ನಾಲ್ಕನೇ ಪತ್ನಿಗೆ 30,000 ರೂ. ಜೀವನಾಂಶ ನೀಡುವಂತೆ ಎಸ್‌ಪಿ ಸಂಸದ ನದ್ವಿಗೆ ಅಲಹಾಬಾದ್ ಹೈಕೋರ್ಟ್ ಆದೇಶ

ಸಮಾಜವಾದಿ ಪಕ್ಷದ ಸಂಸದ ಮೊಹಿಬ್ಬುಲ್ಲಾ ನದ್ವಿಗೆ ಅಲಹಾಬಾದ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ತಮ್ಮ ನಾಲ್ಕನೇ ಪತ್ನಿಗೆ ಮಾಸಿಕ 30,000 ರೂ. ಜೀವನಾಂಶ ನೀಡುವಂತೆ ಸೂಚಿಸಿದೆ. ಕೌಟುಂಬಿಕ ವಿವಾದ ಪರಿಹಾರಕ್ಕಾಗಿ ಮಧ್ಯಸ್ಥಿಕೆ ಪ್ರಕ್ರಿಯೆಗೆ ಹೈಕೋರ್ಟ್ ನಿರ್ದೇಶಿಸಿದೆ. ಆಗ್ರಾ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ನದ್ವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು, ಜೀವನಾಂಶ ನೀಡಿ ಮೂರು ತಿಂಗಳಲ್ಲಿ ವಿವಾದ ಬಗೆಹರಿಸಲು ಕಾಲಾವಕಾಶ ನೀಡಿದೆ.

ನಾಲ್ಕನೇ ಪತ್ನಿಗೆ 30,000 ರೂ. ಜೀವನಾಂಶ ನೀಡುವಂತೆ ಎಸ್‌ಪಿ ಸಂಸದ ನದ್ವಿಗೆ ಅಲಹಾಬಾದ್ ಹೈಕೋರ್ಟ್ ಆದೇಶ
ಮೊಹಿಬ್ಬುಲ್ಲಾ ನದ್ವಿ

Updated on: Oct 16, 2025 | 9:48 AM

ಉತ್ತರ ಪ್ರದೇಶ, ಅ.16: ಸಮಾಜವಾದಿ ಪಕ್ಷದ ರಾಂಪುರದ ಸಂಸದ ಮೊಹಿಬ್ಬುಲ್ಲಾ ನದ್ವಿ (Mohibbullah Nadwi) ಅವರ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಮಹತ್ವ ತೀರ್ಪುನ್ನು ನೀಡಿದೆ. ಸಂಸದ ಮೊಹಿಬ್ಬುಲ್ಲಾ ನದ್ವಿ ಅವರು ತಮ್ಮ ನಾಲ್ಕನೇ ಪತ್ನಿಗೆ ಮಾಸಿಕ 30,000 ರೂ.ಜೀವನಾಂಶ ನೀಡುವಂತೆ ಕೋರ್ಟ್​ ಆದೇಶ ನೀಡಿದೆ. ಇನ್ನು ಮೊಹಿಬ್ಬುಲ್ಲಾ ನದ್ವಿ ಅವರ ವೈವಾಹಿಕ ವಿವಾದಕ್ಕೆ ಸಂಬಂಧಿಸಿದಂತೆ ಕೌಟುಂಬಿಕ ಕಲಹಗಳ ಪರಿಹಾರ ಕೇಂದ್ರಕ್ಕೆ ತೆರಳಿ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಏಪ್ರಿಲ್ 1, 2024 ರಂದು ಆಗ್ರಾದ ಕೌಟುಂಬಿಕ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ನದ್ವಿ ಅಲಹಾಬಾದ್ ಹೈಕೋರ್ಟ್​​​ಗೆ ಅರ್ಜಿಯನ್ನು ಸಲ್ಲಿಸಿದರು.

ಇದೀಗ ಈ ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್​​ನ ನ್ಯಾಯಮೂರ್ತಿ ಸುಭಾಷ್ ಚಂದ್ರ ಶರ್ಮಾ ಅವರು ನಾಲ್ಕನೇ ಪತ್ನಿಗೆ ಮಾಸಿಕ 30,000 ರೂ.ಜೀವನಾಂಶ ನೀಡುವಂತೆ ಆದೇಶ ನೀಡಿದ್ದಾರೆ. ಈ ಹಿಂದೆ ತನ್ನ ಪತ್ನಿಗೆ ಆರ್ಥಿಕ ನೆರವು ನೀಡುವಂತೆ ನಿರ್ದೇಶಿಸಿದ ಆಗ್ರಾದ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ನದ್ವಿ ಪ್ರಶ್ನಿಸಿದ್ದರು. ಇನ್ನು ಹೈಕೋರ್ಟ್​​ನಲ್ಲಿ ಸಂಸದ ಮೊಹಿಬ್ಬುಲ್ಲಾ ನದ್ವಿ ಪರ ವಕೀಲರು ವಾದಿಸಿದ್ದಾರೆ. ಸಂಸದರು ಈ ವಿಷಯವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳಲು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ. ಆದರೆ ನ್ಯಾಯಮೂರ್ತಿ ಸುಭಾಷ್ ಚಂದ್ರ ಶರ್ಮಾ ಇದು ವೈವಾಹಿಕ ವಿವಾದವನ್ನು ಒಳಗೊಂಡಿರುವುದರಿಂದ ಇದನ್ನು ಪರಿಹರಿಸಲು ಮಧ್ಯಸ್ಥಿಕೆ ಸೂಕ್ತ ಆಯ್ಕೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆರೋಪಿಗಳ ಖುಲಾಸೆಗೆ ಆಕ್ರೋಶ; ಗುಜರಾತ್ ಕೋರ್ಟ್​ನಲ್ಲಿ ನ್ಯಾಯಮೂರ್ತಿ ಮೇಲೆ ಚಪ್ಪಲಿ ಎಸೆದ ವ್ಯಕ್ತಿ

ನ್ಯಾಯಾಲಯವು ಎರಡೂ ಕಡೆಯವರು ಒಪ್ಪಂದಕ್ಕೆ ಬರಲು ಮೂರು ತಿಂಗಳ ಕಾಲಾವಕಾಶ ನೀಡಿದೆ. ಈ ಮಧ್ಯೆ, ಮಧ್ಯಂತರ ನಿರ್ವಹಣೆಗಾಗಿ ತಿಂಗಳಿಗೆ 30,000 ರೂ. ಸೇರಿದಂತೆ 55,000 ರೂ.ಗಳನ್ನು ಠೇವಣಿ ಇಡಲು ನದ್ವಿಗೆ ಆದೇಶ ನೀಡಿದೆ. ಒಂದು ವೇಳೆ ಸಂಸದರು ಜೀವನಾಂಶ ನೀಡಲು ಸಾಧ್ಯವಾಗದಿದ್ದರೆ, ಅಥವಾ ಮಧ್ಯಸ್ಥಿಕೆ ಯಶಸ್ವಿಯಾಗದಿದ್ದರೆ, ಮುಂದಿನ ಕ್ರಮಗಳು ಕಾನೂನಿನ ಪ್ರಕಾರ ಅನುಸರಿಸುತ್ತವೆ ಎಂದು ಕೋರ್ಟ್​​​ ಹೇಳಿದೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ