Morbi bridge collapse: ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ಪ್ರಧಾನಿ ಮೋದಿ

ಗುಜರಾತ್‌ನ ಮೊರ್ಬಿ ಜಿಲ್ಲೆಯ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ತೂಗು ಸೇತುವೆ ಕುಸಿದು ಬಿದ್ದು ದೊಡ್ಡ ದುರಂತ ಸಂಭವಿಸಿದ್ದು, ಈ ಸಂಬಂಧ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿನಗರದ ರಾಜಭವನದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು.

Morbi bridge collapse: ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ಪ್ರಧಾನಿ ಮೋದಿ
ಮೊರ್ಬಿ ತೂಗು ಸೇತುವೆ ದುರಂತದ ಕುರಿತು ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ ನಡೆಸಿದರು
Edited By:

Updated on: Oct 31, 2022 | 9:41 PM

ಗಾಂಧಿನಗರ: ನಿನ್ನೆ (ಅ.30) ಗುಜರಾತ್‌ನ (Gujarat) ಮೊರ್ಬಿ ಜಿಲ್ಲೆಯ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ತೂಗು ಸೇತುವೆ ಕುಸಿದು ಬಿದ್ದು ದೊಡ್ಡ ದುರಂತ ಸಂಭವಿಸಿತ್ತು. ಘಟನೆಯಲ್ಲಿ 30 ಮಕ್ಕಳು ಸೇರಿದಂತೆ 90 ಜನರು ಸಾವನ್ನಪ್ಪಿದ್ದರು. ಇದೀಗ ಸಾವಿನ ಸಂಖ್ಯೆ 150ರ ಸಮೀಪ ತಲುಪಿದೆ. ಮೂರು ದಿನಗಳ ಕಾಲ ತವರು ರಾಜ್ಯ ಗುಜರಾತ್​​ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಮುಂಜಾನೆ (ಅ.31) ಈ ಕುರಿತು ರಾಜಧಾನಿ ಗಾಂಧಿನಗರದ ರಾಜಭವನದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಮೊರ್ಬಿಯಲ್ಲಿನ ಪರಿಸ್ಥಿತಿ, ರಕ್ಷಣಾ ಕಾರ್ಯಾಚರಣೆ ಮತ್ತು ಪರಿಹಾರ ವಿತರಣೆ ಕುರಿತು ಮಾಹಿತಿ ಪಡೆದರು. ಅಲ್ಲದೇ ದುರಂತಕ್ಕೆ ಕಾರಣ ಏನು ? ಮತ್ತು ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದರು.

ಉನ್ನತ ಮಟ್ಟದ ಸಭೆಯಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಭಾಯಿ ಪಟೇಲ್, ಗೃಹ ಸಚಿವ ಹರ್ಷ ಸಂಘವಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ, ರಾಜ್ಯದ ಗೃಹ ಇಲಾಖೆ ಮತ್ತು ಗುಜರಾತ್ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೇರಿದಂತೆ ಇತರ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

ಘಟನೆ ಹಿನ್ನೆಲೆ

ಗುಜರಾತ್‌ನ ಮೊರ್ಬಿ ಜಿಲ್ಲೆಯ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ತೂಗು ಸೇತುವೆ ಭಾನುವಾರ (ಅ. 30) ಕುಸಿದು ಬಿದ್ದು ದೊಡ್ಡ ದುರಂತ ಸಂಭವಿಸಿತ್ತು. ಸೇತುವೆ ಮೇಲಿದ್ದ ಹಲವರು ನದಿಗೆ ಬಿದ್ದಿದ್ದಾರೆ. ವರದಿಗಳ ಪ್ರಕಾರ ಗುಜರಾತ್ ಸೇತುವೆ ದುರಂತದಲ್ಲಿ ಈವರೆಗೆ ಬಂದ ಮಾಹಿತಿ ಪ್ರಕಾರ 30 ಮಕ್ಕಳು ಸೇರಿದಂತೆ 90 ಜನರು ಸಾವನ್ನಪ್ಪಿದ್ದರು. ಇದೀಗ ಸಾವಿನ ಸಂಖ್ಯೆ 150ರ ಸಮೀಪ ತಲುಪಿದೆ.

ಮೋರ್ಬಿಯಲ್ಲಿರುವ ಕೇಬಲ್ ಸೇತುವೆಯು ಐತಿಹಾಸಿಕವಾದದ್ದು. ಕಳೆದ ವಾರ ಅದನ್ನು ನವೀಕರಿಸಲಾಗಿತ್ತು. ನವೀಕರಣದ ನಂತರ, ಅಕ್ಟೋಬರ್ 26 ರಂದು ಗುಜರಾತಿ ಹೊಸ ವರ್ಷದ ದಿನದಂದು ಅದನ್ನು ಸಾರ್ವಜನಿಕರ ಉಪಯೋಗಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅಕ್ಟೋಬರ್ 30ರಂದು ಸಂಜೆ ಛಾತ್ ಪೂಜೆಯ ನಿಮಿತ್ತ ಕೆಲವು ವಿಧಿವಿಧಾನಗಳನ್ನು ನೆರವೇರಿಸಲು ಸೇತುವೆ ಮೇಲೆ ಬಹಳಷ್ಟು ಜನರು ಜಮಾಯಿಸಿದ್ದರು. ಕುಸಿದಾಗ ಸೇತುವೆ ಮೇಲೆ ಸುಮಾರು 500 ಜನರು ಇದ್ದರು ಎನ್ನಲಾಗಿದ್ದು, ಭಾರ ಹೆಚ್ಚಾಗಿದ್ದಕ್ಕೆ ಸೇತುವೆ ಕುಸಿದಿದೆ ಎಂದು ತಿಳಿದುಬಂದಿದೆ. ಅದಾಗ್ಯೂ ಘಟನೆಗೆ ನಿಖರ ಕಾರಣ ತಿಳಿಯಲು ತನಿಖೆಗೆ ಆದೇಶಿಸಲಾಗಿದೆ.

ಮತ್ತಷ್ಟು ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:41 pm, Mon, 31 October 22