ಜುಲೈ 7-8 ರಂದು ಛತ್ತೀಸ್‌ಗಢ, ಯುಪಿ, ತೆಲಂಗಾಣ ಮತ್ತು ರಾಜಸ್ಥಾನಕ್ಕೆ ಪ್ರಧಾನಿ ಮೋದಿ ಭೇಟಿ

|

Updated on: Jul 04, 2023 | 7:05 PM

8ರಂದು ಪ್ರಧಾನಿ ವಾರಣಾಸಿಯಿಂದ ತೆಲಂಗಾಣದ ವಾರಂಗಲ್‌ಗೆ ಪ್ರಯಾಣಿಸಲಿದ್ದಾರೆ. ಇಲ್ಲಿ ಅವರು ನಾಗ್ಪುರ-ವಿಜಯವಾಡ ಕಾರಿಡಾರ್‌ನ ಪ್ರಮುಖ ವಿಭಾಗಗಳು ಸೇರಿದಂತೆ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ

ಜುಲೈ 7-8 ರಂದು ಛತ್ತೀಸ್‌ಗಢ, ಯುಪಿ, ತೆಲಂಗಾಣ ಮತ್ತು ರಾಜಸ್ಥಾನಕ್ಕೆ ಪ್ರಧಾನಿ ಮೋದಿ ಭೇಟಿ
ನರೇಂದ್ರ ಮೋದಿ
Follow us on

ಪ್ರಧಾನಿ ನರೇಂದ್ರ ಮೋದಿ (Narendra Modi) ಜುಲೈ 7-8 ರಂದು ಛತ್ತೀಸ್‌ಗಢ (Chhattisgarh), ಉತ್ತರ ಪ್ರದೇಶ, ತೆಲಂಗಾಣ ಮತ್ತು ರಾಜಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ರಾಯ್‌ಪುರ್, ಗೋರಖ್‌ಪುರ, ವಾರಣಾಸಿ, ವಾರಂಗಲ್ ಮತ್ತು ಬಿಕಾನೇರ್ – ಐದು ನಗರಗಳಲ್ಲಿ ಸುಮಾರು ಹನ್ನೆರಡು ಕಾರ್ಯಕ್ರಮಗಳಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ಪ್ರವಾಸದ ವೇಳೆ 50,000 ಕೋಟಿ ವೆಚ್ಚದ 50 ಯೋಜನೆಗಳ ಉದ್ಘಾಟನೆ, ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮೋದಿ.  ಜುಲೈ 7 ರಂದು ಪ್ರಧಾನಮಂತ್ರಿಯವರು  ದೆಹಲಿಯಿಂದ ರಾಯಪುರಕ್ಕೆ ಪ್ರಯಾಣಿಸಲಿದ್ದು, ಅಲ್ಲಿ ಶಂಕುಸ್ಥಾಪನೆ ಮತ್ತು ಬಹು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಅವರು ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಧಾನಿಯವರು ನಂತರ ಗೋರಖ್‌ಪುರಕ್ಕೆ ಪ್ರಯಾಣಿಸಲಿದ್ದು, ಅಲ್ಲಿ ಗೀತಾ ಪ್ರೆಸ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 3 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿರುವ ಅವರು ಗೋರಖ್‌ಪುರ ರೈಲು ನಿಲ್ದಾಣದ ಪುನರಾಭಿವೃದ್ಧಿಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಗೋರಖ್‌ಪುರದಿಂದ ಮೋದಿ ವಾರಣಾಸಿಗೆ ಪ್ರಯಾಣಿಸಲಿದ್ದು, ಅಲ್ಲಿ ಬಹುಮುಖ್ಯ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್​​​ನಿಂದ ಸೋನ್ ನಗರಕ್ಕೆ ಮೀಸಲಾದ ಸರಕು ಸಾಗಣೆ ಕಾರಿಡಾರ್‌ನ ಹೊಸ ಮಾರ್ಗ ಮತ್ತು NH56 (ವಾರಣಾಸಿ – ಜೌನ್‌ಪುರ್) ನ ನಾಲ್ಕು ಲೇನ್ ಅಗಲೀಕರಣವನ್ನು ಪ್ರಧಾನಿ ದೇಶಕ್ಕೆ ಸಮರ್ಪಿಸಲಿದ್ದಾರೆ. ಅದೇ ವೇಳೆ ಮಣಿಕರ್ಣಿಕಾ ಘಾಟ್ ಮತ್ತು ಹರಿಶ್ಚಂದ್ರ ಘಾಟ್ ನವೀಕರಣಕ್ಕೆ ಮೋದಿ ಶಂಕುಸ್ಥಾಪನೆ ಮಾಡಲಿದ್ದಾರೆ.

8ರಂದು ಪ್ರಧಾನಿ ವಾರಣಾಸಿಯಿಂದ ತೆಲಂಗಾಣದ ವಾರಂಗಲ್‌ಗೆ ಪ್ರಯಾಣಿಸಲಿದ್ದಾರೆ. ಇಲ್ಲಿ ಅವರು ನಾಗ್ಪುರ-ವಿಜಯವಾಡ ಕಾರಿಡಾರ್‌ನ ಪ್ರಮುಖ ವಿಭಾಗಗಳು ಸೇರಿದಂತೆ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಕರೀಂನಗರದ ನಾಲ್ಕು ಲೇನಿಂಗ್‌ಗೆ ಶಂಕುಸ್ಥಾಪನೆ ಮಾಡಿದ ನಂತರ ಅವರು ವಾರಂಗಲ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿಬಿಹಾರದಲ್ಲಿ ಜೆಡಿಯು ಪಕ್ಷ ವಿಭಜನೆಯ ಅಂಚಿನಲ್ಲಿದೆ: ಸುಶೀಲ್ ಮೋದಿ

ವಾರಂಗಲ್‌ನಿಂದ ಬಿಕಾನೇರ್‌ಗೆ ಪ್ರಯಾಣಿಸಲಿರುವ ಪ್ರಧಾನಿ ಅಮೃತಸರ ಜಾಮ್‌ನಗರ ಎಕ್ಸ್‌ಪ್ರೆಸ್‌ವೇಯ ವಿವಿಧ ವಿಭಾಗಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಗ್ರೀನ್ ಎನರ್ಜಿ ಕಾರಿಡಾರ್ ಹಂತ-I ಗಾಗಿ ಇಂಟರ್-ಸ್ಟೇಟ್ ಟ್ರಾನ್ಸ್ಮಿಷನ್ ಲೈನ್  ಮತ್ತು ಬಿಕಾನೇರ್ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ಪ್ರಧಾನಮಂತ್ರಿ ಅಡಿಪಾಯ ಹಾಕಲಿದ್ದಾರೆ. ಬಳಿಕ ಬಿಕಾನೇರ್‌ನಲ್ಲಿ ಮೋದಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:04 pm, Tue, 4 July 23