೇಳೆ ಒಬ್ಬ ಸಾವು
ಗುಜರಾತಿನಲ್ಲಿ ಕಲ್ಲು ತೂರಾಟ
ರಶ್ಮಿ ಕಲ್ಲಕಟ್ಟ

Updated on: Jun 17, 2023 | 6:52 PM

ಜುನಾಗಢ್: ಗುಜರಾತಿನಲ್ಲಿ (Gujarat) ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ (Anti-Encroachment Drive ) ದರ್ಗಾವೊಂದನ್ನು ಧ್ವಂಸಗೊಳಿಸುವ ನಾಗರಿಕ ಮಂಡಳಿಯ ಯೋಜನೆಯನ್ನು ವಿರೋಧಿಸಿ ಜನರ ಗುಂಪೊಂದು ಕಲ್ಲು ತೂರಾಟ ನಡೆಸಿದೆ. ಜುನಾಗಢದಲ್ಲಿ (Junagadh) ಆಕ್ರೋಶ ವ್ಯಕ್ತವಾಗಿ ವಾಹನವನ್ನು ಸುಟ್ಟುಹಾಕಿದ್ದಾರೆ. ಈ ಪ್ರತಿಭಟನೆ ವೇಳೆ ಕಲ್ಲೇಟಿಗೆ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದು, ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ. ನಗರದ ಮಜೆವಾಡಿ ದರ್ವಾಜಾ ಬಳಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್‌ ಪ್ರಯೋಗಿಸಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು 174 ಜನರನ್ನು ಬಂಧಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ನಂತರ ನಾಗರಿಕನ ಸಾವಿನ ಹಿಂದಿನ ನಿಖರವಾದ ಕಾರಣ ತಿಳಿದುಬರುತ್ತದೆ, ಆದರೆ ಗುಂಪು ಎಸೆದ ಕಲ್ಲೇಟಿಗೆ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಜೂನ್ 14 ರಂದು ಜುನಾಗಢ ಮುನ್ಸಿಪಲ್ ಕಾರ್ಪೊರೇಷನ್ ಮಜೆವಾಡಿ ದರ್ವಾಜಾ ಬಳಿಯ ಮಸೀದಿಗೆ ಜಮೀನಿನ ಮಾಲೀಕತ್ವದ ಬಗ್ಗೆ ದಾಖಲೆಗಳನ್ನು ನೀಡುವಂತೆ ನೋಟಿಸ್ ನೀಡಿತ್ತು. ನೋಟಿಸ್‌ನಿಂದ ಸಿಟ್ಟುಕೊಂಡ ಸುಮಾರು 500-600 ಜನರು ಶುಕ್ರವಾರ ರಾತ್ರಿ ಮಸೀದಿ ಬಳಿ ಜಮಾಯಿಸಿ ರಸ್ತೆಗಳನ್ನು ತಡೆದರು ಎಂದು ಪೊಲೀಸ್ ವರಿಷ್ಠಾಧಿಕಾರಿ ರವಿತೇಜ ವಾಸಮಶೆಟ್ಟಿ ತಿಳಿಸಿದ್ದಾರೆ.

ಸ್ಥಳದಲ್ಲಿದ್ದ ಜುನಾಗಢದ ಉಪ ಎಸ್ಪಿ ಹಾಗೂ ಇತರ ಸಿಬ್ಬಂದಿ ಮನವೊಲಿಸಲು ಯತ್ನಿಸಿದರು. ಸುಮಾರು ಒಂದು ಗಂಟೆ ಕಾಲ ನಡೆದ ಚರ್ಚೆಯ ಬಳಿಕ ಶಾಂತಿಯುತವಾಗಿ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಪ್ರತಿಭಟನಾಕಾರರ ರಸ್ತೆ ತಡೆ ತೆರವುಗೊಳಿಸುವುದಾಗಿ ಹೇಳಿದ್ದರೂ, ರಾತ್ರಿ 10.15ರ ಸುಮಾರಿಗೆ ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆದಿದೆ.

ದರ್ಗಾಕ್ಕೆ ನೋಟಿಸ್ ನೀಡಿದ್ದಕ್ಕೆ ಆಕ್ರೋಶಗೊಂಡ ಕೆಲವರು ಘೋಷಣೆಗಳನ್ನು ಕೂಗುತ್ತಾ, ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆಗೆ ಯತ್ನಿಸಿದರು ಎಂದು ಅವರು ಹೇಳಿದರು.


ಆ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್ ಮತ್ತು ಲಾಠಿ ಚಾರ್ಜ್ ಮಾಡಿದರು. ಘಟನೆಯಲ್ಲಿ ಜುನಾಗಢ ಡಿವೈಎಸ್ಪಿ, ಮೂವರು ಸಬ್ ಇನ್ಸ್‌ಪೆಕ್ಟರ್‌ಗಳು ಮತ್ತು ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಆದರೆ ಅವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಗುಂಪೊಂದು ವಾಹನಕ್ಕೆ ಬೆಂಕಿ ಹಚ್ಚಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: Cyclone Biparjoy: ಗುಜರಾತ್​ನಲ್ಲಿ ಬಿಪೋರ್​ಜಾಯ್ ಚಂಡಮಾರುತದ ಅಬ್ಬರಕ್ಕೆ ಇಬ್ಬರು ಬಲಿ

ಓರ್ವ ನಾಗರಿಕ ಸಾವನ್ನಪ್ಪಿದ್ದು, ಆತನ ಸಾವಿಗೆ ಕಲ್ಲು ತೂರಾಟವೇ ಕಾರಣ ಎಂದು ತಿಳಿದುಬಂದಿದೆ. ಆದರೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಎಂದಿದ್ದಾರೆ ಪೊಲೀಸರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು ಘರ್ಷಣೆಯಲ್ಲಿ ಭಾಗಿಯಾಗಿರುವ ಎಲ್ಲರನ್ನು ಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us