ಮೇಲಿನ ಕೆಲವೇ ಮಂದಿಗೆ ಕೆಳಗಿನ ಬಹುಮಂದಿ ತೆರಿಗೆ ಕಟ್ಟೋದು ಯಾವ ನ್ಯಾಯ? ಕೇಂದ್ರದ ಹೊಸ ಪೆನ್ಷನ್ ಸ್ಕೀಮ್ ಸ್ವಾಗತಿಸಿದ ಕಾಂಗ್ರೆಸ್ ನಾಯಕ

Unified Pension Scheme: ಕೇಂದ್ರ ಸರ್ಕಾರದ ಪ್ರಸ್ತಾಪಿತ ಯೂನಿಫೈಡ್ ಪೆನ್ಷನ್ ಸ್ಕೀಮ್ ಶ್ಲಾಘನೀಯ ಸುಧಾರಣೆ ಎಂದು ಕಾಂಗ್ರೆಸ್​ನ ಚಿಂತಕರಲ್ಲಿ ಒಬ್ಬರಾದ ಪ್ರವೀಣ್ ಚಕ್ರವರ್ತಿ ಅಭಿಪ್ರಾಯಪಟ್ಟಿದ್ದಾರೆ. ಯುಪಿಎಸ್ ಎಂದರೆ ಎನ್​ಪಿಎಸ್ ಮತ್ತು ಕನಿಷ್ಠ ಖಾತ್ರಿ ಪಿಂಚಣಿಯ ಸಂಯೋಗ ಎಂದು ಪ್ರವೀಣ್ ಹೇಳಿದ್ದಾರೆ. ನ್ಯಾಷನಲ್ ಪೆನ್ಷನ್ ಸಿಸ್ಟಂ ಬಗ್ಗೆ ಸಾಕಷ್ಟು ವಿರೋಧ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಒಂದಷ್ಟು ಬದಲಾವಣೆ ತಂದು ಯೂನಿಫೈಡ್ ಪೆನ್ಷನ್ ಸಿಸ್ಟಂ ರೂಪಿಸಿದೆ.

ಮೇಲಿನ ಕೆಲವೇ ಮಂದಿಗೆ ಕೆಳಗಿನ ಬಹುಮಂದಿ ತೆರಿಗೆ ಕಟ್ಟೋದು ಯಾವ ನ್ಯಾಯ? ಕೇಂದ್ರದ ಹೊಸ ಪೆನ್ಷನ್ ಸ್ಕೀಮ್ ಸ್ವಾಗತಿಸಿದ ಕಾಂಗ್ರೆಸ್ ನಾಯಕ
ಪ್ರವೀಣ್ ಚಕ್ರವರ್ತಿ

Updated on: Aug 25, 2024 | 5:39 PM

ನವದೆಹಲಿ, ಆಗಸ್ಟ್ 25: ಕೇಂದ್ರ ಸಂಪುಟ ಜಾರಿಗೆ ತರಲು ಹೊರಟಿರುವ ಏಕೀಕೃತ ಪಿಂಚಣಿ ಯೋಜನೆಯನ್ನು ಅಖಿಲ ಭಾರತ ವೃತ್ತಿಪರರ ಕಾಂಗ್ರೆಸ್​ನ ಅಧ್ಯಕ್ಷ ಪ್ರವೀಣ್ ಚಕ್ರವರ್ತಿ ಸ್ವಾಗತಿಸಿದ್ದಾರೆ. ಹಳೆಯ ಪೆನ್ಷನ್ ಸಿಸ್ಟಂಗೆ ತಿಲಾಂಜಲಿ ಹೇಳಿ ಎನ್​ಪಿಎಸ್ ಜಾರಿಗೆ ತರಲಾಗಿದ್ದನ್ನೂ ಪ್ರವೀಣ್ ಈ ಹಿಂದೆ ಸಮರ್ಥನೆ ಮಾಡಿಕೊಂಡಿದ್ದರು. ಇದೀಗ ಎನ್​ಪಿಎಸ್​ನಲ್ಲಿ ಕೈಬಿಡಲಾಗಿದ್ದ ಕನಿಷ್ಠ ಖಾತ್ರಿ ಪಿಂಚಣಿಯನ್ನು ಯೂನಿಫೈಡ್ ಪೆನ್ಷನ್ ಸಿಸ್ಟಂನಲ್ಲಿ ಅಳವಡಿಸಲಾಗಿದೆ. ಇದು ಸಕಾರಾತ್ಮಕವಾದುದು ಮತ್ತು ಸ್ವಾಗತಾರ್ಹವಾದುದು ಎಂದಿದ್ದಾರೆ ಪ್ರವೀಣ್ ಚಕ್ರವರ್ತಿ.

ಕೇಂದ್ರ ಸರ್ಕಾರಿ ನೌಕರರಿಗೆ ನಿವೃತ್ತಿ ನಂತರ ಪಿಂಚಣಿ ಮೂಲಕ ಹಣಕಾಸು ಭದ್ರತೆ ಒದಗಿಸುವ ನಿಟ್ಟಿನಲ್ಲಿ ಯೂನಿಫೈಡ್ ಪೆನ್ಷನ್ ಸ್ಕೀಮ್ ಎನ್​ಪಿಎಸ್ ಮತ್ತು ಒಪಿಎಸ್​ನ ಕೆಲ ಅಂಶಗಳನ್ನು ಕೂಡಿಸಿದೆ. ಕನಿಷ್ಠ ಪಿಂಚಣಿ, ನಿಶ್ಚಿತ ಪಿಂಚಣಿ, ಹಣದುಬ್ಬರಕ್ಕೆ ತಕ್ಕಂತೆ ಬದಲಾವಣೆ ಇತ್ಯಾದಿ ಅಂಶಗಳು ಯುಪಿಎಸ್​ನಲ್ಲಿ ಇವೆ.

ಇದನ್ನೂ ಓದಿ: ಏಕೀಕೃತ ಪಿಂಚಣಿ ಯೋಜನೆಗೂ, ಎನ್​ಪಿಎಸ್, ಒಪಿಎಸ್​ಗೂ ವ್ಯತ್ಯಾಸಗಳೇನು?

ಕಾಂಗ್ರೆಸ್​ನ ಡಾಟಾ ಅನಾಲಿಟಿಕ್ಸ್ ವಿಭಾಗದ ಮುಖ್ಯಸ್ಥರೂ ಆಗಿರುವ ಪ್ರವೀಣ್ ಚಕ್ರವರ್ತಿ ಕೇಂದ್ರದ ಈ ಹೊಸ ಪಿಂಚಣಿ ಸುಧಾರಣೆಯನ್ನು ಪ್ರಶಂಸಿಸಿದ್ದಾರೆ.

‘ಸರ್ಕಾರಿ ಸಿಬ್ಬಂದಿಗೆ ಪೆನ್ಷನ್ ಕೊಡುವುದೆಂದರೆ, ಮೇಲಿನ ಅಲ್ಪಸಂಖ್ಯಾತರಿಗೆ ಪಾವತಿಸಲು ಕೆಳಗಿನ ಬಹುಜನರಿಗೆ ತೆರಿಗೆ ವಿಧಿಸಿದಂತೆ. ಹೀಗಾಗಿ, 2013ರಲ್ಲಿ ಹಳೆಯ ಪೆನ್ಷನ್ ಸಿಸ್ಟಂನಲ್ಲಿ ಸುಧಾರಣೆ ಮಾಡಿ ಎನ್​ಪಿಎಸ್ ತರಲಾಯಿತು. ಆದರೆ, ನಿವೃತ್ತ ಕುಟುಂಬಗಳಿಗೆ ಕನಿಷ್ಠ ಪಿಂಚಣಿ ಮೊತ್ತವನ್ನು ಎನ್​ಪಿಎಸ್​ನಲ್ಲಿ ಖಾತ್ರಿಗೊಳಿಸಿರಲಿಲ್ಲ. ಈಗ ಯುಪಿಎಸ್ ಆ ಕೆಲಸ ಮಾಡಿದೆ,’ ಎಂದು ಪ್ರವೀಣ್ ಚಕ್ರವರ್ತಿ ತಮ್ಮ ಎರಡು ವರ್ಷದ ಹಿಂದಿನ ಪೋಸ್ಟ್ ಅನ್ನು ಕೋಟ್ ಮಾಡುತ್ತಾ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರ ಜಂಟಿ ನಿಯೋಗದ ಅಧಿಕಾರಿಗಳ ಜೊತೆ ಪ್ರಧಾನಿ ಮೋದಿ ಭೇಟಿ

2022ರಲ್ಲಿ ಪ್ರವೀಣ್ ಹಾಕಿದ್ದ ಪೋಸ್ಟ್

‘ಗುಜರಾತ್​ನಲ್ಲಿ ಆರೂವರೆ ಕೋಟಿ ಜನಸಂಖ್ಯೆಯಲ್ಲಿ 3 ಲಕ್ಷ ಮಂದಿ ಸರ್ಕಾರಿ ಸೇವೆಯಲ್ಲಿದ್ದಾರೆ. ಹಳೆಯ ಪೆನ್ಷನ್ ಸ್ಕೀಮ್ ಸುಮಾರು ಶೇ. 15ರಷ್ಟು ತೆರಿಗೆ ಆದಾಯವನ್ನು ತಿನ್ನುತ್ತದೆ. ಶೇ 0.5ರಷ್ಟು ಜನರು ನಿವೃತ್ತಿ ಪಿಂಚಣಿಗೆ ಶೇ 15ರಷ್ಟು ತೆರಿಗೆದಾರರ ಹಣವನ್ನು ಪಡೆಯಬೇಕಾ?’ ಎಂದು ಅಭಿಪ್ರಾಯಪಟ್ಟಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:39 pm, Sun, 25 August 24

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us