ರಾಹುಲ್ ಗಾಂಧಿಯ ‘ಶಕ್ತಿ’ ಹೇಳಿಕೆ ವಿವಾದ; ಬಿಜೆಪಿಗೆ ಪ್ರತಿಯೊಬ್ಬ ಮಹಿಳೆ ಶಕ್ತಿಯ ಸಂಕೇತ ಎಂದ ಮೋದಿ

|

Updated on: Mar 18, 2024 | 8:11 PM

ನನಗೆ ಪ್ರತಿಯೊಬ್ಬ ತಾಯಿ, ಸಹೋದರಿ, ಮಗಳು ಶಕ್ತಿಯ ಸಂಕೇತ. ಮೇ ಭಾರತ್ ಮಾ ಕಾ ಪೂಜಾರಿ ಹೂಂ (ನಾನು ಭಾರತ ಮಾತೆಯ ಭಕ್ತ). ತಾಯಂದಿರು ಮತ್ತು ಸಹೋದರಿಯರ ಸುರಕ್ಷತೆಗಾಗಿ ನಾನು ನನ್ನ ಪ್ರಾಣವನ್ನು ತ್ಯಾಗ ಮಾಡುತ್ತೇನೆ. ಇಂಡಿಯಾ ಮೈತ್ರಿಕೂಟ ತಮ್ಮ ಪ್ರಣಾಳಿಕೆಯಲ್ಲಿ ಶಕ್ತಿಯನ್ನು ಮುಗಿಸುತ್ತೇವೆ ಎಂದು ಹೇಳುತ್ತದೆ. ನಾನು ಅದನ್ನು ಅನುಮತಿಸುವುದಿಲ್ಲ. ಅದಕ್ಕಾಗಿ ಪ್ರಾಣವನ್ನೇ ಪಣಕ್ಕಿಡುವೆ ಎಂದಿದ್ದಾರೆ ಮೋದಿ.

ರಾಹುಲ್ ಗಾಂಧಿಯ ಶಕ್ತಿ ಹೇಳಿಕೆ ವಿವಾದ; ಬಿಜೆಪಿಗೆ ಪ್ರತಿಯೊಬ್ಬ ಮಹಿಳೆ ಶಕ್ತಿಯ ಸಂಕೇತ ಎಂದ ಮೋದಿ
ರಾಹುಲ್ ಗಾಂಧಿ- ಮೋದಿ
Follow us on

ದೆಹಲಿ ಮಾರ್ಚ್ 18: ರಾಹುಲ್ ಗಾಂಧಿಯವರ (Rahul Gandhi) ಭಾರತ್ ಜೋಡೋ ನ್ಯಾಯ್ ಯಾತ್ರೆಯ (Bharat Jodo Nyay Yatra) ಮುಕ್ತಾಯ ವೇಳೆ ಮುಂಬೈನಲ್ಲಿ ಭಾನುವಾರ ನಡೆದ  ಇಂಡಿಯಾ ರ‍್ಯಾಲಿಯಲ್ಲಿ, “ಶಕ್ತಿ” ಕುರಿತು ಕಾಂಗ್ರೆಸ್ ನಾಯಕ ಮಾಡಿದ ಟೀಕೆ ನಿನ್ನೆ ಬಹುತೇಕ ಗಮನಕ್ಕೆ ಬಂದಿಲ್ಲ. ಆದರೆ ಒಂದು ದಿನದ ನಂತರ  ಇಂದು( ಸೋಮವಾರ), ಮುಂಬರುವ ಚುನಾವಣಾ “ಶಕ್ತಿಯನ್ನು ಪೂಜಿಸುವವರು ಮತ್ತು ಅದನ್ನು ನಾಶಮಾಡಲು ಬಯಸುವವರು” ನಡುವೆ ಇರುವುದು ಎಂದು ತೋರಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ರಾಹುಲ್ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಸೋಮವಾರದ ವಿವಿಧ ರ‍್ಯಾಲಿಗಳಲ್ಲಿ ಮೋದಿಯವರು ಅದನ್ನೇ ಪುನರಾವರ್ತಿಸುವುದ್ದು, ಕಾಂಗ್ರೆಸ್ ನಾಯಕರು “ನೀಚ್” ಮತ್ತು “ಚಾಯ್ ವಾಲಾ” ನಂತಹ ಪದಗಳ ಬಳಕೆಯಿಂದ ಉಂಟಾದ ವಿವಾದಗಳನ್ನು ನೆನಪಿಸುವಂತೆ ರಾಹುಲ್ ಅವರ ಹೇಳಿಕೆಯನ್ನು ಬಿಜೆಪಿ ನೋಡಿದೆ ಎಂಬುದು ಸ್ಪಷ್ಟವಾಗಿದೆ.

ಇಂಡಿಯಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಇವಿಎಂಗಳ ಬಗ್ಗೆ ತಮ್ಮ ಮೈತ್ರಿಕೂಟದ ಕಳವಳವನ್ನು ವ್ಯಕ್ತ ಪಡಿಸಿ ಹೀಗೆ ಹೇಳಿದ್ದಾರೆ: “ಹಿಂದೂ ಧರ್ಮದಲ್ಲಿ ‘ಶಕ್ತಿ’ ಎಂಬ ಪದವಿದೆ. ನಾವು ಶಕ್ತಿಯ ವಿರುದ್ಧವೂ ಹೋರಾಡುತ್ತಿದ್ದೇವೆ. ಪ್ರಶ್ನೆ ಏನೆಂದರೆ, ಆ ಶಕ್ತಿ ಯಾವುದು? ಅದರ ಅರ್ಥವೇನು? ಇವಿಎಂಗಳಿಂದ ಹಿಡಿದು ಜಾರಿ ನಿರ್ದೇಶನಾಲಯದವರೆಗೆ ದೇಶದ ಎಲ್ಲಾ ಸಂಸ್ಥೆಗಳು ಮೋದಿ ಸರ್ಕಾರದ ಅಧೀನದಲ್ಲಿವೆ ಎಂದು ಹೇಳಿದ್ದಾರೆ.

ರಾಹುಲ್ ಹೇಳಿದ್ದು

ಮೋದಿ ಹೇಳಿದ್ದೇನು?

ಬಿಜೆಪಿಗೆ ಶಕ್ತಿ ಪ್ರತಿ ಮಹಿಳೆಯ ಪ್ರತೀಕ ಎಂದು ಮೋದಿ ಪ್ರತಿಕ್ರಿಯಿಸಿದ್ದಾರೆ. ತೆಲಂಗಾಣದ ಜಗ್ತಿಯಾಲ್‌ನಲ್ಲಿ ನಡೆದ ರ್ಯಾಲಿಯಲ್ಲಿ ಸಭಿಕರಾಗಿ ಕುಳಿತಿದ್ದ ಮಹಿಳೆಯರನ್ನು ತೋರಿಸಿ ಮೋದಿ ಅವರು,“ಮೇರೆ ಸಾಮ್ನೆ ಶಕ್ತಿ-ಸ್ವರೂಪ ಬೇಟಿ, ಮಹಿಳಾಯೇ, ಬೆಹ್ನೇ, ಶಕ್ತಿ ಕಾ ರೂಪ್ ಧಾರಣ್ ಕರ್ಕೆ, ಮುಜೇ ಆಶೀರ್ವಾದ್ ದೇನೇ ಆಯಿ ಹೈ (ಶಕ್ತಿಯ ಪ್ರತೀಕವಾದ ಹೆಣ್ಣುಮಕ್ಕಳು, ಮಹಿಳೆಯರು, ಸಹೋದರಿಯರು ಇಲ್ಲಿ ನನ್ನ ಮುಂದೆ ಇದ್ದಾರೆ, ನನ್ನನ್ನು ಆಶೀರ್ವದಿಸಲು ಶಕ್ತಿಯ ರೂಪದಲ್ಲಿ ಬಂದಿದ್ದಾರೆ).. ನನಗೆ ಪ್ರತಿಯೊಬ್ಬ ತಾಯಿ, ಸಹೋದರಿ, ಮಗಳು ಶಕ್ತಿಯ ಸಂಕೇತ. ಮೇ ಭಾರತ್ ಮಾ ಕಾ ಪೂಜಾರಿ ಹೂಂ (ನಾನು ಭಾರತ ಮಾತೆಯ ಭಕ್ತ). ತಾಯಂದಿರು ಮತ್ತು ಸಹೋದರಿಯರ ಸುರಕ್ಷತೆಗಾಗಿ ನಾನು ನನ್ನ ಪ್ರಾಣವನ್ನು ತ್ಯಾಗ ಮಾಡುತ್ತೇನೆ ಎಂದು ಹೇಳಿದ್ದಾರೆ. ಇಂಡಿಯಾ ಮೈತ್ರಿಕೂಟ ತಮ್ಮ ಪ್ರಣಾಳಿಕೆಯಲ್ಲಿ ಶಕ್ತಿಯನ್ನು ಮುಗಿಸುತ್ತೇವೆ ಎಂದು ಹೇಳುತ್ತದೆ. ನಾನು ಅದನ್ನು ಅನುಮತಿಸುವುದಿಲ್ಲ. ಅದಕ್ಕಾಗಿ ಪ್ರಾಣವನ್ನೇ ಪಣಕ್ಕಿಡುವೆ ಎಂದಿದ್ದಾರೆ ಮೋದಿ.

ಚುನಾವಣೆ ಘೋಷಣೆಯಾದ ನಂತರ ಇಂಡಿಯಾ ಮೈತ್ರಿಕೂಟದ ಮೊದಲ ರ‍್ಯಾಲಿಯಲ್ಲಿ ಮತ್ತು ಐತಿಹಾಸಿಕ ಶಿವಾಜಿ ಸ್ಟೇಡಿಯಂನಲ್ಲಿ ಮಾಡಿದ ರಾಹುಲ್ ಹೇಳಿಕೆಯನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಮೋದಿ ಹೇಳಿದ್ದಾರೆ. ಶಿವಾಜಿ, ಮಹಿಳೆಯರನ್ನು ಹೇಗೆ ಗೌರವಿಸುತ್ತಿದ್ದರು ಎಂಬುದರ ಕುರಿತು ಒಂದು ಉಪಾಖ್ಯಾನವನ್ನು ಹಂಚಿಕೊಂಡ ಪ್ರಧಾನಿ, “ಜೂನ್ 4 ರಂದು ಯಾರಿಗೆ ಶಕ್ತಿಯ ಆಶೀರ್ವಾದವಿದೆ ಎಂಬುದು ಸ್ಪಷ್ಟವಾಗುತ್ತದೆ” ಎಂದು ಹೇಳಿದರು. ನಂತರ ಕರ್ನಾಟಕದ ಶಿವಮೊಗ್ಗದಲ್ಲಿ ನಡೆದ ರ‍್ಯಾಲಿಯಲ್ಲಿಯೂ ಮೋದಿ ಈ ವಿಷಯವನ್ನು ಪ್ರಸ್ತಾಪಿಸಿದರು.

ಮೋದಿ ನನ್ನ ಮಾತುಗಳನ್ನು ತಿರುಚಿದ್ದಾರೆ: ರಾಹುಲ್

ಮೋದಿ ಅವರು ತಮ್ಮ ಮಾತುಗಳನ್ನು ತಿರುಚುತ್ತಿದ್ದಾರೆ ಎಂದು ಆರೋಪಿಸಿದ ರಾಹುಲ್, ನಾನು ಯಾವುದೇ ಧಾರ್ಮಿಕ ಶಕ್ತಿಯ ಬಗ್ಗೆ ಮಾತನಾಡುತ್ತಿಲ್ಲ. ಆದರೆ ಅಧರ್ಮ, ಭ್ರಷ್ಟಾಚಾರ ಮತ್ತು ಸುಳ್ಳಿನ ಶಕ್ತಿ  ಬಗ್ಗೆ ಹೇಳಿದ್ದೇನೆ. “ನಾನು ಹೇಳಿದ ‘ಶಕ್ತಿ’, ಮೋದಿಜಿ ಆ ಶಕ್ತಿಯ ಮುಖವಾಡ. ನಾವು ಅದರ ವಿರುದ್ಧ ಹೋರಾಡುತ್ತಿದ್ದೇವೆ. ಆ ಶಕ್ತಿಯು ಭಾರತದ ಧ್ವನಿ, ಭಾರತದ ಸಂಸ್ಥೆಗಳು, ಸಿಬಿಐ, ಐಟಿ, ಇಡಿ, ಚುನಾವಣಾ ಆಯೋಗ, ಮಾಧ್ಯಮಗಳು, ಭಾರತೀಯ ಉದ್ಯಮ ಮತ್ತು ಭಾರತದ ಸಂಪೂರ್ಣ ಸಾಂವಿಧಾನಿಕ ರಚನೆಯನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದೆ ಎಂದು ಕಾಂಗ್ರೆಸ್ ನಾಯಕ ಎಕ್ಸ್ ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.


ನಾನು ಆ ಶಕ್ತಿಯನ್ನು ಗುರುತಿಸುತ್ತೇನೆ ಮತ್ತು ನರೇಂದ್ರ ಮೋದಿಜಿ ಕೂಡ ಗುರುತಿಸುತ್ತಾರೆ ಎಂದು ರಾಹುಲ್ ಹೇಳಿದರು. ಇದು ಯಾವುದೇ ರೀತಿಯ ಧಾರ್ಮಿಕ ಶಕ್ತಿಯಲ್ಲ, ಇದು ಅಧರ್ಮ, ಭ್ರಷ್ಟಾಚಾರ ಮತ್ತು ಸುಳ್ಳಿನ ಶಕ್ತಿಯಾಗಿದೆ. ಅದಕ್ಕಾಗಿಯೇ ನಾನು ಅದರ ವಿರುದ್ಧ ಧ್ವನಿ ಎತ್ತಿದಾಗಲೆಲ್ಲಾ ಮೋದಿಜಿ ಮತ್ತು ಅವರ ಸುಳ್ಳಿನ ವ್ಯವಸ್ಥೆಯ ವ್ಯಕ್ತಿಗಳು ಅಸಮಾಧಾನಗೊಳ್ಳುತ್ತಾರೆ ಮತ್ತು ಕೋಪಗೊಳ್ಳುತ್ತಾರೆ ಎಂದಿದ್ದಾರೆ,.

ಮುಂಬರುವ ಚುನಾವಣೆಗಳು ದೇಶವನ್ನು ರಾಕ್ಷಸ ಶಕ್ತಿ ಅಥವಾ “ದೈವಿಕ ಶಕ್ತಿ ನಡೆಸುತ್ತಿದೆಯೇ ಎಂದು ನಿರ್ಧರಿಸುತ್ತದೆ ಎಂದು ಕಾಂಗ್ರೆಸ್ ಮೋದಿಯವರ ಹೇಳಿಕೆಗಳನ್ನು ಟೀಕಿಸಿದೆ. ಬಿಜೆಪಿಯನ್ನು “ರಾಕ್ಷಸ ಶಕ್ತಿಗೆ”ಗೆ ಹೋಲಿಸಿದ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇಟ್, ಬಿಜೆಪಿಯ 10 ವರ್ಷಗಳ ಆಳ್ವಿಕೆಯು ಉನ್ನಾವೋ, ಕಥುವಾ ಮತ್ತು ಹಾಥರಸ್ ಲೈಂಗಿಕ ದೌರ್ಜನ್ಯ ಘಟನೆಗಳು, ಮಣಿಪುರದಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸಿದ ನಂತರ ಪರೇಡಿಂಗ್ ಮತ್ತು ಮಹಿಳಾ ಕುಸ್ತಿಪಟುಗಳಿಗೆ”ಕಿರುಕುಳ” ದಂತಹ ಘಟನೆಗಳನ್ನು ಕಂಡಿದೆ. ಇವೆಲ್ಲವೂ ಶಕ್ತಿಯ ರೂಪಗಳಾಗಿದ್ದವು ಎಂದು  ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಕಾಂಗ್ರೆಸ್​ನಲ್ಲಿ ಸೂಪರ್​ ಸಿಎಂ, ಸ್ಯಾಡೋ ಸಿಎಂ, ವೈಟಿಂಗ್ ಸಿಎಂ ಇದ್ದಾರೆ: ಪ್ರಧಾನಿ ಮೋದಿ

“ಈ ದೇಶವು ಯಾವಾಗಲೂ ‘ದೈವಿಕ ಶಕ್ತಿ’ಯಿಂದ ತನ್ನ ಶಕ್ತಿಯನ್ನು ಪಡೆದುಕೊಂಡಿದೆ. ಯುವಕರು, ಮಹಿಳೆಯರು ಮತ್ತು ರೈತರು ರಾಹುಲ್ ಗಾಂಧಿಯವರೊಂದಿಗೆ ನಿಂತಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ