ಬೌದ್ಧ ಧಾರ್ಮಿಕ ಸಾಹಿತ್ಯ ಸಂರಕ್ಷಣೆಗೆ ಗ್ರಂಥಾಲಯ ರಚನೆ: ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾವ
‘ಗೌತಮ ಬುದ್ಧ ಮತ್ತು ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಸಾಹಿತ್ಯ ಕೃತಿಗಳನ್ನು ವಿವಿಧ ದೇಶಗಳಿಂದ ಡಿಜಿಟಲ್ ಪ್ರತಿಗಳ ರೂಪದಲ್ಲಿ ಸಂಗ್ರಹಿಸಲಾಗುವುದು. ನಂತರ ಅವುಗಳನ್ನು ಅಗತ್ಯವಿರುವ ಭಾಷೆಗಳಿಗೆ ಅನುವಾದ ಮಾಡಿ, ವಿದ್ವಾಂಸರಿಗೆ ಹಾಗೂ ಬೌದ್ಧ ಭಿಕ್ಕುಗಳಿಗೆ ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು’.

ದೆಹಲಿ: ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಕೃತಿಗಳನ್ನು ಸಂಗ್ರಹಿಸಿ, ಗ್ರಂಥಾಲಯದಲ್ಲಿ ಕಾಪಾಡುವ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪ್ರಸ್ತಾಪಿಸಿದರು. ವರ್ಚುವಲ್ ಕಾನ್ಫರೆನ್ಸ್ ಮೂಲಕ ನಡೆದ ಭಾರತ-ಜಪಾನ್ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂತಹ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಭಾರತ ಉತ್ಸುಕವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಗೌತಮ ಬುದ್ಧ ಮತ್ತು ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಸಾಹಿತ್ಯ ಕೃತಿಗಳನ್ನು ವಿವಿಧ ದೇಶಗಳಿಂದ ಡಿಜಿಟಲ್ ಪ್ರತಿಗಳ ರೂಪದಲ್ಲಿ ಸಂಗ್ರಹಿಸಲಾಗುವುದು. ನಂತರ ಅವುಗಳನ್ನು ಅಗತ್ಯವಿರುವ ಭಾಷೆಗಳಿಗೆ ಅನುವಾದ ಮಾಡಿ, ವಿದ್ವಾಂಸರಿಗೆ ಹಾಗೂ ಬೌದ್ಧ ಭಿಕ್ಕುಗಳಿಗೆ ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು ಎಂದು ಯೋಜನೆಯ ಉದ್ದೇಶ ತಿಳಿಸಿದರು.
ಆಧುನಿಕ ಜಗತ್ತಿನ ಸವಾಲುಗಳನ್ನು ಎದುರಿಸಲು ಬುದ್ಧನ ಸಂದೇಶಗಳು ನಮಗೆ ಹೇಗೆ ಮಾರ್ಗದರ್ಶನ ನೀಡಬಹುದು ಎಂಬ ಬಗ್ಗೆ ಸಂಶೋಧನಾ ನಿಯೋಗವು ಪರಿಶೀಲನೆ ನಡೆಸಬೇಕು ಎಂದು ಮೋದಿ ಅಭಿಪ್ರಾಯಪಟ್ಟರು. ಉಭಯ ದೇಶಗಳ ಪ್ರಾಚೀನ ಧಾರ್ಮಿಕ ಮತ್ತು ಆದ್ಯಾತ್ಮಿಕ ವಿಚಾರಗಳು ಮತ್ತು ಅವುಗಳನ್ನು ಮುನ್ನಡೆಸುವ ಬಗ್ಗೆ ಮಾತುಕತೆ ನಡೆಯಿತು.
ಮಾತು ಮತ್ತು ಚರ್ಚೆಗಳನ್ನು ಒಳಗೊಂಡಿದ್ದ ಸಂವಾದ ಕಾರ್ಯಕ್ರಮವು ತನ್ನ ಆಶಯಕ್ಕೆ ಬದ್ಧವಾಗಿ ನಡೆಯಿತು. ಭಾರತ-ಜಪಾನ್ ಸಂವಾದ ಕಾರ್ಯಕ್ರಮಕ್ಕೆ ಸದಾ ಬೆಂಬಲ ನೀಡುವ ಜಪಾನ್ಗೆ ಪ್ರಧಾನಿ ಮೋದಿ ಧನ್ಯವಾದಗಳನ್ನು ತಿಳಿಸಿದರು. ಈ ಸಂವಾದವು ಒಳಿತಿನ ಆಶಯಗಳು, ಏಕತೆ, ಸಹಾನುಭೂತಿಯನ್ನು ವಿಶ್ವದೆಲ್ಲಡೆ ಪಸರಿಸಬೇಕು ಎಂದು ಮೋದಿ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತ-ಜಪಾನ್ ಮೊದಲ ಸಂವಾದ ಕಾರ್ಯಕ್ರಮ 2015ರಲ್ಲಿ ಬೌದ್ಧಗಯಾದಲ್ಲಿ ನಡೆದಿತ್ತು. ವಿದ್ವಾಂಸರು, ಧಾರ್ಮಿಕ ಮುಖಂಡರು, ರಾಜಕೀಯ ವ್ಯಕ್ತಿಗಳು, ಅಧ್ಯಯನಕಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಂದು (ಡಿ.21) ನಡೆದದ್ದು 6ನೇ ಸಂವಾದ ಕಾರ್ಯಕ್ರಮವಾಗಿದೆ.
ಐತಿಹಾಸಿಕ ಗುರುದ್ವಾರ ರಕಬ್ ಗಂಜ್ ಸಾಹಿಬ್ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
Published On - 2:54 pm, Mon, 21 December 20