‘ದೆಹಲಿ ಚಲೋ ಕೊರೊನಾ ಹರಡುವಿಕೆಗೆ ಕಾರಣವಾಗುವುದಿಲ್ಲವೇ?‘ ಕೇಂದ್ರವನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್
ತಬ್ಲಿಘಿ ಜಮಾತ್ ಘಟನೆಯನ್ನು ಉದಾಹರಣೆ ನೀಡಿರುವ ಸರ್ವೋಚ್ಛ ನ್ಯಾಯಾಲಯ ‘ದೆಹಲಿ ಚಲೋ’ ಕೊರೊನಾ ಸೋಂಕಿನ ಹರಡುವಿಕೆಗೆ ಕಾರಣವಾಗುವುದಿಲ್ಲವೇ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ದೆಹಲಿ: ಚಳುವಳಿ ನಿರತ ಪಂಜಾಬ್ ರೈತರು ಕೊರೊನಾ ಸೋಂಕಿನಿಂದ ರಕ್ಷಿಸಲ್ಪಟ್ಟಿದ್ದಾರೆಯೇ? ಎಂದು 43ನೇ ದಿನ ಪ್ರವೇಶಿಸಿರುವ ದೆಹಲಿ ಚಲೋ ಚಳುವಳಿ ಕುರಿತು ಸರ್ವೋಚ್ಛ ನ್ಯಾಯಾಲಯ ಕೇಂದ್ರ ಸರ್ಕಾರವನ್ನು ಗಂಭೀರವಾಗಿ ಪ್ರಶ್ನಿಸಿದೆ. ದೇಶದ ರಾಜಧಾನಿಯ ಗಡಿಭಾಗದಲ್ಲಿ ಸಾವಿರಾರು ರೈತರು ವಾಸ್ತವ್ಯ ಹೂಡಿ ಪ್ರತಿಭಟಿಸುತ್ತಿದ್ದು, ಕೊರೊನಾ ಸೋಂಕಿನಿಂದ ಅವರು ಮುಕ್ತವಾಗಿದ್ದಾರೆಯೇ? ಹಿಂದೊಮ್ಮೆ ಕೊರೊನಾ ಸೋಂಕು ಹರಡಲು ಕಾರಣವಾಗಿದ್ದ ತಬ್ಲಿಘಿ ಜಮಾತ್ ಘಟನೆಯಿಂದ ಪಾಠ ಕಲಿತಿಲ್ಲವೇ ಎಂದು ನ್ಯಾಯಾಲಯ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೋಬಡೆ ಅವರು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾರನ್ನು ಪ್ರಶ್ನಿಸಿದ್ದಾರೆ. ಈ ಮೂಲಕ ಸರ್ವೋಚ್ಛ ನ್ಯಾಯಾಲಯ ಪಂಜಾಬ್ ರೈತರ ಯೋಗಕ್ಷೇಮ ವಿಚಾರಿಸಿದಂತಾಗಿದೆ.
2020ರ ಮಾರ್ಚ್ನಲ್ಲಿ ಕೊರೊನಾ ಸೋಂಕಿನ ಭಯದ ನಡುವೆ ದೆಹಲಿಯ ದರ್ಗಾವೊಂದರಲ್ಲಿ ತಬ್ಗಿಘಿ ಜಮಾತ್ ಸಂಘಟನೆಯ ಧಾರ್ಮಿಕ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮ ದೇಶದಲ್ಲಿ ಕೊರೊನಾ ಸೋಂಕಿನ ಹೆಚ್ಚಳಕ್ಕೆ ‘ಸೂಪರ್ ಸ್ಪ್ರೆಡರ್’ ಆಗಿ ಪರಿಣಮಿಸುತ್ತದೆ ಎಂದು ಬಿಂಬಿಸಲಾಗಿತ್ತು. ಪೊಲೀಸರು ಆದರೆ, ಕೆಲ ತಿಂಗಳ ನಂತರ ಸರ್ವೋಚ್ಛ ನ್ಯಾಯಾಲಯ ಸಾಕ್ಷಿಯ ಕೊರತೆಯಿಂದ ತಬ್ಲಿಘಿ ಜಮಾತ್ ವಿರುದ್ಧದ ಆರೋಪವನ್ನು ನಿರಾಕರಿಸಿತ್ತು.
ಈ ಘಟನೆಯಂತೆಯೇ, ದೆಹಲಿ ಚಲೋ ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳಕ್ಕೆ ಕಾರಣವಾಗುವುದಿಲ್ಲವೇ ಎಂದು ಸರ್ವೋಚ್ಛ ನ್ಯಾಯಾಲಯ ಸರ್ಕಾರವನ್ನು ಪ್ರಶ್ನಿಸಿದೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಎರಡು ವಾರಗಳಲ್ಲಿ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದ್ದಾರೆ.
Published On - 6:07 pm, Thu, 7 January 21



