ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್, ಐಟಿ ಇಲಾಖೆ ಸಚಿವ ರವಿಶಂಕರ್ ಪ್ರಸಾದ್ ರಾಜೀನಾಮೆ

Cabinet Ministers Resignation: ಇನ್ನೇನು ಕೆಲವೇ ಕ್ಷಣಗಳಲ್ಲಿ 43 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದು, ಅವರ ಅಧಿಕೃತ ಪಟ್ಟಿಯೂ ಲಭ್ಯವಾಗಿದೆ. ಅದೇ ಬೆನ್ನಲ್ಲೇ ಹೀಗೆ ಪ್ರಮುಖ ಇಲಾಖೆಗಳ ಜವಾಬ್ದಾರಿ ಹೊತ್ತಿದ್ದ ಸಚಿವರುಗಳು ಹೊರನಡೆಯುತ್ತಿರುವುದು ಅಚ್ಚರಿ ಎನ್ನಿಸಿದೆ.

ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್, ಐಟಿ ಇಲಾಖೆ ಸಚಿವ ರವಿಶಂಕರ್ ಪ್ರಸಾದ್ ರಾಜೀನಾಮೆ
ರವಿಶಂಕರ್ ಪ್ರಸಾದ್​ ಮತ್ತು ಪ್ರಕಾಶ್​ ಜಾವಡೇಕರ್​
Edited By:

Updated on: Jul 07, 2021 | 5:53 PM

ದೆಹಲಿ: ಸಚಿವ ಸಂಪುಟ ಪುನರಚನೆ ಹೊತ್ತು ಸಮೀಪಿಸುತ್ತಿರುವಂತೆ ಮತ್ತಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಪ್ರಮುಖ ಖಾತೆಗಳನ್ನು ನಿಭಾಯಿಸುತ್ತಿದ್ದ ಸಚಿವರೆಲ್ಲ ರಾಜೀನಾಮೆ ನೀಡುತ್ತಿದ್ದು, ಆ ಸಾಲಿಗೆ ಈಗ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ಐಟಿ ಖಾತೆ ಸಚಿವ ರವಿಶಂಕರ್​ ಪ್ರಸಾದ್ ಕೂಡ ಸೇರಿದ್ದು, ಇವರಿಬ್ಬರೂ ರಾಜೀನಾಮೆ ಸಲ್ಲಿಸಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ 43 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದು, ಅವರ ಅಧಿಕೃತ ಪಟ್ಟಿಯೂ ಲಭ್ಯವಾಗಿದೆ. ಅದೇ ಬೆನ್ನಲ್ಲೇ ಹೀಗೆ ಪ್ರಮುಖ ಇಲಾಖೆಗಳ ಜವಾಬ್ದಾರಿ ಹೊತ್ತಿದ್ದ ಸಚಿವರುಗಳು ಹೊರನಡೆಯುತ್ತಿರುವುದು ಅಚ್ಚರಿ ಎನ್ನಿಸಿದೆ.

ಇಂದು ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ, ಮಧ್ಯಾಹ್ನದಿಂದಲೂ ಹೀಗೆ ಒಬ್ಬೊಬ್ಬರಾಗಿ ಹಲವು ಸಚಿವರು ರಾಜೀನಾಮೆ ಸಲ್ಲಿಸಿದ್ದಾರೆ. ಇದುವರೆಗೆ ಆರೋಗ್ಯ ಸಚಿವ ಹರ್ಷವರ್ಧನ್​, ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ, ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್​ ನಿಶಾಂಕ್, ​ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ರಾಜ್ಯ ಸಚಿವ ಬಬುಲ್​ ಸುಪ್ರಿಯೋ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್​ಚಂದ್​ ಗೆಹಲೋತ್​, ಪಶುಸಂಗೋಪನೆ- ಹೈನುಗಾರಿಕೆ -ಮೀನುಗಾರಿಕೆ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಇಲಾಖೆಯ ರಾಜ್ಯ ಸಚಿವ ಪ್ರತಾಪ್​ ಚಂದ್ರ ಸಾರಂಗಿ, ಜಲ ಶಕ್ತಿ ಮತ್ತು ಸಾಮಾಜಿಕ ನ್ಯಾಯ-ಸಬಲೀಕರಣ​ ಇಲಾಖೆ ಸಚಿವ ರತನ್​ಲಾಲ್ ಕಟಾರಿಯಾ, ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವ ರಾವ್​ ಸಾಹೇಬ್​ ಪಾಟೀಲ್​ ದಾನ್ವೆ, ಕಾರ್ಮಿಕ ಸಚಿವ ಸಂತೋಷ್​ ಗಾಂಗ್ವಾರ್​, ಶಿಕ್ಷಣ ಇಲಾಖೆ ರಾಜ್ಯ ಸಚಿವ ಸಂಜಯ್​ ಧೋತ್ರೆ ರಾಜೀನಾಮೆ ಸಲ್ಲಿಸಿದ್ದರು. ಆ ಸಾಲಿಗೆ ಇದೀಗ ರವಿಶಂಕರ್​ ಪ್ರಸಾದ್​, ಪ್ರಕಾಶ್ ಜಾವಡೇಕರ್​ ಸೇರಿಕೊಂಡಿದ್ದಾರೆ.

ಕೇಂದ್ರ ಸಂಪುಟದಲ್ಲಿ ಇವರೆಲ್ಲ ಸೇರಿ 53 ಸಚಿವರು ಇದ್ದರು. ಅದರಲ್ಲಿಂದು ರಾಜೀನಾಮೆ ನೀಡಿದ ಸಚಿವರ ಖಾತೆಯೂ ಬೇರೆ ಹೊಸಬರ ಪಾಲಿಗೆ ಹೋಗಲಿದೆ ಅಥವಾ ಇನ್ನುಳಿದ ಸಚಿವರ ಹೆಗಲಿಗೆ ಪ್ರಮುಖ ಖಾತೆಯನ್ನು ಕೊಟ್ಟು, ಅವರ ಬಳಿ ಇದ್ದ ಖಾತೆಯನ್ನು ಇಂದು ಸೇರ್ಪಡೆಯಾಗುವವರ ಹೆಗಲಿಗೆ ನೀಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಇದನ್ನೂ ಓದಿ: ಮೋದಿ ಸಂಪುಟದಿಂದ ಹೊರಗಾದ ಸದಾನಂದ ಗೌಡ ರಾಜ್ಯ ರಾಜಕಾರಣಕ್ಕೆ ಬರುತ್ತಾರಾ? ಡಾ. ಅಶ್ವತ್ಥ್ ನಾರಾಯಣ ಏನಂತಾರೆ?

Prakash Javadekar Ravi Shankar Prasad resign ahead of Union Cabinet reshuffle

Published On - 5:52 pm, Wed, 7 July 21